ರಾಷ್ಟ್ರೀಯ ಯುವದಿನ; ಸಂತ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ
"ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ" ಎಂದು ಕರೆ ನೀಡಿದವರು ಸ್ವಾಮಿ ವಿವೇಕಾನಂದ. ಯುವಕರಾಗಿದ್ದಾಲೇ ಸನ್ಯಾಸ ಸ್ವೀಕಾರ ಮಾಡಿ ಧರ್ಮ ಪ್ರಚಾರಕ್ಕೆ ಧುಮುಕಿದ ವಿವೇಕಾನಂದರು ಯುವಜನರಿಗೆ ಸ್ಪೂರ್ತಿ.
ಜನವರಿ 12 ವಿವೇಕಾನಂದರ ಜನ್ಮದಿನ. ವಿವೇಕಾನಂದ ಜನ್ಮದಿನವನ್ನು ಪ್ರತಿವರ್ಷ ರಾಷ್ಟ್ರೀಯ ಯುವದಿನವಾಗಿ ಆಚರಣೆ ಮಾಡಲಾಗುತ್ತದೆ. ಅಪ್ರತಿಮ ವಾಗ್ಮಿ, ಪ್ರಭಾವಶಾಲಿ ವ್ಯಕ್ತಿತ್ವದ ಸಂತನನ್ನು ದೇಶದ ಜನರು ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ನೆನಪಿಸಿಕೊಳ್ಳುತ್ತಾರೆ.
ತಮ್ಮ ಭಾಷಾ ಕೌಶಲ್ಯ, ಆಳವಾದ ಜ್ಞಾನ, ವಿಷಯಗಳನ್ನು ಮಂಡಿಸುವ ರೀತಿ ಮುಂತಾದವುಗಳಿಂದಲೂ ಅಮೆರಿಕದಂತಹ ದೇಶದ ಜನರನ್ನು ಸೆಳೆದವರು ಸ್ವಾಮಿ ವಿವೇಕಾನಂದ. ಗುರುಗಳಿಂದ ಪಡೆದ ಬೋಧನೆಯಂತೆ ನಡೆದವರು, ನುಡಿದವರು ವಿವೇಕಾನಂದರು.
1893ರಲ್ಲಿ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ "ಅಮೆರಿಕದ ನನ್ನ ಸಹೋದರ ಸಹೋದರಿಯರೇ" ಎಂದು ಮಾತು ಆರಂಭಿಸಿದ ಸ್ವಾಮಿ ವಿವೇಕಾನಂದರು ವಿಶ್ವಮಾನವರಾಗಿ ರೂಪಗೊಂಡರು.
ವಿದೇಶದ ವೇದಿಕೆಯಲ್ಲಿ ನಿಂತು ಭಾರತದ ಧರ್ಮ, ಸಂಸ್ಕೃತಿ ರಾಯಭಾರಿಯಾಗಿ ದೇಶಿಯ ಜೀವನ ಶೈಲಿ, ಸಂಸ್ಕಾರವನ್ನು ಜಗತ್ತಿಗೆ ತಿಳಿಯುವಂತೆ ಮಾಡಿದರು. ಭಾರತದ ಬಗ್ಗೆ ವಿದೇಶಿಯರಿದ್ದ ಭಾವನೆಯನ್ನು ಹೋಗಲಾಡಿಸಿ, ಗೌರವದಿಂದ ನೋಡುವಂತೆ ಮಾಡಿದವರು.
"ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ. ಅವುಗಳನ್ನು ಹಗಲಿರುಳು ನಿಮ್ಮ ಮುಂದಿಟ್ಟುಕೊಳ್ಳಿ. ಇದರಿಂದ ಮಹತ್ ಕಾರ್ಯ ಉದ್ಭವಿಸುತ್ತದೆ" ಎಂದು ಯುವಜನರಿಗೆ ಕರೆ ನೀಡಿದವರು.
ಸ್ವಾಮಿ ವಿವೇಕಾನಂದರು ಯುವಜನರ ಸ್ಫೂರ್ತಿಯ ಸೆಲೆ. ಆದ್ದರಿಂದ, ಅವರ ಜನ್ಮದಿನವನ್ನು ರಾಷ್ಟ್ರೀಯ ಯುವದಿನವಾಗಿ ಆಚರಣೆ ಮಾಡಲಾಗುತ್ತದೆ. 1984ರಲ್ಲಿ ಭಾರತ ಸರ್ಕಾರ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಣೆ ಮಾಡುವುದಾಗಿ ಘೋಷಣೆ ಮಾಡಿತು.
ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ವಿವೇಕಾನಂದ ಭಾವಚಿತ್ರ ಹಲವರಿಗೆ ಸ್ಫೂರ್ತಿ ತುಂಬುತ್ತದೆ. ಅವರು ಮಾಡಿದ ಭಾಷಣ ಕೇಳಿದರೆ, ಬರೆದ ಲೇಖನ ಓದಿದರೆ ಜ್ಞಾನ ವೃದ್ಧಿಯಾಗುತ್ತದೆ. ಅಖಂಡ ಭಾರತದ ಕಲ್ಪನೆ ಹೊಂದಿದ್ದ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವು ಸಂತನಿಗೆ ನಾವು ನೀಡುವ ನಿಜವಾದ ಗೌರವವಾಗಿದೆ.