ನವಿಲಿನ ಜತೆಗೆ ವಿಡಿಯೋ: ಪ್ರಧಾನಿ ನರೇಂದ್ರ ಮೋದಿ ನಡೆ ಶಿಕ್ಷಾರ್ಹ ಅಪರಾಧವೇ?
ನವದೆಹಲಿ, ಆಗಸ್ಟ್ 24: ಪ್ರಧಾನಿ ನರೇಂದ್ರ ಮೋದಿ ಬೆಳಗಿನ ದಿನಚರಿ ಸಂದರ್ಭದಲ್ಲಿ ತಮ್ಮ ನಿವಾಸದಲ್ಲಿ ನವಿಲುಗಳಿಗೆ ಆಹಾರ ತಿನಿಸುವ ವಿಡಿಯೋವೊಂದನ್ನು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
1.47 ನಿಮಿಷದ ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಕಚೇರಿ ಮತ್ತು ಲೋಕ ಕಲ್ಯಾಣ ಮಾರ್ಗ ನಿವಾಸದ ನಡುವೆ ನಿತ್ಯದ ವಾಯುವ ವಿಹಾರದ ಸಂದರ್ಭದಲ್ಲಿ ನವಿಲುಗಳು ಓಡಾಡುವ, ಗರಿಬಿಚ್ಚಿ ನಲಿದಾಡುವ ಮತ್ತು ಪ್ರಧಾನಿ ಅವುಗಳಿಗೆ ಕಾಳು ತಿನ್ನಿಸುವ ದೃಶ್ಯಗಳಿವೆ. ಈ ವಿಡಿಯೋದ ಜತೆ ಪ್ರಧಾನಿ ಹಿಂದಿ ಕವಿತೆಯೊಂದನ್ನು ಹಂಚಿಕೊಂಡಿದ್ದಾರೆ.
ನಾನು ನನ್ನ ಸ್ನೇಹಿತನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ: ಅರುಣ್ ಜೇಟ್ಲಿ ಪುಣ್ಯ ತಿಥಿಯಂದು ಮೋದಿ ಸ್ಮರಣೆ
ಈ ವಿಡಿಯೋ ಸಾಕಷ್ಟು ಚರ್ಚೆಗೆ ಒಳಗಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳು ಅವರ ಸರಳತೆ ಮತ್ತು ಜೀವಿಗಳೆಡೆಗಿನ ಪ್ರೀತಿಯನ್ನು ಕೊಂಡಾಡಿದ್ದಾರೆ. ಆದರೆ ಈ ವಿಡಿಯೋಗೆ ವಿರೋಧ ಕೂಡ ವ್ಯಕ್ತವಾಗಿದೆ. ಮುಂದೆ ಓದಿ...
ನವಿಲು ಸಾಕುವುದು ಶಿಕ್ಷಾರ್ಹ
ನವಿಲು ಭಾರತದ ರಾಷ್ಟ್ರೀಯ ಪಕ್ಷಿ. ವನ್ಯಜೀವಿ (ಸಂರಕ್ಷಣಾ) ಕಾಯ್ದೆಯ ಷೆಡ್ಯೂಲ್ 1ರ ಸೆಕ್ಷನ್ 2ಎ ಅಡಿ ನವಿಲನ್ನು ಪರಿಗಣಿಸಲಾಗಿದೆ. ಹೀಗಾಗಿ ಈ ಕಾಯ್ದೆಯ ಅನ್ವಯ, ಯಾರಾದರೂ ನವಿಲನ್ನು ಸಾಕುವುದು ಅಥವಾ ತಮ್ಮ ವಶದಲ್ಲಿ ಇರಿಸಿಕೊಳ್ಳುವುದು ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಸುಮಾರು 60,000 ರೂವರೆಗೆ ದಂಡ ಅಥವಾ ಎರಡೂ ಶಿಕ್ಷೆಗೆ ಗುರಿಪಡಿಸಬಹುದು.
ವಾಸಸ್ಥಾನ ಕಸಿದುಕೊಂಡಿದ್ದು ತಪ್ಪು
ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಇರುವುದು ಸಾಕಿದ ಅಥವಾ ವಶದಲ್ಲಿ ಇರುವ ನವಿಲೇ? ಅವರು ಸಾಕಿದ್ದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ ಎಂಬ ವಾದ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಹಾಗೊಮ್ಮೆ ಅವರು ನವಿಲು ಸಾಕದೆ ಅದು ತಾನಾಗಿಯೇ ಅವರ ನಿವಾಸದ ಬಳಿ ಬರುತ್ತದೆ ಎನ್ನುವುದಾದರೂ ಕೂಡ ಅಪರಾಧದ ಭಾಗವೇ ಆಗಿದೆ. ಏಕೆಂದರೆ ನವಿಲುಗಳು ವಾಸಿಸಬೇಕಾದ ಸಹಜ ಬೆಟ್ಟ ಗುಡ್ಡಗಳನ್ನು ಮನುಷ್ಯರು ಆಕ್ರಮಿಸಿಕೊಂಡಿದ್ದಾರೆ. ನಗರೀಕರಣ, ಅರಣ್ಯ ನಾಶ, ಅತಿಕ್ರಮಣ ಮುಂತಾದ ಕಾರಣದಿಂದ ನವಿಲುಗಳು ಆವಾಸಸ್ಥಾನಗಳನ್ನು ಕಳೆದುಕೊಳ್ಳುತ್ತಿದೆ. ಈ ಕಾರಣದಿಂದಾಗಿ ಮನುಷ್ಯರು ವಾವಿಸುವ ಜಾಗಕ್ಕೆ ಬಂದು ಅವರ ಬಳಕೆಯನ್ನು ಅದು ರೂಢಿಸಿಕೊಳ್ಳುವಂತಾಗಿದೆ. ಅವುಗಳು ಸಹಜ ಜೀವನ ಕಳೆದುಕೊಳ್ಳಲು ಕೂಡ ಸರ್ಕಾರವೇ ಹೊಣೆ ಎಂದು ಸಹ ಆರೋಪಿಸಲಾಗಿದೆ.
ನಿವೃತ್ತರಾದ ಧೋನಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯಸ್ಪರ್ಶಿ ಪತ್ರ
ಇದು ಪ್ರಾಣಿ ಕೋಮುವಾದ
ಮೋದಿ ಅವರು ನವಿಲಿಗೆ ಏಕೆ ಆಹಾರ ತಿನ್ನಿಸುತ್ತಿದ್ದಾರೆ? ಒಂಟೆ ಅಥವಾ ಬೆಕ್ಕು ಏಕಿಲ್ಲ? ಏಕೆಂದರೆ ಹಿಂದೂಯಿಸಂನಲ್ಲಿ ನವಿಲಿಗೆ ಪವಿತ್ರ ಸ್ಥಾನವಿದೆ. ಇದು ಪ್ರಾಣಿ ಕೋಮುವಾದ. ಪ್ರಾಣಿಗಳ ನಡುವೆಯೂ ಜಾತಿ ಮತ್ತು ಧರ್ಮದ ವಿಭಜನೆಯೇಕೆ? ಎಂದು ಕೆಲವರು ಹೇಳಿದ್ದಾರೆ.
ಮೋದಿ ಕಠಿಣ ನಿರ್ಧಾರ!
ದೇಶದಲ್ಲಿನ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 30 ಲಕ್ಷ ದಾಟಿದೆ. ಆದರೆ ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳುವ ಮೋದಿ ಅವರು ಈಗ ನವಿಲಿನ ಜತೆಗೆ ಫೋಟೊ ಶೂಟ್ ಮಾಡಿಸುವ ಸಮಯ ಎಂದು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಟೀಕಿಸಲಾಗಿದೆ.
ಮೋದಿ ಕ್ಸಿ ನರ್ತಿಸುತ್ತಿದ್ದಾರೆ!
ದೇಶವು ಕೋವಿಡ್ನಿಂದ ನರಳುತ್ತಿದೆ. ಆರ್ಥಿಕತೆ ನಾಶವಾಗಿದೆ, 2 ಲಕ್ಷ ಜನರು ಕೆಲಸ ಕಳೆದುಕೊಂಡಿದ್ದಾರೆ. ನಮ್ಮ ಲಡಾಖ್ ಭೂಮಿಯನ್ನು ಚೀನಾ ಕಬಳಿಸುತ್ತಿದೆ. ವಿದ್ಯಾರ್ಥಿಗಳು ಸಹಾಯಕ್ಕೆ ಯಾಚಿಸುತ್ತಿದ್ದಾರೆ. ಆದರೆ ಮೋದಿ 'ಕ್ಸಿ' ನವಿಲಿನ ಜತೆಗೆ ನರ್ತಿಸುತ್ತಿದ್ದಾರೆ. ಎಂತಹ ಮಾಸ್ಟರ್ ಸ್ಟ್ರೋಕ್ ಎಂದು ಮೋದಿ ಅವರ ಹೆಸರಿನ ಜತೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೆಸರು ಸೇರಿಸಿ ಕಾಂಗ್ರೆಸ್ ಟೀಕಿಸಿದೆ.
ನವಿಲು ಸರ್ವೇ ಸಾಮಾನ್ಯ
ಉತ್ತರ ಭಾರತದ ಅನೇಕ ಕಡೆ ನವಿಲಿನ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅವುಗಳಿಗೆ ಮನುಷ್ಯರ ಒಡನಾಟದ ಬಳಕೆಯೂ ಸಹಜವಾಗಿದೆ. ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಕೂಡ ನವಿಲುಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಮನೆಗಳ ಸುತ್ತಮುತ್ತ ಓಡಾಡುವುದು, ಮನುಷ್ಯರಿದ್ದಲ್ಲಿಗೆ ಯಾವುದೇ ಭಯವಿಲ್ಲದೆ ಓಡಾಡುವುದು ಕೂಡ ಅಭ್ಯಾಸವಾಗಿದೆ. ಹೀಗಾಗಿ ಪ್ರಧಾನಿ ಮೋದಿ ಅವರ ಮನೆ ಸಮೀಪ ನವಿಲುಗಳ ಓಡಾಟ, ನರ್ತನ ವಿಶೇಷವಲ್ಲ ಎನ್ನುವುದು ಅನೇಕರ ವಾದ.
ನವಿಲಿನ ಬೇಟೆ ಇಳಿಕೆ
ನವಿಲಿನ ಮಾಂಸಕ್ಕಾಗಿ ಈ ಹಿಂದೆ ಅವುಗಳನ್ನು ಹೆಚ್ಚಾಗಿ ಬೇಟೆಯಾಡುತ್ತಿದ್ದರು. ಆದರೆ ಅದರ ವಿರುದ್ಧ ಅರಣ್ಯ ಇಲಾಖೆ ಕಠಿಣ ಎಚ್ಚರಿಕೆ ನೀಡಿದ ಪರಿಣಾಮ ಬೇಟೆಯ ಚಟುವಟಿಕೆಗಳು ಕಡಿಮೆಯಾಗಿವೆ. ಅಲ್ಲದೆ, ನವಿಲುಗಳು ಹಾವನ್ನು ಹೆಚ್ಚಾಗಿ ತಿನ್ನುತ್ತವೆ. ನವಿಲನ್ನು ಮಾಂಸಕ್ಕಾಗಿ ಬೇಟೆಯಾಡಿದ್ದ ಅನೇಕರಿಗೆ ಅವುಗಳ ಹೊಟ್ಟೆಯೊಳಗೆ ನಾಗರಹಾವು ಸಿಕ್ಕಿದ ಉದಾಹರಣೆಗಳಿವೆ. ಹೀಗಾಗಿ ಸರ್ಪಹತ್ಯೆಯ ದೋಷ ತಮಗೆ ಬರುತ್ತದೆ ಎಂಬ ಭಯದಿಂದಲೂ ನವಿಲಿನ ಬೇಟೆಗೆ ಕಡಿವಾಣ ಬಿದ್ದಿದೆ. ನವಿಲಿನ ಸಂಖ್ಯೆ ಹೆಚ್ಚಳಕ್ಕೆ ಇದೂ ಕಾರಣ ಎನ್ನಲಾಗಿದೆ.