ಚಾಂಡಾಲನಲ್ಲೂ ಈಶ್ವರನನ್ನು ಕಂಡಿದ್ದರು ಆದಿ ಶಂಕರಾಚಾರ್ಯರು!
ಜಗದ್ಗುರು ಆದಿ ಶಂಕರಚಾರ್ಯರು! ಈ ಹೆಸರನ್ನು ಕೇಳಿದರೆ, ಭಕ್ತಿ, ಗೌರವ, ಆಶ್ಚರ್ಯ, ಪ್ರೀತಿ ಎಲ್ಲಾ ಭಾವಗಳೂ ಒಮ್ಮೆಲೇ ಮೂಡುತ್ತದೆ. ಅದಕ್ಕೆ ಕಾರಣ ಶಂಕರರು ಅಂದು ಅವತರಿಸದ್ದಿದ್ದರೆ ಇಂದು ಭಾರತ ಭಾರತವಾಗಿ ಉಳಿಯುತ್ತಿರಲಿಲ್ಲ. ಕೇವಲ 32 ವರ್ಷ ಭೂಮಿ ಮೇಲೆ ಕಾಣಿಸಿಕೊಂಡ ಆ ಮಹಾಪುರುಷ ಸನಾತನ ಧರ್ಮದ ಉಳಿಗಾಗಿ ಮಾಡಿದ ಕೆಲಸಗಳು, ಭಾರತದುದ್ದಕ್ಕೂ ಮಾಡಿದ ಪಾದಯಾತ್ರೆಗಳು, ಬರೆದ ಭಾಷ್ಯಗಳು, ಮೀಮಾಂಸೆಗಳು, ಮಾಡಿದ ಚರ್ಚೆಗಳು, ಪ್ರತಿಪಾದಿಸಿದ ಸಿದ್ಧಾಂತಗಳು, ಇವನ್ನೆಲ್ಲಾ ಪಟ್ಟಿ ಮಾಡಲು ಈ ಲೇಖನ ಸಾಕಾಗುವುದಿಲ್ಲ.
ಹೀಗೆನ್ನುವುದು ಅತಿಶಯೋಕ್ತಿ ಆದರೂ, ಅದು ಸತ್ಯ. ಜೊತೆಗೆ ಈ ಲೇಖನದ ಉದ್ದೇಶ ಅದನ್ನು ಪಟ್ಟಿ ಮಾಡುವುದಲ್ಲ, ಬದಲಿಗೆ ಶಂಕರರ ಜೀವನದಲ್ಲಿ ನಡೆದ ಕೆಲವು ಪ್ರಸಂಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದು. ಆ ಪ್ರಸಂಗಗಳು ನಿಮಗೂ ಗೊತ್ತಿರಬಹುದು. ಆದರೆ ಅವುಗಳನ್ನು ನಾನು ಗ್ರಹಿಸಿದ ರೀತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ದೇವರಲ್ಲಿ ನಂಬಿಕೆಯಿದೆಯೆ? ಎಲ್ಲಿದ್ದಾನೆ, ಯಾವ ಸ್ವರೂಪದಲ್ಲಿದ್ದಾನೆ?
ಶಂಕರರ ತಾಯಿ ಆರ್ಯಾಂಬೆಗೆ ಮಗನ ಮೇಲೆ ಮೋಹ. ಮಗನಿಗೆ ಸನ್ಯಾಸದೆಡೆಗೆ ಒಲವು. ಶಂಕರರು ಒಮ್ಮೆ ನದಿಯಲ್ಲಿ ಇಳಿದು ಸ್ನಾನ ಮಾಡುತ್ತಿರುವಾಗ, "ತಾಯಿ, ನಾನು ಸನ್ಯಾಸ ಸ್ವೀಕರಿಸಲು ಅಪ್ಪಣೆ ಕೊಡು" ಎಂದು ಬೇಡುತ್ತಾರೆ. ಆದರೆ ತಾಯಿ ಆರ್ಯಾಂಬೆ ಒಪ್ಪಿಗೆ ಕೊಡುವುದಿಲ್ಲ. ಆಗ ಶಂಕರರು, "ನನ್ನ ಕಾಲನ್ನು ಮೊಸಳೆ ಹಿಡಿದುಕೊಂಡಿದೆ. ನಾನು ಸನ್ಯಾಸ ಸ್ವೀಕರಿಸಲು ನೀನು ಅಪ್ಪಣೆ ಕೊಟ್ಟರೆ ಮಾತ್ರ ಈ ಮೊಸಳೆ ನನ್ನನ್ನು ಬಿಡುವುದು. ಇಲ್ಲದೆ ಹೋದರೆ ನನ್ನ ತಿಂದು ಬಿಡುತ್ತದೆ" ಎನ್ನುತ್ತಾರೆ.
ಮಗನನ್ನು ಮೊಸಳೆ ತಿಂದು ಸಾಯಿಸುವುದಕ್ಕಿಂತ, ಅವನು ಸನ್ಯಾಸಿಯಾಗಿ ಜೀವಂತವಾಗಿ ಇದ್ದರೆ ಸಾಕು ಎಂದು ಆರ್ಯಾಂಬೆ ಶಂಕರರಿಗೆ ಸನ್ಯಾಸ ಸ್ವೀಕರಿಸಲು ಅಪ್ಪಣೆ ಕೊಡುತ್ತಾರೆ. ಇದು ಬಹುತೇಕ ಎಲ್ಲರಿಗೂ ಗೊತ್ತು. ಆದರೆ ಇಲ್ಲಿ ಬರುವ ಮೊಸಳೆಯನ್ನು 'ಮಾಯೆ'ಗೆ ಹೋಲಿಸಬಹುದು. ಈ 'ಮಾಯೆ' ನಮ್ಮನ್ನು ಸದಾ ಹಿಡಿದಿಟ್ಟುಕೊಂಡಿರುತ್ತದೆ. ತೀವ್ರವಾದ ವೈರಾಗ್ಯವಿದ್ದು, ಸನ್ಯಾಸ ಸ್ವೀಕರಿಸಬೇಕೆಂಬ ಮನಸ್ಥಿತಿ ಇದ್ದವರಿಗೆ ಮಾತ್ರ 'ಮಾಯೆ ಎಂಬ ಮೊಸಳೆ'ಯಿಂದ ಬಿಡಿಸಿಕೊಳ್ಳಲು ಸಾಧ್ಯ ಎಂದು ಈ ಘಟನೆಯಿಂದ ನಾವು ತಿಳಿಯಬಹುದು.
ಒತ್ತಡದ ಬದುಕಿನಲ್ಲಿ ಮನಸ್ಸನ್ನು ಆರೋಗ್ಯವಾಗಿಡುವುದು ಹೇಗೆ?
ಶಂಕರರು ಕಾಶಿಯಲ್ಲಿ ತಂಗಿದ್ದಾಗ ನಡೆದ ಪ್ರಸಂಗ ಕೂಡ ಇಲ್ಲಿ ನೆನಪಿಸಿಕೊಳ್ಳಬೇಕು. ಒಮ್ಮೆ ಶಂಕರರು ಸ್ನಾನ ಮಾಡಿ ನಡೆದುಕೊಂಡು ಹೋಗುತ್ತಿರುತ್ತಾರೆ. ಆಗ ಚಾಂಡಾಲನೊಬ್ಬ ಅಡ್ದ ಬರುತ್ತಾನೆ. ಆಗ ಶಂಕರರು, "ಪಕ್ಕಕ್ಕೆ ಸರಿ. ನಾನು ಮಡಿಯಲ್ಲಿದ್ದೀನಿ. ನಿನ್ನ ಮುಟ್ಟುವಂತಿಲ್ಲ. ಮುಟ್ಟಿದರೆ ಮೈಲಿಗೆ ಆಗುತ್ತೆ" ಎನ್ನುತ್ತಾರೆ. ಆಗ ಆ ವ್ಯಕ್ತಿ, "ಮಡಿ ಅನ್ನೋದು ಆತ್ಮಕ್ಕೋ? ದೇಹಕ್ಕೋ? ಪಕ್ಕಕ್ಕೆ ಸರಿಬೇಕಿರೋದು ಯಾವುದು? ದೇಹವೋ? ಆತ್ಮವೋ?" ಎಂದು ಪ್ರಶ್ನಿಸುತ್ತಾನೆ. ಆಗ ಶಂಕಕರು, "ನೀನು ನಿಜವಾದ ಆತ್ಮಜ್ಞಾನಿ" ಎಂದು ಅವನ ಕಾಲಿಗೆ ನಮಸ್ಕರಿಸುತ್ತಾರೆ.
ಶೃಂಗೇರಿ ಶಾರದಾ ಪೀಠದ ಗುರು ಪರಂಪರೆಯತ್ತ ನೋಟ
ಇಲ್ಲಿ ಕೆಲವರು "ಚಾಂಡಾಲನ ರೂಪದಲ್ಲಿ ಈಶ್ವರನೇ ಬಂದಿದ್ದ. ಅದು ಶಂಕರರಿಗೆ ದಿವ್ಯದೃಷ್ಟಿಯಿಂದ ತಿಳಿಯಿತು. ಹಾಗಾಗಿಯೇ ಶಂಕರರು ಅವನಿಗೆ ನಮಸ್ಕಾರ ಮಾಡಿದ್ದು" ಎಂದು ಕೆಲವರು ಹೇಳುವುದುಂಟು. ಇರಲಿ, ಚಾಂಡಾಲನ ರೂಪದಲ್ಲಿ ಈಶ್ವರನೇ ಬಂದಿದ್ದನೋ ಇಲ್ಲವೋ ಎಂದು ಚರ್ಚಿಸೋದು ಬೇಡ. ಆದರೆ ಈ ಪ್ರಸಂಗವನ್ನು ಮತ್ತೊಂದು ರೀತಿಯಲ್ಲೂ ನೋಡಬಹುದು. ಅದೇನೆಂದರೆ, ಆತ್ಮಜ್ಞಾನ ಕೇವಲ ಒಂದು ಜಾತಿಯವರ ಸ್ವತ್ತಲ್ಲ. ಅದನ್ನು ಪಡೆಯುವುದ್ದಕ್ಕೆ ಎಲ್ಲಾ ಜಾತಿಯವರೂ ಅರ್ಹರು. ಯಾರು ಆತ್ಮಜ್ಞಾನ ಪಡೆದಿರುತ್ತಾನೊ, ಅವನೇ ಈಶ್ವರ ಎಂದು ಕೂಡ ಇದನ್ನು ಅರ್ಥ ಮಾಡಿಕೊಳ್ಳಬಹುದು. ಹಾಗಾಗಿಯೇ ಶಂಕರರು ಆತ ಹುಟ್ಟಿನಿಂದ ಚಾಂಡಾಲನಾದರೂ, ಅವನು ಆತ್ಮಜ್ಞಾನಿಯಾದ್ದರಿಂದ ಅವನಲ್ಲಿ ಈಶ್ವರನ್ನು ಕಂಡು ಅವನಿಗೆ ನಮಸ್ಕರಿಸಿರಬೇಕು.
ಉಪಾಸನೆಯಂತೆ, ಪೂಜೆಯಂತೆ ಕೆಲಸ ಮಾಡಿದಾಗ ಮಾತ್ರ ಒಳ್ಳೆಯ ಫಲ
ಈ ಲೇಖನವನ್ನು ಮುಗಿಸುವ ಮುನ್ನ ಶಂಕರಾಚಾರ್ಯರ ಬಗ್ಗೆ ಸೋದರಿ ನಿವೇದಿತಾ ಹೇಳಿದ ಮಾತನ್ನು ಇಲ್ಲಿ ಉಲ್ಲೇಖಿಸಬೇಕೆನಿಸುತ್ತಿದೆ. ಪಾಶ್ಚಾತ್ಯರಿಗೆ ಶಂಕರಚಾರ್ಯರಂತಹ ಒಬ್ಬ ವ್ಯಕ್ತಿಯನ್ನು ಊಹಿಸಿಕೊಳ್ಳುವುದು ಕೂಡ ಕಷ್ಟ. ನಾವು (ಪಾಶ್ಚಾತ್ಯರು) ಆಸ್ಸಿಸಿಯ ಫ್ರಾನ್ಸಿಸನ ದೈವ ಭಕ್ತಿಯನ್ನು ಅತ್ಯಂತ ಆಶ್ಚರ್ಯ ಸಂತೋಷಗಳಿಂದ ಸ್ಮರಿಸುತ್ತೇವೆ. ಅಬೆಲ್ ರಾಡಲ್'ನ ಬುದ್ಧಿ ಶಕ್ತಿ, ಮಾರ್ಟಿನ್ ಲೂಥರನ ಅಪಾರ ಓಜಸ್ಸು-ಸ್ವಾತಂತ್ರ್ಯಗಳನ್ನೂ, ಇಗ್ನೇಷನ್ ಲೋಯೊನ ರಾಜಕೀಯ ದಕ್ಷತೆಯನ್ನು ಕಲ್ಪಿಸಿಕೊಳ್ಳಬಲ್ಲೆವು. ಆದರೆ ಈ ಎಲ್ಲಾ ಗುಣಗಳು ಒಂದೇ ಕಡೆ ಸಂಘಟಿತವಾಗಿರುವ ವ್ಯಕ್ತಿಯನ್ನು ಯಾರು ತಾನೆ ಊಹಿಸಿಕೊಳ್ಳಬಲ್ಲರು?
ಎಲ್ಲರಿಗೂ ಶಂಕರಜಯಂತಿಯ ಶುಭಾಶಯಗಳು.