ಬಾಲಾಕೋಟ್ ನಲ್ಲಿ ಸತ್ತ ಉಗ್ರರ ಸಂಖ್ಯೆ 130ರಿಂದ 170 ಲೆಕ್ಕ ತೆರೆದಿಟ್ಟ ಇಟಲಿ ಪತ್ರಕರ್ತೆ ಮರೀನೋ
Recommended Video
ಬಾಲಾಕೋಟ್ ನಲ್ಲಿ ಭಾರತೀಯ ವಾಯುಸೇನೆ ನಡೆಸಿದ ದಾಳಿಯಲ್ಲಿ ಸತ್ತವರೆಷ್ಟು ಮಂದಿ ಉಗ್ರರು? ಇನ್ನು ಆ ಥರದ ದಾಳಿಯಲ್ಲಿ ಯಾವ ಉಗ್ರರು ಹತ್ಯೆ ಆಗಿಯೇ ಇಲ್ಲವಾ? ಹೀಗೆ ಎರಡೆರಡು ಬಗೆಯ ಪ್ರಶ್ನೆಗಳಿದ್ದವಲ್ಲ, ಅದಕ್ಕೆ ಉತ್ತರ ಎಂಬಂತೆ ಇಟಲಿ ಪತ್ರಕರ್ತರೊಬ್ಬರು ಮಾಹಿತಿ ತೆರೆದಿಟ್ಟಿದ್ದಾರೆ. ಅವರು ತಿಳಿಸುವ ಪ್ರಕಾರ ಆ ದಾಳಿಯಲ್ಲಿ 130ರಿಂದ 170 ಮಂದಿ ಜೈಷೆ ಉಗ್ರರು ಹತರಾಗಿದ್ದಾರೆ.
ಪಾಕಿಸ್ತಾನದ ಖೈಬರ್ ಪಂಖ್ತುವಾ ಪ್ರಾಂತ್ಯದಲ್ಲಿರುವ ಬಾಲಾಕೋಟ್ ನಲ್ಲಿ ಭಾರತೀಯ ವಾಯು ಸೇನೆ ಫೆಬ್ರವರಿ 26ನೇ ತಾರೀಕು ದಾಳಿ ನಡೆಸಿತ್ತು. ಉಗ್ರರ ನೆಲೆಯನ್ನೇ ಗುರಿ ಮಾಡಿಕೊಂಡು ನಡೆಸಿದ ದಾಳಿ ಅದಾಗಿತ್ತು. ಫೆಬ್ರವರಿ 14ನೇ ತಾರೀಕು ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಗೆ ಪ್ರತೀಕಾರ ಹೇಳುವ ಸಲುವಾಗಿ ನಡೆಸಿದ ವಾಯು ದಾಳಿಯದು.
ಏರ್ ಸ್ಟ್ರೈಕ್ ನಂತರ ಪಾಕಿಸ್ತಾನ ಈಗಲೂ ಹೆಣ ಎಣಿಸುತ್ತಿದೆ: ಪ್ರಧಾನಿ ಮೋದಿ
stringerasia.it ವೆಬ್ ಸೈಟ್ ನಲ್ಲಿ ಇಟಲಿ ಪತ್ರಕರ್ತರಾದ ಫ್ರಾಂಕೆಸಾ ಮರೀನೋ ಎಂಬುವರು ಹೊಸ ವರದಿ ಪ್ರಕಟಿಸಿದ್ದು, ಆ ವರದಿ ಪ್ರಕಾರ 130ರಿಂದ 170 ಉಗ್ರರನ್ನು ಹತ್ಯೆ ಮಾಡಲಾಗಿದೆ. 11 ತರಬೇತುದಾರರು, ಬಾಂಬ್ ತಯಾರು ಮಾಡುವವರಿಂದ ಶಸ್ತ್ರಾಸ್ತ್ರಗಳ ತರಬೇತು ನೀಡುವವರು ಇದ್ದರು. ಆ ಪೈಕಿ ಇಬ್ಬರು ತರಬೇತುದಾರರು ಅಫ್ಘಾನಿಸ್ತಾನದವರು ಎಂದು ಆಕೆ ಹೇಳಿದ್ದಾರೆ.
45 ಉಗ್ರರಿಗೆ ಉಗ್ರ ನೆಲೆಯ ಸಮೀಪದಲ್ಲೇ ಚಿಕಿತ್ಸೆ
ಇದರ ಜತೆಗೆ ಇನ್ನೂ ಆಸಕ್ತಿಕರ ಸಂಗತಿಯೊಂದನ್ನು ತೆರೆದಿಡುತ್ತಾರೆ. 45 ಉಗ್ರರು ಉಗ್ರ ನೆಲೆಯ ಸಮೀಪದಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತು ಇತರ 20 ಉಗ್ರರು ಚಿಕಿತ್ಸೆ ಪಡೆಯುವಾಗಲೇ ಸಾವನ್ನಪ್ಪಿದ್ದಾರೆ ಎಂದು ಆಕೆ ವರದಿ ಮಾಡಿದ್ದಾರೆ. ದಾಳಿ ನಡೆದಿದ್ದು ಮಧ್ಯರಾತ್ರಿ 3.30ರ ಹೊತ್ತಿಗೆ. ಅದಾಗಿ ಎರಡೂವರೆ ಗಂಟೆಗಳ ನಂತರ ಅಂದರೆ ಬೆಳಗ್ಗೆ 6ರ ಹೊತ್ತಿಗೆ ಶಿಂಕಿಯಾರಿ ನೆಲೆಯಿಂದ ಸೇನಾ ತಂಡವು ಉಗ್ರ ನೆಲೆಯ ಬಳಿ ಬಂದವು. ಸೇನೆ ಬಂದ ತಕ್ಷಣವೇ ಗಾಯಾಳುಗಳನ್ನು ಹರ್ಕತ್-ಉಲ್-ಮುಜಾಹಿದೀನ್ ನೆಲೆಗೆ ಕರೆದೊಯ್ಯಲಾಯಿತು. ಅದು ಶಿಂಕಿಯಾರಿ ಅಲ್ಲಿದೆ. ಅವರಿಗೆ ಪಾಕಿಸ್ತಾನ ಸೇನೆ ವೈದ್ಯರೇ ಚಿಕಿತ್ಸೆ ನೀಡಿದರು. ಸ್ಥಳೀಯ ಮೂಲಗಳು ಹೇಳುವ ಪ್ರಕಾರ, ಈಗಲೂ ಆ ಕ್ಯಾಂಪ್ ನಲ್ಲಿ 45 ಉಗ್ರರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕಿತ್ಸೆ ವೇಳೆ 20 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ
ಚಿಕಿತ್ಸೆ ಸಮಯದಲ್ಲಿ ಗಂಭೀರ ಗಾಯಗಳಿಂದ 20 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ. ಯಾರು ಚೇತರಿಸಿಕೊಂಡರೋ ಅವರಿನ್ನೂ ಪಾಕ್ ಸೇನೆಯ ವಶದಲ್ಲೇ ಇದ್ದಾರೆ. ಅವರಿನ್ನೂ ಆಸ್ಪತ್ರೆಯಿಂದ ಬಿಡುಗಡೆ ಆಗಿಲ್ಲ. ಪತ್ರಕರ್ತೆ ತನ್ನ ವರದಿಗೆ ಬಾಲಾಕೋಟ್: ಮೋರ್ ಡೀಟೇಲ್ಸ್ ರಿವೀಲ್ಡ್ ಎಂದು ಶೀರ್ಷಿಕೆ ನೀಡಿದ್ದಾರೆ. ಇನ್ನು ಸತ್ತವರ ಬಗ್ಗೆ ಸುದ್ದಿ ಬಯಲಾಗಬಾರದು ಎಂಬ ಕಾರಣಕ್ಕೆ ಸಾವನ್ನಪ್ಪಿದ್ದ ಉಗ್ರಗಾಮಿಗಳ ಕುಟುಂಬವನ್ನು ಸ್ವತಃ ಜೈಷೆ ತಂಡದಿಂದ ಭೇಟಿ ಆಗಿ, ಪರಿಹಾರ ಹಣ ಇಂತಿಷ್ಟು ಎಂದು ಕೈಗೊಪ್ಪಿಸಿ ಬಂದಿದ್ದಾರೆ ಎಂದು ವರದಿಯಲ್ಲಿ ಅವರು ತಿಳಿಸಿದ್ದಾರೆ. ಇನ್ನು ಬೆಟ್ಟದ ಮೇಲಿರುವ ತಲೀಮ್-ಉಲ್-ಕುರಾನ್ ಕ್ಯಾಂಪ್ ಬಗ್ಗೆ ಇರುವ ಮಾಹಿತಿ ಫಲಕ ಕೂಡ ಹೊಸದಾಗಿ ಹಾಕಿರುವುದು ಎಂದು ಸ್ಥಳೀಯರೇ ತಿಳಿಸಿದ್ದಾಗಿ ಆಕೆ ದಾಖಲಿಸಿದ್ದಾರೆ.
ಮಸೂದ್ ಹೆಸರು ತೆಗೆದು ಹೊಸ ಫಲಕ
ಈ ಹಿಂದಿನ ಫಲಕ ತೆಗೆದುಹಾಕಲಾಗಿದೆ. ಅಲ್ಲೀಗ ಫಲಕದಲ್ಲಿ ಜಾಗತಿಕ ಭಯೋತ್ಪಾದಕ ಮಸೂದ್ ಅಜರ್ ನ ಹೆಸರು ತೆಗೆದುಹಾಕಲಾಗಿದೆ ಎನ್ನುವ ಆಕೆ, ಆ ಕ್ಯಾಂಪ್ ಪ್ರದೇಶವು ಈಗಲೂ ಸೇನೆಯ ಹಿಡಿತದಲ್ಲೇ ಇದೆ ಎಂದಿದ್ದಾರೆ. ಇದರ ಜತೆಗೆ ಆ ಉಗ್ರ ನೆಲೆಗೆ ತೆರಳುವ ದೂಳಿನಿಂದ ಕೂಡದ ಹಾದಿಯಲ್ಲಿ ತೆರಳಲು ನಿರ್ಬಂಧ ವಿಧಿಸಲಾಗಿದೆ. ಅಲ್ಲಿಗೆ ಸ್ಥಳೀಯ ಪೊಲೀಸರಿಗೆ ಕೂಡ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ. ಕೆಲವು ಮಕ್ಕಳು, 3-4 ಶಿಕ್ಷಕರು ಇರುವುದನ್ನು ಹೊರತುಪಡಿಸಿ, ಅಲ್ಲಿ ಜೈಷ್-ಇ-ಮೊಹ್ಮದ್ ನ ಕ್ಯಾಂಪ್ ಇತ್ತು ಎಂಬ ಸುಳಿವು ಕೂಡ ಸಿಗದಂತೆ ಮಾಡಲಾಗಿದೆ. 'ಈ ದಾಳಿಗೆ ಸಮಯ ಬಂದಾಗ ನಾವು ಪ್ರತೀಕಾರ ಹೇಳುತ್ತೇವೆ' ಎಂದು ಜೈಷೆ ನಾಯಕರು ಗುಂಪಿನ ಸದಸ್ಯರಿಗೆ ಭರವಸೆ ಕೂಡ ನೀಡಿದ್ದಾರಂತೆ.
ಸ್ಯಾಟಲೈಟ್ ಚಿತ್ರಗಳ ಮೂಲಕ ಕೂಡ ಖಚಿತ
ಅಂದಹಾಗೆ, ಬಾಲಾಕೋಟ್ ನಲ್ಲಿ ಭಾರತೀಯ ವಾಯು ಸೇನೆ ನಡೆಸಿದ ದಾಳಿ ಹಾಗೂ ಅದರಲ್ಲಿ ಉಗ್ರಗಾಮಿಗಳು ಮೃತಪಟ್ಟಿದ್ದಾರೆ ಎಂಬ ಬಗ್ಗೆ ಬರುತ್ತಿರುವ ಮೊದಲ ವರದಿ ಇದೇನಲ್ಲ. ಸ್ಥಳೀಯರನ್ನು ಮಾತನಾಡಿಸಿ, ಉಗ್ರ ನೆಲೆಯ ಸುತ್ತಮುತ್ತಲ ಭೌಗೋಳಿಕ ವ್ಯಾಪ್ತಿಯನ್ನು ಅಂದಾಜು ಮಾಡಿ, ಸ್ಯಾಟಲೈಟ್ ಚಿತ್ರಗಳ ಮೂಲಕ ಕೂಡ ಖಚಿತ ಪಡಿಸಲಾಗಿದೆ. ಆದರೆ ಅಲ್ಲಿ ಯಾವುದೇ ಉಗ್ರ ನೆಲೆ ಇರಲಿಲ್ಲ ಮತ್ತು ಯಾರು ಕೂಡ ಸಾವನ್ನಪ್ಪಿಲ್ಲ ಎಂದು ಪಾಕಿಸ್ತಾನ ಹೇಳುತ್ತಲೇ ಬರುತ್ತಿದೆ. ಆದರೆ ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಈ ದಾಳಿಗೆ ಪೂರಕವಾಗಿ ಕೆಲವು ಸಾಕ್ಷ್ಯಗಳನ್ನು ನೀಡಿವೆ.