ಕೃಷಿ ಕಾಯ್ದೆ ವಾಪಾಸ್: ಪಂಜಾಬ್ನಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಿಲ್ಲ ಎಂದ ಅಕಾಲಿದಳ
ಚಂಡೀಗಢ, ನವೆಂಬರ್ 19: ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದು ಮಾಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ ಪಂಜಾಬ್ನಲ್ಲಿ ಶಿರೋಮಣಿ ಅಕಾಲಿದಳ ಮತ್ತೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆಯೇ ಎಂಬ ಅನುಮಾಗಳು ಉಂಟಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿರೋಮಣಿ ಅಕಾಲಿದಳ ನಾಯಕ, "ಪಂಜಾಬ್ನಲ್ಲಿ ಬಿಜೆಪಿಯೊಂದಿಗೆ ಮೈತ್ರಿಯಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
ಪಂಜಾಬ್ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಂಜಾಬ್ನಲ್ಲಿ ತನ್ನ ಆಡಳಿತವನ್ನು ಉಳಿಸಿಕೊಳ್ಳುವ ತಂತ್ರವನ್ನು ಮಾಡುತ್ತಿರುವಾಗ, ಇನ್ನೊಂದೆಡೆ ಬಿಜೆಪಿಯು ಪಂಜಾಬ್ ಮುಖ್ಯಮಂತ್ರಿ ಗದ್ದುಗೆಯ ಮೇಲೆ ಕಣ್ಣಿರಿಸಿದೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹ ಮಾಡಿ ರೈತರ ಹೋರಾಟ ಆರಂಭ ಮಾಡಿ ಒಂದು ವರ್ಷ ಆಗುತ್ತಾ ಬಂದಿದೆ. ಆದರೆ ಈಗ ಚುನಾವಣೆ ಹತ್ತಿರವಾಗುತ್ತಿಂದತೆ ಕೇಂದ್ರ ಸರ್ಕಾರ ಈ ಕೃಷಿ ಕಾಯ್ದೆಯನ್ನು ಹಿಂಪಡೆದಿರುವುದು ಚುನಾವಣೆ ಗಿಮಿಕ್ ಎಂದು ಕೂಡಾ ವಿರೋಧ ಪಕ್ಷಗಳು ಹೇಳುತ್ತಿದೆ.
'ಗುರುನಾನಕ್ರ ಬಕ್ಷೀಸು': ಕೃಷಿ ಕಾಯ್ದೆ ವಿರೋಧಿಸಿ ಸಚಿವ ಸ್ಥಾನ ತೊರೆದಿದ್ದ ಹರಸಿಮ್ರತ್ ಕೌರ್
ಆದರೆ ಈ ನಡುವೆ ಕೃಷಿ ಕಾಯ್ದೆಯ ವಿಚಾರದಲ್ಲೇ ಎನ್ಡಿಎ ಕೂಟದಿಂದ ಹೊರನಡೆದ, ತನ್ನ ಏಕೈಕ ಕೇಂದ್ರ ಸಚಿವೆ ಹರಸಿಮ್ರತ್ ಕೌರ್ ಬಾದಲ್ ಬಳಿ ರಾಜೀನಾಮೆ ನೀಡಿಸಿದ ಶಿರೋಮಣಿ ಅಕಾಲಿದಳ ಈಗ ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ಹಿಂಪಡೆದ ಹಿನ್ನೆಲೆ ಮತ್ತೆ ಎನ್ಡಿಎ ಕೂಟ ಸೇರಲಿದೆಯೇ ಎಂಬ ಪ್ರಶ್ನೆಯು ಮೂಡಿದೆ. ಆದರೆ ಈ ವಿಚಾರವಾಗಿ ಶುಕ್ರವಾರ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿರೋಮಣಿ ಅಕಾಲಿದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಬಿಜೆಯೊಂದಿಗೆ ಮೈತ್ರಿ ಮಾಡಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಈಗ ಕೃಷಿ ಕಾಯ್ದೆಯನ್ನು ವಾಪಾಸ್ ಪಡೆದಿದೆ. ಈ ಹಿನ್ನೆಲೆ ನೀವು ಮತ್ತೆ ಬಿಜೆಪಿ ಮೈತ್ರಿಕೂಟವನ್ನು ಸೇರಲಿದ್ದೀರಾ ಎಂದು ಮಾಧ್ಯಮಗಳು ಪ್ರಶ್ನಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿರೋಮಣಿ ಅಕಾಲಿದಳ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್, "ನಾವು ಪಂಜಾಬ್ನಲ್ಲಿ ಮುಂದಿನ ಚುನಾವಣೆಯ ನಿಟ್ಟಿನಲ್ಲಿ ಬಿಎಸ್ಪಿ ಜೊತೆ ಈಗಾಗಲೇ ಮೈತ್ರಿ ಮಾಡಿಕೊಂಡಿದ್ದೇವೆ. ಆ ಮೈತ್ರಿಯೇ ಮುಂದುವರಿಯಲಿದೆ," ಎಂದು ತಿಳಿಸಿದ್ದಾರೆ.
ಟ್ವೀಟ್ ಮಾಡಿರುವ ಸುಖ್ಬೀರ್ ಸಿಂಗ್ ಬಾದಲ್
ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾಪಾಸ್ ಪಡೆದಿರುವುದನ್ನು ಸುಖ್ಬೀರ್ ಸಿಂಗ್ ಬಾದಲ್ ಸ್ವಾಗತಿಸಿದ್ದಾರೆ. ಹಾಗೆಯೇ, "ಸರಿಯಾದ ಆಂದೋಲನವು ಎಂದಿಗೂ ಯಶಸ್ಸು ಆಗುತ್ತದೆ," ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುಖ್ಬೀರ್ ಸಿಂಗ್ ಬಾದಲ್, "ಮೂರು ಕಪ್ಪು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತ ಮಾಡುತ್ತೇವೆ. ಗುರುನಾನಕ್ ದೇವ್ ಜಿ ಅವರ ಜನ್ಮದಿನದಂದು ಈ ಕೃಷಿ ಕಾಯ್ದೆಯನ್ನು ವಾಪಾಸ್ ಪಡಯುವ ಘೋಷಣೆ ಮಾಡಿರುವುದಕ್ಕೆ ಅಕಾಲಿದಳಕ್ಕೆ ಹೆಚ್ಚು ಸಂತೋಷವಾಗಿದೆ. ಈ ನಿರ್ಧಾರವು ಭಾರತವನ್ನು ಐಕ್ಯವಾಗಿಸುತ್ತದೆ ಎಂದು ನಾನು ನಂಬಿದ್ದೇನೆ," ಎಂದು ಹೇಳಿದ್ದಾರೆ.
'ಚುನಾವಣೆ ಹಿನ್ನೆಲೆ ಕೃಷಿ ಕಾಯ್ದೆ ವಾಪಾಸ್ ಪಡೆದ ಪ್ರಧಾನಿ ಮೋದಿ'
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸುಖ್ಬೀರ್ ಸಿಂಗ್ ಬಾದಲ್, "ಮತ್ತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆ ಇಲ್ಲ. 700 ರೈತರ ಪ್ರಾಣ ಹೋಗಿದೆ. ಸಂಸತ್ತಿನಲ್ಲಿ ಪ್ರಧಾನಿ ಮೋದಿಗೆ ಈ ಕಪ್ಪು ಕಾನೂನು ರೈತರಿಗೆ ಒಳ್ಳೆಯದ್ದನ್ನು ಮಾಡುವುದಿಲ್ಲ ಎಂದು ಹೇಳಿದ್ದೆ," ಎಂದು ಉಲ್ಲೇಖ ಮಾಡಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ತಾರಾ ಅಮರೀಂದರ್?
ಇನ್ನು ಪಂಜಾಬ್ ಮಾಜಿ ಮುಖ್ಯಮಂತ್ರಿ ಕಾಪ್ಟನ್ ಅಮರೀಂದರ್ ಸಿಂಗ್ ಇತ್ತೀಚೆಗೆ ಹೊಸ ಪಕ್ಷವನ್ನು ಕಟ್ಟಿಕೊಂಡಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ವಾಪಾಸ್ ಪಡೆದರೆ ಬಿಜೆಪಿಯೊಂದಿಗೆ ಪಂಜಾಬ್ನಲ್ಲಿ ಮೈತ್ರಿ ಮಾಡಿಕೊಳ್ಳವುದಾಗಿ ಹೇಳಿಕೊಂಡಿದ್ದಾರೆ. ಈಗ ಕೃಷಿ ಕಾಯ್ದೆ ಹಿಂಪಡೆದ ಕಾರಣ ಅಮರೀಂದರ್ ಸಿಂಗ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಗಳು ಇದೆ. ಇನ್ನು ಕೃಷಿ ಕಾಯ್ದೆ ವಾಪಾಸ್ ಪಡೆದ ಬಗ್ಗೆ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಅಮರೀಂದರ್ ಸಿಂಗ್, "ಉತ್ತಮ ಸುದ್ದಿ ಇದಾಗಿದೆ. ಪಂಜಾಬಿಗಳ ಬೇಡಿಕೆಗೆ ಕಿವಿಗೊಟ್ಟು ಮೂರು ಕೃಷಿ ಕಾಯ್ದೆಯನ್ನು ಹಿಂಪಡೆಯುವ ನಿರ್ಧಾರ ಕೈಗೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಧನ್ಯವಾದಗಳು. ಅದು ಕೂಡಾ ಈ ಗುರುನಾನಕ್ ಜಯಂತಿಯ ಪುಣ್ಯ ಸಂದರ್ಭದಲ್ಲಿ ಈ ಕಾಯ್ದೆ ಹಿಂಪಡೆದುದ್ದಕ್ಕೆ ಧನ್ಯವಾದಗಳು. ರೈತರ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಕಾರ್ಯ ನಿರ್ವಹಿಸಲಿದೆ ಎಂದು ನಾನು ನಂಬಿದ್ದೇನೆ," ಎಂದು ಹೇಳಿದ್ದಾರೆ.
(ಒನ್ಇಂಡಿಯಾ ಸುದ್ದಿ)