ಒನ್ ಇಂಡಿಯಾ ಎಕ್ಸ್ ಕ್ಲೂಸಿವ್ : ಟೀಂ ಮೋದಿಯ ಚಕ್ರವರ್ತಿ ಸೂಲಿಬೆಲೆ ಸಂದರ್ಶನ
ಗಾಣಗಾಪುರದ ಬಳಿ ನದಿಯೊಂದರ ಸ್ವಚ್ಛತೆಗೆ ಹೊರಟಿದ್ದ 'ಟೀಂ ಮೋದಿ'ಯ ಚಕ್ರವರ್ತಿ ಸೂಲಿಬೆಲೆ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪರವಾದ ಪ್ರಚಾರ ಕಾರ್ಯದ ಬಗ್ಗೆ ಶುಕ್ರವಾರ ಫೋನ್ ಮೂಲಕ ಒನ್ ಇಂಡಿಯಾ ಕನ್ನಡದ ಜತೆ ಮಾತನಾಡಿದ್ದಾರೆ.
ಕಳೆದ ವರ್ಷದ ಡಿಸೆಂಬರ್ ನಿಂದ ಆರಂಭಿಸಿ ಬಹಿರಂಗ ಪ್ರಚಾರದ ಕೊನೆ ದಿನದ ತನಕ ಕರ್ನಾಟಕದ ಬಹುತೇಕ ಎಲ್ಲ ಕಡೆ ನರೇಂದ್ರ ಮೋದಿ ಅವರ ಪರವಾಗಿ ಪ್ರಚಾರ ನಡೆಸಿದ್ದರು ಚಕ್ರವರ್ತಿ ಸೂಲಿಬೆಲೆ.
ಎಂಥ ಸಂಸದರನ್ನೂ ದುಡಿಸಿಕೊಳ್ಳುವ ಸಾಮರ್ಥ್ಯ ಮೋದಿಗಿದೆ: ಚಕ್ರವರ್ತಿ ಸೂಲಿಬೆಲೆ
ಈ ಬಾರಿ ಕರ್ನಾಟಕದಲ್ಲಿ ಬಿಜೆಪಿಯ ಅದ್ಬುತ ಸಾಧನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚಕ್ರವರ್ತಿ ಸೂಲಿಬೆಲೆ ಅವರಿಗೆ ಅಭಿನಂದನೆ ಸಲ್ಲಿಸುತ್ತಿರುವವರನ್ನು ಕಾಣಬಹುದು. ಸಾಮಾಜಿಕ ಜಾಲತಾಣ ಮಾತ್ರ ಅಲ್ಲ, ಬಿಜೆಪಿಯ ಸಂತೋಷ್ ಜೀ ಹಾಗೂ ವಿಶ್ವವಾಣಿಯ ವಿಶ್ವೇಶ್ವರ್ ಭಟ್ ಅವರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ಮುಖ್ಯೋಪಾಧ್ಯಾಯಿನಿಯೊಬ್ಬರು ಕರೆ ಮಾಡಿ, ಮಾತನಾಡಿದ್ದನ್ನು ಸಹ ಚಕ್ರವರ್ತಿ ಸೂಲಿಬೆಲೆ ನೆನಪಿಸಿಕೊಂಡರು. ಈ ಪ್ರಚಾರದ ಅವಧಿಯಲ್ಲಿ ಚಕ್ರವರ್ತಿ ಸೂಲಿಬೆಲೆ ಹನ್ನೊಂದು ಕೇಜಿಯಷ್ಟು ತೂಕ ಕಳೆದುಕೊಂಡಿದ್ದಾರಂತೆ. ಇದು ಕೂಡ ನಾವಾಗಿಯೇ ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ.
ಅವರ ಜತೆಗಿನ ಪ್ರಶ್ನೆ- ಉತ್ತರ ಎಂದು ನೀಡುವ ಬದಲು ಆಡಿದ ಮಾತನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಮುನಿಯಪ್ಪ ಸೋಲು ಸ್ಪಷ್ಟವಾಗಿ ಕಾಣಿಸಿತ್ತು
ಈ ಸಲ ಮಾಲೂರು, ಮುಳಬಾಗಲು, ಶ್ರೀನಿವಾಸಪುರ ಇಲ್ಲೆಲ್ಲ ನಮ್ಮ ತಂಡದ ಪರ ಹೋಗಿ ಪ್ರಚಾರ ನಡೆಸುವಾಗ ಜನರು ಬರುತ್ತಿದ್ದುದು ನೋಡಿ ಮುನಿಯಪ್ಪ ಅವರ ಸೋಲು ನಮಗೆ ಸ್ಪಷ್ಟವಾಗಿ ಕಾಣಿಸಿತ್ತು. ಏಕೆಂದರೆ, ಜನರ ಪ್ರತಿಕ್ರಿಯೆ ಹಾಗಿತ್ತು. ನಮ್ಮ ಹುಡುಗರು, ದೊಡ್ದ ಮಾರ್ಜಿನ್ ನಿಂದ ಬಿಜೆಪಿ ಗೆಲ್ಲುತ್ತದೆ ಎನ್ನುವಾಗ ನಾನು ಸ್ವತಃ ಇಷ್ಟು ದೊಡ್ದ ವ್ಯತ್ಯಾಸದಲ್ಲಿ ಬಿಜೆಪಿ ಗೆಲ್ಲಬಹುದು ಅಂದುಕೊಂಡಿರಲಿಲ್ಲ. ಸ್ವತಃ ಬಿಜೆಪಿಯವರೇ ಫಿಫ್ಟಿ- ಫಿಫ್ಟಿ ಅವಕಾಶ ಅಂದುಕೊಂಡಿದ್ದರು. ಆದರೆ ಫಲಿತಾಂಶ ಎದುರಿಗೇ ಇದೆ. ಪ್ರಧಾನಿ ಮೋದಿ ಅವರ ಅಲೆ ಇದೆಯೋ ಇಲ್ಲವೋ ಎಂಬುದಕ್ಕೆ ಉತ್ತರ ಕಂಡುಕೊಳ್ಳಬೇಕಾ? ಇದಕ್ಕಿಂತ ಸಾಕ್ಷಿ ಬೇಕಾ? ಏಳು ಸಲ ಕೋಲಾರದಿಂದ ಕೆ.ಎಚ್.ಮುನಿಯಪ್ಪ ಗೆದ್ದಿದ್ದರು. ಹಾಗೆ ನೋಡಿದರೆ ಆ ಕ್ಷೇತ್ರದ ಬಗ್ಗೆ ಮುನಿಯಪ್ಪ ಅವರಿಗೆ ಇಂಚಿಂಚೂ ಗೊತ್ತಿದೆ. ಆದರೆ ಈ ಸಲ ಅವರ ಸೋಲನ್ನು ತಪ್ಪಿಸಿಕೊಳ್ಳಲು ಆಗಲಿಲ್ಲ.
ಖರ್ಗೆ ಸೋಲುವ ಬಗ್ಗೆ ಜನರ ಸುಳಿವು
ಅದೇ ರೀತಿ ಗುಲ್ಬರ್ಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸೋಲು ಕೂಡ ನಮಗೆ ಮುಂಚಿತವಾಗಿ ದೊರೆತ ಸುಳಿವೇ. ನಾನು ಉಪನ್ಯಾಸ ನೀಡಲು ತೆರಳುವಾಗ ಜನರು ಸಾಕಷ್ಟು ಸಂಖ್ಯೆಯಲ್ಲೇ ಬರುತ್ತಾರೆ. ಆದರೆ ಟೀಂ ಮೋದಿಯಿಂದ ಕಾರ್ಯಕ್ರಮ ಮಾಡಲು ಹೋದಾಗ ಹತ್ತು ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು. ಈ ಸಲ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸುತ್ತೇವೆ ಎಂದು ಮಾತನಾಡುತ್ತಿದ್ದರು. ಅಲ್ಲಿಗೆ ಖರ್ಗೆ ಸೋಲಿನ ಬಗ್ಗೆ ಸುಳಿವು ಸಿಕ್ಕು ಹೋಯಿತು. ನೋಡಿ, ನಾನು ರಾಜಕಾರಣದ ಮಾತನಾಡುವವನಲ್ಲ. ಹಣ ಹಂಚಿ ಜನರನ್ನು ಕರೆದುಕೊಂಡು ಬರುವವನಲ್ಲ. ಅಂಥದ್ದರಲ್ಲಿ ಹತ್ತು ಸಾವಿರ ಜನ ನಮ್ಮ ಕಾರ್ಯಕ್ರಮಕ್ಕೆ ಬರುತ್ತಾರೆ ಅಂದರೆ ಅಂಡರ್ ಕರೆಂಟ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲು ಜನರ ಮನಸ್ಸಿನಲ್ಲಿ ಇದೆ ಅಂತ ಅಲ್ಲವಾ?
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಬಹುದಿತ್ತು
ಹಾಗೆ ನೋಡಿದರೆ ನನಗೆ ಅಚ್ಚರಿ ಎನಿಸಿದ್ದು ಚಾಮರಾಜನಗರದಲ್ಲಿ. ಅಲ್ಲಿ ಧ್ರುವನಾರಾಯಣ್ ಬಿಜೆಪಿಯ ಶ್ರೀನಿವಾಸ್ ಪ್ರಸಾದ್ ಅವರಿಗೆ ನೀಡಿದ ಸ್ಪರ್ಧೆ ಮೆಚ್ಚಬೇಕಾದದ್ದು. ಇಂಥ ಮೋದಿ ಅಲೆಯ ಮಧ್ಯೆಯೂ ಅಂಥ ಜಿದ್ದಾಜಿದ್ದಿನ ಪೈಪೋಟಿ ನೀಡಿದ ಧ್ರುವನಾರಾಯಣ್ ಬಗ್ಗೆ ಅಲ್ಲಿನ ಜನರು ಕೂಡ ಒಳ್ಳೆ ಮಾತನಾಡುತ್ತಿದ್ದರು. ಒಂದು ವೇಳೆ ಬೆಂಗಳೂರು ಗ್ರಾಮಾಂತರದಲ್ಲಿ ಅಶ್ವಥ್ ನಾರಾಯಣ್ ಗೆ ಸ್ವಲ್ಪ ಮುಂಚಿತವಾಗಿಯೇ ಟಿಕೆಟ್ ಘೋಷಿಸಿದ್ದರೆ ಅಲ್ಲೂ ಗೆಲ್ಲುವ ಸಾಧ್ಯತೆ ಇತ್ತು. ಅದೊಂದು ತಪ್ಪಿಹೋಯಿತು. ಇಲ್ಲದಿದ್ದರೆ ಅಲ್ಲೂ ಗೆಲ್ಲುವ ಅವಕಾಶ ಇತ್ತು.
ವ್ಯಕ್ತಿ ಕೇಂದ್ರಿತ ಗುಂಪುಗಳನ್ನು ನೋಡಲು ಸಾಧ್ಯವಿಲ್ಲ
ಈಗ ಕೇಂದ್ರದಲ್ಲಿನ ಬಿಜೆಪಿ ಹೈ ಕಮಾಂಡ್ ಸಂಪೂರ್ಣ ಭಿನ್ನವಾಗಿದೆ. ಅದು ಕೆಲಸ ಮಾಡುವ ವೈಖರಿ, ಕೆಲಸ ತೆಗೆಯುವ ವೈಖರಿ ಮುಂಚಿಗಿಂತ ವಿಭಿನ್ನ. ಬಿಜೆಪಿಯೊಳಗೆ ಈಗ ಗುಂಪುಗಾರಿಕೆ ನೋಡಲು ಸಾಧ್ಯವಿಲ್ಲ. ಜತೆಗೆ ಆಡಳಿತವನ್ನು ಹತೋಟಿಯಲ್ಲಿ ಇಟ್ಟುಕೊಂಡು, ನಡೆಸಿಕೊಂಡು ಹೋಗಬಲ್ಲಂಥ ಶಕ್ತಿ ಇದೆ. ಅದಕ್ಕೆ ಕಾರಣ ಏನೆಂದರೆ, ನಿಗಾ ವಹಿಸುವ ರೀತಿ. ದೆಹಲಿಯಿಂದ ರಾಜ್ಯಗಳ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಬಲ್ಲರು. ಈಗ ವ್ಯಕ್ತಿ ಕೇಂದ್ರಿತವಾದ ಗುಂಪುಗಳನ್ನು ನೋಡಲು ಸಾಧ್ಯವಿಲ್ಲ. ಭವಿಷ್ಯದಲ್ಲಿ ಕರ್ನಾಟಕದಲ್ಲಿ ಸಹ ಅಂಥ ನಾಯಕತ್ವವನ್ನು ಕಾಣಬಹುದು.