ಮಾರ್ಚ್ 15ಕ್ಕೆ ಓ ಮನಸೇ ಮಾರುಕಟ್ಟೆಗೆ, ಭಾವನಾ ಬೆಳಗೆರೆ ಸಂದರ್ಶನ
"ಈಗೆಲ್ಲ ಯುವಕ- ಯುವತಿಯರು ವಾಟ್ಸಾಪ್, ಫೇಸ್ ಬುಕ್ ಗಳಲ್ಲಿ ಲೇಖನವನ್ನು ಪ್ರಕಟಿಸಿ, ಅದರಲ್ಲೇ ತೃಪ್ತಿ ಕಾಣ್ತಾರೆ. ಅಲ್ಲಿ ಬರುವ ಲೈಕ್ಸ್- ಶೇರ್ ಗೆ ಬಹಳ ಖುಷಿ ಆಗ್ತಾರೆ. ಅಂಥವರು ನಮ್ಮ 'ಓ ಮನಸೇ'ಗೆ ಬರೆಯಿರಿ. ಲೇಖನಕ್ಕೆ ಗೌರವ ಹಾಗೂ ಧನ ಎರಡೂ ಸಿಗುತ್ತದೆ. ಇದಕ್ಕಿಂತ ದೊಡ್ಡ ಅವಕಾಶ ಇನ್ಯಾವುದಿದೆ?" ಎಂದು ಪ್ರಶ್ನಿಸಿ ಸುಮ್ಮನಾದರು ಭಾವನಾ ಬೆಳಗೆರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಅವರೀಗ ಓ ಮನಸೇ ಪಾಕ್ಷಿಕದ ಸಹ ಸಂಪಾದಕಿ. ಇನ್ನೇನು ಮಾರ್ಚ್ ಹದಿನೈದರಂದು (ಅಂದು ಪತ್ರಕರ್ತ- ಲೇಖಕ ರವಿ ಬೆಳಗೆರೆ ಅವರ ಅರವತ್ತನೇ ಜನ್ಮ ದಿನವೂ ಹೌದು) ಅದು ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಬಹಳ ವರ್ಷಗಳ ನಂತರ ಓ ಮನಸೇ ಮತ್ತೆ ಪ್ರಕಟ ಆಗುತ್ತಿದೆ. ಇನ್ನು ಮುಂದೆಯೂ ರವಿ ಬೆಳಗೆರೆ ಅವರೇ ಸಂಪಾದಕರಾಗಿ ಮುಂದುವರಿಯಲಿದ್ದಾರೆ. ಸಹ ಸಂಪಾದಕಿಯಾಗಿ ಅವರ ಮಗಳು ಭಾವನಾ ಬೆಳಗೆರೆ ಇದ್ದಾರೆ.
ಈ ಹಿನ್ನೆಲೆಯಲ್ಲಿ ಒನ್ಇಂಡಿಯಾ ಕನ್ನಡದ ಜತೆ ಭಾವನಾ ಬೆಳಗೆರೆ ಅವರು ಮಾತನಾಡಿದ್ದಾರೆ. ಇದು ಸಂದರ್ಶನ ಅನ್ನೋದಕ್ಕಿಂತ ತಮ್ಮ ಹೊಸ ಜವಾಬ್ದಾರಿ ಹೇಗಿತ್ತು? ಮುಂದೆ ಓ ಮನಸೇ ಹೇಗೆ ಬರುತ್ತದೆ? ಮುಂದಿನ ಯೋಜನೆಗಳು ಇತ್ಯಾದಿ ವಿಚಾರಗಳನ್ನು ಓದುಗರ ಜತೆಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ.
ಪ್ರಶ್ನೆ: ಬಹಳ ವರ್ಷಗಳ ನಂತರ ಬರಲಿರುವ ಓ ಮನಸೇಯಿಂದ ಏನೆಲ್ಲ ನಿರೀಕ್ಷೆ ಮಾಡಬಹುದು?
ಭಾವನಾ ಬೆಳಗೆರೆ: ಓ ಮನಸೇಯ ಆತ್ಮ ಹಾಗೇ ಇದೆ, ಇರುತ್ತದೆ. ಭಾವನೆಗೆ ಸಂಬಂಧಿಸಿದ ವಿಚಾರಕ್ಕೆ ಇಲ್ಲಿ ಆದ್ಯತೆ. ಬದುಕು- ಪ್ರೀತಿ, ಸಂಬಂಧಗಳು ಇವೆಲ್ಲ ಇಲ್ಲದೆ ಓ ಮನಸೇ ಊಹಿಸಲು ಸಾಧ್ಯವಾ? ಆದರೆ ಹೊಸ ಲೇಖಕ- ಲೇಖಕಿಯರು ನಮ್ಮ ಬಳಗ ಸೇರಿದ್ದಾರೆ. ಈ ಫೇಸ್ ಬುಕ್, ಟ್ವಿಟ್ಟರ್, ಇನ್ ಸ್ಟಾ ಗ್ರಾಮ್ ಇವೆಲ್ಲದರ ಕಾಲದಲ್ಲೂ ನಮ್ಮ ಪತ್ರಿಕೆ ಓದುವಂತೆ ರೂಪಿಸಿದ್ದೇವೆ. ಚಿತ್ರ ಸಾಹಿತಿ ಹೃದಯ ಶಿವ ಸೇರಿದಂತೆ ಅನೇಕರ ಲೇಖನಗಳು ಇರುತ್ತವೆ.
ಪ್ರಶ್ನೆ: ಪುಟಗಳು, ಪತ್ರಿಕೆ ಬೆಲೆ ಇತ್ಯಾದಿ ವಿಚಾರಗಳ ಬಗ್ಗೆ ಹೇಳಿ?
ಭಾವನಾ ಬೆಳಗೆರೆ: ಈ ಬಾರಿ ಐವತ್ತೆರಡು ಪುಟ ಆಗಿದೆ. ವರ್ಷಗಳ ಹಿಂದಿನ ಬೆಲೆಯಲ್ಲಿ ಈಗ ಪತ್ರಿಕೆ ಮಾಡುವುದು ತುಂಬ ಕಷ್ಟ ಆದ್ದರಿಂದ ಐದು ರುಪಾಯಿ ಬೆಲೆ ಹೆಚ್ಚಿಸಿದ್ದೀವಿ. ಮೊದಲಿಗೆ ಹೇಳಿಬಿಡ್ತೀನಿ, ಓ ಮನಸೇ ನಮಗೆ ಲಾಭದ ವಿಚಾರ ಅಲ್ಲ. ಅಪ್ಪನಿಗೆ ನಮ್ಮೆಲ್ಲರಿಗಿಂತ ಇಷ್ಟವಾದ ಪತ್ರಿಕೆ ಇದು. ತೀರಾ ಅಳೆದು- ತೂಗಿ, ಅನಿವಾರ್ಯ ಅಂದಾಗ ಐದು ರುಪಾಯಿ ಜಾಸ್ತಿ ಮಾಡಿದ್ದೀವಿ. ಆದರೆ ಅಪ್ಪ ಯಾವಾಗಲೂ ಹೇಳ್ತಿರ್ತಾರೆ, ಓದುಗರು ಕೊಡುವ ದುಡ್ಡಿಗೆ ಮೋಸ ಆಗಬಾರದು. ಅದು ನಮ್ಮ ಮೂಲ ಮಂತ್ರ.
ಪ್ರಶ್ನೆ: ಹತ್ತು ವರ್ಷದ ನಂತರ ಮತ್ತೆ ಪತ್ರಿಕಾ ಕಚೇರಿಗೆ ವಾಪಸ್ ಬಂದಿದ್ದೀರಿ, ಹೇಗಿದೆ ಹೊಸ ಸವಾಲು?
ಭಾವನಾ ಬೆಳಗೆರೆ: ನಾನು ಆಗ ಕ್ರೈಂ ಡೈರಿಯ ಸ್ಕ್ರಿಪ್ಟ್ ನ ಬರೀತಿದ್ದೆ. ಅದರಲ್ಲಿ ನಾನು ತೊಡಗಿಕೊಂಡಿದ್ದೆ. ಆಗಲೇ ಅಪ್ಪ ಯಾವುದಾದರೂ ಕಾಪಿ ಸರಿಯಿಲ್ಲ ಅಂದರೆ ಮುಲಾಜಿಲ್ಲದೆ ಕಸದ ಬುಟ್ಟಿಗೆ ಬಿಸಾಡುತ್ತಿದ್ದರು. ಈಗಲೂ ಏನೂ ಬದಲಾಗಿಲ್ಲ. ಅವರು ಪರ್ಫೆಕ್ಷನಿಸ್ಟ್. ಈ ಸಲ ನಾನು ಬರೆದ ಏಳೆಂಟು ಲೇಖನ ಅಪ್ಪ ಓದಿರಲಿಲ್ಲ. ಈಚೆಗೆ ಓದಿದರು. ಬೇರೆಯವರ ಹತ್ತಿರ ಹೇಳುತ್ತಿದ್ದರಂತೆ: ನನ್ನ ಮಗಳು ಚೆನ್ನಾಗಿ ಬರೀತಾಳೆ ಅಂತ. ಮೊನ್ನೆ ನನ್ನೆದುರೇ ಹೇಳಿದರು, ಮಗಳೇ ಚೆನ್ನಾಗಿ ಬರೀತಿಯಾ ಅಂತ. ಈ ಜನ್ಮಕ್ಕೆ ಇಷ್ಟು ಸಾಕು, ಒಂದು ಕ್ಷಣ ಭಾವುಕಳಾದೆ.
ಪ್ರಶ್ನೆ: ರವಿ ಬೆಳಗೆರೆ ಅವರು ಏನಾದರೂ ಬರೀತಾರಾ?
ಭಾವನಾ ಬೆಳಗೆರೆ: ಅವರ ಎಲ್ಲ ಅಂಕಣಗಳೂ ಅವರೇ ಬರೀತಾರೆ. ಮನಸಿನ್ಯಾಗಿನ ಮಾತು, ಸೈಡ್ ವಿಂಗ್, ಎಡಿಟೋರಿಯಲ್, ಸಮಾಧಾನ...ಹೀಗೆ. ಜತೆಗೆ ಅವರಿಗೆ ಬರೆಯಬೇಕು ಎಂದೆನಿಸಿದ ಲೇಖನ ಸಹ ಬರೆಯುತ್ತಾರೆ. ಅಪ್ಪ ಈಗ ಬಹಳ ಗಹನವಾಗಿ ಆಲೋಚಿಸುತ್ತಾರೆ. ಜತೆಗೆ ಈಗಿನ ಫೇಸ್ ಬುಕ್- ಟ್ವಿಟ್ಟರ್ ತಲೆಮಾರಿನ ತುಮ್ಮಲಗಳ ಬಗ್ಗೆ ಅವರಿಗೆ ಬಹಳ ಆತಂಕ- ಕಾಳಜಿ ಎಲ್ಲ ಇದೆ. ಮೊದಲ ಸಂಚಿಕೆ ಓ ಮನಸೇ ಬಂದ ನಂತರ ಹೇಗೆಲ್ಲ ಬದಲಾವಣೆ ಆಗುತ್ತಾ ಹೋಗುತ್ತದೆ ಅನ್ನುವುದನ್ನು ನಿರೀಕ್ಷಿಸಿ.
ಪ್ರಶ್ನೆ: ಬದಲಾವಣೆ ಅನ್ನೋ ಪದ ಬಳಸಿದಿರಿ, ಅದೇನು ನಿರೀಕ್ಷೆ ಮಾಡಬಹುದು?
ಭಾವನಾ ಬೆಳಗೆರೆ: ಓ ಮನಸೇಯಲ್ಲಿ ಓದುಗರಿಗೆ ಹೆಚ್ಚಿನ ಅವಕಾಶ ಕೊಡುವುದು ನಮ್ಮ ಉದ್ದೇಶ. ಅವರು ಬರೆಯಬೇಕು. ತಮ್ಮ ಭಾವನೆ ಹಂಚಿಕೊಳ್ಳಬೇಕು. ಒಂದು ಸಂವಾದ ಸಾಧ್ಯವಾಗಬೇಕು. ಪತ್ರಿಕೆ ಓದಿ ಮುಗಿಸುವುದಷ್ಟೇ ಅಲ್ಲ. ಅಲ್ಲಿಂದ ಸಂವಹನ ಶುರು ಆಗಬೇಕು. ಲೇಖನಗಳನ್ನು ಆಹ್ವಾನಿಸುತ್ತಿದ್ದೀವಿ. ಈಗಲೇ ಹೇಳಿಬಿಟ್ಟರೆ ಒಂದೋ ಅದರ ಮಜಾ ಹೊರಟುಹೋಗುತ್ತದೆ ಅಥವಾ ನಿರೀಕ್ಷೆ ಹೆಚ್ಚಾಗಿಬಿಡುತ್ತದೆ.
ಪ್ರಶ್ನೆ: ಆನ್ ಲೈನ್ ಆವೃತ್ತಿ ಏನಾದರೂ ತರುವ ಆಲೋಚನೆ ಇದೆಯಾ? ಓದುಗರಿಗೆ ಏನು ಹೇಳಲು ಬಯಸ್ತೀರಿ?
ಭಾವನಾ ಬೆಳಗೆರೆ: ಹೌದು, ಖಂಡಿತಾ ಇದೆ. ಚಂದಾದಾರರಾಗಿ ಓ ಮನಸೇ ಓದಬಹುದು. ಈ ಬಗ್ಗೆ ಈಗಿನ್ನೂ ಆರಂಭ ಹಂತದ ಆಲೋಚನೆಗಳಿವೆ. ಅದಿನ್ನೂ ಗಟ್ಟಿಯಾಗಬೇಕು ಹಾಗೂ ಸ್ಪಷ್ಟ ಆಗಬೇಕು. ಆ ನಂತರ ಎಲ್ಲರಿಗೂ ತಿಳಿಸ್ತೀವಿ. ಓ ಮನಸೇ ಮತ್ತೆ ಬರುತ್ತಿದೆ. ಹಾಗೂ ಇನ್ನು ಮುಂದೆ ನಿಲ್ಲದೆ ಬರುತ್ತದೆ. ಅದಕ್ಕಾಗಿ ಕಾಯುತ್ತಿದ್ದ ಎಲ್ಲ ಓದುಗರು ಮತ್ತೆ ಖುಷಿಪಡಲು ಕಾರಣ ಆಗಬೇಕು ಅನ್ನೋದು ನನ್ನ ಆಸೆ, ಜವಾಬ್ದಾರಿ ಎಲ್ಲ. ಈ ರೀತಿ ಅಪ್ಪ ಸಂಪಾದಕರಾಗಿ, ಮಗಳು ಸಹ ಸಂಪಾದಕಿಯಾಗಿ ಒಂದು ಪತ್ರಿಕೆ ಬರುತ್ತಿರುವುದು ಕನ್ನಡ ಪತ್ರಿಕೋದ್ಯಮಕ್ಕೆ ಹೊಸದು. ಅಷ್ಟೇ ಅಲ್ಲ, ಓ ಮನಸೇ ಕೂಡ ಸದಾ ತಾಜಾ. ಮಾರ್ಚ್ ಹದಿನೈದಕ್ಕೆ ಅಪ್ಪನ ಬರ್ತ್ ಡೇ. ಅಂದು ಮಾರುಕಟ್ಟೆಗೆ ಓ ಮನಸೇ ಬರುತ್ತದೆ. ಓದಿ, ನಿಮ್ಮ ಅಭಿಪ್ರಾಯ ತಿಳಿಸಿ.
ಅನಂತ ಚಿನಿವಾರ್, ಶರತ್ ಕಲ್ಕೋಡ್ ಹಾಗೂ ಉದಯ ಮರಕಿಣಿ ಸಂಪಾದಕರಾಗಿದ್ದರು
ಅನಂತ ಚಿನಿವಾರ್, ಶರತ್ ಕಲ್ಕೋಡ್ ಹಾಗೂ ಉದಯ ಮರಕಿಣಿ ಈ ವರೆಗೆ ಓ ಮನಸೇ ಚುಕ್ಕಾಣಿ ಹಿಡಿದಿದ್ದವರು. ರವಿ ಬೆಳಗೆರೆ ಅವರೇ ಪ್ರಧಾನ ಸಂಪಾದಕರಾಗಿ ಇದ್ದರು, ಈಗಲೂ ಅವರೇ ಪ್ರಧಾನ ಸಂಪಾದಕರಾಗಿ ಇದ್ದಾರೆ. ಬಹಳ ಸಮಯದ ನಂತರ ಮತ್ತೆ ಓ ಮನಸೇ ಮಾರುಕಟ್ಟೆಗೆ ಬರುತ್ತಿದೆ.