News makers; ಕಾಂಗ್ರೆಸ್ ಸರ್ಕಾರವನ್ನೇ ಕೆಡವಿದ ಯುವರಾಜ!
ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಮಾತಿದೆ. ಹಲವು ಬಾರಿ ಇದು ಸಾಬೀತು ಕೂಡಾ ಆಗಿದೆ. ದಶಕಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದ ಸರ್ಕಾರವನ್ನು 49 ವರ್ಷದ ಯುವಕನೊಬ್ಬ ಪತನಗೊಳಿಸಿದ ಘಟನೆಗೆ ಈ ವರ್ಷ ಸಾಕ್ಷಿಯಾಯಿತು. ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಡೆಸಿದ ಕಸರತ್ತು ವ್ಯರ್ಥವಾಯಿತು.
2020ರ ಮಾರ್ಚ್ನಲ್ಲಿ ಮಧ್ಯ ಪ್ರದೇಶದ ಕಾಂಗ್ರೆಸ್ ಸರ್ಕಾರ ಪತನಗೊಂಡಿತು. ವಿಶ್ವಾಸ ಮತಯಾಚನೆ ಮಾಡುವ ಮೊದಲೇ ಮುಖ್ಯಮಂತ್ರಿ ಕಮಲನಾಥ್ ರಾಜೀನಾಮೆ ನೀಡುವುದಾಗಿ ವಿಧಾನಸಭೆಯಲ್ಲಿ ಘೋಷಣೆ ಮಾಡಿದರು. ಸರ್ಕಾರ ಪತನಗೊಳ್ಳಲು ಕಾರಣವಾಗಿದ್ದು ಜ್ಯೋತಿರಾಧಿತ್ಯ ಸಿಂಧಿಯಾ.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮಧ್ಯ ಪ್ರದೇಶದಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಇತರ ಪಕ್ಷಗಳ ಜೊತೆ ಸೇರಿ ಸರ್ಕಾರ ರಚನೆ ಮಾಡಿತು. ಪಕ್ಷಕ್ಕೆ ದೊಡ್ಡ ಮಟ್ಟದ ಯಶಸ್ಸು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಜ್ಯೋತಿರಾಧಿತ್ಯ ಸಿಂಧಿಯಾ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಸಹ ಆಗಿದ್ದರು. ಆದರೆ, ಪಕ್ಷದ ಹೈಕಮಾಂಡ್ ತೀರ್ಪಿಗೆ ತಲೆಬಾಗಿ ಕಮಲನಾಥ್ಗೆ ಸಿಎಂ ಸ್ಥಾನ ಬಿಟ್ಟುಕೊಟ್ಟರು.
ಮಧ್ಯಪ್ರದೇಶದ ಮಹಾರಾಜ ಎಂದೇ ಖ್ಯಾತರಾಗಿದ್ದ ಜ್ಯೋತಿರಾಧಿತ್ಯ ಸಿಂಧಿಯಾ 18 ವರ್ಷಗಳ ಕಾಲ ಪಕ್ಷಕ್ಕಾಗಿ ಕೆಲಸ ಮಾಡಿದ್ದರು. ರಾಹುಲ್ ಗಾಂಧಿಯ ಅತ್ಯಾಪ್ತ ನಾಯಕರಲ್ಲಿ ಒಬ್ಬರಾಗಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದರು. ಮಾರ್ಚ್ 10ರಂದು ಕಾಂಗ್ರೆಸ್ ಪಕ್ಷ ತೊರೆದ ಅವರು ಮಾರ್ಚ್ 11ರಂದು ಬಿಜೆಪಿ ಸೇರಿದರು. ತಕ್ಷಣ ರಾಜ್ಯಸಭೆ ಚುನಾವಣೆ ಟಿಕೆಟ್ ಘೋಷಣೆ ಮಾಡಲಾಯಿತು. ಮಧ್ಯಪ್ರದೇಶ ವಿಧಾನಸಭೆಯಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಸರ್ಕಾರ ಪತನಗೊಂಡಿದ್ದು ಹೇಗೆ?
ಮಾರ್ಚ್ 10ರಂದು ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಅವರನ್ನು ಬೆಂಬಲಿಸಿ 22 ಶಾಸಕರು ರಾಜೀನಾಮೆ ನೀಡಿದರು. ಇದರಿಂದಾಗಿ ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿಯಿತು. ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಕಮಲನಾಥ್ ಮತ್ತು ದೆಹಲಿಯ ನಾಯಕರು ನಡೆಸಿದ ಪ್ರಯತ್ನ ವಿಫಲವಾಯಿತು. ಅಂತಿಮವಾಗಿ ಕಮಲನಾಥ್ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಪತನಗೊಂಡಿತು.
ಜ್ಯೋತಿರಾಧಿತ್ಯ ಸಿಂಧಿಯಾ ಯಾರು?
1971ರಲ್ಲಿ ಮುಂಬೈನಲ್ಲಿ ಜನಿಸಿದ ಜ್ಯೋತಿರಾಧಿತ್ಯ ಸಿಂಧಿಯಾ ಮಧ್ಯಪ್ರದೇಶದ ಗ್ವಾಲಿಯರ್ ರಾಜಮನೆತನದ ಕುಡಿ. ಮಾಧವರಾವ್ ಸಿಂಧಿಯಾ ಮತ್ತು ಮಾಧವಿ ರಾವ್ ಸಿಂಧಿಯಾ ಅವರ ಪುತ್ರ. ಜ್ಯೋತಿರಾಧಿತ್ಯ ಸಿಂಧಿಯಾ ಅಜ್ಜ ಗ್ವಾಲಿಯರ್ನ ಕೊನೆಯ ಮಹಾರಾಜ ಜಿವಾಜಿರಾವ್ ಸಿಂಧಿಯಾ. ಹಾರ್ವರ್ಡ್ ಕಾಲೇಜು, ಸ್ಟ್ಯಾನ್ ಪೋರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದವರು. ಸಿಂಧಿಯಾ ಪತ್ನಿ ಪ್ರಿಯದರ್ಶಿನಿ ರಾಜೆ ಗಾಯಕ್ ವಾಡ್ ಬರೋಡಾದ ಪ್ರಸಿದ್ಧ ಗಾಯಕ್ ವಾಡ್ ಮನೆತನದವರು.
2001ರಲ್ಲಿ ಮೊದಲ ಬಾರಿಗೆ ಸಂಸದ
2001ರಲ್ಲಿ ಮಾಧವರಾವ್ ಸಿಂಧಿಯಾ ನಿಧನ ಹೊಂದಿದರು. ಆಗ ಜ್ಯೋತಿರಾಧಿತ್ಯ ಸಿಂಧಿಯಾ ಗುನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. ಮೊದಲ ಬಾರಿ ಲೋಕಸಭೆಗೆ ಆರಿಸಿ ಬಂದರು. ಬಳಿಕ 18 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದರು. ಎರಡು ಬಾರಿ ಕೇಂದ್ರ ಸಚಿವರಾದರು. ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾದರು. ರಾಹುಲ್ ಗಾಂಧಿ ಆಪ್ತರಾಗಿದ್ದ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. 2019ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಪೂರ್ವ ವಲಯದ ಉಸ್ತುವಾರಿಯಾಗಿ ನೇಮಿಸಿ ಪಕ್ಷ ಸಂಘಟನೆಯ ಹೊಣೆ ನೀಡಿದರು. ಅತ್ತ ಹೆಚ್ಚು ಗಮನಕೊಟ್ಟ ಕಾರಣ ಸ್ವ ಕ್ಷೇತ್ರ ಗುನಾದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಸೋತರು. ತಮ್ಮ ಸೋಲಿನ ಹಿಂದೆ ಕಮಲನಾಥ್ ಇದ್ದಾರೆ ಎಂಬ ಅನುಮಾನ ಅವರಲ್ಲಿತ್ತು.
ಕಾಂಗ್ರೆಸ್ ತೊರೆದು ಸರ್ಕಾರ ಬೀಳಿಸಿದರು
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜ್ಯೋತಿರಾಧಿತ್ಯ ಸಿಂಧಿಯಾ ಬೆಂಬಲಿಗರನ್ನು ಕಡೆಗಣಿಸಲಾಯಿತು. ಇದರಿಂದಾಗಿ ಅಸಮಾಧಾನಗೊಂಡ ಅವರು ರೈತರ ಸಾಲ ಮನ್ನಾ ಮಾಡದಿದ್ದರೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಘೋಷಣೆ ಮಾಡಿದರು. ಅವರ ಅಸಮಾಧಾನದ ಕಿಚ್ಚನ್ನು ಅಂದಾಜಿಸಲು ಹೈಕಮಾಂಡ್ ಸೋತು ಹೋಯಿತು. ಪರಿಣಾಮ ಜ್ಯೋತಿರಾಧಿತ್ಯ ಸಿಂಧಿಯಾ ರಾಜೀನಾಮೆ ನೀಡಿದರು. ಅವರ ಜೊತೆ ಬೆಂಬಲಿಗರು ರಾಜೀನಾಮೆ ಕೊಟ್ಟರು, ರಾಜ್ಯದಲ್ಲಿ ಪಕ್ಷ ಅಧಿಕಾರವನ್ನೇ ಕಳೆದುಕೊಂಡಿತು. ರಾಜಮನೆತನದ ಹಿರಿಯ ಸದಸ್ಯೆಯಾದ ಶುಭಾಂಗಿನಿ ರಾಜೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಾರ ಗೌರವವಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಬಿಟ್ಟ ಮರುದಿನವೇ ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರಿದರು. ತಕ್ಷಣ ರಾಜ್ಯಸಭೆ ಟಿಕೆಟ್ ಘೋಷಣೆಯಾಯಿತು.