'ಮೈಂಡ್ ಗೇಮ್' ಆಡುತ್ತಿರುವ ಬಿಜೆಪಿ, ಯಡಿಯೂರಪ್ಪ ಪಾಲಿಗೆ ಕೊನೆ ಆಟ!
Recommended Video
ದೆಹಲಿಯಲ್ಲಿ ಕೂತು ಯಡಿಯೂರಪ್ಪ ಅವರು ಆಡುತ್ತಿರುವ ಆಟದ ಹಿಂದಿನ ಲೆಕ್ಕಾಚಾರಗಳು ಏನಿರಬಹುದು ಎಂಬುದನ್ನು ರಾಜಕೀಯ ವಿಶ್ಲೇಷಕರು ಹೇಗೆ ಎಳೆ ಎಳೆಯಾಗಿ ಬಿಡಿಸಿಡುತ್ತಾರೆ ಗೊತ್ತಾ? ಅವರ ಪ್ರಕಾರ ಈಗ ನಡೆಯುತ್ತಿರುವುದು ಪಕ್ಕಾ ಮೈಂಡ್ ಗೇಮ್. ಅಂದರೆ ಎದುರಾಳಿಯಲ್ಲಿ ಆತ್ಮವಿಶ್ವಾಸವನ್ನು ಕೊಂದು ಹಾಕುವ ಮೆದುಳಿನ ಆಟ ಎನ್ನುತ್ತಾರೆ.
ಅಸಲಿಗೆ ಯಡಿಯೂರಪ್ಪ ಮತ್ತಿತರ ನಾಯಕರನ್ನು ದೆಹಲಿಗೆ ಕರೆದಿರುವುದೇ ಮುಂಬರುವ ಲೋಕಸಭೆ ಚುನಾವಣೆಗೆ ಕರ್ನಾಟಕಕ್ಕೆ ಎಂಥ ಗೇಮ್ ಪ್ಲಾನ್ ರೂಪಿಸಬೇಕು ಎಂದು ಚರ್ಚಿಸುವ ಸಲುವಾಗಿ. ಆದರೆ ಆ ಚರ್ಚೆಗೆ ತೆರಳುವಾಗ ಎಲ್ಲ ಶಾಸಕರನ್ನೂ ಜತೆಗೆ ಕರೆದುಕೊಂಡು ಹೋಗಿ, ಒಂದೆರಡು ದಿನದ ಮಟ್ಟಿಗೆ ರೆಸಾರ್ಟ್ ನಲ್ಲಿ ಇರಿಸಿದರೂ ಕಾಂಗ್ರೆಸ್-ಜೆಡಿಎಸ್ ನಲ್ಲಿ ಆತಂಕ ಶುರುವಾಗುತ್ತದೆ ಎಂಬುದು ಪಳಗಿದ ರಾಜಕಾರಣಿ ಯಡಿಯೂರಪ್ಪನವರಿಗೆ ಗೊತ್ತು.
Operation ಕಮಲ ಯಶಸ್ಸಾಗಲು ಸಾಧ್ಯವಿಲ್ಲ ಅನ್ನೋದಿಕ್ಕೆ ಇಲ್ಲಿವೆ 4 ಕಾರಣಗಳು
ಅದರ ಬೆನ್ನಿಗೇ, ಏನೋ ಆಗುತ್ತಿದೆ. ತಮ್ಮ ಪಾಳಯದಿಂದ ಶಾಸಕರನ್ನು ಸೆಳೆಯುವ ಯತ್ನ ನಡೆಯುತ್ತಿದೆ ಎಂಬ ಅನುಮಾನ ಜೆಡಿಎಸ್- ಕಾಂಗ್ರೆಸ್ ನಲ್ಲಿ ಮೂಡುತ್ತದೆ. ಮೊದಲೇ ನಿಗಮ-ಮಂಡಳಿ ನೇಮಕ ವಿಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರಲ್ಲಿ ಅಸಮಾಧಾನ ಇರುವುದು ಗೊತ್ತಿರುವ ವಿಚಾರವೇ. ಅದರ ಜತೆಗೆ ಹೀಗೆ ಬಿಜೆಪಿ ಹೊಸ ಆಟ ಶುರು ಮಾಡಿಕೊಂಡರೆ ಗಾಬರಿ ಆಗದೇ ಇರುತ್ತಾ?
ಜೆಡಿಎಸ್-ಕಾಂಗ್ರೆಸ್ ನಲ್ಲಿ ಗೊಂದಲ ಏಳುತ್ತದೆ
ಮತ್ತೊಂದು ಸುತ್ತಿನ ನಿಗಮ-ಮಂಡಳಿ ನೇಮಕಾತಿಗೆ ಮುಂದಾಗಿರುವ ಜೆಡಿಎಸ್-ಕಾಂಗ್ರೆಸ್ ನಲ್ಲಿ ಗೊಂದಲ ಏಳುತ್ತದೆ. ಲೋಕಸಭೆ ಚುನಾವಣೆಗೆ ಒಟ್ಟಾಗಿ ಸ್ಪರ್ಧೆಗೆ ಇಳಿಯಬೇಕು ಎಂಬ ಆಲೋಚನೆ ಬಗ್ಗೆ ಗೊಂದಲ ಏಳುತ್ತದೆ.
ಅಂದಹಾಗೆಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಜತೆಯಾಗಿ ಲೋಕಸಭೆ ಚುನಾವಣೆ ಎದುರಿಸುವುದು ಬಿಜೆಪಿಗೆ ಹಾಗೂ ಕಾಂಗ್ರೆಸ್ ನೊಳಗೇ ಇರುವ ಕೆಲವರಿಗೆ ಬೇಡವಾಗಿದೆ. ಆ ಉದ್ದೇಶಕ್ಕೆ ಪೂರಕ ವಾತಾವರಣ ನಿರ್ಮಾಣ ಆಗುತ್ತದೆ. ಯಾವಾಗ ಈ ಸರಕಾರ ಬೀಳುವುದು ಬಹುತೇಕ ಪಕ್ಕಾ ಆಗುತ್ತದೋ ಆಗ ಬೇರೇನೂ ಮಾಡುವುದು ಬೇಡ, ಬೀಳುವುದನ್ನು ತಡೆಯದೆ ಸುಮ್ಮನಿದ್ದರೂ ಆಯಿತು ಎಂದು ಸಮಯಕ್ಕೆ ಎದುರು ನೋಡುವವರು ಇದ್ದಾರೆ.
ಮುಖ್ಯಮಂತ್ರಿ ಆಗುವ ಕನಸನ್ನು ಶಿಕಾರಿಪುರದಲ್ಲೇ ಹೂತು ಹಾಕಬೇಕಾಗುತ್ತದೆ
ಇದು ಒಂದು ಬಗೆಯ ಲೆಕ್ಕಾಚಾರ ಆಯಿತು.ಆದರೆ ಬಿಜೆಪಿ ವರಿಷ್ಠರಿಗೇ ಈಗಿನ ಸನ್ನಿವೇಶದಲ್ಲಿ ಯಾವುದೇ ರಾಜ್ಯದಲ್ಲೂ ಆಪರೇಷನ್ ಕಮಲದ ಆಟ ಬೇಕಾಗಿಲ್ಲ. ಲೋಕಸಭೆ ಚುನಾವಣೆ ಕಣ್ಣೆದುರು ಇಟ್ಟುಕೊಂಡು, ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕುಮಾರಸ್ವಾಮಿ ಅವರನ್ನು ಕುರ್ಚಿಯಿಂದ ಕೆಡವಿದ ಆರೋಪ ಹೊರುವುದು ಕೇಸರಿ ಪಕ್ಷದ ದೊಡ್ಡ ತಲೆಗಳಿಗೆ ಬೇಕಿಲ್ಲ. ಹಾಗಂತ ಸುಮ್ಮನಿದ್ದು ಬಿಟ್ಟರೆ ಲೋಕಸಭೆ ಚುನಾವಣೆ ಮುಗಿದ ಮೇಲೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬೇಕು ಎಂಬ ಕನಸನ್ನು ಶಿಕಾರಿಪುರದಲ್ಲೇ ಹೂತು ಹಾಕಬೇಕಾಗುತ್ತದೆ. ಊಟವಾದ ಮೇಲಿನ ಬಾಳೆಲೆಯಂತೆ ಆಗುತ್ತದೆ ಯಡಿಯೂರಪ್ಪನವರ ಪರಿಸ್ಥಿತಿ.
ಸೋಲುವ ಆಟ ಶುರು ಮಾಡುವುದು ಬೇಡ
ಈಗ ಏನೇನೋ ತಾಪತ್ರಯ ಪಟ್ಟು, ಒತ್ತಡ ತಂದು, ಈಗಿನ ಮೈತ್ರಿ ಸರಕಾರ ಕೆಡವಿ ಯಡಿಯೂರಪ್ಪನವರು ಬಿಜೆಪಿ ನೇತೃತ್ವದ ಸರಕಾರ ರಚನೆ ಮಾಡಿದರೂ ಅದರ ಆಯುಷ್ಯವೂ ಬಹಳ ದೊಡ್ಡದಲ್ಲ ಎಂಬ ಸಂಗತಿ ವರಿಷ್ಠರಿಗೆ ಮನವರಿಕೆ ಆಗಿದೆ. ಏಕೆಂದರೆ ಈಗಿನ ಸಂಖ್ಯಾಬಲದಲ್ಲಿ ಹೊಸ ಆಟ ಆಡಿ, ದಕ್ಕಿಸಿಕೊಳ್ಳುವುದು ಅಸಾಧ್ಯದ ಮಾತು. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವರ್ಚಸ್ಸಿಗೆ ಕುಂದುಂಟಾಗುತ್ತದೆ. ಈಗಾಗಲೇ ಪಂಚ ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನಿಂದ ಬಿಜೆಪಿಯಲ್ಲಿ ಹತಾಶ ಸ್ಥಿತಿ ಕಾಣುತ್ತಿದೆ. ವಿಪಕ್ಷಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತಿದೆ. ಇಂಥ ಸನ್ನಿವೇಶದಲ್ಲಿ ಸೋಲುವ ಆಟ ಆರಂಭಿಸುವುದು ಬೇಡ ಎಂಬ ಲೆಕ್ಕಾಚಾರವೇ ಕೇಸರಿ ಪಕ್ಷದ ಹೈಕಮಾಂಡ್ ನದು ಸಹ ಎನ್ನುತ್ತವೆ ಮೂಲಗಳು.
ರಾಷ್ಟ್ರ ಮಟ್ಟದಲ್ಲೇ ಬಿಜೆಪಿಗೆ ಪೂರಕ ವಾತಾವರಣ ಇಲ್ಲ
ಈಗಿನ ಮೈತ್ರಿ ಸರಕಾರ ರಚಿಸಿರುವ ಕಾಂಗ್ರೆಸ್-ಜೆಡಿಎಸ್ ನ ಎರಡು ಪಕ್ಷದಿಂದ ಸೇರಿ ಕನಿಷ್ಠ ಹದಿನಾಲ್ಕು ಶಾಸಕರ ರಾಜೀನಾಮೆ ಕೊಡಿಸಬೇಕು. ಒಬ್ಬಿಬ್ಬರೋ ಅಥವಾ ತೀರಾ ಹೆಚ್ಚೆಂದರೆ ಐದಾರು ಶಾಸಕರನ್ನು ರಾಜೀನಾಮೆ ನೀಡುವಂತೆ ಮನವೊಲಿಸಬಹುದು. ಆದರೆ ಇದು ತೀರಾ ಹೆಚ್ಚಿನ ಸಂಖ್ಯೆ. ಇದಕ್ಕೆ ತಕ್ಕಂತೆ ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲೇ ಪೂರಕವಾದ ವಾತಾವರಣ ಇಲ್ಲ. ಆ ಕಾರಣಕ್ಕೆ ಬಿಜೆಪಿ ಹೈ ಕಮಾಂಡ್ ಕೂಡ ಆಪರೇಷನ್ ಗೆ ಮನಸು ಮಾಡಿಲ್ಲ. ವಿಧಾನಸಭಾ ಚುನಾವಣೆ ಮುಗಿದ ಮೇಲೆ ಯಡಿಯೂರಪ್ಪನವರು ಸರಕಾರ ರಚನೆಗೆ ಮುಂದಾಗಿದ್ದರಲ್ಲಾ ಆಗ ಕೂಡ ವರಿಷ್ಠರಿಗೆ ಇಲ್ಲಿನ ಸ್ಥಿತಿ ಚೆನ್ನಾಗಿ ಗೊತ್ತಿತ್ತು. ಆ ಕಾರಣಕ್ಕೆ ಕೇಂದ್ರದಿಂದ ಯಾವ ನಾಯಕರೂ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಬರಲಿಲ್ಲ.