ರಾಜ್ಯಕ್ಕೆ ಓಮಿಕ್ರಾನ್ ಎಂಟ್ರಿ: ಜನರ ಈ 4 ಪ್ರಶ್ನೆಗಳಿಗೆ ಉತ್ತರ ಯಾರಿಂದ, ಎಲ್ಲಿಂದ?
ವಾರ-ಹತ್ತು ದಿನಗಳ ಕೆಳಗೆ ಓಲಾ ಡ್ರೈವರ್ ಬಳಿ, ಹೇಗಿದೆ ಗುರು ವ್ಯಾಪಾರ ಎಂದಾಗ, ಸರ್.. ಪಿಕ್ ಅಪ್ ಆಗುತ್ತಾ ಇದೆ. ಕೊರೊನಾ ಹಿಂದೆ ಹೇಗಿತ್ತೋ ಹಾಗೇ ವ್ಯಾಪಾರ ಆಗುತ್ತಿದೆ. ಕೆಲವೊಮ್ಮೆ ಬೇಡವೆನಿಸುವಷ್ಟು ಬುಕ್ಕಿಂಗ್ ಬರುತ್ತೆ. ಹೀಗೇ ಇದ್ದರೆ ಸಾಕು ಸರ್, ನಾವು ಮೇಲೆ ಬೀಳುತ್ತೇವೆ ಎಂದು.
ಒಂದು ದಿನದ ಕೆಳಗೆ ಬಸವನಗುಡಿ ವ್ಯಾಪ್ತಿಯ ಶ್ರೀನಿವಾಸ ನಗರದಲ್ಲಿ ಇಬ್ಬರು ತಳ್ಳುಗಾಡಿ ಹೆಂಗಸರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು. ಮತ್ತೆ ಕೊರೊನಾ, ಲಾಕ್ಡೌನ್ ಅಂತೆ. ಹೀಗಾದರೆ, ಮುಂದೆ ಹೇಗೆ ಜೀವನ ಎಂದು. ಹತ್ತು ದಿನದ ಅವಧಿಯಲ್ಲಿ ಬದಲಾದ ಪರಿಸ್ಥಿತಿಯಿದು.
ಕೊರೊನಾ ರೂಪಾಂತರಿ 'ಓಮ್ರಿಕಾನ್': ಹಸಿಹಸಿ ಸತ್ಯ ಬಿಚ್ಚಿಟ್ಟ ಡಾ.ರಾಜು ಕೃಷ್ಣಮೂರ್ತಿ
ಪುನೀತ್ ರಾಜಕುಮಾರ್ ಅವರ ಸುದ್ದಿಯನ್ನು ಬಿಟ್ಟು, ಟಿವಿ ಮಾಧ್ಯಮಗಳು ಯಾವಾಗ ಕೊರೊನಾ ಸಂಬಂಧಿಸಿದಂತೆ ಸುದ್ದಿಯನ್ನು ಸತತವಾಗಿ ಬಿತ್ತರಿಸಲು ಆರಂಭಿಸಿದವೋ, ಜನರಿಗೆ ಮತ್ತದೇ ವರ್ಷದ ಹಿಂದೆ ಎದುರಿಸಿದ ಆತಂಕ, ಅನುಭವಿಸಿದ ಯಾತನೆ.
ಈಗ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವ ಕೊರೊನಾ ರೂಪಾಂತರಿ ಓಮಿಕ್ರಾನ್ ವೈರಸ್ ದೇಶಕ್ಕೆ ಅಧಿಕೃತವಾಗಿ ನುಸುಳಿದೆ. ಅದು ಹೋಗಿ..ಹೋಗಿ ಬೆಂಗಳೂರಿನಲ್ಲಿ ಕಾಣಿಸಿಕೊಳ್ಳಬೇಕೇ? ಅದೂ ಐದೈದು ಕೇಸು. ಅಲ್ಲಿಗೆ, ಲಾಕ್ ಡೌನ್, ವೀಕೆಂಡ್ ಕರ್ಫ್ಯೂ ಎನ್ನುವ ಕರಿಛಾಯೆ ಮತ್ತೆ ಜನರನ್ನು ಆವರಿಸಲು ಆರಂಭಿಸಿದೆ. ಇದೆಲ್ಲಾ ಪೂರ್ವನಿಯೋಜಿತವೇ ಎನ್ನುವ ಸಾರ್ವಜನಿಕ ವಲಯದಲ್ಲಿ ಕಾಡುತ್ತಿರುವ ಪ್ರಶ್ನೆಗಳಿಗೆ ಕಾರಣಗಳು ಇಲ್ಲದಿಲ್ಲ.
'ಲಸಿಕಾ ಮೇಳದಲ್ಲಿ 9.50 ಲಕ್ಷ ಡೋಸ್ ನೀಡಲಾಗಿದೆ': ಆರೋಗ್ಯ ಸಚಿವ
ಭಾರೀ ಪ್ರಮಾಣದಲ್ಲಿ ಜನರು ಎರಡನೇ ಡೋಸ್ ಜನರು ಹಾಕಿಸಿಕೊಂಡಿಲ್ಲ
ಮೊದಲನೇ ಡೋಸ್ ಹಾಕಿಸಿಕೊಂಡವರು ರಾಜ್ಯದಲ್ಲಿ ಶೇ. ಶೇ. 90.9, ಎರಡನೇ ಡೋಸ್ ಹಾಕಿಸಿಕೊಂಡವರು ಶೇ. 59.1. ಮೊದಲ ಡೋಸ್ ಮತ್ತು ಎರಡನೇ ಡೋಸ್ ನಡುವಿನ ಅಂತರ ಮುಗಿದಿದ್ದರೂ, ಇನ್ನೂ ಭಾರೀ ಪ್ರಮಾಣದಲ್ಲಿ ಜನರು ಎರಡನೇ ಡೋಸ್ ಜನರು ಹಾಕಿಸಿಕೊಂಡಿಲ್ಲ ಎನ್ನುವುದು ಆರೋಗ್ಯ ಇಲಾಖೆಯ ಮಾಹಿತಿ. ಅಷ್ಟರಲ್ಲೇ ವ್ಯಾಕ್ಸಿನ್ ಬೂಸ್ಟರ್ ಹಾಕಿಸಿಕೊಳ್ಳಬೇಕು ಎನ್ನುವ ಹೇಳಿಕೆ ವೈದ್ಯಲೋಕದಿಂದ ಬರಲಾರಂಭಿಸಿದೆ. ಲಸಿಕೆ ಹಾಕಿಸಿಕೊಂಡರೆ ಕೊರೊನಾ ಹತ್ತಿರ ಸುಳಿಯುವುದಿಲ್ಲ ಎನ್ನುತ್ತಿದ್ದ ವೈದ್ಯರು (ಎಲ್ಲರಲ್ಲೂ ಅಲ್ಲ), ಈಗ ಬೂಸ್ಟರ್ ಹಾಕಿಸಿಕೊಳ್ಳಬೇಕು ಎಂದು ಹೇಳುತ್ತಿದ್ದರೆ, ಜನರು ಕೇಳುತ್ತಿದ್ದಾರೆ, ಹಾಗಾದರೆ ವ್ಯಾಕ್ಸಿನ್ ಹಾಕಿಸಿಕೊಂಡಿದ್ದು ಗ್ಯಾಸ್ ಸ್ಟಿಕ್ ಹೋಗಲಾಡಿಸಲಾ? ಎಂದು.
ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದಂತಹ ಡಾ.ಸಿ.ಎನ್.ಮಂಜುನಾಥ್
ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದಂತಹ ಡಾ.ಸಿ.ಎನ್.ಮಂಜುನಾಥ್ ಅವರು ಓಮಿಕ್ರಾನ್ ಪಾಸಿಟೀವ್ ಬಂದ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ, "ಇದು ನಿರೀಕ್ಷಿತ, ಆದರೆ ಜನರು ಭಯಪಡಬೇಕಾಗಿಲ್ಲ, ಆದರೂ ಜನವರಿಯಲ್ಲಿ ಸಾರ್ವಜನಿಕರು ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ. ಈಗಾಗಲೇ ಸುಮಾರು ಇಪ್ಪತ್ತು ಕೋಟಿ ಲಸಿಕೆ ಪ್ರೊಡಕ್ಷನ್ ಆಗಿ ಬಂದಿದೆ" ಎನ್ನುವ ಮಾತನ್ನು ಹೇಳುತ್ತಿದ್ದಾರೆ. ಹಾಗಾದರೆ, ಈ ಲಸಿಕೆ ಖಾಲಿಯಾಗಲು ಓಮ್ರಿಕಾನ್ ಭೂತವನ್ನು ಛೂ ಬಿಡಲಾಗಿದೆಯಾ ಎನ್ನುವುದು ಕೂಡಾ ಜನಸಾಮಾನ್ಯರಲ್ಲಿ ಇರುವ ಪ್ರಶ್ನೆ.
ಖ್ಯಾತ ವೈದ್ಯ ಡಾ.ರಾಜು ಕೃಷ್ಣಮೂರ್ತಿ ಅವರ ಪ್ರಕಾರ
ಕೊರೊನಾ ಮೊದಲನೇ ಮತ್ತು ಎರಡನೇ ಅಲೆಯ ವೇಳೆ ತಮ್ಮ ವಿಶಿಷ್ಟವಾದ ಚಿಕಿತ್ಸೆ ಮತ್ತು ಜನರಿಗೆ ಧೈರ್ಯ ತುಂಬುವ ಕೆಲಸದಿಂದ ಮನೆಮಾತಾಗಿರುವ ಖ್ಯಾತ ವೈದ್ಯ ಡಾ.ರಾಜು ಕೃಷ್ಣಮೂರ್ತಿ ಅವರು ಓಮಿಕ್ರಾನ್ ಬಗ್ಗೆ ವಿಡಿಯೋ ಒಂದರ ಮೂಲಕ ಸಂದೇಶವನ್ನು ನೀಡಿದ್ದರು. ಅದರಲ್ಲಿ, "ಮೆಡಿಸಿನ್ ಕಂಪೆನಿಗಳು ಹತ್ತು ವರ್ಷದ ಸಂಪಾದನೆಯನ್ನು ಒಂದೆರಡು ವರ್ಷದಲ್ಲೇ ಮಾಡಿದ್ದಾವೆ, ಖಾಸಗಿ ಆಸ್ಪತ್ರೆಗಳೂ ಇದರಲ್ಲಿ ಶಾಮೀಲಾಗಿವೆ. ರಾಜಕಾರಣಿಗಳು ಈ ಸಂದರ್ಭವನ್ನು ಮಿಸ್ ಯೂಸ್ ಮಾಡಿಕೊಂಡರು, ಹಣ ಮತ್ತು ಪಬ್ಲಿಸಿಟಿಗಾಗಿ ಕೊರೊನಾ ಬಳಕೆಯಾಯಿತು. ನಿಜವಾಗಿ ಹೇಳಬೇಕೆಂದರೆ ಇಂತಹ ಸಾವಿರಾರು ವೈರಸ್ ಗಳು ನಮ್ಮಲ್ಲಿ ಬಂದು ಹೋಗಿವೆ" ಎಂದು. ಹಾಗಾದರೆ, ಖಾಸಗಿ ಲಾಬಿಗೆ ಸರಕಾರ ಮಣಿಯುತ್ತಿದೆಯಾ ಎನ್ನುವುದು ಇನ್ನೊಂದು ಪ್ರಶ್ನೆ.
ಓಮಿಕ್ರಾನ್ ಎಂಟ್ರಿ: 4 ಪ್ರಶ್ನೆಗಳಿಗೆ ಉತ್ತರ ಯಾರಿಂದ, ಎಲ್ಲಿಂದ?
ಹೆಚ್ಚಿನ ವೈದ್ಯರು ಕೂಡಾ ಹೇಳುವುದು ಕೊರೊನಾ ಬಗ್ಗೆ ಎಚ್ಚರಿಕೆಯಿಂದ ಇರಿ, ಗಾಬರಿ ಪಡಬೇಡಿ ಎಂದು. ಓಮಿಕ್ರಾನ್ ಸೋಂಕು ತಗಲಿರುವ ಐವರೂ ಡಬಲ್ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆಯನ್ನು ಸಂಜೀವಿನಿ ಎಂದು ಹೇಳುತ್ತಿದ್ದ ಸರಕಾರ ಮತ್ತು ವೈದ್ಯರು ಈಗ ಬೂಸ್ಟರ್ ಡೋಸೇಜ್ ಬಗ್ಗೆ ಮಾತನಾಡುತ್ತಿದ್ದಾರೆ. ಇದರರ್ಥ, ಮುಂದಿನ ದಿನಗಳಲ್ಲಿ ಬೂಸ್ಟರ್ ಹಾಕಿಸಿಕೊಳ್ಳುವುದನ್ನು ಸರಕಾರ ಕಂಪಲ್ಸರಿ ಮಾಡಲಿದೆಯಾ? ಎನ್ನುವುದು ಸಾರ್ವಜನಿಕ ವಲಯದಲ್ಲಿ ಕಾಡುತ್ತಿರುವ ಇನ್ನೊಂದು ಪ್ರಶ್ನೆ.
Recommended Video