ರಾಯಚೂರು; ಮಟ್ಕಾ ದಂಧೆಯಲ್ಲಿ "ಚೀಟಿ" ಮೇಲೇ ನಂಬಿಕೆ!
ಮನೆಹಾಳು ಆಟ ಎಂದೇ ಕುಖ್ಯಾತಿಯಾಗಿರುವ ಮಟ್ಕಾ ಅಥವಾ ಓಸಿ ಅರ್ಥಾತ್ ಓಪನ್ ಅಂಡ್ ಕ್ಲೋಸ್ ನಂಬರ್ ಗೇಮ್ ಹಿಂದೆ ಬಿದ್ದು ಎದ್ದವರು ಕಡಿಮೆ. ನಗರ, ಪಟ್ಟಣ, ಹಳ್ಳಿ, ಗಲ್ಲಿ ಗಲ್ಲಿಗಳಲ್ಲಿ ಮಟ್ಕಾ ಅಡ್ಡಾಗಳಿವೆ. ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಶುರು ಮಾಡಿದರೆ ಕರ್ನಾಟಕದ ನೆತ್ತಿನ ಬೀದರ್ ತನಕವೂ ಓಸಿ ದಂಧೆ ಅವ್ಯಾಹತವಾಗಿ ಹರಡಿದೆ.
ಇಂದಿನ ಪಬ್ಜಿಯಂತೆ ವಿಡಿಯೋ ಗೇಮ್ಸ್ ಚಟದಂತೆ ಮಟ್ಕಾ ಚಟಕ್ಕೆ ದೀಪಕ್ಕೆ ಮುತ್ತಿಕೊಳ್ಳುವ ಮಳೆ ಹುಳದಂತೆ ಮನೆ ಮಂದಿಯೆಲ್ಲಾ ದಾಸರಾಗಿರುವ ನಿದರ್ಶನಗಳಿವೆ. ಬಡವ ಬಲ್ಲಿದ ಎಂಬ ಯಾವುದೇ ಅಂತರವಿಲ್ಲದೆ ಆಕರ್ಷಿಸುವ ಈ ಆಟದ ಪರಿಸ್ಥಿತಿ, ಚಟದಿಂದ ಬಲಿಯಾದವರು, ಕರ್ನಾಟಕದಲ್ಲಿ ದಂಧೆ ಯಾವ ಪರಿಸ್ಥಿತಿಯಲ್ಲಿದೆ ಎಂಬುದರ ಬಗ್ಗೆ ಒನ್ಇಂಡಿಯಾ ಫೋಕಸ್ ತಂಡ ಬೆಳಕು ಚೆಲ್ಲಲಿದ್ದು, ವಿವಿಧ ಜಿಲ್ಲೆಗಳ ಪ್ರತಿನಿಧಿಗಳಿಂದ ಬಂದ ವರದಿಗಳ ಸರಣಿ ಲೇಖನ ಇಲ್ಲಿದೆ...
ಉತ್ತರ ಕನ್ನಡ: ಮಟ್ಕಾ ಹೈಟೆಕ್ ಆಟಕ್ಕೆ ಯುವಜನರೇ ದಾಳ
ರಾಯಚೂರು: ಎರಡಂಕಿಯ ಆಟ ಮಟ್ಕಾ ಆಮಿಷ ಒಡ್ಡುವ ಅಕ್ರಮ ದಂಧೆ. ಗಣಿತ ಪಂಡಿತರನ್ನೂ ಮೀರಿಸುವ ಲೆಕ್ಕಾಚಾರ. ಕನಸಲ್ಲಿ ಬಂದ ಸಂಖ್ಯೆ, ಕಣ್ಣಿಗೆ ಕಾಣುವ ವಾಹನಗಳ ನಂಬರ್, ಮಾತು-ಹೇಳಿಕೆಗಳ ವಿಶ್ಲೇಷಣೆ, ವಾರ-ಹದಿನೈದು ದಿನಗಳಲ್ಲಿ ಡ್ರಾ ಆದ ನಂಬರ್ ಸೇರಿದಂತೆ ಇತ್ಯಾದಿಗಳೇ ಇಲ್ಲಿ ಬಂಡವಾಳ. ಅದಕ್ಕೊಂದಿಷ್ಟು ಹಣ. ಹಳ್ಳಿಯ ಅರಳೆಕಟ್ಟೆ, ಸಂದಿಗಳಿಂದ ಹಿಡಿದು ಪಟ್ಟಣ, ನಗರದ ಗಲ್ಲಿ ಗಲ್ಲಿಯಲ್ಲಿಯೂ ಮಟ್ಕಾದ್ದೇ ಚರ್ಚೆ.
ಸಾಂಸ್ಕೃತಿಕ ನಗರಿಗೆ ದಾಂಗುಡಿಯಿಟ್ಟ ಆನ್ ಲೈನ್ ಮಟ್ಕಾ ದಂಧೆ
ಹಣದ ಆಸೆ, ಕಡಿಮೆ ಅವಧಿಯಲ್ಲಿ ಸುಲಭವಾಗಿ ದುಡ್ಡು ಮಾಡಬೇಕೆಂಬ ದುರಾಸೆಯಿಂದ ಮಟ್ಕಾ ಆಟಕ್ಕೆ ಬರುತ್ತಾರೆ. ಹೀಗಾಗಿ ಎಲ್ಲೆಡೆಯೂ ರಾಜಾರೋಷವಾಗಿ ಮಟ್ಕಾ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಸಾವಿರ, ಎರಡು ಸಾವಿರ ಜನಸಂಖ್ಯೆ ಇರುವ ಹಳ್ಳಿಗಳಲ್ಲಿ ಇಬ್ಬರು ಮೂವರು ಮಟ್ಕಾ ಬುಕ್ಕಿಗಳು ತಲೆ ಎತ್ತಿದ್ದಾರೆ.
ಇಪ್ಪತ್ತು ರೂಪಾಯಿಯಿಂದ ಐವತ್ತು, ನೂರು, ಎರಡು ನೂರು, ಸಾವಿರ ರೂಪಾಯಿವರೆಗೂ ಮಟ್ಕಾಗೆ ಹಣ ಕಟ್ಟುವುದು ಸಾಮಾನ್ಯವಾಗಿದೆ. ಜನರಿಂದ ಮಟ್ಕಾಕ್ಕಾಗಿ ಹಣ ಹಾಕಿಸಿಕೊಳ್ಳುವ ಬುಕ್ಕಿಗಳು ಒಂದು ರೂಪಾಯಿಗೆ ಎಪ್ಪತ್ತು, ಎಂಬತ್ತು, ತೊಂಬತ್ತು ರೂಪಾಯಿ ನೀಡುತ್ತಾರೆ. ನೂರು ರೂಪಾಯಿಗೆ ಏಳು, ಎಂಟು, ಒಂಬತ್ತು ಸಾವಿರ ಸಿಕ್ಕರೆ ಸಾವಿರ ರೂಪಾಯಿಗೆ ಎಪ್ಪತ್ತು, ಎಂಬತ್ತು, ತೊಂಬತ್ತು ಸಾವಿರ ಸಿಗುತ್ತದೆ. ಹೀಗೆ ಎಂಟ್ಹತ್ತು ಪಟ್ಟು ಹೆಚ್ಚಿನ ಹಣದ ಆಸೆಗೆ ಬಲಿಯಾಗಿ ಮಟ್ಕಾ ಜಾಲಕ್ಕೆ ಒಳಗಾಗುತ್ತಿದ್ದಾರೆ.
ಬೆಳಿಗ್ಗೆಯಿಂದ ಮಧ್ಯರಾತ್ರಿವರೆಗೂ ಮಟ್ಕಾದ ಓಪನ್, ಕ್ಲೋಸ್ ಬಗ್ಗೆಯೇ ಚಿಂತೆ, ಚರ್ಚೆ. ಮಧ್ಯರಾತ್ರಿಯಲ್ಲಿ ಕ್ಲೋಸ್ ಬರುವುದರಿಂದ ಬೆಳಿಗ್ಗೆಯೇ ವಿಚಾರಿಸಲು ಶುರು ಮಾಡುತ್ತಾರೆ. ಕೆಲವರು ಮಟ್ಕಾ ನಂಬರ್ ಕೇಳುವುದರಿಂದಲೇ ಬೆಳಗು ಆರಂಭಿಸುತ್ತಾರೆ. ಮಧ್ಯಾಹ್ನ ನಂತರ ಇಳಿಹೊತ್ತಿನೊಳಗಾಗಿ ಓಪನ್ ಬಂದು, ಸಂಜೆ ವೇಳೆಗೆ ಕ್ಲೋಸ್ ಬರುತ್ತದೆ. ರಾತ್ರಿ ವೇಳೆಗೆ ಮತ್ತೊಂದು ಓಪನ್ ಬಂದು ಮಧ್ಯರಾತ್ರಿ ಕ್ಲೋಸ್. ಹೀಗಾಗಿ ಮಟ್ಕಾ ದಂಧೆಯಲ್ಲಿದ್ದವರಿಗೆ ಬಾಂಬೆ, ಕಲ್ಯಾಣಿಯದ್ದೇ ಚಿಂತೆ. ಮುಂಬೈ, ಗೋವಾದಲ್ಲಿ ನಡೆಯುವ ದಂಧೆಯ ಜಾಲ ರಾಯಚೂರು ಜಿಲ್ಲೆಯ ಹಳ್ಳಿ ಹಳ್ಳಿಗೂ ಹರಡಿದೆ.
ಬಾಂಬೆ, ಕಲ್ಯಾಣಿ ನಂಬಿ ಮನೆ-ಬದುಕು ಕಳೆದುಕೊಂಡವರ ಸಂಖ್ಯೆಗೇನೂ ಕಡಿಮೆ ಇಲ್ಲ. ಆದರೂ ಮಟ್ಕಾ ಜಾಲದಿಂದ ಜನ ಹೊರಬರುತ್ತಿಲ್ಲ. ರಾಯಚೂರು ಜಿಲ್ಲೆಯಲ್ಲಿ ದೇವದುರ್ಗ, ಸಿಂಧನೂರು, ಲಿಂಗಸುಗೂರು, ಸಿರವಾರ, ಹಟ್ಟಿ ಸೇರಿದಂತೆ ಹಳ್ಳಿಹಳ್ಳಿಗಳಲ್ಲೂ ಲಕ್ಷ ಲಕ್ಷ ವ್ಯವಹಾರದಲ್ಲಿ ಮಟ್ಕಾ ದಂಧೆ ನಡೆಯುತ್ತಿದೆ. ವಾರಕ್ಕೆ ಒಂದೆರಡು ಪ್ರಕರಣಗಳನ್ನಾದರೂ ಪೊಲೀಸರು ದಾಖಲಿಸುತ್ತಿದ್ದಾರೆ. ಆದರೆ ಮಟ್ಕಾ ದಂಧೆ ಮಾತ್ರ ಕಡಿಮೆಯಾಗುತ್ತಿಲ್ಲ.
ಹೀಗೆ ಮಟ್ಕಾ ಬಗ್ಗೆ ಗೊತ್ತಿರುವವರನ್ನು ಮಾತನಾಡಿಸಿದಾಗ ಸ್ಬಾಮೀಜಿಯೊಬ್ಬರ ವಾಹನ ಸಂಖ್ಯೆಯ ಮೇಲೆ ಮಟ್ಕಾ ಹಾಡಿ ಗೆದ್ದಿರುವುದಾಗಿ ಹೇಳುತ್ತಾರೆ. ಮಟ್ಕಾದಲ್ಲಿ ತೊಡಗಿಸಿಕೊಂಡವರು ಪಂಡಿತರಂತೆ ಯೋಚಿಸುತ್ತಿರುತ್ತಾರಂತೆ.
ಬೆಂಕಿ ಪೊಟ್ಟಣ, ಸಿಗರೇಟ್ ಪೊಟ್ಟಣದ ಹಾಳೆಯಿಂದ ವಾಟ್ಸಪ್ ತನಕ: ಮೊದಲೆಲ್ಲ ಬೆಂಕಿ ಪೊಟ್ಟಣ, ಸಿಗರೇಟ್ ಡಬ್ಬಿಯ ಹಾಳೆಯ ಮೇಲೆ ಮಟ್ಕಾ ನಂಬರ್ ಗಳನ್ನು ಬುಕ್ಕಿಗಳು ದಾಖಲಿಸಿಕೊಳ್ಳುತ್ತಿದ್ದರು. ಮಟ್ಕಾ ಸಂಖ್ಯೆ, ಅದರ ಮುಂದೆ ಹಣ, ಅವರ ಹೆಸರು ಬರೆದುಕೊಳ್ಳುತ್ತಿದ್ದರು. ಅದೆಲ್ಲವೂ ಸೂಚಕವಾಗಿರುತ್ತಿತ್ತು. ತಿಪ್ಪೆ, ರಸ್ತೆಯಲ್ಲಿ ಬಿದ್ದ ಕಾಗದದ ತುಂಡುಗಳೇ ಇಲ್ಲಿ ನಂಬಿಕೆಗೆ ಆಧಾರ. ಅದೊಂದು ರೀತಿ ಇ ಸ್ಟಾಂಪ್ ಇದ್ದಂತೆ. ಆದರೀಗ ತಂತ್ರಜ್ಞಾನ ಬೆಳೆದಿದ್ದು, ಮಟ್ಕಾದ ಬಂಡವಾಳ ವಾಟ್ಸ್ ಆಪ್ ನಲ್ಲಿ ಸಂಗ್ರಹವಾಗುತ್ತಿದೆ. ಕೆಳ ಹಂತದ ಬುಕ್ಕಿಗಳು ವಾಟ್ಸಪ್ ಮೂಲಕ ವಿವರ ಕಳಿಸುತ್ತಾರೆ. ಮೇಲಿನ ಹಂತದ ಬುಕ್ಕಿ ಮಾಹಿತಿ ಸಂಗ್ರಹಿಸಿಕೊಳ್ಳುತ್ತಾನೆ. ಬಳಿಕ ಇಬ್ಬರೂ ಮಟ್ಕಾ ವಿವರವನ್ನು ವಾಟ್ಸಪ್ ನಿಂದ ತೆಗೆದು ಹಾಕುತ್ತಾರೆ. ಹೀಗೆ ಪ್ರತಿ ಅರ್ಧ, ಒಂದು ಗಂಟೆಗೊಮ್ಮೆ ಈ ಪ್ರಕ್ರಿಯೆ ನಡೆಯುತ್ತಿರುತ್ತದೆ.
ಜೂಜು ಅಂದ ಮೇಲೆ ಹತ್ತರಲ್ಲಿ ಒಬ್ಬರಿಗೆ ಲಾಭ ಆಗಬಹುದು. ಆದರೆ ಹಣದ ಆಸೆಗೆ ಮಟ್ಕಾಗೆ ಹಣ ಸುರಿದು ಹಾಳಾದವರೇ ಎಲ್ಲಾ. ಸುಲಭವಾಗಿ ಹೆಚ್ಚಿನ ಹಣ ಮಾಡುವ ಆಸೆ ಜನರನ್ನು ಆರ್ಥಿಕವಾಗಿ ದಿವಾಳಿ ಮಾಡುತ್ತಿದೆ.