ಜೋಡುಪಾಲದಲ್ಲಿ ಮನುಷ್ಯರ ಸುಳಿವಿಲ್ಲ, ಸಾಯೋ ಸ್ಥಿತೀಲಿ ಸಾಕುಪ್ರಾಣಿಗಳು
Recommended Video
ಒನ್ಇಂಡಿಯಾ ಕನ್ನಡದ ವರದಿಗಾರ ಕಿರಣ್ ಸಿರ್ಸೀಕರ್ ಪ್ರವಾಹ ಪರಿಸ್ಥಿತಿ ತಗ್ಗುತ್ತಿರುವ ಕೊಡಗು ಜಿಲ್ಲೆಯ ಗಡಿ ಭಾಗದ (ದಕ್ಷಿಣ ಕನ್ನಡ ಜಿಲ್ಲೆ) ಪರಿಸ್ಥಿತಿ ಚಿತ್ರಣವನ್ನು ನಿಮ್ಮ ಮುಂದಿಟ್ಟಿದ್ದಾರೆ. ಈ ವರದಿಯಲ್ಲಿ ಅವರು ಜೋಡುಪಾಲದ ಸದ್ಯದ ಸನ್ನಿವೇಶವನ್ನು ಕಣ್ಣಿಗೆ ಕಟ್ಟುವಂತೆ ಕಂಡಿರಿಸಿದ್ದಾರೆ. ಅರೆ ಕ್ಷಣ ಕಣ್ಣಾಲಿಗಳು ಒದ್ದೆಯಾಗುತ್ತವೆ.- ಸಂಪಾದಕ
ಒಂದೆಡೆ ನಿರಂತರವಾಗಿ ಸುರಿಯುವ ಜಿಟಿ ಜಿಟಿ ಮಳೆ. ಎಲ್ಲಾ ಕಡೆ ಮಂಜು ಮುಸುಕಿದ ವಾತಾವರಣ. ಚುುಮು ಚುಮು ಚಳಿಯ ನಡುವೆ ಕಣ್ಣಾಮುಚ್ಚಾಲೆ ಆಡುವ ಬಿಸಿಲು. ಈ ಪ್ರಕೃತಿಯ ಸೌಂದರ್ಯಕ್ಕೆ ಮನ ಸೋಲದವರಾರು? ಇಂಥದ್ದೊಂದು ವಾತಾವರಣಕ್ಕೆ ಒಗ್ಗಿ ಹೋಗಿ ಅವೆಲ್ಲವನ್ನೂ ತಾಯಿಯಂತೆ ಕಾಣುತ್ತಿದ್ದವರ ಕಣ್ಣುಗಳಲ್ಲಿ ಈಗ ಆ ತಾಯಿಯ ಬಗ್ಗೆಯೇ ಆತಂಕ.
ಮುದ್ದಿನ ನಾಯಿ ರಕ್ಷಿಸಲು ಮಡಿಕೇರಿಯಿಂದ ನಡೆದುಕೊಂಡು ಬಂದ ಯುವಕ
ಜೀವನದುದ್ದಕ್ಕೂ ಇಂತಹ ದೃಶ್ಯ ಕಾವ್ಯದ ಆಸರೆಯಲ್ಲೇ ನೆಲೆ ನಿಲ್ಲಬೇಕೆಂದು ಹಂಬಲಿಸುವ ಮನ. ಇದು ಒಂದೆಡೆಯಾದರೆ, ಇನ್ನೊಂದೆಡೆ ದಟ್ಟ ಹಸಿರಿನಿಂದ ಮಂಜು ಮುಸುಕಿದ ಸುಂದರ ಬೆಟ್ಟಗಳು ಯಾವಾಗ ಮೃತ್ಯು ರೂಪಿಯಾಗಿ ಬದಲಾಗುತ್ತದೋ ಎಂಬ ಭಯ. ಯಾವಾಗ ಗುಡ್ಡಗಳು ಕುಸಿದು ಬಿದ್ದು, ಮನೆಗಳನ್ನು ಆಪೋಶನ ತೆಗೆದುಕೊಳ್ಳುತ್ತದೋ ಎಂಬ ದಿಗಿಲು.
ಕೇರಳ, ಕರ್ನಾಟಕದ ಪ್ರವಾಹದ ನೈಜ ಕಾರಣ ಬಹಿರಂಗ
ಭಾರೀ ಭೂ ಕುಸಿತ ದುರಂತ ಸಂಭವಿಸಿದ ಕೊಡಗಿನ ಗಡಿಭಾಗ ಜೋಡುಪಾಲದಲ್ಲಿ ಸದ್ಯಕ್ಕಿರುವ ಪರಿಸ್ಥಿತಿ ಇದು. ತೀರಾ ಇತ್ತೀಚಿನವರೆಗೆ ಸ್ವರ್ಗದಂತೆ ಗೋಚರಿಸುತ್ತಿದ್ದ ಜೋಡುಪಾಲವು ದುರಂತದ ಕತೆ ಹೇಳುತ್ತಿದೆ. ಸಂಪಾಜೆ, ಕಲ್ಲಗುಂಡಿಯ ಬಳಿಕ ಜನಸಂಚಾರವೇ ಕಡಿಮೆಯಾಗಿದೆ. ಜೋಡುಪಾಲ, ಮದೆನಾಡು, ಮೊಣ್ಣಂಗೇರಿ ಗ್ರಾಮಗಳಿಗೆ ತೆರಳಲು ಜನರು ಭಯಪಡುತ್ತಿದ್ದಾರೆ.
ಜೋಡುಪಾಲದಲ್ಲಿ ಸ್ಮಶಾನ ಮೌನ
ಭಾರೀ ದುರಂತ ಸಂಭವಿಸಿ, 4 ಮಂದಿ ಮೃತಪಟ್ಟ ಜೋಡುಪಾಲ ಗ್ರಾಮದಲ್ಲಿ ಈಗ ಸ್ಮಶಾನ ಮೌನ. ಈ ಊರಿನ ಪ್ರತಿ ರಸ್ತೆಯು ಆಗಸ್ಟ್ 16 ಹಾಗೂ 17ರಂದು ನಡೆದ ದುರಂತದ ಕಥೆ ಹೇಳುತ್ತವೆ. ಇಲ್ಲಿ ಊರಿಗೆ ಊರೇ ಖಾಲಿಯಾಗಿದೆ. ಎಲ್ಲಿ ನೋಡಿದರೂ ನೀರವ. ಹಲವಾರು ವರ್ಷಗಳಿಂದ ಈ ಊರಿನಲ್ಲಿ ಜನರ ವಾಸವೇ ಇಲ್ಲವೇನೋ ಅನಿಸುತ್ತದೆ. ದುರಂತದ ಬಳಿಕ ಈ ಜನ ಊರು ತೊರೆದಿದ್ದಾರೆ. ಸಂತ್ರಸ್ತರ ಆಶ್ರಯ ಕೇಂದ್ರಗಳಲ್ಲಿ ದಿನ ಕಳೆಯುತ್ತಿದ್ದಾರೆ.
ಕೋಳಿ, ಸಾಕು ನಾಯಿ ಹಾಗೂ ಜಾನುವಾರುಗಳು ಮಾತ್ರ
ಈ ಜೋಡುಪಾಲದ ದುರಂತದಲ್ಲಿ ಉಳಿದುಕೊಂಡಿರುವ ಮನೆಗಳ ಎದುರು ಕಂಡುಬರುತ್ತಿರುವುದು ಕೋಳಿಗಳು, ಜಾನುವಾರುಗಳು ಹಾಗೂ ಸಾಕು ನಾಯಿಗಳು ಮಾತ್ರ. ಊರಲ್ಲಿ ಮನುಷ್ಯನ ಛಾಯೆಯೂ ಕಂಡು ಬರುತ್ತಿಲ್ಲ. ಊರಿನ ರಸ್ತೆಗಳಲ್ಲಿ ಕೆಸರು ತುಂಬಿದೆ. ಕೆಸರಿನಲ್ಲಿ ಸಿಲುಕಿಕೊಂಡಿರುವ ವಾಹನಗಳು, ಕೆಸರಲ್ಲಿ ಹೂತು ಹೋಗಿರುವ ಅಂಗಡಿಗಳು ದುರಂತಕ್ಕೆ ಸಾಕ್ಷಿ ನುಡಿಯುತ್ತಿವೆ.
ಜೋಡುಪಾಳ, ಮದೆನಾಡು ದುರಂತದ ಮುನ್ಸೂಚನೆ ನೀಡಿದ್ದವೆ ಕಾಡುಪ್ರಾಣಿಗಳು?
ಮೇವಿಲ್ಲದೆ, ಹಾಲು ಕರೆಯದೆ ರಾಸುಗಳ ಆರೋಗ್ಯ ಹದಗೆಡುತ್ತಿದೆ
ಗುಡ್ಡದಲ್ಲಿ ಸ್ಫೋಟಗೊಂಡು ಹರಿದ ನೀರು, ಮಣ್ಣು ನದಿಯಾಗಿ ಹರಿದ ಜಾಗದಲ್ಲಿ ಕಾಲಿಟ್ಟಲ್ಲಿ ಕೆಸರು ತುಂಬಿಕೊಂಡಿದೆ. ಕಾಲಿಟ್ಟಲ್ಲೆಲ್ಲಾ ಹುಗಿದು ಹೋಗುವ ಭೀತಿ. ಅಲ್ಲೇ ಕೆಸರಿನ ಮೇಲೆ ಆಗಸ್ಟ್ 16 ಹಾಗೂ 17 ರಂದು ಜಲಪ್ರಳಯದಲ್ಲಿ ಕೊಚ್ಚಿಹೋದ ಮನೆಗಳ ಅವಶೇಷಗಳು ಗೋಚರಿಸುತ್ತವೆ. ಭಯದಿಂದ ಊರ ಜನರು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಗೊಂಡಿದ್ದಾರೆ. ಆದರೆ ಕೆಲ ಮನೆಗಳಲ್ಲಿ ಕಟ್ಟಿಹಾಕಲಾದ ದನಕರುಗಳು ಆಹಾರ ಇಲ್ಲದೇ, ಹಾಲು ಕರೆಯದೇ ಆರೋಗ್ಯ ಹದಗೆಟ್ಟು ಸಾಯತೊಡಗಿವೆ.
ತಮ್ಮದೇ ಮನೆಗೆ ತೆರಳಲು ಕೆಲವೇ ಗಂಟೆಗಳ ಅವಕಾಶ
ಈ ಮಧ್ಯೆ ಜಾನುವಾರುಗಳು ಸಾಯುತ್ತಿರುವ ಪ್ರಸಂಗಗಳು ಬೆಳಕಿಗೆ ಬರುತ್ತಿದ್ದಂತೆ ಮನ ಕರಗಿ, ಸಂತ್ರಸ್ತರಿಗೆ ಆಶ್ರಯ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತವು ಸ್ಥಳೀಯರಿಗೆ ಕೆಲವು ಗಂಟೆಗಳ ಕಾಲ ಮಾತ್ರವೇ ತಮ್ಮ ನಿವಾಸಗಳಿಗೆ ತೆರಳಿ, ಸಾಕುಪ್ರಾಣಿಗಳ ಉಪಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ.
ಜಿಲ್ಲಾಡಳಿತದಿಂದ ಪಾಸ್ ಪಡೆಯಬೇಕು
ಜಿಲ್ಲಾಡಳಿತದಿಂದ ಪಾಸ್ ಪಡೆದು, ತಂತಮ್ಮ ಊರಿಗೆ ತೆರಳಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಊರಿನ ಕೆಲ ಜನರು ತೆರಳಿ ಮುಂದೇನು ಎನ್ನುವ ಪ್ರಶ್ನೆಯ ಭಾರ ಹೊತ್ತು ತಮ್ಮ ಸಾಕು ನಾಯಿ, ಬೆಕ್ಕು, ಕೋಳಿ, ಜಾನುವಾರುಗಳನ್ನು ಮಾತನಾಡಿಸುತ್ತಾ ಅವುಗಳಿಗಾಗಿಯೇ ತಂದ ತಿಂಡಿಗಳನ್ನು ಹಾಕಿ, ಮನೆಯ ಬೀಗ ತೆಗೆದು, ಏನಾಗಿದೆ ಎಂದು ಪರಿಶೀಲನೆ ನಡೆಸಿ ಬರುತ್ತಿರುವುದು ಕಂಡುಬರುತ್ತದೆ.
ಜನರ ನಿರೀಕ್ಷೆಯಲ್ಲಿದೆ ಜೋಡುಪಾಲ
ಕೊಡಗಿನ ಜೋಡುಪಾಲ ಈಗ ಪ್ರವಾಸಿಗರ ಸ್ವರ್ಗವಾಗಿ ಉಳಿದಿಲ್ಲ. ಇಲ್ಲಿ ಸದಾ ಗಿಜಿಗುಡುತ್ತಿದ್ದ ಹೋಮ್ ಸ್ಟೇ ಗಳಲ್ಲಿ ಈಗ ನೀರವ. ಜನರೇ ಇಲ್ಲದ ಊರೀಗ ಅಕ್ಷರಶಃ ಸ್ಮಶಾನದಂಥ ಆತಂಕ ಸೃಷ್ಟಿಸುತ್ತದೆ. ಕೊಡವ ಸಂಸ್ಕೃತಿಯೊಂದಿಗೆ ಬೆಳೆದು, ಆಡಿ ನಲಿದ ಮನೆಗಳು ಧರಾಶಾಹಿಯಾಗಿವೆ. ಪರಂಪರೆಯನ್ನು ಬಿಂಬಿಸುವ ಮನೆಗಳು ನೆಲ ಕಚ್ಚಿವೆ. ಮನೆಯಲ್ಲಿದ್ದ ಪಾರಂಪರಿಕ ಅಮೂಲ್ಯ ವಸ್ತುಗಳು ಕೊಚ್ಚಿಹೋಗಿವೆ. ಆದರೂ ಜೋಡುಪಾಲ ಮತ್ತೆ ತಲೆ ಎತ್ತಿ ನಿಲ್ಲುವ ಕನವರಿಕೆಯಲ್ಲೇ ತನ್ನ ಜನರ ಬರುವಿಕೆಯನ್ನು ಕಾತರದಿಂದ ಕಾಯುತ್ತಿದೆ.