ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದ್ಮಶ್ರೀ ತಗ್ಗಿನಮಠ ಜೋಗತಿ ಮಂಜಮ್ಮ ಕಿರು ಪರಿಚಯ

|
Google Oneindia Kannada News

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರಿಗೆ ಗಣರಾಜ್ಯೋತ್ಸವ 2021ರ ಸಂದರ್ಭದಲ್ಲಿ ಜಾನಪದ ಕ್ಷೇತ್ರದ ಸಾಧನೆಗಾಗಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಈ ನಿಮಿತ್ತ ಜೋಗತಿ ಮಂಜಮ್ಮ ಕಿರು ಪರಿಚಯ ಇಲ್ಲಿದೆ...

ಬಳ್ಳಾರಿ ಜಿಲ್ಲೆಯ ತಗ್ಗಿನಮಠ ಎಂಬ ಊರಿನಲ್ಲಿ ಜನಿಸಿದ ಮಂಜಮ್ಮ ಕಲಾಲೋಕಕ್ಕೆ ಚಿರಪರಿಚಿತರು. ಹನುಮಂತಯ್ಯ ಶೆಟ್ಟಿ ಮತ್ತು ಜಯಲಕ್ಷ್ಮಿ ದಂಪತಿಯ ಸುಪುತ್ರರಾಗಿ ಜನ್ಮನಾಮ ಬಿ. ಮಂಜುನಾಥ ಶೆಟ್ಟಿ ಪಡೆದುಕೊಂಡಿದ್ದರು. ಎಲ್ಲ ಮಕ್ಕಳಂತೆ ಆಡು, ಓದು, ಕುಣಿತದ ಸಡಗರದ ಬಾಲ್ಯ ಹೊಂದಿದ್ದರು. ಆದರೆ, ಏಳನೇ ತರಗತಿಯ ವೇಳೆಗೆ ಶರೀರದಲ್ಲಿ ವಿಚಿತ್ರ ಏರುಪೇರು, ದೇಹದಲ್ಲಿ ದಿಢೀರಾಗಿ ಹೆಣ್ಣಿನ ಲಕ್ಷಣಗಳು ಗೋಚರಿಸಿದಾಗ ಹೆಣ್ಣಾಗಿ ಬದುಕಬೇಕೆಂಬ ಹಂಬಲ ಸಹಜವಾಗಿ ಮೂಡಿದೆ.

ಆದರೆ, ಲೋಕಕ್ಕೆ ಅಸಹಜವಾದ ಸ್ಥಿತಿ ಹಾಗೂ ಕೌಟುಂಬಿಕ, ಸಾಮಾಜಿಕ ಬಹಿಷ್ಕಾರದ ಬರಸಿಡಿಲು ಎದುರಿಸಬೇಕಾಯಿತು. ಆತ್ಮಹತ್ಯೆಗೆ ಯತ್ನಿಸಿಯೂ ಬದುಕಿಕೊಂಡ ಮೇಲೆ ಬದುಕು-ಭಾವವೆರಡು ಸಮಾಜಮುಖಿಯಾಗಲು ದೃಢತೀರ್ಮಾನ ಕೈಗೊಳ್ಳುವಂತೆ ಮಾಡಿತು.

Padma Shri awardee Folk artist Manjamma Jogati Profile

ಮಂಜುನಾಥಶೆಟ್ಟಿ 'ಮಂಜಮ್ಮ'ಳಾಗಿ ರೂಪಾಂತರ. ಆ ಹಂತದಲ್ಲಿ ದೊರೆತ ಕಾಳವ್ವ ಜೋಗತಿಯೇ ಗುರು, ತಾಯಿ, ಮಾರ್ಗದರ್ಶಕಿ-ದಿಕ್ಕುದೆಸೆ ಎಲ್ಲವೂ. 1985ರಲ್ಲಿ ಹೊಸಪೇಟೆ ತಾಲೂಕಿನ ಹುಲಗಿ ಗ್ರಾಮದ ಹುಲಿಗೆಮ್ಮ ದೇಗುಲದಲ್ಲಿ ಜೋಗತಿಯಾಗಿ ದೀಕ್ಷೆ ಸ್ವೀಕಾರ. ಮುಂದಿನ ಬದುಕು 'ಸೇವೆ'ಗೆ ಮುಡಿಪು. ಕಾಳವ್ವ ಜೋಗತಿ ಅವರಿಂದ ಜಾನಪದ ನೃತ್ಯ, ಹಾಡುಗಾರಿಕೆ ಮತ್ತಿತರ ಕಲೆಗಳೆಲ್ಲದರಲ್ಲೂ ತರಬೇತಿ. ಕಲಾವಿದೆಯಾಗಿ ಬದಲಾದ ಮಂಗಳಮುಖಿ! ತುಮಕೂರಿನಲ್ಲಿ ನಡೆದ ಅಖಿಲ ಕರ್ನಾಟಕ ಮಹಿಳಾ ಜಾನಪದ ಸಮ್ಮೇಳನದಲ್ಲಿ ಕಲಾಪ್ರದರ್ಶನ ನೀಡುವುದರೊಂದಿಗೆ ಕಲಾಯಾನಕ್ಕೆ ಮುನ್ನುಡಿ. ಆನಂತರದ್ದು ಕಲೆಯೇ ಸಾಧನಾ ಪಥ.

ಹಲವು ಪಾತ್ರದಲ್ಲಿ ಮಿಂಚಿದ ರಂಗಕಲಾವಿದೆ:
ಶ್ರೀ ರೇಣುಕಾ ಚರಿತ್ರೆ ನಾಟಕದ ಮುಖ್ಯ ಹಾಡುಗಾರ್ತಿ, ಗೌಡಶಾನಿ, ಕಾಮಧೇನು, ಪರಶುರಾಮ ಸೇರಿ 7 ಪಾತ್ರಗಳ ನಿರ್ವಹಣೆ. ಸಾವಿರಾರು ಪ್ರದರ್ಶನದಲ್ಲಿ ಕಲಾಪ್ರೇಮಿಗಳ ಹೃನ್ನನ ಸೆಳೆದ ಕಲಾವಂತಿಕೆ. ಕಾಳವ್ವ ಜೋಗತಿಯವರ ಅಗಲಿಕೆಯ ನಂತರ ರೇಣುಕಾದೇವಿಯ ಪಾತ್ರದಲ್ಲೂ ಬೆಳಗುವಿಕೆ. ಮರಿಯಮ್ಮನಹಳ್ಳಿಯ ಮಾರುಕಲಾರಂಗದ ಬಯಲಾಟಗಳಲ್ಲಿ ನರ್ತಕಿಯಾಗಿ ಜನಜನಿತ.

ಮೋಹಿನಿ ಭಸ್ಮಾಸುರ, ಹೇಮರೆಡ್ಡಿ ಮಲ್ಲಮ್ಮ, ಮೋಹನ್‌ಲಾಲಾ ಮುಂತಾದ ಪಾತ್ರಗಳಲ್ಲಿ ಮಿಂಚಿದ ರಂಗಕಲಾವಿದೆ. ವಾದ್ಯಗಾರ್ತಿಯಾಗಿಯೂ ಮೋಡಿ ಮಾಡಿದ ಕಲಾನಿಪುಣೆ.

Padma Shri awardee Folk artist Manjamma Jogati Profile

ಹಂಪಿ ಉತ್ಸವ, ಬೀದರ್ ಉತ್ಸವ, ಜಾನಪದ ಲೋಕೋತ್ಸವ, ವಿಶ್ವ ಗೋ ಸಮ್ಮೇಳನ, ಜಾನಪದ ಜಾತ್ರೆ ಮುಂತಾದ ನಾಡಿನೆಲ್ಲಾ ಪ್ರಮುಖ ಉತ್ಸವಗಳಲ್ಲಿ ಹಾಗೂ ನಾಡಿನಾಚೆಯ ಸಾಂಸ್ಕೃತಿಕ ಉತ್ಸವಗಳಲ್ಲೂ ಕಲಾಪ್ರದರ್ಶನ. ಸಾವಿರಾರು ಕಾರ್ಯಕ್ರಮಗಳು, ಎಲ್ಲೆಡೆ ಮೆಚ್ಚುಗೆಯ ಕರತಾಡನ.

ತೃತೀಯಲಿಂಗಿಗಳ ಪಾಲಿಗೆ ಸ್ಫೂರ್ತಿಯ ಚೇತನ
ಸತತ ನಾಲ್ಕು ದಶಕಗಳಿಂದಲೂ ನಿರಂತರ ಕಲಾಸೇವೆಗೈದಿರುವ ಮಂಜಮ್ಮ ಜೋಗತಿ ಅಶಕ್ತ ಹೆಣ್ಣುಮಕ್ಕಳು-ದಿಕ್ಕೇ ಕಾಣದ ತೃತೀಯಲಿಂಗಿಗಳ ಪಾಲಿಗೆ ಸ್ಫೂರ್ತಿಯ ಚೇತನವಾಗಿದ್ದು ವಿಶೇಷ. ನಿತ್ಯ ಬದುಕಿನ ಹೋರಾಟ, ಸಮಾಜದ ಕುಹುಕ ಮಾತುಗಳ ಮಧ್ಯೆ ತಮ್ಮದೇ ಪ್ರತ್ಯೇಕ ಅಸ್ತಿತ್ವದ ಅಸ್ಮಿತೆ ಕಂಡುಕೊಂಡು ಮಂಜಮ್ಮ ಅರಳಿನಿಂತ ಬಗೆಯೇ ಬೆರಗಿನ ಕಥನ.

Padma Shri awardee Folk artist Manjamma Jogati Profile

ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಜಾನಪದಲೋಕ ಪ್ರಶಸ್ತಿ, ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗಳು ಮತ್ತಿತರ ಗೌರವಗಳೆಲ್ಲವೂ ಕಲೆಯ ಕೈಹಿಡಿದು ಗೆದ್ದ ಮಂಜಮ್ಮ ಅವರ ಸೇವೆಗೆ ಸಂದ ಸತ್ಫಲಗಳು. ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯೆಯಾಗಿ ಕಲಾಸಂಘಟನೆಗೆ 'ಕಾಣೆ' ನೀಡಿದ ಮಂಜಮ್ಮ ಜೋಗತಿ ಪ್ರಸ್ತುತ ಜಾನಪದ ಅಕಾಡೆಮಿಯ ಅಧ್ಯಕ್ಷೆಯಾಗಿ ಜನಪದ ಕಲೆಯ ಪೋಷಣೆ ಮತ್ತು ರಕ್ಷಣೆಯ ಕಾರ್ಯದಲ್ಲಿ ತಲ್ಲೀನರು. ಛಲ, ಪರಿಶ್ರಮ, ಬದ್ಧತೆಗಳು ಬದುಕನ್ನು ನಳನಳಿಸಿ, ಗೆಲ್ಲಿಸಿ, ಗೌರವಿಸಬಲ್ಲದೆಂಬ ಲೋಕನುಡಿಗೆ ಮಂಜುಮ್ಮ ಜೋಗತಿಯವರ ಈ ಕಲಾಪೂರ್ಣ ಬದುಕೇ ತಾಜಾ ಉದಾಹರಣೆ ಮಾತ್ರವಲ್ಲ, ಸಾಧನಾಹಂಬಲಿಗರಿಗೆ ಎಂದೆಂದಿಗೂ ಪ್ರೇರಣೆಯೂ ಕೂಡ.(ಮಾಹಿತಿ ಕೃಪೆ:ಕಣಜ)

English summary
Padma shri awardee Transgender Folk artist, Karnataka Janapada academy president Manjamma Jogati profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X