ವರ್ಷದ ವ್ಯಕ್ತಿ: ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ
ಹೊಸ ವರ್ಷವನ್ನು ಸ್ವಾಗತಿಸಲು ಒನ್ಇಂಡಿಯಾ ಕೂಡಾ ಸಜ್ಜಾಗಿದೆ. ಹಳೆಯ ವರ್ಷದ ಕಹಿ ಘಟನೆಗಳನ್ನು ಮರೆತು ಹೊಸ ಕನಸುಗಳ ಜೊತೆ ಹೊಸ ವರ್ಷಕ್ಕೆ ಕಾಲಿಡಲು ಮುಂದಾಗಿರುವ ನಮ್ಮ ಓದುಗರ ಮುಂದೆ ವರ್ಷದ ವ್ಯಕ್ತಿಗಳನ್ನು ಪರಿಚಯಿಸುತ್ತಿದ್ದೇವೆ.
2017ರಲ್ಲಿ ಸುದ್ದಿ ಕೇಂದ್ರದ ಸುತ್ತ ಗಿರಕಿ ಹೊಡೆದವರಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಪ್ರಮುಖರು. ದಕ್ಷ, ಖಡಕ್ ಪೊಲೀಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅದಕ್ಕಿಂತ ಹೆಚ್ಚಾಗಿ ತಮ್ಮ ಮಾನವೀಯ ನಡೆಗಳ ಮೂಲಕವೂ ಚಿಕ್ಕಮಗಳೂರಿನ ಗಡಿಗಳನ್ನು ಮೀರಿ ಕಾಫಿಯ ಘಮಲಿನಂತೆ ರಾಜ್ಯದಾದ್ಯಂತ ಸುದ್ದಿಗೆ ಗ್ರಾಸವಾದವರು.
2016ರ ಜುಲೈನಲ್ಲಿ ಉಡುಪಿಯಿಂದ ಚಿಕ್ಕಮಗಳೂರು ಜಿಲ್ಲಾ ಎಸ್ಪಿಯಾಗಿ ಅಣ್ಣಾಮಲೈ ವರ್ಗವಾದರು. ನಂತರ ನಡೆದ ಘಟನೆಯೊಂದರಲ್ಲಿ ಇಲ್ಲಿನ ಮರಳು ಮಾಫಿಯಾದವರು ಊರ ಜನರೊಂದಿಗೆ ಸೇರಿ ರಸ್ತೆಯನ್ನು ಬ್ಲಾಕ್ ಮಾಡಿ ಪೊಲೀಸರನ್ನೇ ಕೂಡಿಹಾಕಿದ್ದರು. ಆಗ ಸ್ಥಳಕ್ಕೆ ಬಂದ ಅಣ್ಣಾಮಲೈ ಬಹಿರಂಗವಾಗಿ ಅಪರಾಧಿಗಳ ವಿರುದ್ಧ ಗುಡುಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಈ ವಿಡಿಯೋ ನೋಡಿಯೇ ಅರ್ಧ ಕ್ರಿಮಿನಲ್ ಗಳು ಅವತ್ತು ಪತರಗುಟ್ಟಿದ್ದರು.
ನಂತರ ಜೂನಿನಲ್ಲಿ ಬಂಟ್ವಾಳದಲ್ಲಿ ಎಸ್.ಡಿ.ಪಿ.ಐನ ಅಶ್ರಫ್ ಕೊಲೆಯಾದ ಸಂದರ್ಭ ಉಂಟಾದ ಗಲಭೆಯನ್ನು ಹತೋಟಿಗೆ ತರಲು ಸರಕಾರ ಇದೇ ಅಣ್ಣಾಮಲೈರನ್ನು ದಕ್ಷಿಣ ಕನ್ನಡಕ್ಕೆ ಕರೆಸಿಕೊಂಡಿತು. ಹಾಗೆ ಬಂಟ್ವಾಳಕ್ಕೆ ಬಂದ ಅಣ್ಣಾಮಲೈ ರಾತ್ರಿ ಹಗಲು ರಸ್ತೆಯಲ್ಲೇ ಬೀಡುಬಿಟ್ಟು ಗಲಾಟೆ ಹತೋಟಿಗೆ ತಂದು ಜನಮೆಚ್ಚುಗೆ ಗಳಿಸಿದರು.
ನಿರಂತರ ಗಲಭೆಗಳು ದಕ್ಷಿಣ ಕನ್ನಡ ಭಾಗದಲ್ಲಿ ನಡೆಯುತ್ತಿದ್ದಾಗ ಅಣ್ಣಾಮಲೈರನ್ನು ಜಿಲ್ಲೆಯ ಎಸ್ಪಿಯನ್ನಾಗಿ ನೇಮಿಸಬೇಕು ಎಂಬ ಬೇಡಿಕೆಯೂ ಜನರಿಂದ ಬಂದಿತ್ತು. ಅಷ್ಟರಮಟ್ಟಿಗೆ ಅಣ್ಣಾಮಲೈ ಜನರ ಬೆಂಬಲ ಗಿಟ್ಟಿಸಿದ್ದರು.
ಇದೇ ವರ್ಷ ಫೆಬ್ರವರಿಯಲ್ಲಿ ಅಣ್ಣಾಮಲೈ ತಬ್ಬಲಿಯಾಗಲಿದ್ದ ಚಿಕ್ಕಮಗಳೂರಿನ ಯುವತಿಯ ವಿದ್ಯಾಭ್ಯಾಸ ಮತ್ತು ಇತರ ಖರ್ಚುಗಳನ್ನು ಭರಿಸುವ ಅಭಯ ನೀಡಿ ತಮ್ಮ ಮಾನವೀಯ ಮುಖವನ್ನು ತೆರೆದಿಟ್ಟಿದ್ದರು. ಈ ಮೂಲಕ ಖಾಕಿಯಾಚೆಗಿನ ತಮ್ಮ ವ್ಯಕ್ತಿತ್ವದಿಂದ ಜನರ ಮನಸೂರೆಗೊಂಡಿದ್ದರು.
ಡಿಸೆಂಬರ್ 3ರಂದು ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಆಚರಣೆ ನಡೆದಾಗ ಅಹಿತಕರ ಘಟನೆಗಳಾಗದಂತೆ ಅಣ್ಣಾಮಲೈ ತಡೆದಿದ್ದರು. ಜಿಲ್ಲೆಯಲ್ಲಿ ಅಕ್ಷರಶಃ ಪೊಲೀಸ್ ಸರ್ಪಗಾವಲು ಹಾಕಿ ಯಾವುದೇ ಗಲಭೆ, ಗಲಾಟೆಗಳಾಗದಂತೆ ಎಚ್ಚರಿಕೆ ವಹಿಸಿದ್ದರು.
ಹೀಗೆ ಮಿತಭಾಷಿ ಅಣ್ಣಾಮಲೈ ನಿರಂತರ ತಮ್ಮ ಕಾರ್ಯಚಟುವಟಿಕೆಗಳ ಮೂಲಕವೇ ಆಗಾಗ ಹೆಡ್ಲೈನ್ ಗಳನ್ನು ಅಲಂಕರಿಸಿದರು.