ಬಹುಕೋಟಿ ಯೆಸ್ ಬ್ಯಾಂಕ್ ಹಗರಣದಲ್ಲಿ ''2G'' ನೀರಾ ಹೆಸರು, ಸಮನ್ಸ್
ನವದೆಹಲಿ, ಅಕ್ಟೋಬರ್ 19: 2ಜಿ ಹಗರಣದಲ್ಲಿ ಭಾಗಿ, ಡೀಲ್ ಕುದುರಿಸುವುದರಲ್ಲಿ ಎತ್ತಿದ ಕೈ ಎನಿಸಿಕೊಂಡಿದ್ದ ಉದ್ಯಮಿ ನೀರಾ ರಾಡಿಯಾ ಹೆಸರು ಒಂದು ದಶಕದ ಬಳಿಕ ಮತ್ತೊಮ್ಮೆ ಕೇಳಿ ಬಂದಿದೆ. ಯೆಸ್ ಬ್ಯಾಂಕ್ ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗದಿಂದ ತನಿಖೆ ಜಾರಿಯಲ್ಲಿದ್ದು, ನೀರಾ ರಾಡಿಯಾಗೆ ಇಂದು ಸಮನ್ಸ್ ಕಳಿಸಲಾಗಿದೆ. ನೀರಾ ಹಾಗೂ ಅವರ ತಂಗಿ, ನಯತಿ ಹೆಲ್ತ್ ಕೇರ್ ಹಾಗೂ ರಿಸರ್ಚ್ ಎನ್ ಸಿ ಆರ್ ಪ್ರೈ ಲಿಮಿಟೆಡ್ ಸಂಸ್ಥೆ ಅಧಿಕಾರಿಗಳಿಗೆ ಸಮನ್ಸ್ ತಲುಪಿಸಲಾಗಿದೆ.
ಯೆಸ್ ಬ್ಯಾಂಕ್ ನಿಂದ ಒಂದು ಯೋಜನೆಗೆಂದು ಸಾಲ ಪಡೆದು ಮತ್ತೊಂದು ಯೋಜನೆಯಲ್ಲಿ ಹಣ ತೊಡಗಿಸಿ, ಅವ್ಯವಹಾರ ಮಾಡಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಮನ್ಸ್ ಜಾರಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರಾ ಹಾಗೂ ಇತರರು ತನಿಖೆ, ವಿಚಾರಣೆ ಎದುರಿಸಬೇಕಾಗಿದೆ.
ನೀರಾ ರಾಡಿಯಾ ಎಂಬ ಅನಂತ ಶಕ್ತಿಯ ರತುನ
300 ಕೋಟಿ ರು ಹಗರಣ: ಯತೀಶ್ ವಹಾಲ್, ಸತೀಶ್ ಕುಮಾರ್ ನರುಲಾ, ರಾಹುಲ್ ಸಿಂಗ್ ಯಾದವ್ ಎಂಬುವರನ್ನು ದೆಹಲಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಇವರಿಂದ ಈ ಹಗರಣ ಬೆಳಕಿಗೆ ಬಂದಿದೆ. ಆರ್ಥೋಪೆಡಿಕ್ ಸರ್ಜನ್ ರಾಜೀವ್ ಕುಮಾರ್ ಶರ್ಮ ಎಂಬುವರು ನಾರಾಯಣಿ ಇನ್ವೆಸ್ಟ್ ಮೆಂಟ್ ಪ್ರೈ ಲಿ ಹೋಲ್ಡಿಂಗ್ಸ್ ಎಂಬ ನಯತಿ ಹೆಲ್ತ್ ಕೇರ್ ಅಂಗ ಸಂಸ್ಥೆ ವಿರುದ್ಧ ದೂರು ನೀಡಿದ್ದರು. ನೀರಾ ರಾಡಿಯಾ, ನೀರಾ ತಂಗಿ ಕರುಣಾ ಮೆನನ್, ನರುಲಾ, ವಹಾಲ್ ಹಾಗೂ ಇತರರು ಈ ಸಂಸ್ಥೆ ಪ್ರವರ್ತಕರಾಗಿದ್ದಾರೆ.
''ಗುರುಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿದ್ದ ಈ ಸಂಸ್ಥೆಯಿಂದ ನನಗೆ ಶೇ 49ರಷ್ಟು ಪಾಲು ಸಿಗಬೇಕಿತ್ತು. 30 ಲಕ್ಷ ರು ಪ್ರತಿ ತಿಂಗಳ ಸಂಬಳ ಎಂದು ಗೊತ್ತು ಮಾಡಲಾಗಿತ್ತು. ಆದರೆ, ಶೇ 51ರಷ್ಟು ಪಾಲು ಹೊಂದಿದ್ದ ಇತರೆ ಪ್ರವರ್ತಕರು ಇಲ್ಲಿ ಪಡೆದ ಭಾರಿ ಮೊತ್ತದ ಷೇರುಗಳನ್ನು ನಾರಾಯಣಿ ಸಂಸ್ಥೆಗೆ 99 ಕೋಟಿ ಗೆ ಮಾರಾಟ ಮಾಡಲಾಗಿದೆ,'" ಎಂದು ರಾಜೀವ್ ಕುಮಾರ್ ಶರ್ಮ ಆರೋಪಿಸಿದ್ದಾರೆ.
ಜೊತೆಗೆ ವೃತ್ತಿಪರ ಶುಲ್ಕವಾದ 15.28 ಕೋಟಿ ರೂಪಾಯಿಗಳನ್ನು ಪಾವತಿಸಿಲ್ಲ ಮತ್ತು ಅವರ ಷೇರುಗಳನ್ನು ಮೋಸದಿಂದ ಶೇಕಡಾ 49 ರಿಂದ 6.3 ಕ್ಕೆ ಇಳಿಸಿದ್ದಾರೆ ಎಂದು ಆರೋಪಿಸಿ, ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಸಮಯದಲ್ಲಿ, ನಾರಾಯಣಿ ಇನ್ವೆಸ್ಟ್ಮೆಂಟ್ ಪ್ರೈವೇಟ್ ಲಿಮಿಟೆಡ್ ಶೇಕಡಾ 93 ರಷ್ಟು ಷೇರುದಾರರನ್ನು ಹೊಂದಿದೆ ಮತ್ತು ರಾಡಿಯಾ ಕಂಪನಿಯ ಮುಖ್ಯ ಪ್ರಚಾರಕರಾಗಿದ್ದಾರೆ ಎಂಬುದು ತಿಳಿದು ಬಂದಿದೆ.
ಯೆಸ್ ಬ್ಯಾಂಕ್ ನಿಂದ ಆಸ್ಪತ್ರೆ ನಿರ್ಮಾಣಕ್ಕಾಗಿ 312 ಕೋಟಿ ರು ಸಾಲ ಅಪ್ಡೆಯಲಾಗಿದೆ ಆದರೆ, ಸಾಲದ ಮೊತ್ತವನ್ನು ಬೇರೆ ಯೋಜನೆಗೆ ದುರ್ಬಳಕೆ ಮಾಡಲಾಗಿದೆ, ಅಹ್ಲುವಾಲಿಯಾ ಕನ್ಸ್ ಸ್ಟಕ್ಷನ್ ಸಂಸ್ಥೆಯ ಬ್ಯಾಂಕ್ ಖಾತೆಗೆ 208 ಕೋಟಿ ಜಮೆಯಾಗಿದೆ ಎಂದು ಆರೋಪಿಸಲಾಗಿದೆ. ವಹಾಲ್ ಹಾಗೂ ನರುಲಾ ಅವರ ಅನುಮತಿಯಿಂದ ಹಣ ವರ್ಗಾವಣೆಯಾಗಿರುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ. ಈ ಬಗ್ಗೆ ವಿಚಾರಣೆ ನಡೆಸಲು ಆರೋಪಿಗಳಿಗೆ ದೆಹಲಿ ಪೊಲೀಸರು ಸಮನ್ಸ್ ನೀಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ(EOW) ಆರ್ ಕೆ ಸಿಂಗ್ ಹೇಳಿದರು.
ಇನ್ನೊಂದೆಡೆ ಯೆಸ್ ಬ್ಯಾಂಕ್ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ, ಸಂಸ್ಥಾಪಕ ರಾಣಾ ಕಪೂರ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಜಾಮೀನು ಅರ್ಜಿ ವಿಚಾರಣೆ ಹಂತದಲ್ಲಿದೆ.
ನೀರಾ ರಾಡಿಯಾ: ಲಂಡನ್ ಮೂಲದ ಆರ್ಥಿಕ ಸಲಹೆಗಾರ ಜನಕ್ ರಾಡಿಯಾ ಪತ್ನಿ ನೀರಾಗೆ ಈಗ ಅರವತ್ತು ದಾಟಿದೆ, ಆದರೆ, ಕಾರ್ಪೊರೇಟ್ ಲಾಬಿಗಾರ್ತಿ, ಉದ್ಯಮಿಯಾಗಿ ನೀರಾ ತೋರಿದ ನೈಪುಣ್ಯತೆ ಇಂದಿಗೂ ಚರ್ಚೆಯಲ್ಲಿರುವಂತೆ ಮಾಡಿದೆ. ಸಿಂಗಪುರ ಏರ್ ಲೈನ್ ಅನ್ನು ಭಾರತಕ್ಕೆ ತರಲು ಸಹಾರಾ ಏರ್ ಲೈನ್ಸ್ ಯತ್ನಿಸುತ್ತಿದ್ದ ಕಾಲದಲ್ಲಿ ಬರೀ ಕನ್ಸಲ್ಟೆಂಟ್ ಆಗಿದ್ದ ಈಕೆ ಲಾಬಿಕೋರಳಾಗಿ ಬೆಳೆದು ನಂತರ ನೇರ ಅಂದಿನ ನಾಗರಿಕ ವಿಮಾನಯಾನ ಸಚಿವರ ಜೊತೆ ಸಂಪರ್ಕ ಬೆಳೆಸಿದರು. ದಿವಂಗತ ಅನಂತ್ ಕುಮಾರ್ ಹಾಗೂ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಪರಿಚಯವಾದ ಬಳಿಕ ನೀರಾ ಹಿಂತಿರುಗಿ ನೋಡಲಿಲ್ಲ.
2000 ಇಸವಿಯಲ್ಲಿ ಇಡೀ ವಿಮಾನಯಾನ ಉದ್ಯಮವೇ ಆಕೆಯತ್ತ ಬೆರಗು ನೋಟದಿಂದ ನೋಡುವಂತಾಯಿತು. ಕೇವಲ 1 ಲಕ್ಷ ಬಂಡವಾಳದೊಂದಿಗೆ ಖಾಸಗಿ ಏರ್ ಲೈನ್ ಆರಂಭಿಸುವುದಾಗಿ ಘೋಷಿಸಿದ ನೀರಾ, NOC ಪಡೆದು ಕ್ರೌನ್ ಎಕ್ಸ್ ಪ್ರೆಸ್ ಎಂಬ ಹೆಸರಿನಲ್ಲಿ ದೇಶಿ ಖಾಸಗಿ ವಿಮಾನಯಾನ ಆರಂಭಿಸುವ ಕನಸು ಕಂಡಿದ್ದರು. ವಿಮಾನ ಮೇಲಕ್ಕೇರದಿದ್ದರೂ 100 ಕೋಟಿ ರು ಗೂ ಅಧಿಕ ಎಫ್ ಡಿ ಐ ಹಣ ಮುಂದಿನ ಯೋಜನೆಗಳಿಗೆ ಬಂಡವಾಳವಾಯಿತು. ಮುಂದಿನ ವರ್ಷವೇ ಟಾಟಾ ಸಂಸ್ಥೆಗೆ ಪ್ರಚಾರ ನೀಡಲು ವೈಷ್ಣವಿ ಕಾರ್ಪೊರೇಟ್ ಕಮ್ಯೂನಿಕೇಷನ್ ಹುಟ್ಟು ಹಾಕಿ, ಅಂಬಾನಿ ಸೇರಿದಂತೆ ಹಲವು ಪ್ರಮುಖ ಉದ್ಯಮಿಗಳ ಪಿಆರ್ ಆಗಿ ಬೆಳೆದರು.
2G ತರಂಗಾಂತರ ಹರಾಜು ಹಗರಣದಲ್ಲಿ ನೀರಾ ಹೆಸರು ಕೇಳಿಬಂದ ನಂತರ ಹತ್ತು ಹಲವು ಗಣ್ಯರೊಡನೆ ಆಕೆ ನಡೆಸಿದ ಲಾಬಿಯ ಧ್ವನಿಮುದ್ರಿಕೆಗಳು ಹೊರ ಬಿದ್ದವು.
ರಾಡಿಯಾ ಟೇಪ್ಸ್ ನಿಂದ ಆಂತರಿಕ ವಿಷಯಗಳು ಹೊರ ಬರಬಹುದು ಅದು ಸಾರ್ವಜನಿಕವಾಗಿ ಬಿತ್ತರಿಸುವುದು ತರವಲ್ಲ ಎಂದು ರತನ್ ಟಾಟಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಕೊನೆಗೂ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಡಿಎಂಕೆ ನಾಯಕ ಎ.ರಾಜಾ ಅವರ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಯಿತು. 1.76 ಲಕ್ಷ ಕೋಟಿ ರು ಹಗರಣದ ರುವಾರಿಯಾದ ರಾಜಾರಿಗೆ ಹಗರಣದಲ್ಲಿ ಬಳಕೆಯಾದ ಮೊತ್ತಕ್ಕೆ ಎಷ್ಟು ಸೊನ್ನೆಯೊಂಬುದು ಇನ್ನು ತಿಳಿದಿಲ್ಲ.
ಟೆಲಿಕಾಂ, ಏವಿಯೇಷನ್, ಪವರ್ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಆಕೆಯ ಸಂಸ್ಥೆ ಕಾಲಿಟ್ಟ ಪರಿಸರದಲ್ಲಿ ಹಣದ ಹೊಳೆ ಹರಿದಾಡುತ್ತಿರುತ್ತದೆ.