ಆನಂದಮಯ ಈ ಜಗ ಹೃದಯ.. ಗಾಯಕ ಸುಬ್ಬಣ್ಣ ಅಮರ
''ಶಿವಮೊಗ್ಗ ಸುಬ್ಬಣ್ಣ'' ಎಂದೇ ಕನ್ನಡ ಸುಗುಮ ಸಂಗೀತ ಕ್ಷೇತ್ರದಲ್ಲಿ ಹೆಸರುವಾಗಿದ್ದ ಜಿ ಸುಬ್ರಹ್ಮಣ್ಯ ವಿಧಿವಶರಾಗಿದ್ದಾರೆ. ಪ್ರಥಮ ಬಾರಿಗೆ ಕರ್ನಾಟಕಕ್ಕೆ ರಜತ ಕಮಲ ಪ್ರಶಸ್ತಿ ತಂದುಕೊಟ್ಟ ಸುಬ್ಬಣ್ಣ ಅವರು ಹಿರಿಯ ಗಾಯಕರಾಗಿ ಅಮರ ಗೀತೆಗಳಿಗೆ ದನಿಯಾದವರು.
1979ರಲ್ಲಿ ಕಾಡು ಕುದುರೆ ಚಿತ್ರದ ಕಾಡು ಕುದುರೆ ಓಡಿ ಬಂದಿತ್ತಾ... ಎಂದು ಚಲನಚಿತ್ರ ಗೀತೆಯ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಶಿವಮೊಗ್ಗ ಸುಬ್ಬಣ್ಣ ಅವರ ಮನೆಯಲ್ಲಿ ಸಂಗೀತ ಪರಂಪರೆಯಿದ್ದರೂ ಅವರು ವಕೀಲರಾಗಿ ವೃತ್ತಿ ಆರಂಭಿಸಿದರು.
Breaking; ಖ್ಯಾತ ಗಾಯಕ ಶಿವಮೊಗ್ಗ ಸುಬ್ಬಣ್ಣ ವಿಧಿವಶ
ದಕ್ಷಿಣ ಕನ್ನಡ ಜಿಲ್ಲೆಯ ನೀಲಾವರ ಅಡಿಗ ಮನೆತನಕ್ಕೆ ಸೇರಿದವರಾದರೂ, ಗಣೇಶ್ ರಾವ್ ಹಾಗೂ ರಂಗನಾಯಕಮ್ಮನವರ ಮಗನಾದ ಸುಬ್ಬಣ್ಣ 1938ರಲ್ಲಿ. ಶಿವಮೊಗ್ಗ ಜಿಲ್ಲೆಯ ನಗರ ಗ್ರಾಮದಲ್ಲಿ ಜನಿಸಿದರು. ಮನೆಯಲ್ಲಿ ದಿನನಿತ್ಯ ಪೂಜೆ, ಪುರಸ್ಕಾರ, ವೇದ ಮಂತ್ರಗಳ ಘೋಷಗಳ ಜೊತೆಗೆ ಸಂಗೀತ ವಿದ್ವಾಂಸರಾಗಿದ್ದ ಅಜ್ಜ ಶಾಮಣ್ಣನವರ ಗಾಯನವನ್ನು ಕೇಳುತ್ತಾ ಸುಬ್ಬಣ್ಣ ಬೆಳೆದರು.
ಸಂಗೀತ ಓನಾಮವನ್ನು ಅಜ್ಜನ ಬಳಿ ಕಲಿತರು. ನಂತರ ಎಂ. ಪ್ರಭಾಕರ್ ಅವರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದರು. ಶಾಲಾ ಸಮಾರಂಭಗಳಲ್ಲಿ ಗಾಯನದ ಮೂಲಕ ಜನಪ್ರಿಯತೆ ಗಳಿಸಿದ್ದರು. ಆದರೆ, ತಮ್ಮ ವಿದ್ಯಾಭ್ಯಾಸ ಬಗ್ಗೆ ಗಮನ ಹರಿಸಿ ಬಿ.ಎ.,ಬಿ.ಕಾಂ.,ಎಲ್.ಎಲ್.ಬಿ., ಪದವಿ ಪಡೆದುಕೊಂಡರು. ವಕೀಲರಾಗಿ ವ್ರತ್ತಿ ಬದುಕು ಆರಂಭಿಸಿದ ಇವರು ಬಳಿಕ ನೋಟರಿಯಾಗಿ ನೇಮಕಗೊಂಡು ಕೆಲವು ವರ್ಷಗಳ ಕಾಲ ಸಂಗೀತ ಲೋಕದಿಂದ ದೂರವೇ ಉಳಿದಿದ್ದರು. ಆದರೆ, ರಕ್ತಗತವಾಗಿ ಬಂದ ಸಂಗೀತ, ಗಾಯನ ಕಲೆಗೆ ಅವಕಾಶ ಒದಗಿ ಬಂದಿತು.
1963ರಲ್ಲಿ ಆಕಾಶವಾಣಿಯ ಗಾಯಕರಾಗಿ ಆಯ್ಕೆಯಾದರು. ನಂತರ ಆಕಾಶವಾಣಿ ಮತ್ತು ದೂರದರ್ಶನದ 'ಎ' ಶ್ರೇಣಿಯ ಗಾಯಕರಾಗಿದ್ದ ಶಿವಮೊಗ್ಗ ಸುಬ್ಬಣ್ಣ ಕುವೆಂಪು, ಬೇಂದ್ರೆ ಮತ್ತು ನಾಡಿನ ಇತರ ಕವಿಗಳ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿ ಹಾಡುವ ಮೂಲಕ ಮನೆಮಾತಾದರು. ಚಿತ್ರ ನಿರ್ದೇಶಕ ಕವಿ ಚಂದ್ರಶೇಖರ ಕಂಬಾರರ 'ಕರಿಮಾಯಿ' ಮೂಲಕ ಹಿನ್ನೆಲೆ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದರು.
ಕುವೆಂಪು ರಚಿಸಿದ ಬಾರಿಸು ಕನ್ನಡ ಡಿಂಡಿಮವ.. ಆನಂದ ಮಯ ಈ ಜಗ ಹೃದಯ ಭಾವಗೀತೆಯನ್ನು ಸುಬ್ಬಣ್ಣ ಹಾಡಿರುವ ಶೈಲಿಯೇ ವಿಶಿಷ್ಟ. ಇದೇ ರೀತಿ ಸಂತ ಶಿಶುನಾಳ ಷರೀಫರ ಗೀತೆಗಳನ್ನು ಹಾಡಿರುವುದು ಜನಪ್ರಿಯಗೊಂಡಿವೆ.
ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ, ಕಾಳಿಂಗರಾವ್ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಬೆಂಗಳೂರು ಗಾಯನ ಸಮಾಜ 2003ರಲ್ಲಿ ವರ್ಷದ ಕಲಾವಿದ ಪ್ರಶಸ್ತಿ, ಕುವೆಂಪು ವಿವಿಯಿಂದ ಗೌರವ ಡಾಕ್ಟರೇಟ್ ನೀಡಲಾಗಿತ್ತು. ಕರ್ನಾಟಕ ಸಂಗೀತ ಅಕಾಡಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
Recommended Video
ಮೊದಲಾದ ಹತ್ತು ಹಲವು ಪ್ರಶಸ್ತಿ ಗಳಿಸಿರುವ ಸುಬ್ಬಣ್ಣನವರನ್ನು ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆ ಭಾರ್ಗವ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು. ಸಂಗೀತ ಕ್ಷೇತ್ರಕ್ಕೆ ಸುಬ್ಬಣ್ಣನವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ರಾಜ್ಯ ಸರಕಾರ ಸಂತ ಶಿಶುನಾಳ ಶರೀಫ್ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.