ವರ್ಷದ ವ್ಯಕ್ತಿ: ಸಂಸದ ಅನಂತ ಕುಮಾರ್ ಹೆಗಡೆ
ಹೊಸ ವರ್ಷವನ್ನು ಸ್ವಾಗತಿಸಲು ಒನ್ಇಂಡಿಯಾ ಕೂಡಾ ಸಜ್ಜಾಗಿದೆ. ಹಳೆಯ ವರ್ಷದ ಕಹಿ ಘಟನೆಗಳನ್ನು ಮರೆತು ಹೊಸ ಕನಸುಗಳ ಜೊತೆ ಹೊಸ ವರ್ಷಕ್ಕೆ ಕಾಲಿಡಲು ಮುಂದಾಗಿರುವ ನಮ್ಮ ಓದುಗರ ಮುಂದೆ ವರ್ಷದ ವ್ಯಕ್ತಿಗಳನ್ನು ಪರಿಚಯಿಸುತ್ತಿದ್ದೇವೆ.
ಟಿಪ್ಪು ಜಯಂತಿಯನ್ನು ವಿರೋಧಿಸಿ, ಟಿಪ್ಪು ಒಬ್ಬ ಅತ್ಯಾಚಾರಿ ಎಂದು ಗುಡುಗಿದ್ದ ಸಂಸದ ಅನಂತ ಕುಮಾರ್ ಹೆಗಡೆ, ಎಂದಿನಂತೆ ವಿವಾದದ ಮೂಲಕವೇ ಈ ವರ್ಷವೂ ಸುದ್ದಿಯಲ್ಲಿದ್ದರು!
ವಿವಾದಾತ್ಮಕ ಸಂಸದರ ಹೆಸರಿನಲ್ಲಿ ಅನಂತ ಕುಮಾರ್ ಹೆಗಡೆ ಅವರು ಎಂದಿಗೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಸತತ ಐದು ಬಾರಿ ಸಂಸದರಾಗಿ ಆಯ್ಕೆಯಾದ ಅನಂತ ಕುಮಾರ್ ಹೆಗಡೆ ಅವರು ಪ್ರಸ್ತುತ ಕೇಂದ್ರ ಕೌಶಲಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
2016 ರಲ್ಲಿ ವೈದ್ಯರ ಮೇಲೆ ಕೈಮಾಡುವ ಮೂಲಕ ಸುದ್ದಿಯಾಗಿದ್ದ ಅನಂತ್ ಕುಮಾರ್ ಅವರು ಕಟ್ಟರ್ ಹಿಂದುವಾದಿ. ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದ ಅವರು ಸದಾ ಮುಸ್ಲಿಂ ವಿರೋಧಿ ಹೇಳಿಕೆ ನೀಡುತ್ತಲೇ ಅಲ್ಪಸಂಖ್ಯಾತರ ಕೆಂಗಣ್ಣಿಗೂ ಗುರಿಯಾದವರು. ಹಾಗೆಯೇ ಆ ಹೇಳಿಕೆಗಳಿಗೇ ಅವರ ಮತಬ್ಯಾಂಕ್ ಅನ್ನು ಗಟ್ಟಿ ಮಾಡುತ್ತಿರುವುದೂ ಸುಳ್ಳಲ್ಲ. ಹೆಗಡೆಯವರು ಈ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ, ಪತ್ರಿಕೆಗಳಲ್ಲಿ ಹೆಚ್ಚು ಚರ್ಚೆಯಾದವರು, ಸುದ್ದಿಯಾದವರು.
ಅನಂತ ಕುಮಾರ್ ಹೆಗಡೆ ಅವರ ಕುರಿತು ಜಿಲ್ಲೆಯಲ್ಲಿ ಇಂದಿಗೂ ಒಳ್ಳೆಯ ಅಭಿಪ್ರಾಯ ಇರುವುದಲ್ಲದೆ, ಬಿಜೆಪಿಯಲ್ಲೂ ಅವರಿಗೆ ಗೌರವಯುತ ಸ್ಥಾನವಿದೆ. ಅದಕ್ಕೆಂದೇ ಈ ಬಾರಿ ಸೆಪ್ಟೆಂಬರ್ ನಲ್ಲಿ ಸಂಪುಟ ವಿಸ್ತರಣೆಯ ಸಮಯದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಅವರಿಗೂ ಜಾಗ ನೀಡಲಾಗಿದೆ.
ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಉಲ್ಲೇಖಿಸಿರುವ ಕುರಿತು ಪ್ರತಿಕ್ರಿಯಿಸಿದ್ದ ಅವರು, ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ವೇದಿಕೆಯಲ್ಲೇ ಟಿಪ್ಪುವಿನ ಮರ್ಯಾದೆ ಹರಾಜು ಹಾಕುತ್ತೇನೆ ಎಂದು ಬಹಿರಂಗ ಸವಾಲು ಹಾಕಿದ್ದರು.
ಇದಲ್ಲದೆ, ಹೊನ್ನಾವರದಲ್ಲಿ ಪರೇಶ್ ಮೇಸ್ತಾ ಸಾವಿನ ಪ್ರಕರಣದ ನಂತರ ಪ್ರತಿಭಟನೆ, ಗಲಭೆ, ಬಂದ್ ಹಿಂದೆ ಅನಂತ್ ಕುಮಾರ್ ಹೆಗಡೆ ಇದ್ದರು. ರಾಜಕೀಯವಾಗಿ ಕೇಂದ್ರ ಹಾಗೂ ರಾಜ್ಯದಲ್ಲಿ ಪ್ರಭಾವಿ ನಾಯಕರಾಗಿರುವ ಇವರು ವರ್ಷವಿಡಿ ಸುದ್ದಿಯಲ್ಲಿದ್ದರು.