ಬೆಳಗಾವಿಯ ಐತಿಹಾಸಿಕ ಪ್ರವಾಹಕ್ಕೆ ವೈಜ್ಞಾನಿಕ ಕಾರಣಗಳನ್ನು ಹುಡುಕುತ್ತಾ...
ಬೆಂಗಳೂರು, ಆಗಸ್ಟ್ 8: ಸುಮಾರು 19 ವರ್ಷಗಳ ನಂತರ ಬೆಳಗಾವಿ ಜಿಲ್ಲೆ ಸೇರಿದಂತೆ ಕೃಷ್ಣಾ ನದಿ ಪಾತ್ರದ ಹಳ್ಳಿಗಳು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಉತ್ತರ ಕರ್ನಾಟಕದ ಈ ಭಾಗದಲ್ಲಿ ಇಂತಹದೊಂದು ಸನ್ನಿವೇಶ ಯಾಕಾಗಿ ಸೃಷ್ಟಿಯಾಯಿತು? ಈ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಉತ್ತರ ಹುಡುಕುತ್ತಾ ಹೊರಟರೆ ಕುತೂಹಕಾರಿ ಮಾಹಿತಿ ತಳಮಟ್ಟದಲ್ಲಿ ಲಭ್ಯವಾಗುತ್ತದೆ.
ಜತೆಗೆ, ಮಹಾರಾಷ್ಟ್ರ ಸರಕಾರದ ಮುಂದೆ ಈ ಭಾಗದ ಜನರು ನೀರಿಗಾಗಿ ಮುಂದಿಟ್ಟುಕೊಂಡು ಬಂದ ಆಗ್ರಹಗಳು, ನೆರೆಯ ಸರಕಾರ ಪ್ರವಾಹದ ಸಮಯದಲ್ಲಿ ತೋರಿಸುವ ಹೊಣೆಗೇಡಿ ನಡೆಗಳು ಹಾಗೂ ಕರ್ನಾಟಕ ಸರಕಾರದ ಮುಂದಾಲೋಚನೆ ಇಲ್ಲದ ಆಡಳಿತದ ದುಃಸ್ಥಿತಿಗಳಿಗೆ ಇಲ್ಲಿ ಪುರಾವೆಗಳು ಸಿಗುತ್ತವೆ.
ಯಡಿಯೂರಪ್ಪ ಸರಕಾರಕ್ಕೂ ಮಳೆಗೂ ಯಾಕಿಷ್ಟು ವಿಶೇಷ ನಂಟು?
ಇವೆಲ್ಲಾ ಅಂಶಗಳನ್ನು ಒಂದೊಂದಾಗಿ ಪರಿಶೀಲಿಸುವ ಮುನ್ನ ಸದ್ಯ ಚಿಕ್ಕೋಡಿ, ಅಥಣಿ, ಕಾಗವಾಡ, ರಾಯಭಾಗ, ಬಾಗಲಕೋಟೆ, ವಿಜಯಪುರ, ಯಾದಗಿರಿ ಮತ್ತು ರಾಯಚೂರು ಭಾಗಗಳಲ್ಲಿ ಕಂಡುಬರುತ್ತಿರುವ ಪ್ರವಾಹದ ಚಿತ್ರಣವೊಂದನ್ನು ಕಟ್ಟಿಕೊಡಲೇಬೇಕಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ಕಾಗವಾಡ ಹಾಗೂ ರಾಯಬಾಗದ ಹಳ್ಳಿಗಳು ಹೆಚ್ಚು ಕಡಿಮೆ ಕೃಷ್ಣಾ ನದಿ ನೀರಿನಿಂದ ಜಲಾವೃತವಾಗಿವೆ. 'ತೋಟದ ಮನೆಗಳು' ಎಂದು ಕರೆಯುವ ಇಲ್ಲಿನ ಗ್ರಾಮೀಣ ಪರಿಸರದ ಜನಜೀವನ ಸಂಪೂರ್ಣವಾಗಿ ಅಸ್ಥವ್ಯಸ್ಥವಾಗಿವೆ. ಇದಕ್ಕೆ ಪ್ರಮುಖವಾಗಿ ಕಾರಣವಾಗಿರುವುದು ಮಹಾರಾಷ್ಟ್ರ ಸರಕಾರ ಕೃಷ್ಣಾ ನದಿಗೆ ಕಟ್ಟಲಾದ ತನ್ನ ಜಲಾಶಗಳಿಂದ ಹೆಚ್ಚುವರಿ ನೀರನ್ನು ಏಕಾಏಕಿ ಹರಿಸಿದ್ದು ಎನ್ನುತ್ತಾರೆ ಸ್ಥಳೀಯರು.
ಪ್ರವಾಹ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಯಡಿಯೂರಪ್ಪ
2005ರಲ್ಲಿ ಕೂಡ ಇಂತಹದ್ದೇ ಒಂದು ಪ್ರವಾಹ ಪರಿಸ್ಥಿತಿಯನ್ನು ಇಲ್ಲಿನ ಜನ ಎದುರಿಸಿದ್ದರು. ಈ ಸಮಯದಲ್ಲಿ ಮಹಾರಾಷ್ಟ್ರ ಸರಕಾರ ಸುಮಾರು 3.5 ಲಕ್ಷ ಕ್ಯೂಸೆಕ್ಸ್ ನೀರನ್ನು ಹರಿಸಿತ್ತು. ನಂತರ ಕರ್ನಾಟಕದ ಕೃಷ್ಣಾ ನದಿ ಪಾತ್ರದಲ್ಲಿ ಆದ ಹಾನಿ ಸುಮಾರು 126 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿತ್ತು. ಇದೀಗ ಮಹಾರಾಷ್ಟ್ರ ಸರಕಾರ ಸುಮಾರು 5-6 ಲಕ್ಷ ಕ್ಯೂಸೆಕ್ಸ್ ನೀರನ್ನು ಜಲಾಶಯಗಳಿಂದ ಬಿಡಗಡೆ ಮಾಡಿದೆ. 19 ವರ್ಷಗಳ ನಂತರ ನಡೆದ ಈ ಬೆಳವಣಿಗೆಯ ಪರಿಣಾಮಗಳನ್ನು ಅಂದಾಜಿಸಿ ನೋಡಿದರೆ, ನಷ್ಟದ ಪ್ರಮಾಣ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ.
ಗಮನಾರ್ಹ ಸಂಗತಿ ಏನೆಂದರೆ, ಕೆಲವೇ ದಿನಗಳ ಹಿಂದಿನವರೆಗೂ ಈ ಭಾಗದ ಜನ ಮಹಾರಾಷ್ಟ್ರದಿಂದ ಒಂದು ಟಿಎಂಸಿ ನೀರನ್ನಾದರೂ ಬಿಡುಗಡೆ ಮಾಡಿ ಎಂದು ಆಗ್ರಹ ಮಂಡಿಸುತ್ತಿದ್ದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದಿಲ್ಲಿಯಲ್ಲಿ ಪ್ರಧಾನಿ ಮೋದಿ ಪದಗ್ರಹಣದ ಸಮಯದಲ್ಲಿ ಸಿಕ್ಕ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮುಂದೆ ಬೆಳಗಾವಿ ಜನರ ಆಗ್ರಹವನ್ನು ಮಂಡಿಸಿದ್ದರು. ಇದಕ್ಕೆ ಮಹಾರಾಷ್ಟ್ರ ಕಡೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ.
2016ರಲ್ಲೊಮ್ಮೆ ಒಂದು ಟಿಎಂಸಿ ನೀರನ್ನು ಒಟ್ಟು 3.5 ಕೋಟಿ ರೂಪಾಯಿ ಕೊಟ್ಟು ಕರ್ನಾಟಕ ಖರೀದಿಸಿದ ಇತಿಹಾಸವಿದೆ. ಈ ಬಾರಿಯ ಬರ ಸನ್ನಿವೇಶದಲ್ಲಿ 3-4 ಟಿಎಂಸಿ ನೀರನ್ನು ಹಣಕ್ಕಾದರೂ ಸರಿ ಖರೀದಿಸಬೇಕು ಎಂಬ ಜನರ ಆಗ್ರಹದ ನಡುವೆಯೇ ಮಹಾರಾಷ್ಟ್ರ ಭಾಗದಲ್ಲಿ ಮಳೆ ಶುರುವಾಯಿತು.
ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ: ಕೇಂದ್ರದಿಂದ ಅಗತ್ಯ ನೆರವಿನ ಭರವಸೆ
ಕೃಷ್ಣಾ ನದಿಗೆ ಮಹಾರಾಷ್ಟ್ರದಲ್ಲಿ ಕೋಯ್ನಾ ಸೇರಿದಂತೆ ಹಲವು ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಯಾವಾಗ ಜುಲೈ ಅಂತ್ಯದಲ್ಲಿ ಹಾಗೂ ಆಗಸ್ಟ್ ಆರಂಭದಲ್ಲಿ ಭಾರಿ ಮಳೆಯಾಯಿತೋ, ಮಹಾರಾಷ್ಟ್ರ ತನ್ನ ಜಲಾಶಯಗಳಿಂದ ನೀರನ್ನು ಹರಿಸಲು ಆರಂಭಿಸಿತು. ಪರಿಣಾಮ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತು. ಮಳೆ ನಿಲ್ಲದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ನೀರು ಹರಿಯುವಿಕೆ ಹೆಚ್ಚಿತು. ನಿಧಾನವಾಗಿ ಕೃಷ್ಣವೇಣಿ ಹರಿದು ಹೋಗುವ ಬಾಗಲಕೋಟೆ, ವಿಜಯಪುರ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲೂ ಪ್ರವಾಹದ ಪರಿಸ್ಥಿತಿ ಎದುರಾಯಿತು.
ಒಂದು ಕಡೆ ಮಹಾರಾಷ್ಟ್ರದ ಈ ಹೊಣೆಗೇಡಿ ಅಥವಾ ಅನಿವಾರ್ಯವಾದ ನಡೆಯಿಂದ ಈ ಜಿಲ್ಲೆಗಳಲ್ಲಿ ಜಲಾವೃತ ಸನ್ನಿವೇಶ ನಿರ್ಮಾಣಗಿದ್ದರೆ, ಇನ್ನೊಂದೆಡೆ ಹಿಂದೆಂದೂ ಇಲ್ಲದಷ್ಟು ಮಳೆ ಬೆಳಗಾವಿಯಲ್ಲಿ ಸುರಿಯುತ್ತಿದೆ. ಬೆಳಗಾವಿಯ ಖಾನಾಪುರ, ರಾಮದುರ್ಗ, ಸವದತ್ತಿ ಭಾಗಗಳಲ್ಲಿ ಮಳೆ ಸರಿಯುತ್ತಿರುವ ಪರಿಣಾಣ, ಮಲಪ್ರಭ ನದಿ ತುಂಬಿ ಹರಿಯುತ್ತಿದೆ. ಇಲ್ಲಿನ ನವಲತೀರದ ಜಲಾಶಯ ತುಂಬಿದೆ. ಇದರ ಒಟ್ಟು ಸಾಮರ್ಥ್ಯವೇ 37 ಟಿಎಂಸಿ. ವರದಿಗಳ ಪ್ರಕಾರ ಈಗಾಗಲೇ 35 ಟಿಎಂಸಿ ನೀರು ತುಂಬಿದೆ. ಪ್ರತಿ ದಿನ 85 ಲಕ್ಷ ಕ್ಯೂಸೆಕ್ಸ್ ನೀರನ್ನು ಇಲ್ಲಿಂದ ಹೊರಗೆ ಬಿಡಲಾಗುತ್ತಿದೆ. ಪರಿಣಾಮ ಬೆಳಗಾವಿಯಿಂದ 104 ಕಿ.ಮೀ ದೂರದಲ್ಲಿರುವ ರಾಮದುರ್ಗದ ಅರ್ಧಭಾಗ ಸಂಪೂರ್ಣವಾಗಿ ಜಲಾವೃತವಾಗಿದೆ.
ಉತ್ತರ ಕನ್ನಡಕ್ಕೆ ಮೂರು ದಿನ ಯಾರೂ ಬರಲೇಬೇಡಿ; ಡಿಸಿ ಸೂಚನೆ
ಅತ್ತ ಘಟಪ್ರಭ ನದಿಗೆ 1964ರಲ್ಲಿ ನಿರ್ಮಿಸಲಾದ ಹಿಡ್ಕಲ್ ಜಲಾಶಯದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಒಟ್ಟು ಸಾಮರ್ಥ್ಯ 51 ಟಿಎಂಸಿ. ಇದು ಕೂಡ ಈಗ ಮಳೆಯ ಪರಿಣಾಮ ತುಂಬಿದ್ದು ಪ್ರತಿ ದಿನ 1.65 ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಮಾರ್ಕಾಂಡೇಯದಂತಹ ಚಿಕ್ಕ ಡ್ಯಾಂ ಕೂಡ ತುಂಬಿದೆ.
ಕೃಷ್ಣಾ ನದಿ ಪಾತ್ರದಲ್ಲಿರುವ ಜನರಿಗೆ ಇಂತಹ ಪ್ರವಾಹ ಪರಿಸ್ಥಿತಿ ಅನಿರೀಕ್ಷಿತವಲ್ಲವಾದರೂ, ಪಕ್ಕದ ಮಹಾರಾಷ್ಟ್ರದ ತಯಾರಿಗಳನ್ನು ಗಮನಿಸಿದರೆ ನಮ್ಮದೇ ಕರ್ನಾಟಕ ಸರಕಾರದ ನಡೆಗಳು ಬೇಸರ ಮೂಡಿಸುವಂತಿದೆ. ಮಹಾರಾಷ್ಟ್ರದ ಸಾಂಗ್ಲಿಯ ಸುತ್ತಮುತ್ತ ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸ್ಥಳೀಯ ಸರಕಾರ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ರಸ್ತೆಗಳನ್ನು ಎತ್ತರಿಸುವುದು, ಹಳ್ಳಿಗಳಿಗೆ ತಡೆಗೋಡೆಯನ್ನು ನಿರ್ಮಿಸುವುದು, ವಿಶೇಷ ಬೋಟಿಂಗ್ ವ್ಯಸಸ್ಥೆ ಮಾಡುವುದು ಹೀಗೆ ಒಂದಷ್ಟು ಕ್ರಮಗಳು ಕಣ್ಣಿಗೆ ಬೀಳುತ್ತವೆ. ಆದರೆ ಕರ್ನಾಟಕದಲ್ಲಿ 2005ರಲ್ಲಿ ಇಂತಹದ್ದೇ ಒಂದು ಪ್ರವಾಹ ಪರಿಸ್ಥಿತಿಯನ್ನೂ ಎದುರಿಸಿದರೂ ಯಾವುದೇ ಕ್ರಮಗಳಾಗಿಲ್ಲ ಎಂಬುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.
ಪ್ರವಾಹ ಪೀಡಿತ ಜಿಲ್ಲೆ ಜನರಿಗಾಗಿ ತುರ್ತು ಸಹಾಯವಾಣಿ
"ಕರ್ನಾಟಕ ಸರಕಾರಕ್ಕೆ ಪದೇ ಪದೇ ಈ ವಿಚಾರದಲ್ಲಿ ಮನವಿಗಳನ್ನು ಸಲ್ಲಿಸಲಾಗಿದೆ. ಕಾಗವಾಡದ ಜಿಗುಳ, ಮಂದಾವತಿ, ಶಾಹಪುರ ಹಾಗೂ ಅಥಣಿ ತಾಲೂಕಿನ ಜುಂಜುನವಾಡ ಹಾಗೂ ಸವದಿ ಗ್ರಾಮಗಳನ್ನು ಶಾಶ್ವತ ಸ್ಥಳಾಂತರಗೊಳಿಸಬೇಕು. ಇಲ್ಲಿನ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿಕೊಂಡು ಬರಲಾಗಿದೆ. ನಮ್ಮಲ್ಲಿ ಪ್ರವಾಹ ಬಂದಾಗಷ್ಟೆ ಪರಿಹಾರದ ಕಡೆಗೆ ಗಮನ ಹರಿಸಲಾಗುತ್ತದೆ. ಉಳಿದ ಸಮಯದಲ್ಲಿ ನಿರ್ಲಕ್ಷ್ಯತೆ ಎದ್ದು ಕಾಣಿಸುತ್ತದೆ,'' ಎನ್ನುತ್ತಾರೆ ಬೆಳಗಾವಿ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರು, ಮಾಜಿ ಪತ್ರಕರ್ತರೂ ಆದ ಅಶೋಕ್ ಯಂಕಪ್ಪ ಚಂದರಗಿ.
ಇದರ ಜತೆಗೆ, ಕರ್ನಾಟಕ ಭಾಗದಲ್ಲಿ ಆದ ಮಳೆಯ ಪರಿಣಾಮ ಉಂಟಾಗಿರುವ ಪರಿಸ್ಥಿತಿಯನ್ನು ಕರ್ನಾಟಕ ಸರಕಾರ ನಿಭಾಯಿಸಬೇಕು. ಆದರೆ ಮಹಾರಾಷ್ಟ್ರದ ಧೋರಣೆಯಿಂದ ಸೃಷ್ಟಿಯಾಗಿರುವ ಪ್ರವಾಹಕ್ಕೆ ಯಾರು ಹೊಣೆ? ಎಂಬ ಪ್ರಶ್ನೆಯನ್ನು ಅಶೋಕ್ ಚಂದರಗಿ ಮುಂದಿಡುತ್ತಾರೆ. "ಮಹಾರಾಷ್ಟ್ರ ಸರಕಾರ ನಾವು ನೀರು ಕೇಳಿದಾಗಿ ಬಿಡಲು ತಯಾರಿರಲಿಲ್ಲ. ಈಗ ಏಕಾಏಕಿ ಯಾವ ಮುನ್ಸೂಚನೆಯೂ ಇಲ್ಲದೆ ನೀರು ಹರಿಸಿದೆ. ಇದರಿಂದ ದೊಡ್ಡ ಪ್ರಮಾಣದ ಹಾನಿಯಾಗಿದೆ. ಇದನ್ನು ಆ ಸರಕಾರವೇ ಭರಿಸಬೇಕು,'' ಎಂಬುದು ಅವರ ಆಗ್ರಹ.
ಆದರೆ ಇವರಷ್ಟೆ ಗಟ್ಟಿದನಿಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ನೆರೆಯ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರಕಾರ ಎದುರಿಗೆ ಮಂಡಿಸಲು ಸಾಧ್ಯನಾ? ಇದು ಭವಿಷ್ಯದಲ್ಲಿ ಉತ್ತರ ಸಿಗಲಿರುವ ಪ್ರಶ್ನೆ.
ಸದ್ಯಕ್ಕೆ ಬೆಳಗಾವಿ ಜಿಲ್ಲೆ ಕರ್ನಾಟಕದ ಉಳಿದೆಲ್ಲಾ ಜಿಲ್ಲೆಗಳಿಗಿಂತ ಹೆಚ್ಚಿನ ಪ್ರವಾಹಕ್ಕೆ ತುತ್ತಾಗಿದೆ. ಜನ ಅಕ್ಷರಶಃ ತಮ್ಮ ತೋಟದ ಮನೆಗಳನ್ನು ಕಳೆದುಕೊಂಡು ಸ್ಥಳಾಂತರಗೊಂಡಿದ್ದಾರೆ. ಇವರಿಗೆ ದೊಡ್ಡಮಟ್ಟದ ನೆರವಿನ ಅಗತ್ಯವಿದೆ. "ಒಂದು ವಾರದ ಮಟ್ಟಿಗಾದರೂ ಮುಖ್ಯಮಂತ್ರಿ ಸೇರಿದಂತೆ ಅಧಿಕಾರಿಗಳು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರವಾಗಬೇಕು,'' ಎಂದು ರವಿಕೃಷ್ಣಾ ರೆಡ್ಡಿ ನೇತೃತ್ವದ ಕರ್ನಾಟಕ ರಾಷ್ಟ್ರೀಯ ಸಮಿತಿ ಎಂಬ ನೂತನ ಪಕ್ಷ ಆಗ್ರಹಿಸಿದೆ. ಇದು ಇದ್ದುದರಲ್ಲೇ ಅತ್ಯಂತ ಕ್ರೀಯಾಶೀಲವಾಗಿರುವ ಆಲೋಚನೆ. ಕೇವಲ ಸರಕಾರ ಸ್ಥಳಾಂತರ ಮಾತ್ರವೇ ಅಲ್ಲ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಇಂತಹ ಪ್ರವಾಹದ ಪರಿಸ್ಥಿತಿಗಳನ್ನು ಎದುರಿಸಲು ಮುನ್ನೆಚ್ಚರಿಕಾ ಕ್ರಮಗಳನ್ನೂ ಜಾರಿಗೆ ತರಬೇಕಿದೆ.