ವರ್ಷದ ವ್ಯಕ್ತಿ : ಖಡಕ್ ಮಾತು, ಮೃದು ಮನಸಿನ ಸಿದ್ದರಾಮಯ್ಯ
ಹೊಸ ವರ್ಷವನ್ನು ಸ್ವಾಗತಿಸಲು ಒನ್ಇಂಡಿಯಾ ಕೂಡಾ ಸಜ್ಜಾಗಿದೆ. ಹಳೆಯ ವರ್ಷದ ಕಹಿ ಘಟನೆಗಳನ್ನು ಮರೆತು ಹೊಸ ಕನಸುಗಳ ಜೊತೆ ಹೊಸ ವರ್ಷಕ್ಕೆ ಕಾಲಿಡಲು ಮುಂದಾಗಿರುವ ನಮ್ಮ ಓದುಗರ ಮುಂದೆ ವರ್ಷದ ವ್ಯಕ್ತಿಗಳನ್ನು ಪರಿಚಯಿಸುತ್ತಿದ್ದೇವೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಭೇಟಿ ನೀಡಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಹೆಲಿಪಾಕ್ಟರಿನಲ್ಲಿ ಪಯಣಿಸುತ್ತಿದ್ದ ಸಮಯದಲ್ಲಿ, ಸಿದ್ದರಾಮಯ್ಯನವರಿಗೆ ಗಡದ್ ನಿದ್ದೆ. ಪಕ್ಕದಲ್ಲಿ ತಾವಿದ್ದಿದ್ದೂ ಲಕ್ಷ್ಯವಿರದೆ ನಿದ್ದೆಗೆ ಜಾರಿದ್ದನ್ನು ನೋಡಿ, ಅವರ ಸರಳವಂತಿಕೆಯನ್ನು ಮೆಚ್ಚಿಕೊಂಡರಂತೆ ರಾಹುಲ್!
ಇವರು ಸಿದ್ದರಾಮಯ್ಯ. ವಿರೋಧಿಗಳನ್ನು ಮಾತ್ರವಲ್ಲ ತಮ್ಮ ವಿರುದ್ಧವೇ ಕತ್ತಿ ಮಸೆಯುತ್ತಿರುವ, ಹಿಂಬದಿಯಿಂದ ಚೂರಿ ಹಾಕಲು ಯತ್ನಿಸುತ್ತಿರುವ ಸ್ವಪಕ್ಷದ ಧುರೀಣರನ್ನೇ ಕ್ಯಾರೆ ಅಂದಿಲ್ಲ. ನುಡಿಗಳಲ್ಲಿ ಗಡಸುತನವಿದ್ದರೂ ಮಾತೃ ಹೃದಯದ ಸಿದ್ದರಾಮಯ್ಯನವರು ಕರ್ನಾಟಕ ಕಂಡ ಅಪರೂಪದ ಮುಖ್ಯಮಂತ್ರಿಗಳಲ್ಲಿ ಒಬ್ಬರು.
ಅವರು ಮುಖ್ಯಮಂತ್ರಿಯಾದದ್ದೇ ಒಂದು ರೋಚಕ ಕಥಾನಕ. ಮರ್ಯಾದೆ ಸಿಗದಿದ್ದಾಗ ಜಾತ್ಯತೀತ ಜನತಾದಳ ತೊರೆದು, ಕಾಂಗ್ರೆಸ್ ಸೇರಿಕೊಂಡು, ವಿರೋಧಿಗಳ ನಡುವೆಯೂ ತಮ್ಮ ಪ್ರಭುತ್ವ ಸ್ಥಾಪಿಸಿ, ಕೇಂದ್ರದ ನಾಯಕರ ಮನಸ್ಸು ಗೆದ್ದಿದ್ದು ಮಾತ್ರವಲ್ಲ, ರಾಜ್ಯದ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿಯಾದದ್ದು ನಿಜಕ್ಕೂ ಪ್ರಶಂಸನೀಯ.
ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದ್ದ ಭಾರತೀಯ ಜನತಾ ಪಕ್ಷವನ್ನು 2013ರ ವಿಧಾನಸಭೆ ಚುನಾವಣೆಯಲ್ಲಿ ಧಿಕ್ಕರಿಸಿದ್ದ ಕರ್ನಾಟಕದ ಜನರು, ಸಿದ್ದರಾಮಯ್ಯನವರಲ್ಲಿ ವಿಶ್ವಾಸವಿರಿಸಿ ಅವರನ್ನು ಅಭೂತಪೂರ್ವವಾಗಿ ಆರಿಸಿ ಕಳಿಸಿದರು. ಸಿದ್ದರಾಮಯ್ಯನವರು ಕೂಡ ತಮ್ಮ ಮೇಲಿಟ್ಟಿದ್ದ ವಿಶ್ವಾಸವನ್ನು ಹುಸಿಗೊಳಿಸಿಲ್ಲ.
ತಾವು ಬಡವರ ಮುಖ್ಯಮಂತ್ರಿ ಎಂದೇ ಹೇಳಿಕೊಳ್ಳುವ ಅವರು, ಬಡಬಗ್ಗರಿಗಾಗಿ 'ಅನ್ನ ಭಾಗ್ಯ'ದಿಂದ ಆರಂಭಿಸಿ ಇಪ್ಪತ್ತೆಂಟು 'ಭಾಗ್ಯ'ಗಳನ್ನು ನೀಡಿರುವುದು ಅವರ ಆಡಳಿತ ಹೈಲೈಟ್ ಗಳಲ್ಲಿ ಒಂದು. ಜೆಡಿಎಸ್ ನಲ್ಲಿ ಎರಡು ಬಾರಿ ಉಪಮುಖ್ಯಮಂತ್ರಿಯಾಗಿದ್ದ ಅವರು, 'ಸೋಷಲಿಸ್ಟ್' ಮುಖವಾಡವನ್ನು ಎಂದೂ ಕಳಚಿಲ್ಲ.
ಕನ್ನಡ ಕಾವಲು ಸಮಿತಿಯ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯನವರು ಕನ್ನಡಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಅಲ್ಲದೆ, ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಶೇ.24ರಷ್ಟು ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ವಿನಿಯೋಗಿಸಿದ್ದಾರೆ. ಸಿದ್ದರಾಮಯ್ಯನವರ ಅಡಿಯಲ್ಲಿ ಕರ್ನಾಟಕದಲ್ಲಿ ನಿರುದ್ಯೋಗದ ಪ್ರಮಾಣ ಕೂಡ ಇಳಿದಿದೆ.
ಸಿದ್ದರಾಮಯ್ಯನವರು ಯಾವುದೇ ವಿವಾದದಲ್ಲಿ ಸಿಲುಕಿಲ್ಲ ಅಂತಲ್ಲ. ಸ್ಟೀಲ್ ಬ್ರಿಜ್ ನಿರ್ಮಾಣ, ಉಬ್ಲೋ ವಾಚ್ ಹಗರಣ, ಐಎಎಸ್ ಅಧಿಕಾರಿ ಡಿಕೆ ರವಿ ಸಾವು, ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ, ರೈತರ ಆತ್ಮಹತ್ಯೆಗಳು, ಟಿಪ್ಪು ಸುಲ್ತಾನ್ ಜಯಂತಿ ವಿವಾದ, ಭ್ರಷ್ಟಾಚಾರದಲ್ಲಿ ಆರೋಪಿ ಸ್ಥಾನದಲ್ಲಿರುವ ಕೆಲ ಶಾಸಕರನ್ನು ಬೆಂಬಲಿಸಿದ್ದು... ಹೀಗೆ ಹಲವಾರು ವಿವಾದಗಳು ಸಿದ್ದರಾಮಯ್ಯನವರ ನಿದ್ದೆ ಕೆಡಿಸಿವೆ. ಆದರೆ, ಅವೆಲ್ಲವನ್ನೂ ಮೆಟ್ಟಿ ಅವರು ಮುಂದೆ ಸಾಗಿದ್ದಾರೆ.
ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯನ್ನು, ಉತ್ತರ ಪ್ರದೇಶದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ನಂತರ ಎದ್ದ ಮೋದಿ ಅಲೆಯ ನಡುವೆಯೂ ಗೆದ್ದು ತೋರಿಸಿರುವುದು ಸಿದ್ದರಾಮಯ್ಯನವರ ಹೆಗ್ಗಳಿಕೆಗಳಲ್ಲಿ ಒಂದು. ಮೂಢನಂಬಿಕೆ ವಿರುದ್ಧ ಕಾಯ್ದೆ ತಂದಿರುವುದು ಕೂಡ ಸಿದ್ದರಾಮಯ್ಯ ಟೋಪಿದೆ ಸಿಕ್ಕಿಸಿದ ಮತ್ತೊಂದು ಗರಿ.
ಇಷ್ಟೆಲ್ಲ ಓದಿದ ಮೇಲೆ ಜನಾನುರಾಗಿ, ಬಡವರ ಬಂಧುವಾಗಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 'ವರ್ಷದ ವ್ಯಕ್ತಿ 2017' ಪ್ರಶಸ್ತಿಗೆ ಅರ್ಹರಾ? ಎಂಬುದನ್ನು ನಿರ್ಧರಿಸಬೇಕಾದವರು ನಮ್ಮ ಆತ್ಮೀಯ ಓದುಗರು.