ಕಾರ್ಗಿಲ್ ವಿಜಯ್ ದಿವಸಕ್ಕೆ ಇಪ್ಪತ್ತು; ದೇಶ ಕಾಯುವ ಯೋಧರಿಗೆ ವಂದೇ
ಬೆಂಗಳೂರು, ಜುಲೈ 25: ಕಾರ್ಗಿಲ್ ವಿಜಯ್ ದಿವಸ್ ನ (ಜುಲೈ 26) ಇಪ್ಪತ್ತನೇ ವರ್ಷಾಚರಣೆ ಅಂಗವಾಗಿ ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ವಿಶೇಷ ಲೇಖನವೊಂದನ್ನು ಬರೆದಿದ್ದಾರೆ. ಆದರ ಆಯ್ದ ಭಾಗ ಇಲ್ಲಿದೆ.
ದೇಶದಾದ್ಯಂತ ಶುಕ್ರವಾರ ಕಾರ್ಗಿಲ್ ವಿಜಯ್ ದಿವಸ್ ನ ಇಪ್ಪತ್ತನೇ ವರ್ಷಾಚರಣೆ ಆಚರಿಸಲಾಗುತ್ತದೆ. ಸಶಸ್ತ್ರ ಪಡೆಯು ಯಶಸ್ವಿಯಾಗಿ ಆಪರೇಷನ್ ವಿಜಯ್ ಪೂರ್ಣಗೊಳಿಸಿದ ದಿನ ಹಾಗೂ ಪಾಕಿಸ್ತಾನದ ಮತ್ತೊಂದು ದುಸ್ಸಾಹಸಕ್ಕೆ ಹೀನಾಯ ಸೋಲುಣಿಸಿದ ಸಂದರ್ಭ ಅದು.- ಅದಕ್ಕೆ ಇಪ್ಪತ್ತೆಂಟು ವರ್ಷಕ್ಕೆ ಹಿಂದೆ ಕಳೆದ ಬಾರಿಗೆ ಎಂಬಂತೆ ಪಾಕಿಸ್ತಾನ ಅವಮಾನ ಅನುಭವಿಸಿತ್ತು.
ಕಾರ್ಗಿಲ್ ಯುದ್ಧ: ಅನುಜ್ ಎಂಬ ವೀರ ಯೋಧನ ರೋಮಾಂಚನಕಾರಿ ಸಾಹಸಗಾಥೆ
ಮೇ ಮಧ್ಯದಿಂದ ಜುಲೈ 1999ರ ತನಕ ಆಪರೇಷನ್ ವಿಜಯ್ ನಡೆಯಿತು. ಪಾಕಿಸ್ತಾನಿಯರಿಂದ ಅತಿ ಎತ್ತರದ ಪ್ರದೇಶಗಳನ್ನು ವಶಕ್ಕೆ ಪಡೆಯಲಾಗಿತ್ತು. ಕೆಚ್ಚಿನ ಹೋರಾಟ ಮಾಡಿದ ಭಾರತೀಯ ಸೈನಿಕರು ಭಾರತದ ಭೂ ಪ್ರದೇಶವನ್ನು ವಾಪಸ್ ಪಡೆಯಲು ಸಫಲರಾದರು.
ಈ ಕಾರ್ಯಾಚರಣೆಯಲ್ಲಿ ಭೂ ಸೇನೆ, ವಾಯು ಸೇನೆಯ ವೀರಾವೇಶದ ಹೋರಾಟ ಅವಿಸ್ಮರಣೀಯವಾದುದು. ಇಪ್ಪತ್ತು ವರ್ಷಗಳು ಕಳೆದಿವೆ. ಆದರೆ ನೆನಪುಗಳು ಮಾಸಿಲ್ಲ. ಆ ಸಮಯದಲ್ಲಿ ಭಾರತಕ್ಕೆ ಸಂಕಲ್ಪಶಕ್ತಿಯ ಅಟಲ್ ಜೀ ನಾಯಕತ್ವ ಇತ್ತು. ಮುಲಾಜಿಲ್ಲದೆ ಪಾಕಿಸ್ತಾನಿ ಸೈನಿಕರನ್ನು ದೇಶದಿಂದ ಹೊರಹಾಕಿ ಎಂದು ಸೂಚಿಸಿದ್ದರು.
ಇಂದಿಗೂ ನೆನಪಾಗುವುದು ಏನೆಂದರೆ, ಸಿಟ್ಟು ತರಿಸುವುದು ಏನೆಂದರೆ, ಲೆ. ಸೌರಭ್ ಕಾಲಿಯಾ ಮತ್ತು ಐವರು ಸೈನಿಕರಿಗೆ ಅಮಾನವೀಯವಾಗಿ ಚಿತ್ರಹಿಂಸೆ ನೀಡಿದ ಪಾಕಿಸ್ತಾನದ ಅನಾಗರಿಕ ಕೃತ್ಯ. ಈಗಲೂ ರೋಮಾಂಚನಕಾರಿ ಎನಿಸುವುದು, ಕ್ಯಾ. ವಿಕ್ರಂ ಬಾತ್ರಾ, ಕ್ಯಾ. ವೈಜಯಂತ್ ಥಾಪರ್, ಕ್ಯಾ. ಹನೀಫ್ ಉದೀನ್, ಮೇ. ಸೋನಮ್ ವಾಂಗ್ ಚುಕ್, ರೈಫಲ್ ಮನ್ ಯೋಗೇಂದ್ರ ಯಾದವ್, ಲ್ಯಾನ್ಸ್ ನಾಯಕ್ ಗುಲಾಮ್ ಮೊಹ್ಮದ್ ಖಾನ್ ಮತ್ತಿತರರ ಶೌರ್ಯ- ಸಾಹಸಗಳು.
ಟೈಗರ್ ಹಿಲ್ ಭಾರತಕ್ಕೆ ಮರಳಿ ಸಿಕ್ಕಿದ್ದು ಎಂಟು ಸಿಖ್ ಯೋಧರ ಸಾಹಸದಿಂದ
ಈ ಯುದ್ಧದಲ್ಲಿ ಹುತಾತ್ಮರಾದವರಲ್ಲಿ ಹಲವರು ತಮ್ಮ ಇಪ್ಪತ್ತರ ಹರೆಯದವರಾಗಿದ್ದರು. ಈ ಧೈರ್ಯಶಾಲಿಗಳೆಲ್ಲ ಯುವಕರು. ಅವರ ಸಾಹಸ- ಧೈರ್ಯ ಯಾವ ಹಿರಿಯ ಯೋಧರಿಗೂ ಕಡಿಮೆ ಇರಲಿಲ್ಲ. ಈ ಹುತಾತ್ಮರ ಜೀವನ ನಮಗೆ ಸ್ಫೂರ್ತಿದಾಯಕ. ಅದರಲ್ಲೂ ನಮ್ಮ ದೇಶದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ ಇರುವ ಯುವ ಜನರಿಗೆ ಸ್ಫೂರ್ತಿ ಆಗುವುದರಲ್ಲಿ ಅನುಮಾನವಿಲ್ಲ.
ಆಪರೇಷನ್ ವಿಜಯ್ ನಲ್ಲಿ ಐನೂರಾ ಇಪ್ಪತ್ತೇಳು ಮಂದಿ ನೆಲಕ್ಕೊರಗಿ ಇಪ್ಪತ್ತು ವರ್ಷಗಳು ಕಳೆದಿವೆ. ಅವರು ನಮ್ಮ ಪಾಲಿಗೆ ಇಲ್ಲ. ಆದರೆ ಅವರ ಪೋಷಕರು, ಕುಟುಂಬ ನಮ್ಮ ಜತೆಗಿದೆ. ಅವರಿಗೆ ನಮ್ಮ ಹೃದಯಾಂತರಾಳದ ಗೌರವ ಸಲ್ಲಿಸುವ ಅಗತ್ಯ ಇದೆ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಮೇ ಸಿ.ಬಿ. ದ್ವಿವೇದಿ ಅವರ ಮಗಳು ದೀಕ್ಷಾ 'ಲೆಟರ್ಸ್ ಫ್ರಂ ಕಾರ್ಗಿಲ್' ಎಂಬ ಪುಸ್ತಕ ತಂದಿದ್ದಾರೆ. ಈ ಪುಸ್ತಕದಲ್ಲಿ ಆಕೆ ಕಾರ್ಗಿಲ್ ಯುದ್ಧದ ಕಥೆ ಹೇಳಿದ್ದಾರೆ.
ಕಾರ್ಗಿಲ್ ವಿಜಯ್ ದಿವಸ್: ಜೈ ಜವಾನ್ ...ಜೈ ಹಿಂದ್...
ಕಾಂಗ್ರೆಸ್ ನೇತೃತ್ವದ ಯುಪಿಎ ಮೊದಲ ಅಧಿಕಾರಾವಧಿಯಲ್ಲಿ ಕಾರ್ಗಿಲ್ ವಿಜಯದ ಸಂಭ್ರಮ ಆಚರಿಸಲೇ ಇಲ್ಲ. ಆ ನಂತರ ನಿರಂತರ ಬೇಡಿಕೆ ತಂದ ಮೇಲೆ ಆಗಿನ ರಕ್ಷಣಾ ಸಚಿವ ಎ.ಕೆ. ಆಂಟನಿ ಈಗ ಒಂಬತ್ತು ವರ್ಷಗಳ ಹಿಂದಿನಿಂದ ಕಾರ್ಗಿಲ್ ವಿಜಯ್ ದಿವಸ್ ಅನ್ನು ಪ್ರತಿ ನಾಗರಿಕರಿಂದ ಹಾಗೂ ಕೇಂದ್ರ ಸರಕಾರಿ ನೌಕರರಿಂದ ಆಚರಿಸಲು ಆರಂಭಿಸಲಾಯಿತು.
ಭಾರತ ಸ್ವತಂತ್ರಗೊಂಡಾಗಿನಿಂದ ಗಡಿಯಾಚೆಗಿನ ಬೆದರಿಕೆಗಳನ್ನು ಎದುರಿಸುತ್ತಲೇ ಇದ್ದೇವೆ. ಅದರಲ್ಲೂ ಪಾಕಿಸ್ತಾನವು ಆಗಿನಿಂದ ಹಲವು ಯುದ್ಧಗಳನ್ನು ಮಾಡಿದೆ. ಈಚೆಗೆ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ನಡೆಸಿದ ಬಾಲಾಕೋಟ್ ದಾಳಿ ತನಕ ಪಾಕಿಸ್ತಾನವು ಹಲವು ಬಾರಿ ಹೀನಾಯವಾಗಿ ಅವಮಾನ ಎದುರಿಸಿದೆ. ಎಪ್ಪತ್ತೆರಡು ವರ್ಷದ ಆತಂಕ ಇಂದಿಗೂ ಇದೆ; ಆದರೆ ಅದು ನಾನಾ ಬಗೆಯಲ್ಲಿ.
ಕಾರ್ಗಿಲ್ ವಿಜಯ್ ದಿವಸ್: ಭಾರತೀಯ ವೀರಯೋಧರ ಸಾಹಸಗಾಥೆ
ಭಯೋತ್ಪಾದನೆ ವಿರುದ್ಧದ ಪ್ರತಿ ದಿನದ ಹೋರಾಟದಲ್ಲಿ ನಮ್ಮ ಸಶಸ್ತ್ರ ಪಡೆಯ ಯುವಕ- ಯುವತಿಯರು ನಿತ್ಯವೂ ಭಾಗಿಯಾಗುತ್ತಿದ್ದಾರೆ. ಇಪ್ಪತ್ತು ವರ್ಷದ ವಿಜಯ ಸಂಭ್ರಮಾಚರಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ದೇಶದ ಸುರಕ್ಷತೆ ಹಾಗೂ ಭದ್ರತೆಗೆ ಶ್ರಮಿಸುತ್ತಿರುವ ನಮ್ಮ ದೇಶದ ಪುರುಷರು- ಮಹಿಳೆಯರಿಗೆ ಸೆಲ್ಯೂಟ್.
ಜೈ ಹಿಂದ್!