ಗ್ರಾಹಕರೆ ಗಮನಿಸಿ: ಸೆಪ್ಟೆಂಬರ್ 1 ರಿಂದ ಆಗುವ ಪ್ರಮುಖ ಬದಲಾವಣೆಗಳಿವು
ಕೊರೊನಾ ಸಾಂಕ್ರಾಮಿಕ ಸಂಕಷ್ಟ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಅಗತ್ಯ ಆರ್ಥಿಕ ಪ್ಯಾಕೇಜ್ ಘೋಷಿಸುತ್ತಾ ಬಂದಿದೆ. ಆದರೂ ಅಗತ್ಯ ವಸ್ತುಗಳ ಕೊರತೆ, ಲಾಕ್ಡೌನ್ ನಿರ್ಬಂಧ, ವಾರಾಂತ್ಯದ ಕರ್ಫ್ಯೂ ದೆಸೆಯಿಂದ ಮಾರಾಟ, ಕೊಳ್ಳುವಿಕೆ ಎಂದಿನಂತೆ ಸಾಗಿಲ್ಲ. ಆನ್ಲೈನ್ ಮಾರುಕಟ್ಟೆ ಚಾಲನೆಯಲ್ಲಿದ್ದರೂ ಸಾರಿಗೆ ಸಂಪರ್ಕ ಸರಾಗವಾಗಿರದ ಕಾರಣ ದಿನದಿಂದ ದಿನಕ್ಕೆ ಅನೇಕ ವಸ್ತುಗಳ ದರ ಏರಿಕೆಯಾಗುತ್ತಿವೆ. ಆಗಸ್ಟ್ ತಿಂಗಳಿನಂತೆ ಸೆಪ್ಟೆಂಬರ್ ತಿಂಗಳಿನಲ್ಲೂ ಒಂದಷ್ಟು ನೀತಿ, ನಿಯಮಾವಳಿಗಳು ಬದಲಾಗುತ್ತಿವೆ. ಹೆಚ್ಚಿನ ಬದಲಾವಣೆಗಳು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ.
ಪ್ರಮುಖವಾಗಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ದರ ತಿಂಗಳ ಮೊದಲ ದಿನ ಪರಿಷ್ಕರಣೆಯಾಗಲಿದೆ. ಆದಾಯ ತೆರಿಗೆ ಪಾವತಿ ಕುರಿತಂತೆ ಬದಲಾವಣೆ ಘೋಷಣೆಯಾಗಿದೆ. ಕಚ್ಚಾತೈಲ ಬೆಲೆ ಏರಿಳಿತಕ್ಕನುಗುಣವಾಗಿ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ದರವಂತೂ ಏರುತ್ತಿದೆ. ಇದರಿಂದ ಸರಕು ಸಾಗಣೆ ಅವಲಂಬಿತ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಒಟ್ಟಾರೆ, ತಿಂಗಳ ಆರಂಭದಲ್ಲಿ ಜೇಬಿಗೆ ಕತ್ತರಿ ಬೀಳಲಿದ್ದು, ಜನ ಸಾಮಾನ್ಯರು ಹೊಸ ವ್ಯವಸ್ಥೆ ಬದಲಾವಣೆಗೆ ಹೊಂದಿಕೊಳ್ಳುವುದು ಅಗತ್ಯ. ಒಟ್ಟಾರೆ, ಸೆಪ್ಟೆಂಬರ್ 1 ರಿಂದ ಆಗಲಿರುವ ಪ್ರಮುಖ ಬದಲಾವಣೆಗಳ ಬಗ್ಗೆ ಮುಂದೆ ಓದಿ...
ಆಧಾರ್ -ಭವಿಷ್ಯ ನಿಧಿ ಖಾತೆ ಜೋಡಣೆ
ಪ್ರಾವಿಡೆಂಟ್ ಫಂಡ್ (ಪಿಎಫ್) ಖಾತೆಯನ್ನು ಹೊಂದಿರುವ ಚಂದಾದಾರರು ತಮ್ಮ ಖಾತೆಯ ಸಂಖ್ಯೆ(UAN) ಜೊತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆಗಸ್ಟ್ 30 ರೊಳಗೆ ಈ ಜೋಡಣೆ ಮಾಡಬೇಕಾಗಿತ್ತು. ಇಲ್ಲದಿದ್ದರೆ, ಇಪಿಎಫ್ಒ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಇಪಿಎಫ್ಒ ತನ್ನ ಚಂದಾದಾರರಿಗಾಗಿ ಪರಿಚಯಿಸಿರುವ ಆನ್ಲೈನ್ ಸೌಲಭ್ಯವನ್ನು ಬಳಸಿಕೊಂಡು ಅನೇಕ ಸೌಲಭ್ಯ ಪಡೆದುಕೊಳ್ಳಬಹುದು. ಆಧಾರ್ ಜೊತೆ ಭವಿಷ್ಯ ನಿಧಿ ಖಾತೆ ಲಿಂಕ್ ಮಾಡುವುದರಿಂದ ಸಿಬ್ಬಂದಿ ಕಮ್ ರಿಟರ್ನ್(ಇಸಿಆರ್) ಚಲನ್ಸ್ ಹಾಗೂ ಇಪಿಎಫ್ ಖಾತೆಗೆ ಜಮೆ ಮಾಡುವ ಸೌಲಭ್ಯಗಳು ಲಭ್ಯವಾಗಲಿದೆ.
ಪಿಎಫ್ ಅನ್ನು ಆಧಾರ್ಗೆ ಲಿಂಕ್ ಮಾಡುವ ವಿಧಾನ ಹೀಗಿದೆ?
ಅಡುಗೆ ಅನಿಲ ದರ ಏರಿಕೆ
ಎಲ್ ಪಿ ಜಿ ಸಿಲಿಂಡರ್ ಬೆಲೆ ಪ್ರತಿ ತಿಂಗಳ ಮೊದಲ ದಿನದಂದು ಗೃಹ ಬಳಕೆ ಹಾಗೂ ವಾಣಿಜ್ಯ ಉದ್ದೇಶಿತ ಎಲ್ ಪಿ ಜಿ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗಲಿದೆ. ಸದ್ಯ ಬೆಂಗಳೂರಿನಲ್ಲಿ ಜೂನ್ ತಿಂಗಳಲ್ಲಿ 14.2 ಕೆ.ಜಿ ಸಿಲಿಂಡರ್ ಬೆಲೆ 812 ರು ನಷ್ಟಿದೆ. ರಾಜ್ಯದಿಂದ ರಾಜ್ಯಕ್ಕೆ ಬೆಲೆಯಲ್ಲಿ ವ್ಯತ್ಯಾಸ ಕಾಣಬಹುದಾಗಿದೆ. ಜುಲೈ ತಿಂಗಳಲ್ಲಿ ಪ್ರತಿ ಸಿಲಿಂಡರ್ ಮೇಲೆ 25. 50 ರು ಹಾಗೂ ಆಗಸ್ಟ್ ತಿಂಗಳಲ್ಲಿ 25 ರು ಏರಿಕೆ ಮಾಡಲಾಗಿತ್ತು. ಸದ್ಯದ ಟ್ರೆಂಡ್ ಗಮನಿಸಿದರೆ ಸೆಪ್ಟೆಂಬರ್ ತಿಂಗಳಲ್ಲಿ ಎಲ್ ಪಿ ಜಿ ಸಿಲಿಂಡರ್ ಬೆಲೆ ಏರಿಕೆ ನಿರೀಕ್ಷಿತವಾಗಿದೆ ಎನ್ನಬಹುದು.
PAN ಹಾಗೂ Aadhaar ಜೋಡಣೆ
ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಜೋಡಣೆ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೂನ್ ತಿಂಗಳಿನಿಂದಲೇ ಪ್ರಕಟಣೆ ಹೊರಡಿಸಿತ್ತು. ಎಸ್ಬಿಐ ತನ್ನ ಗ್ರಾಹಕರಿಗೆ ಇತ್ತೀಚೆಗೆ ಮತ್ತೊಮ್ಮೆ ಟ್ವಿಟ್ಟರ್ ಮೂಲಕ ನೀಡಿರುವ ಪ್ರಕಟಣೆಯಂತೆ ಸೆಪ್ಟೆಂಬರ್ 30ರೊಳಗೆ ಪ್ಯಾನ್ ಹಾಗೂ ಆಧಾರ್ ಜೋಡಣೆ ಮಾಡದಿದ್ದರೆ ಪ್ಯಾನ್ ನಿಷ್ಕ್ರಿಯವಾಗಲಿದೆ. ಜೊತೆಗೆ ಬ್ಯಾಂಕಿಂಗ್ ಸಂಬಂಧಿಸಿದಂತೆ ಹಲವು ವ್ಯವಹಾರಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ, ಇದು ಎಲ್ಲಾ ಬಗೆಯ ಖಾತೆದಾರರಿಗೂ ಅನ್ವಯವಾಗಲಿದೆ ಎಂದು ಎಸ್ ಬಿ ಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಆಧಾರ್- ಪ್ಯಾನ್ ಜೋಡಣೆ ಹೇಗೆ?
15 ಸಿಎ, 15 ಸಿಬಿ ಫಾರ್ಮ್ ಸಲ್ಲಿಕೆ
15 ಸಿಎ, 15 ಸಿಬಿ ಫಾರ್ಮ್ ಸಲ್ಲಿಕೆ ಅವಧಿಯನ್ನು ಜುಲೈ 15ರ ಗಡುವಿನಿಂದ ಆಗಸ್ಟ್ 15ಕ್ಕೆ ವಿಸ್ತರಿಸಲಾಗಿತ್ತು, ಈಗ ಸೆಪ್ಟೆಂಬರ್ 30 ಕೊನೆ ದಿನಾಂಕ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಸೂಚನೆ ನೀಡಿದೆ.
ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ನಮೂನೆ 15 ಸಿಎ/ 15 ಸಿಬಿಯನ್ನು ವಿದ್ಯುನ್ಮಾನವಾಗಿ ಫೈಲ್ ಮಾಡುವ ಅವಶ್ಯಕತೆಯಿದೆ. ಪ್ರಸ್ತುತ, ತೆರಿಗೆದಾರರು ಯಾವುದೇ ವಿದೇಶಿ ಹಣ ರವಾನೆಗಾಗಿ ಅಧಿಕೃತ ಮಾರಾಟಗಾರರಿಗೆ ನಕಲನ್ನು ಸಲ್ಲಿಸುವ ಮೊದಲು, ಇ-ಫೈಲಿಂಗ್ ಪೋರ್ಟಲ್ನಲ್ಲಿ, ಅನ್ವಯವಾಗುವಂತೆ ಫಾರ್ಮ್ 15 ಸಿಬಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಪ್ರಮಾಣಪತ್ರದೊಂದಿಗೆ ಫಾರ್ಮ್ 15 ಸಿಎ ಅನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
ಚೆಕ್ ಸುರಕ್ಷತೆ ವಿಧಾನ
ಹೆಚ್ಚು ಮೊತ್ತದ ಚೆಕ್ ಕ್ಲಿಯರೆನ್ಸ್ ಬಗ್ಗೆ ಇರುವ ಭೀತಿಯನ್ನು ಹೊಗಲಾಡಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಮಾರ್ಗ ಕಂಡುಕೊಂಡಿದೆ. ಪಾಸಿಟಿವ್ ಪೇ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಈ ಮೂಲಕ ಬ್ಯಾಂಕಿಂಗ್ ಕ್ಷೇತ್ರದ ವಂಚನೆಗೆ ಬ್ರೇಕ್ ಹಾಕಲು ಯತ್ನಿಸಲಾಗುತ್ತಿದೆ. ಪೂರ್ಣವಾಗಿ ಈ ವ್ಯವಸ್ಥೆ ಜನವರಿ 1, 2022ರಿಂದ ಜಾರಿಯಾಗಲಿದೆ. ಹೊಸ ನಿಯಮದಂತೆ ಹೆಚ್ಚು ಮೊತ್ತದ (50,000 ರು ಮೇಲ್ಪಟ್ಟ ಹಾಗೂ 5 ಲಕ್ಷ ರು ಮೊತ್ತ ಮೇಲ್ಪಟ್ಟ) ಚೆಕ್ ಕ್ಲಿಯರ್ ಮಾಡುವುದಕ್ಕೂ ಮುನ್ನ ಬ್ಯಾಂಕಿಗೆ ಮಾಹಿತಿ ನೀಡಬೇಕಾಗುತ್ತದೆ. ಚೆಕ್ ನೀಡುವವರು ನೀಡಿರುವ ಪೂರ್ವ ಮಾಹಿತಿ ಅನ್ವಯ ಚೆಕ್ ಕ್ಲಿಯರ್ ಆಗಲಿದೆ. ಇಲ್ಲದಿದ್ದರೆ ಚೆಕ್ ಬೌನ್ಸ್ ಆಗಲಿದೆ.
ಹಳೆ ಚೆಕ್ ಬುಕ್, ಪಾಸ್ ಬುಕ್ ಇನ್ಮುಂದೆ ವರ್ಕ್ ಆಗಲ್ಲ!
ಜಿಎಸ್ಟಿ ಆರ್ 1 ಫೈಲಿಂಗ್
ಸರಕು ಹಾಗೂ ಸೇವಾ ತೆರಿಗೆ ಜಾಲ GSTN ನಿಯಮ ಬದಲಾವಣೆ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ. GSTR-1 ಫೈಲಿಂಗ್ ಬಗ್ಗೆ ನಿಯಂತ್ರಣ ಹೊಂದಿರುವ ಕೇಂದ್ರ ಜಿಎಸ್ಟಿ ನಿಯಮ 59 (6) ಅನ್ವಯ ಬದಲಾವಣೆ ಸೆಪ್ಟೆಂಬರ್ 1, 2021ರಿಂದ ಜಾರಿಗೆ ಬರಲಿದೆ. ಹೊಸ ನಿಯಮಾವಳಿಯ ಅನ್ವಯ GSTR-3B ಅರ್ಜಿಯನ್ನು ಈ ಹಿಂದಿನ ಆರ್ಥಿಕ ವರ್ಷದಲ್ಲಿ ಫೈಲ್ ಮಾಡದ ವ್ಯಕ್ತಿಯು GSTR-1 ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ.