ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಕನ್ನಡ: ಮಟ್ಕಾ ಹೈಟೆಕ್ ಆಟಕ್ಕೆ ಯುವಜನರೇ ದಾಳ

By ದೇವರಾಜ ನಾಯ್ಕ
|
Google Oneindia Kannada News

ಮನೆಹಾಳು ಆಟ ಎಂದೇ ಕುಖ್ಯಾತಿಯಾಗಿರುವ ಮಟ್ಕಾ ಅಥವಾ ಓಸಿ ಅರ್ಥಾತ್ ಓಪನ್ ಅಂಡ್ ಕ್ಲೋಸ್ ನಂಬರ್ ಗೇಮ್ ಹಿಂದೆ ಬಿದ್ದು ಎದ್ದವರು ಕಡಿಮೆ. ನಗರ, ಪಟ್ಟಣ, ಹಳ್ಳಿ, ಗಲ್ಲಿ ಗಲ್ಲಿಗಳಲ್ಲಿ ಮಟ್ಕಾ ಅಡ್ಡಾಗಳಿವೆ. ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಶುರು ಮಾಡಿದರೆ ಕರ್ನಾಟಕದ ನೆತ್ತಿನ ಬೀದರ್ ತನಕವೂ ಒಸಿ ದಂಧೆ ಅವ್ಯಾಹತವಾಗಿ ಹರಡಿದೆ.

ಇಂದಿನ ಪಬ್ಜಿಯಂತೆ ವಿಡಿಯೋ ಗೇಮ್ಸ್ ಚಟದಂತೆ ಮಟ್ಕಾ ಚಟಕ್ಕೆ ದೀಪಕ್ಕೆ ಮುತ್ತಿಕೊಳ್ಳುವ ಮಳೆ ಹುಳದಂತೆ ಮನೆ ಮಂದಿಯೆಲ್ಲಾ ಈ ಚಟಕ್ಕೆ ದಾಸರಾಗಿರುವ ನಿದರ್ಶನಗಳಿವೆ. ಬಡವ ಬಲ್ಲಿದ ಎಂಬ ಯಾವುದೇ ಅಂತರವಿಲ್ಲದೆ ಆಕರ್ಷಿಸುವ ಈ ಆಟದ ಪರಿಸ್ಥಿತಿ, ಚಟದಿಂದ ಬಲಿಯಾದವರು, ಕರ್ನಾಟಕದಲ್ಲಿ ದಂಧೆ ಯಾವ ಪರಿಸ್ಥಿತಿಯಲ್ಲಿದೆ ಎಂಬುದರ ಬಗ್ಗೆ ಒನ್ಇಂಡಿಯಾ ಫೋಕಸ್ ತಂಡ ಬೆಳಕು ಚೆಲ್ಲಲ್ಲಿದ್ದು, ವಿವಿಧ ಜಿಲ್ಲೆಗಳ ಪ್ರತಿನಿಧಿಗಳಿಂದ ಬಂದ ವರದಿಗಳ ಸರಣಿ ಲೇಖನ ಇಲ್ಲಿದೆ..

ಉ.ಕ ಜಿಲ್ಲೆಯಲ್ಲಿ ಈ ಅಕ್ರಮ ದಂಧೆ ನಿಂತಿಲ್ಲ

ಪ್ರತಿ ವರ್ಷವೂ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಓಸಿ, ಮಟ್ಕಾ ಆಡಿದವರ ಮೇಲೆ ಕಾರ್ಯಾಚರಣೆ ನಡೆಸಿ, ನೂರಾರು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣಗಳನ್ನು ದಾಖಲಿಸುತ್ತಿದೆ. ಕಾರ್ಯಾಚರಣೆಯ ವೇಳೆ ಲಕ್ಷಗಟ್ಟಲೆ ಹಣವನ್ನು ಜಪ್ತಿಪಡಿಸಿಕೊಂಡು, ಮುಂದೆ ಇಂಥ ಚಟುವಟಿಕೆಗಳನ್ನು ನಡೆಸದಂತೆ ಎಚ್ಚರಿಕೆಯನ್ನೂ ನೀಡುತ್ತದೆ. ಹೀಗಿದ್ದರೂ ಜಿಲ್ಲೆಯಲ್ಲಿ ಈ ಅಕ್ರಮ ದಂಧೆ ನಿಂತಿಲ್ಲ. ನಗರ, ಗ್ರಾಮೀಣ ಪ್ರದೇಶವೆನ್ನದೇ ಜಿಲ್ಲೆಯಾದ್ಯಂತ ಎಗ್ಗಿಲ್ಲದೇ ಓಸಿ, ಮಟ್ಕಾ ದಂಧೆ ಸಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಜನರು ಹೆಚ್ಚು ಸಾಕ್ಷರರು, ಬುದ್ಧಿವಂತರು. ಇದೇ ಇಂಥ ಅಕ್ರಮ ಆಟಗಳು ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತವೆ ಪೊಲೀಸ್ ಮೂಲಗಳು. ತಮ್ಮ ಊಹೆಯ ಮೇಲೆ ಅತಿಯಾದ ನಂಬಿಕೆ, ಅದೃಷ್ಟ ಪರೀಕ್ಷೆಯ ಹಂಬಲದಿಂದಾಗಿ ಇಂಥ ಚಟುವಟಿಕೆಗಳಲ್ಲಿ ಹೆಚ್ಚಾಗಿ ಯುವಜನರು ಪಾಲ್ಗೊಳ್ಳುತ್ತಿದ್ದಾರೆ. ಈ ನಡುವೆ ಗ್ರಾಮೀಣ ಜನರಿಂದಲೂ ಮೂಢನಂಬಿಕೆ ಹಾಗೂ ಕೆಲವೆಡೆ ಸಂಪ್ರದಾಯಗಳಿಂದಲೂ ಇಂಥ ಆಟಗಳು ಮುಂದುವರಿದಿದೆ.

ಗೂಡಂಗಡಿಗಳೇ ಆಟದಂಗಡಿ

ಗೂಡಂಗಡಿಗಳೇ ಆಟದಂಗಡಿ

ಬಹುತೇಕವಾಗಿ ಗೂಡಂಗಡಿ, ಪಾನ್ ‌ಬೀಡಾ ಶಾಪ್ ನಂಥ ಸಣ್ಣಪುಟ್ಟ ಅಂಗಡಿಗಳಲ್ಲಿ ಈ ಆಟಗಳು ನಡೆಯುತ್ತವೆ. ಇಂಥ ಅಂಗಡಿಗಳಿಗೆ ಆದಾಯದ ಮೂಲ ಕೂಡ ಇಂಥ ಆಟಗಳೇ. ಕೇವಲ ಬೀಸಿ, ಸಿಗರೇಟು, ಗುಟ್ಕಾ, ಪಾನ್ ಮಸಾಲ, ಒಂದಿಷ್ಟು ಚಾಕಲೇಟುಗಳನ್ನು ಮಾತ್ರ ಮಾರುವ ಆಟದಂಗಡಿಗಳಲ್ಲಿ ಇವುಗಳ ಖರೀದಿಗಿಂತಲೂ ಆಟಕ್ಕಾಗಿ ಹಣ ಹಾಕಲು ಬರುವವರೇ ಹೆಚ್ಚು.

ಅಂಕಿ- ಅಂಶ:
ಓಸಿ, ಮಟ್ಕಾ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 300 ಪ್ರಕರಣಗಳು ದಾಖಲಾಗಿವೆ. 1,118 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, 19,66,084 ರೂ. ನಗದನ್ನು ಜಪ್ತಿಪಡಿಸಿಕೊಂಡಿದ್ದಾರೆ. ಪ್ರತ್ಯೇಕವಾಗಿ ವರ್ಷವಾರು ನೋಡುವುದಾದರೆ, 2017ರಲ್ಲಿ 128 ಪ್ರಕರಣ ದಾಖಲಾಗಿ, 198 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅವರಿಂದ 1,75,901 ರೂ. ಜಪ್ತಿಪಡಿಸಿಕೊಳ್ಳಲಾಗಿದೆ. 2018 ರಲ್ಲಿ 227 ಪ್ರಕರಣ ದಾಖಲಾದರೆ, 354 ಮಂದಿಯನ್ನು ವಶಕ್ಕೆ ಪಡೆದು 6,57,310 ರೂ. ಜಪ್ತಿ ಮಾಡಲಾಗಿದೆ. 2019ರ ಅಕ್ಟೋಬರ್ 20ರವರೆಗೆ 345 ಪ್ರಕರಣ ದಾಖಲಾಗಿದೆ. 566 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, 11,32,873 ರೂ. ಜಪ್ತಿಪಡಿಸಿಕೊಳ್ಳಲಾಗಿದೆ.

ರಾಜಕಾರಣಿ, ಪೊಲೀಸರ ಸಾಥ್

ರಾಜಕಾರಣಿ, ಪೊಲೀಸರ ಸಾಥ್

ಇಂಥ ಆಟಕ್ಕೆ ಇಳಿಯುವವರ ಮೇಲೆ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಲು ಇಳಿದರೆ, ಪೊಲೀಸ್ ಪೇದೆಗಳೇ ದಂಧೆಕೋರರಿಗೆ ವಿಷಯ ತಿಳಿಸಿ ಪಾರು ಮಾಡುತ್ತಾರೆ. ಒಂದು ವೇಳೆ ಪೊಲೀಸರ ದಾಳಿಯ ಸುಳಿವೇ ಸಿಗದೇ ಬಂಧನಕ್ಕೊಳಗಾದರೂ, ಬಿಡುಗಡೆಗೆ ರಾಜಕಾರಣಿಗಳಿಂದ ಪೊಲೀಸರ ಮೇಲೆ ಒತ್ತಾಯ ಹೇರಲಾಗುತ್ತದೆ. ರಾತ್ರಿ ವಶನಾದ ಆರೋಪಿ ಕೆಲವೇ ಗಂಟೆಗಳಲ್ಲಿ ಪೊಲೀಸ್ ಠಾಣೆಯಿಂದ ಹೊರಬರುತ್ತಾನೆ. ಮಾರನೇ ದಿನವೇ ಮತ್ತದೇ ದಂಧೆ ಪ್ರಾರಂಭಿಸುತ್ತಾನೆ.

'ಹೈಟೆಕ್ ಆಟ’ಕ್ಕೆ ಯುವಜನರೇ ದಾಳ!:

'ಹೈಟೆಕ್ ಆಟ’ಕ್ಕೆ ಯುವಜನರೇ ದಾಳ!:

ಕೆಲವು ವರ್ಷಗಳ ಹಿಂದೆ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಇದ್ದ ಮಟ್ಕಾ, ಜೂಜಾಟ ಇತ್ತೀಚಿನ ವರ್ಷಗಳಲ್ಲಿ ನಗರ ಪ್ರದೇಶಕ್ಕೂ ವ್ಯಾಪಿಸಿದೆ. ಅದು ಕೂಡ 'ಹೈಟೆಕ್' ಆಗಿ ನಡೆಯುತ್ತಿದ್ದು, ಮೋಜಿಗಾಗಿ ಯುವಜನರೂ ಹೆಚ್ಚಿನ ಪ್ರಮಾಣದಲ್ಲಿ ಇದಕ್ಕೆ ಬಲಿಯಾಗುತ್ತಿದ್ದಾರೆ. ಬೆಳಿಗ್ಗೆ 10ರಿಂದಲೇ ಆರಂಭವಾಗುವ ಜೂಜಾಟದ ಚಟುವಟಿಕೆ, ತಡರಾತ್ರಿಯವರೆಗೂ ಚಾಲ್ತಿಯಲ್ಲಿರುತ್ತದೆ. ಬೆಳಿಗ್ಗಿನ ಅವಧಿಯಲ್ಲಿ 'ಕಲ್ಯಾಣ್' ಹೆಸರಿನಲ್ಲಿ ನಡೆಯುವ ಆಟಕ್ಕೆ, ಸಂಜೆ 4 ಗಂಟೆಗೆ ಓಪನ್ ಹಾಗೂ 6.30ರ ಸುಮಾರಿಗೆ ಕ್ಲೋಸ್ ಬರುತ್ತದೆ. ರಾತ್ರಿಯ ವೇಳೆ 'ಬಾಂಬೆ' ಹೆಸರಿನಲ್ಲಿ 9.30ಕ್ಕೆ ಓಪನ್ ಬಂದರೆ, 12.30ರ ಸುಮಾರಿಗೆ ಕ್ಲೋಸ್ ಬರಲಿದೆ.

ಇಂಟರ್ನೆಟ್, ಮೊಬೈಲ್ ಬಳಕೆ

ಇಂಟರ್ನೆಟ್, ಮೊಬೈಲ್ ಬಳಕೆ

ಗೂಡಂಗಡಿಗಳಲ್ಲಿ, ಸಣ್ಣಪುಟ್ಟ ಮಳಿಗೆಗಳಲ್ಲಷ್ಟೇ ಅಲ್ಲದೇ, ಈ ದಂಧೆಗಳು ಈಗ ಅಂಗೈಯಗಲದ ಮೊಬೈಲ್‌ನಲ್ಲಿ ಶುರುವಾಗಿದೆ. ಮೊಬೈಲ್ ಬಳಸಿಕೊಂಡು ಮಟ್ಕಾ ಆಡಲು ಪ್ರಾರಂಭಿಸಲಾಗಿದ್ದು, ಕ್ಷಣಕ್ಷಣಕ್ಕೂ ಇಂಟರ್ನೆಟ್ ತಾಣಗಳಲ್ಲಿ ಸಂಖ್ಯೆಗಳು ಪ್ರದರ್ಶನಗೊಳ್ಳುತ್ತವೆ. ಇದಕ್ಕೆ ಅದೆಷ್ಟೋ ಯುವಕರು ದಾಸರಾಗಿ, ಶಿಕ್ಷಣ- ಉದ್ಯೋಗ ಬಿಟ್ಟು ಅದೃಷ್ಟ ಪರೀಕ್ಷೆಯ ಹಿಂದೆ ಬಿದ್ದಿರುವ ಉದಾಹರಣೆಗಳೂ ಇವೆ ಎನ್ನುತ್ತಾರೆ ಮಟ್ಕಾ ದಂಧೆಯನ್ನು ತ್ಯಜಿಸಿರುವ ವ್ಯಕ್ತಿಯೊಬ್ಬರು.

ಒಸಿ ತಿಳಿಸಲು ವಾಟ್ಸಾಪ್ ಗುಂಪುಗಳಿವೆ

ಒಸಿ ತಿಳಿಸಲು ವಾಟ್ಸಾಪ್ ಗುಂಪುಗಳಿವೆ

'ವಾಟ್ಸ್ ಆಪ್ ಗುಂಪುಗಳು ಇತ್ತೀಚಿಗೆ ಈ ದಂಧೆಗೆ ಬಳಕೆಯಾಗುತ್ತಿವೆ. ಗುಂಪುಗಳಲ್ಲೇ ಸಂಖ್ಯೆಗಳನ್ನು ಅದಲು- ಬದಲು ಮಾಡಿಕೊಳ್ಳಲಾಗುತ್ತದೆ. ಸಂಖ್ಯೆಗೆ ಇಂತಿಷ್ಟು ಎಂದು ಹಣವನ್ನೂ 'ಪೇಟಿಎಂ'ನಂಥ ನಗದು ವರ್ಗಾವಣೆ ಆಪ್‌ಗಳಿಂದ ವರ್ಗಾಯಿಸಿಕೊಳ್ಳಲಾಗುತ್ತದೆ. ಓಪನ್, ಕ್ಲೋಸ್ ಸಂಖ್ಯೆಗಳನ್ನೂ ಅಲ್ಲಿಯೇ ಹಂಚಿಕೊಳ್ಳುವ ಮೂಲಕ ಯಾರಿಗೂ ಸಂದೇಹ ಬರಲಾರದಂತೆ 'ಗಪ್ ‌ಚುಪ್' ದಂಧೆಯೂ ನಡೆಯುತ್ತದೆ' ಎಂದು ಅವರು ವಿವರಿಸಿದರು.

ಗದ್ದೆ, ತೋಟಗಳಲ್ಲೂ ಜೂಜು: ಜೂಜಾಟದ ಇನ್ನೊಂದು ಭಾಗವೇ ಆದ, 'ಅಂದರ್- ಬಾಹರ್' ಕೂಡ ಜಿಲ್ಲೆಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ. ಇವರಿಗೆ ಗದ್ದೆ, ತೋಟಗಳೇ ಆಟಕ್ಕೆ ಜಾಗವಾದರೆ, ರೆಡಿಮೇಟ್ ಮ್ಯಾಟ್, ಪತ್ರಿಕೆಗಳೇ ನೆಲಹಾಸುಗಳಾಗುತ್ತವೆ. 'ಗ್ರಾಮೀಣ ಭಾಗಗಳಲ್ಲಿ ಜಾತ್ರೆ, ಉತ್ಸವಗಳಲ್ಲಿ 'ಕುಟುಕುಟಿ ಮಂಡ' ಕೂಡ ನಡೆಯುತ್ತವೆ. ಇದು ಕೆಲವು ಪೊಲೀಸರ ಸಹಕಾರದಲ್ಲೇ ನಡೆಯುತ್ತದೆ' ಎನ್ನುವುದು ಕಾರವಾರದ ತಾಲ್ಲೂಕಿನ ಗ್ರಾಮಸ್ಥರ ಆರೋಪವಾಗಿದೆ.

English summary
Oneindia Focus: Matka Menance in Uttar Kannada District, How it has become hi tech and youth are attracted towards it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X