ಸ್ಟಾನ್ ಸ್ವಾಮಿ ಸಾವಿನ ಬೆನ್ನಲ್ಲೇ ಕಂಪ್ಯೂಟರ್ ದಾಖಲೆಗಳಲ್ಲಿನ ಗುಟ್ಟು ಬಯಲು?
ನವದೆಹಲಿ, ಜುಲೈ 06: ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಹಾಗೂ ಬುಡಕಟ್ಟು ಜನರ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ಸಾವಿನ ಬೆನ್ನಲ್ಲೇ ಅಮೆರಿಕಾದ ವಿಧಿವಿಜ್ಞಾನ ಪ್ರಯೋಗಾಲಯ ಆಘಾತಕಾರಿ ವರದಿಯೊಂದನ್ನು ಪ್ರಕಟಿಸಿದೆ.
ನಿಷೇಧಿತ ಸಿಪಿಐ (ಮಾವೋವಾದಿ) ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಕಠಿಣ ಭಯೋತ್ಪಾದನಾ-ವಿರೋಧಿ ಕಾನೂನಿನಡಿಯಲ್ಲಿ ಬಂಧಿಸಲಾಗಿರುವ ಸುರೇಂದ್ರ ಗ್ಯಾಡ್ಲಿಂಗ್ ಕಂಪ್ಯೂಟರ್ಗೆ ಪುರಾವೆಗಳು ಸೇರಿದ್ದು ಹೇಗೆ ಎಂಬುುದು ಇದೀಗ ಬಯಲಾಗಿದೆ. ಸುರೇಂದ್ರ ಗ್ಯಾಡ್ಲಿಂಗ್ ಬಂಧನಕ್ಕೂ ಎರಡು ವರ್ಷಗಳ ಮೊದಲು ಕಂಪ್ಯೂಟರ್ನಲ್ಲಿ ಸ್ವೀಕರಿಸಿದ ಇ-ಮೇಲ್ ಹಾಗೂ ಪ್ರಮುಖ ಮಾಹಿತಿ ತೆಗೆದು ಹಾಕಲಾಗಿದ್ದು, ಅಂಥದ್ದೇ ಸಂದೇಶಗಳು ಸ್ಟಾನ್ ಸ್ವಾಮಿ ಹಾಗೂ ಇತರರಿಗೆ ಕಳುಹಿಸಿದ ಹಿನ್ನೆಲೆ ಸ್ಟಾನ್ ಸ್ವಾಮಿ ಕಂಪ್ಯೂಟರ್ನಲ್ಲೂ ಹ್ಯಾಕರ್ ಕಣ್ಣು ಬಿದ್ದಿತ್ತು ಎಂದು ತಿಳಿದು ಬಂದಿದೆ.
ಸ್ಟಾನ್ ಸ್ವಾಮಿ ನಿಧನ: ಎಲ್ಗಾರ್ ಪರಿಷತ್ ಪ್ರಕರಣದ ಹಿನ್ನೆಲೆ, ಒಂದು ನೋಟ
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ 84 ವರ್ಷದ ಕ್ರಿಶ್ಚಿಯನ್ ಪಾದ್ರಿ ಸ್ಟಾನ್ ಸ್ವಾಮಿ ಹಾಗೂ ಸುರೇಂದ್ರ ಗ್ಯಾಡ್ಲಿಂಗ್ ಸೇರಿದಂತೆ 16 ಮಂದಿ ಆರೋಪಿಗಳ ಬಂಧನ ಹಿಂದಿನ ಕಂಪ್ಯೂಟರ್ ಕಹಾನಿ ಜೊತೆಗೆ ಹ್ಯಾಕರ್ ಆಡಿದ ಆಟಗಳು ಹೇಗಿದ್ದವು ಎಂಬುದನ್ನು ಎಳೆಎಳೆಯಾಗಿ ತೆರೆದಿಡಲಾಗಿದೆ. ಮಾವೋವಾದಿಗಳ ಜೊತೆಗೆ ಸ್ಟಾನ್ ಸ್ವಾಮಿ ಹೆಸರು ಥಳಕು ಹಾಕಿದವರಿಗೆ ಈ ವರದಿ ತಕ್ಕ ಉತ್ತರ ನೀಡಿದೆ. ಅಂದಿಗೆ ಕಂಪ್ಯೂಟರ್ನಲ್ಲಿ ಪತ್ತೆಯಾದ ದಾಖಲೆಗಳ ಮೂಲ ಮತ್ತು ಸೇರಿಕೊಂಡ ಬಗ್ಗೆ ವರದಿಯಲ್ಲಿ ಹೇಳಲಾಗಿದೆ. ಆದರೆ ಇಂದಿಗೆ ಮಾನವಹಕ್ಕುಗಳ ಹೋರಾಟಗಾರ ಎನಿಸಿಕೊಂಡ ಹಿರಿಯ ಜೀವಿ, ಕ್ರಿಶ್ಚಿಯನ್ ಪಾದ್ರಿ ಸ್ಟಾನ್ ಸ್ವಾಮಿ ಮರೆಯಾಗಿದ್ದಾರೆ.
ರಾಷ್ಟ್ರೀಯ ತನಿಖಾ ತಂಡ ಉಲ್ಲೇಖಿಸಿದ ಅಂಶ
ಮೂರು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ನಡೆದ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸ್ಟಾನ್ ಸ್ವಾಮಿ ಸೇರಿದಂತೆ 16 ಆರೋಪಿಗಳು ಪ್ರಚೋದನೆ ನೀಡಿದ್ದರು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ತಂಡವು ಹೇಳಿದೆ. ಕಳೆದ 01 ಜನವರಿ 2018 ರಂದು ಭೀಮಾ ಕೋರೆಗಾಂವ್ ಯುದ್ಧದ ಸ್ಮರಣಾರ್ಥ ಸಮಾರಂಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಮೇಲ್ಜಾತಿಯ ಜನರ ಗುಂಪಿನಿಂದ ದಲಿತರ ಮೇಲೆ ಹಲ್ಲೆ ನಡೆದಿತ್ತು. ಮಹಾರಾಷ್ಟ್ರದಾದ್ಯಂತ ದಲಿತರು ಎರಡು ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಿದ ನಂತರ, ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದಿದ್ದವು.
ಬುದ್ಧಿಜೀವಿಗಳನ್ನು ಹಣಿಯಲು ಕಠಿಣ ಕಾನೂನಿನ ಅಸ್ತ್ರ ಬಳಕೆ
ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಾನೂನು ವಿರೋಧಿ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಅಡಿ 16 ಆರೋಪಿಗಳನ್ನು ಬಂಧಿಸಲಾಗಿತ್ತು. ಸ್ಟಾನ್ ಸ್ವಾಮಿ ಈ ಆರೋಪಿಗಳಲ್ಲಿ ಅತಿ ಹಿರಿಯರು ಎನಿಸಿದ್ದರು. ಈ ಕಾಯ್ದೆಯಡಿ ಬಂಧಿಸಿದ ಆರೋಪಿಗಳನ್ನು ದೀರ್ಘಕಾಲದವರೆಗೂ ಬಂಧನದಲ್ಲಿ ಇರಿಸಬಹುದು. ಜೊತೆಗೆ ಪ್ರಧಾನಮಂತ್ರಿ ಹತ್ಯೆಗೆ ಸಂಚು ರೂಪಿಸಿದ ಆರೋಪಿಗಳ ಪಟ್ಟಿಯಲ್ಲಿ ಈ ಆರೋಪಿಗಳನ್ನು ಹೆಸರಿಸಲಾಗುತ್ತದೆ. ಈ ವೇಳೆ ಎಡ-ಪಂಥೀಯ ಬುದ್ಧಿಜೀವಿಗಳು ಸೇರಿದಂತೆ ವಿರೋಧಿಗಳನ್ನು ಹಣಿಯಲು ಸರ್ಕಾರವು ಕಠಿಣ ಕಾನೂನುಗಳನ್ನು ಬಳಸಿದೆ ಎಂದು ವಿಮರ್ಶಕರು ದೂಷಿಸಿದ್ದರು.
ಬುಡಕಟ್ಟು ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ನಿಧನ
30 ದಾಖಲೆಗಳನ್ನು ಸೇರಿಸಿದ ಉಗ್ರ
ಉಗ್ರರ ಜೊತೆ ನಂಟು ಹೊಂದಿದ್ದ ರೋನ್ ವಿಲ್ಸನ್ ಎಂಬ ವ್ಯಕ್ತಿಯು ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಿ 30 ದಾಖಲೆಗಳನ್ನು ಅದರಲ್ಲಿ ಸೇರಿಸಿದ್ದನು ಎಂದು ಇದೇ ವರ್ಷ 'ವಾಶಿಂಗ್ಟನ್ ಪೋಸ್ಟ್' ವರದಿ ಮಾಡಿತ್ತು. ಬೋಸ್ಟನ್ ಮೂಲದ ಅರ್ಸನೆಲ್ ಕನ್ಸಲ್ಟಿಂಗ್ ಆಧಾರದ ಮೇಲೆ ಎನ್ ಡಿ ಟಿವಿ ಈ ಬಗ್ಗೆ ವರದಿ ಮಾಡಿದೆ. 2021 ಜೂನ್ ತಿಂಗಳಿನಲ್ಲಿ ಅರ್ಸೆನಲ್ ವರದಿ ಪ್ರಕಾರ, ನಾಗ್ಪುರ ಮೂಲದ ದಲಿತ ಹಕ್ಕುಗಳ ಕಾರ್ಯಕರ್ತ ಸುರೇಂದ್ರ ಗ್ಯಾಡ್ಲಿಂಗ್ ಹಾರ್ಡ್ ಡ್ರೈವ್ ಅನ್ನು ವಿಶ್ಲೇಷಿಸಿದರು, ದೋಷಾರೋಪಣೆಯ ಪುರಾವೆಗಳನ್ನು ಸೇರಿಸಿದ್ದಕ್ಕೆ ಕಾರಣವಾದ ಪುರಾವೆಗಳನ್ನು ಕಂಡುಕೊಂಡರು. "ಆರ್ಸೆನಲ್ ಇದುವರೆಗೆ ಎದುರಿಸಿದ ಸಾಕ್ಷ್ಯ-ಅಪಹರಣವನ್ನು ಒಳಗೊಂಡ ಅತ್ಯಂತ ಗಂಭೀರ ಪ್ರಕರಣಗಳಲ್ಲಿ ಇದು ಒಂದು ಎಂದು ಗಮನಿಸಬೇಕು" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
30 ದಾಖಲೆಗಳನ್ನು ಕಂಪ್ಯೂಟರ್ ನಲ್ಲಿ ಸೇರಿಸಿದ ದಾಳಿಕೋರ
ವರದಿ ಪ್ರಕಾರ, 2016ರ ಫೆಬ್ರವರಿಯಿಂದ 2017ರ ನವೆಂಬರ್ ತಿಂಗಳವರೆಗಿನ 20 ತಿಂಗಳ ನಡುವೆ ಕಂಪ್ಯೂಟರ್ ನಲ್ಲಿ 14 ದೋಷಾರೋಪಣೆ ಪತ್ರಗಳನ್ನು ಸೇರಿಸಲಾಗಿದೆ. ರೋನ್ ವಿನ್ಸಲ್ ಸಿಸ್ಟಮ್ ನಲ್ಲಿ 30 ದಾಖಲೆಗಳನ್ನು ಸೇರಿಸಿದ ದಾಳಿಕೋರನೇ ಈ ಕೆಲಸವನ್ನೂ ಮಾಡಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಆರ್ಸೆನಲ್ ಪ್ರಕಾರ, ಸುರೇಂದ್ರ ಗ್ಯಾಡ್ಲಿಂಗ್ ಕಂಪ್ಯೂಟರ್ ಅನ್ನು ರಾಜಿ ಮಾಡಿದ ದಾಳಿಕೋರನು ಸಮಯ ಸೇರಿದಂತೆ ವ್ಯಾಪಕವಾದ ಸಂಪನ್ಮೂಲಗಳನ್ನು ಹೊಂದಿದ್ದನು. ಕಣ್ಗಾವಲು ಮತ್ತು ನೆಟ್ಟ ಪುರಾವೆಗಳೆರಡರಲ್ಲೂ ತೊಡಗಿಸಿಕೊಂಡಿದ್ದನು. ಇದೇ ಆರೋಪಕ್ಕೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳ ಹಿಂದೆ ಬಂಧಿಸಲ್ಪಟ್ಟಿರುವ ಸುರೇಂದ್ರ ಗ್ಯಾಡ್ಲಿಂಗ್ ಇಂದಿಗೂ ಸೆರೆವಾಸದಲ್ಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಎನ್ಐಎ ತಂಡ ನಿರಾಕರಿಸಿದೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸ್ಟಾನ್ ಸ್ವಾಮಿ ಅರೆಸ್ಟ್
ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಸ್ಟಾನ್ ಸ್ವಾಮಿ ಅನ್ನು ಕಠಿಣ ಭಯೋತ್ಪಾದನಾ ವಿರೋಧಿ ಕಾಯ್ದೆ ಅಡಿ 2021ರ ಅಕ್ಟೋಬರ್ ತಿಂಗಳಿನಲ್ಲಿ ಬಂಧಿಸಲಾಗಿತ್ತು. ನಂತರ ರಾಂಚಿಯ ನಿವಾಸದಿಂದ ಮುಂಬೈ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಮೇ ತಿಂಗಳಿನಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ಕಡೆ ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಸ್ಟಾನ್ ಸ್ವಾಮಿ ವಿಧಿವಶರಾದರು.
ಕಂಪ್ಯೂಟರರ್ ನಲ್ಲಿ ಪತ್ರಗಳು ಸೇರಿಕೊಂಡಿದ್ದು ಹೇಗೆ?
ಆರೋಪಿ ಸುರೇಂದ್ರ ಗ್ಯಾಡ್ಲಿಂಗ್ ಕಂಪ್ಯೂಟರ್ ಹಾರ್ಡ್ ಡಿವೈಸ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅದರ ಒಂದು ಪ್ರತಿಯನ್ನು ಅವರ ವಕೀಲರಿಗೆ ನೀಡಲಾಗಿತ್ತು. ಅರ್ಸೆನಲ್ ಅದರ ವಿಶ್ಲೇಷಣೆ ಮಾಡಿತು. ಅರ್ಸೆನಲ್ ಪ್ರಕಾರ, ಸುರೇಂದ್ರ ಗ್ಯಾಡ್ಲಿಂಗ್ ಕಂಪ್ಯೂಟನ್ ಜೊತೆ ರಾಜಿ ಮಾಡಿಕೊಳ್ಳುವುದಕ್ಕಾಗಿ ಇ-ಮೇಲ್ ಮೂಲಕ ಹಲವು ಬಾರಿ ಪ್ರಯತ್ನಿಸಿದ್ದಾನೆ. 2016ರ ಫೆಬ್ರವರಿಯಲ್ಲಿ ಹಲವು ಬಾರಿ ಒಂದೇ ರೀತಿ ಮಾಲ್ವೇರ್ ಅನ್ನು ಕಳುಹಿಸಿದ್ದಾನೆ. ಅಂತಿಮವಾಗಿ 2016ರ ಫೆಬ್ರವರಿ 29ರಂದು ಗ್ಯಾಡ್ಲಿಂಗ್ ಆ ಮಾಲ್ವೇರ್ ಅನ್ನು ಕಾರ್ಯಗತಗೊಳಿಸಿದರು.
ಮಾಲ್ ವೇರ್ ಎಂದರೇನು?
ಮಾಲ್ವೇರ್, ಇದು ಇನ್ನೊಬ್ಬರ ಕಂಪ್ಯೂಟರ್ಗೆ ಪ್ರವೇಶ ಪಡೆಯಲು ವಿನ್ಯಾಸಗೊಳಿಸಲಾದ ಸಾಫ್ಟ್ವೇರ್ ಆಗಿದೆ. ಸುರೇಂದ್ರ ಗ್ಯಾಡ್ಲಿಂಗ್ ಇ-ಮೇಲ್ ಸಂದೇಶ ಮತ್ತು ಅದರಲ್ಲಿ ಲಗತ್ತಿಸಿದ ದಾಖಲೆಗಳನ್ನು ನಿರುಪದ್ರವ ಪ್ಯಾಕೇಜ್ ಮಾಡಲಾಗಿದೆ. ಅದೇ ಮಾಲ್ವೇರ್ ಅನ್ನು ಹೊಂದಿರುವ ಇ-ಮೇಲ್ ಸಂದೇಶವನ್ನು ಸ್ಟಾನ್ ಸ್ವಾಮಿ ಮತ್ತು ಸುಧಾ ಭಾರದ್ವಾಜ್ ಸೇರಿದಂತೆ ಇತರೆ ಆರೋಪಿಗಳಿಗೆ ಕಳುಹಿಸಿದ ಹಿನ್ನೆಲೆ ಆ ಕಂಪ್ಯೂಟರ್ಗಳ ಜೊತೆಗೂ ರಾಜಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿದೆ. 2016ರ ಫೆಬ್ರವರಿ ವೇಳೆಗೆ ದಾಳಿಕೋರನು ಕೇವಲ ಸುರೇಂದ್ರ ಗ್ಯಾಡ್ಲಿಂಗ್ ಕಂಪ್ಯೂಟರ್ ಜೊತೆಗೆ ಮಾತ್ರ ರಾಜಿ ಮಾಡಿಕೊಂಡಿರಲಿಲ್ಲ. ಬದಲಿಗೆ ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳಿಗೆ ಸಂಬಂಧಿಸಿದ ಇ-ಮೇಲ್ ಸಂದೇಶಗಳ ಮೇಲೂ ಹಿಡಿತ ಸಾಧಿಸಿದ್ದಾರೆ.
"ಗ್ಯಾಡ್ಲಿಂಗ್ ಕಂಪ್ಯೂಟರ್ ನಲ್ಲಿ ಮುದ್ರಿಸಲಾದ ದಾಳಿಕೋರರ ಚಟುವಟಿಕೆಯ ಅವಶೇಷಗಳ ಆಧಾರದ ಮೇಲೆ ಆಕ್ರಮಣಕಾರರನ್ನು "ರೆಡ್ ಹ್ಯಾಂಡ್" ಆಗಿ ಹಿಡಿಯಬಹುದು," ಎಂದು ಆರ್ಸೆನಲ್ ತನ್ನ ವರದಿಯಲ್ಲಿ ಹೇಳಿದೆ.
ಸುರೇಂದ್ರ ಕಂಪ್ಯೂಟರ್ನಲ್ಲಿ 14 'ಮಾವೊಯಿಸ್ಟ್ ಪ್ಲಾಟ್' ಪತ್ರ?
ತಮ್ಮ ಕಂಪ್ಯೂಟರ್ನಿಂದ ವಶಪಡಿಸಿಕೊಂಡ 14 ದಾಖಲೆಗಳತ್ತ ಗಮನ ಹರಿಸುವಂತೆ ಸುರೇಂದ್ರ ಗ್ಯಾಡ್ಲಿಂಗ್ ರಕ್ಷಣಾ ತಂಡ ಕೇಳಿದೆ ಎಂದು ಆರ್ಸೆನಲ್ ಹೇಳಿದೆ. ಈ ದಾಖಲೆಗಳಲ್ಲಿ ಬಹುತೇಕ ಮಾವೋವಾದಿ ಮುಖಂಡರು ಹಾಗೂ ಸಹಾನುಭೂತಿ ತೋರಿದ ನಾಯಕರು ಹಾಗೂ ಗ್ಯಾಡ್ಲಿಂಗ್ ನಡುವಿನ ಸಂಪರ್ಕಕ್ಕೆ ಸಾಕ್ಷಿಯಾಗಿವೆ. ಹಲವು ಪ್ರಕರಣಗಳಲ್ಲಿ ಆರೋಪಿ ಎನಿಸಿರುವ ಸುದರ್ಶನ್ ಮತ್ತು ಶೀನಿವಾಸ್ ಜೊತೆಗಿನ ಸಂಭಾಷಣೆ, ಹಿಂದೆ ಆಗಿರುವ ದಾಳಿ, ಮುಂದೆ ಮಾಡಬೇಕಾದ ದಾಳಿ ಹಾಗೂ ಅದಕ್ಕೆ ಹಣ ಹೊಂದಿಸುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
14 ಪ್ರಮುಖ ಪತ್ರಗಳ ಬಗ್ಗೆ ಅರ್ಸೆನಲ್ ಹೇಳಿದ್ದೇನು?
2016 ಡಿಸೆಂಬರ್ ನಿಂದ 2017ರ ಅಕ್ಟೋಬರ್ ಅವಧಿಯ ನಡುವೆ ಗ್ಯಾಡ್ಲಿಂಗ್ ಕಂಪ್ಯೂಟರ್ನಲ್ಲಿ 14 ಪ್ರಮುಖವಾದ ದಾಖಲೆಗಳನ್ನು ಗೌಪ್ಯವಾಗಿ ಮುಚ್ಚಿದ ಲಕೋಟೆಯಲ್ಲಿ ಇರಿಸಲಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಆದರೆ ಅರ್ಸೆನಲ್ ವರದಿ ಪ್ರಕಾರ, ಗ್ಯಾಡ್ಲಿಂಗ್ ಕಂಪ್ಯೂಟರ್ನಲ್ಲಿ ಯಾವುದೇ ರೀತಿ ದಾಖಲೆಗಳನ್ನು ಗೌಪ್ಯವಾಗಿ ಹೈಡ್ ಮಾಡಿಟ್ಟಿರುವ ಬಗ್ಗೆ ದಾಖಲೆಗಳಿಲ್ಲ. ಅದೇ ರೀತಿ ಪ್ರಮುಖ ದಾಖಲೆಗಳು ಯಾವುವು ಎಂಬುದರ ಬಗ್ಗೆಯೂ ಉಲ್ಲೇಖವಿಲ್ಲ ಎಂದು ಹೇಳಿದೆ.