ನ್ಯೂಸ್ ನೇಷನ್ ಸಮೀಕ್ಷೆ : ಕರ್ನಾಟಕದಲ್ಲಿ ಮೋದಿ ಅಲೆಯ ಮೇಲೆ ಬಿಜೆಪಿ ಸವಾರಿ?
Recommended Video
ಬೆಂಗಳೂರು, ಮಾರ್ಚ್ 18 : ಲೋಕಸಭೆ ಚುನಾವಣೆ 2019ರಲ್ಲಿ ಯಾವ ಪಕ್ಷ ಭಾರತದ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂಬುದು ಮೇ 23ರಂದು, ಗುರುವಾರ ತಿಳಿಯಲಿದೆ. ಆದರೆ, 'ಮೋದಿ ಅಲೆ'ಯ ಮೇಲೆ ತೇಲಿತೇಲಿ ಭಾರತೀಯ ಜನತಾ ಪಕ್ಷ ಮತ್ತೊಮ್ಮೆ ಅಧಿಕಾರ ಸ್ಥಾಪಿಸಲಿದೆ ಎಂದು ನ್ಯೂಸ್ ನೇಷನ್ ಸಮೀಕ್ಷೆ ತಿಳಿಸಿದೆ.
ಭಾರತೀಯ ಜನತಾ ಪಕ್ಷ 543 ಕ್ಷೇತ್ರಗಳಲ್ಲಿ 270 ಸೀಟುಗಳನ್ನು ಗೆದ್ದು ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆ ತಿಳಿಸಿದ್ದು, ಕಾಂಗ್ರೆಸ್ ತನ್ನ ಸಹ ಪಕ್ಷಗಳೊಂದಿಗೆ ಸೇರಿಕೊಂಡು 134 ಸೀಟುಗಳನ್ನು ಮಾತ್ರ ಗೆಲ್ಲಲಿದೆ. ಇನ್ನು ಉಳಿದ ಸೀಟುಗಳು ಇತರ ಪಕ್ಷಗಳ ಪಾಲಾಗಲಿವೆ. ಲೋಕಸಭೆಯಲ್ಲಿ ಬಹುಮತಕ್ಕೆ ಬೇಕಿರುವುದು 272 ಸೀಟು.
ಇದು ಇಡೀ ದೇಶದ ಕಥೆಯಾದರೆ, ಕರ್ನಾಟಕದಲ್ಲಿ ಯಾವ ಪಕ್ಷ ಮೇಲುಗೈ ಸಾಧಿಸಲಿದೆ ಎಂದು ಕನ್ನಡಿಗರು ಮತ್ತು ಕರ್ನಾಟಕದ ಜನರು ಕುತೂಹಲದಿಂದ ಇಲ್ಲಿನ ರಾಜಕೀಯದತ್ತ ಕಣ್ಣು ಆಡಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 17 ಸೀಟು ಗೆದ್ದು ಮೇಲುಗೈ ಸಾಧಿಸಿದ್ದರೆ, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸೀಟುಗಳನ್ನು ಗೆದ್ದಿದ್ದವು.
ಏರ್ ಸ್ಟ್ರೈಕ್ ನಂತರ ಉತ್ತರ ಪ್ರದೇಶದಲ್ಲಿ ಬದಲಾಗಲಿದೆಯೆ ಬಿಜೆಪಿ ಲಕ್ಕು?
ಈ ಬಾರಿಯೂ ಇದೇ ಫಲಿತಾಂಶ ಮರುಕಳಿಸಲಿದೆಯಾ? ಕಳೆದೈದು ವರ್ಷಗಳಲ್ಲಿ ಕರ್ನಾಟಕದಲ್ಲಿ ಏನೇನು ಲೆಕ್ಕಾಚಾರಗಳು ಬದಲಾಗಿವೆ? ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದಾಗಿ ಅಥವಾ ಹೊಂದಾಣಿಕೆ ಇಲ್ಲದಿರುವುದರಿಂದ ಏನಾದರೂ ವ್ಯತ್ಯಾಸವಾಗಲಿದೆಯಾ? ಯಡಿಯೂರಪ್ಪನವರನ್ನೇ ನೆಚ್ಚಿಕೊಂಡಿರುವ ಬಿಜೆಪಿ ಎಷ್ಟು ಸೀಟು ತನ್ನ ಬುಟ್ಟಿಗೆ ಹಾಕಿಕೊಳ್ಳಲಿದೆ?
ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸಲಿದೆ?
ಈ ಹಲವಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮುನ್ನ, ನ್ಯೂಸ್ ನೇಷನ್ ನಡೆಸಿರುವ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಯಾವ ಪಕ್ಷಗಳಿಗೆ ಎಷ್ಟು ಸೀಟು ಸಿಗಲಿದೆ ಎಂಬುದನ್ನು ನೋಡೋಣ. ಕರ್ನಾಟಕದಲ್ಲಿ ಏಪ್ರಿಲ್ 18 ಮತ್ತು ಏಪ್ರಿಲ್ 23ರಂದು ಎರಡು ಹಂತದ ಮತದಾನ ನಡೆಯಲಿದ್ದು, ಒಟ್ಟು ಇರುವ 28 ಕ್ಷೇತ್ರಗಳಲ್ಲಿ, ಯಡಿಯೂರಪ್ಪ ಮುಂದಾಳತ್ವದ ಭಾರತೀಯ ಜನತಾ ಪಕ್ಷ 15 ಸೀಟು ಗೆಲ್ಲಬಹುದು ಎಂದು ಸಮೀಕ್ಷೆ ಅಂದಾಜು ಮಾಡಿದೆ. ಉಳಿದ 13 ಸೀಟುಗಳು ಮೈತ್ರಿಕೂಟದ ಪಾಲಾಗಲಿವೆ ಎಂದು ಹೇಳಿದೆ. ಇದರರ್ಥ ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಕೆಲ ಖ್ಯಾತನಾಮರು ಗೆಲ್ಲುವುದಿಲ್ಲವೆ?
ನ್ಯೂಸ್ ನೇಷನ್ ಸಮೀಕ್ಷೆ: ಎನ್ಡಿಎ ಜನಪ್ರಿಯತೆ ಕುಸಿತ, ಮೋದಿ ಜನಪ್ರಿಯತೆ ಏರಿಕೆ!
ಟಿಕೆಟ್ ಹಂಚಿಕೆ : ಕಾಂಗ್ರೆಸ್-ಜೆಡಿಎಸ್ ಗುದ್ದಾಟ
ಭಾರತೀಯ ಜನತಾ ಪಕ್ಷವನ್ನು ಬದಿಗಿಟ್ಟು, ಮೈತ್ರಿಕೂಟದ ಬಳಿಗೆ ಬರುವುದಾದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್ 20 ಕ್ಷೇತ್ರ ಮತ್ತು ಜಾತ್ಯತೀತ ಜನತಾ ದಳ 8 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಒಡಂಬಡಿಕೆ ಮಾಡಿಕೊಂಡಿವೆ. ಕಾಂಗ್ರೆಸ್ಸಿನಿಂದ 8 ಸೀಟು ಗಿಟ್ಟಿಸಿಕೊಳ್ಳಲು ಜೆಡಿಎಸ್ ಹರಸಾಹಸ ಮಾಡಬೇಕಾಯಿತು. ಸ್ಪರ್ಧಿಸುತ್ತಿರುವ 8 ಸೀಟುಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಇಬ್ಬರು ಮೊಮ್ಮಕ್ಕಳು ಕ್ರಮವಾಗಿ ಮಂಡ್ಯ ಮತ್ತು ಹಾಸನದಿಂದ ಸ್ಪರ್ಧೆಗಿಳಿಸಿದ್ದಾರೆ. ದೇವೇಗೌಡರು ಎಲ್ಲಿಂದ ಸ್ಪರ್ಧಿಸುತ್ತಾರೆ? ಸ್ಪರ್ಧಿಸುತ್ತಾರಾ ಇಲ್ಲವಾ? ಎಂಬುದು ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆ.
22 ಸೀಟು ಗೆಲ್ಲುವ ವಿಶ್ವಾಸದಲ್ಲಿ ಯಡಿಯೂರಪ್ಪ
ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ತನ್ನ ಅಧಿಪತ್ಯ ಸ್ಥಾಪಿಸಬೇಕಿದ್ದರೆ ಕರ್ನಾಟಕದಲ್ಲಿ ಹೆಚ್ಚು ಸೀಟುಗಳನ್ನು ಗೆಲ್ಲಲೇಬೇಕಾಗಿರುವುದು ಬಿಜೆಪಿಗೆ ಅನಿವಾರ್ಯವಾಗಿದೆ. ಈ ಕಾರಣದಿಂದಾಗಿ, ಯಡಿಯೂರಪ್ಪನವರು ಮೂರ್ನಾಲ್ಕು ಬಾರಿ ಆಪರೇಷನ್ ಕಮಲದ ಮೂಲಕ ಮೈತ್ರಿ ಸರಕಾರವನ್ನು ಕೆಡವಲು ಹೋಗಿ ಮಣ್ಣು ತಿಂದಿದ್ದಿದ್ದರೂ ಬಿಜೆಪಿ ಹೈಕಮಾಂಡ್ ಸಹಿಸಿಕೊಂಡು, ಮತ್ತೆ ಯಡಿಯೂರಪ್ಪನವರನ್ನೇ ನೆಚ್ಚಿಕೊಂಡಿದೆ. ಕಳೆದ ಬಾರಿ ಯಡಿಯೂರಪ್ಪನವರು 17 ಸೀಟು ಗೆಲ್ಲಿಸಿಕೊಟ್ಟಿದ್ದರೆ, ಅದರ ಹಿಂದಿನ ಚುನಾವಣೆಯಲ್ಲಿ 19 ಸೀಟು ಗೆಲ್ಲಿಸಿಕೊಟ್ಟಿದ್ದರು. ಈ ಬಾರಿಯಂತೂ ಯಡಿಯೂರಪ್ಪನವರು 22 ಸೀಟು ಗೆಲ್ಲಿಸಿಕೊಡುವುದಾಗಿ ಪ್ರಮಾಣ ಮಾಡಿದ್ದಾರೆ.
ಟೈಮ್ಸ್ ಆನ್ಲೈನ್ ಸಮೀಕ್ಷೆ: ಮುಂದೆಯೂ ಮೋದಿ ಸರ್ಕಾರ ಬರೋದು ಪಕ್ಕಾ
'ಮೋದಿ ಅಲೆ' ಚಮತ್ಕಾರ ಮಾಡುವುದಾ?
ಇಷ್ಟೆಲ್ಲಾ ಲೆಕ್ಕಾಚಾರಗಳು ನಡೆದಿರುವ ಸಮಯದಲ್ಲಿ, ಭಾರತೀಯ ವಾಯು ಸೇನೆಯ ಏರ್ ಸ್ಟ್ರೈಕ್ ಕರ್ನಾಟಕದಲ್ಲಿ ಬಿಜೆಪಿ ಅತೀಹೆಚ್ಚು ಗೆಲ್ಲಲು ಸಹಾಯ ಮಾಡಲಿದೆ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದರು. ಅವರು ಹಾಗೆ ಹೇಳಿದ್ದಕ್ಕೆ ಕಾರಣಗಳೇನೇ ಇದ್ದರೂ, ಅವರೇನೇ ಸ್ಪಷ್ಟೀಕರಣ ನೀಡಿದ್ದರೂ, ನೀಡಬಾರದ ಹೇಳಿಕೆಯನ್ನು ಅವರು ನೀಡಿದ್ದರು. ಆದರೆ, ಮತ್ತೊಂದು ಸಮೀಕ್ಷೆಯ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಏರ್ ಸ್ಟ್ರೈಕ್ ನಂತರ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಜನಪ್ರಿಯತೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ ಎನ್ನುವುದು. ಇದು ಕರ್ನಾಟಕದಲ್ಲಿಯೂ ಅನ್ವಯವಾಗುತ್ತದಾ? ಕಳೆದ ಬಾರಿಯಂತೆ ಕರ್ನಾಟಕದಲ್ಲಿ ಕೂಡ 'ಮೋದಿ ಅಲೆ' ಚಮತ್ಕಾರ ಮಾಡುವುದಾ? ಕಾಲವೇ ಉತ್ತರಿಸಲಿದೆ.
ಮೈತ್ರಿಕೂಟದಲ್ಲಿ ಹೊಂದಾಣಿಕೆಯ ಕೊರತೆ
ಈ ನಡುವೆ ಮೈತ್ರಿಕೂಟದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸೀಟು ಕಚ್ಚಾಟಗಳು, ಕ್ಷೇತ್ರಗಳಲ್ಲಿ ಹೊಂದಾಣಿಕೆ ಇಲ್ಲದಿರುವುದು, ಒಬ್ಬರು ಇನ್ನೊಬ್ಬರಿಗೆ ಬೆಂಬಲವಾಗಿ ನಿಲ್ಲುವುದಿಲ್ಲ ಎಂದು ಬ್ಲಾಕ್ ಮೇಲ್ ಮಾಡುತ್ತಿರುವುದು (ಮಂಡ್ಯ ಮತ್ತು ಮೈಸೂರು) ಮೈತ್ರಿ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ. ಉತ್ತರ ಕನ್ನಡ, ಮೈಸೂರು, ತುಮಕೂರು, ಚಿಕ್ಕಬಳ್ಳಾಪುರ ಮುಂತಾದೆಡೆಗಳಲ್ಲಿ ಇನ್ನೂ ಹೊಂದಾಣಿಕೆ ಕಂಡುಬಂದಿಲ್ಲ. ಇದು ಭಾರತೀಯ ಜನತಾ ಪಕ್ಷಕ್ಕೆ ವರವಾಗಿ ಪರಿಣಮಿಸುವುದಾ? ಇದನ್ನೇ ಯಡಿಯೂರಪ್ಪನವರೂ ನೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಕಲಹದಿಂದಾಗಿ ಬಿಜೆಪಿ ಲಾಭ ಗಳಿಸಲಿದೆ ಎಂದು ಇತ್ತೀಚೆಗಷ್ಟೇ ಅವರು ಹೇಳಿದ್ದಾರೆ. ಅಲ್ಲದೆ, ಒಂದು ವೇಳೆ 20ಕ್ಕೂ ಹೆಚ್ಚು ಸೀಟು ಗೆದ್ದರೆ, 24 ಗಂಟೆಯೊಳಗೆ ಮೈತ್ರಿ ಸರಕಾರವನ್ನು ಉರುಳಿಸಿ ಬಿಜೆಪಿ ಆಡಳಿತ ಸ್ಥಾಪಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಕರ್ನಾಟಕದಲ್ಲಿ ರಾಹುಲ್ ಪ್ರಚಾರ ಆರಂಭ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ಪ್ರವಾಸ ಆರಂಭಿಸಿದ್ದು, ಮೊದಲು ಹಾವೇರಿಯಲ್ಲಿ, ಈಗ ಕಲಬುರಗಿಯಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಇಲ್ಲಿ ಕೂಡ ಸ್ಥಳೀಯ ವಿಷಯಗಳನ್ನು ಬಿಟ್ಟು ರಾಷ್ಟ್ರೀಯ ಸಮಸ್ಯೆಗಳು, ನರೇಂದ್ರ ಮೋದಿಯವರನ್ನೇ ಟಾರ್ಗೆಟ್ ಮಾಡಿಕೊಂಡು ಭಾಷಣ ಬಿಗಿಯಲಾಗುತ್ತಿದೆ. ಇದು ಕಾಂಗ್ರೆಸ್ಸಿಗೆ ವರ್ಕೌಟ್ ಆಗುವುದಾ? ಕಳೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯೆರಡರಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಏಕಾಂಗಿಯಾಗಿ ಅಂತಹ ಸಾಧನೆಯನ್ನೇನೂ ತೋರಿಲ್ಲ. ಆದರೆ, ಒಗ್ಗೂಡಿದರೆ ಲೆಕ್ಕಾಚಾರಗಳು ಬದಲಾಗುವುದಾ? ಯಾರ ಮೇಲೆ ರಾಜ್ಯದ ಜನರಿಗೆ ಒಲವಿದೆ?