ಮಂಗಳ ಗ್ರಹದ ಮುಗಿಲ ಮೇಲೆ ಬಣ್ಣ ಬಣ್ಣದ ಮೋಡಗಳ ಸಾಲು..!
ಅಬ್ಬಾ.. ಮಂಗಳ ಗ್ರಹ ಎಂದ ಕೂಡಲೇ ಎಲ್ಲರ ಕಿವಿ ಒಮ್ಮೆಲೆ ಅಲರ್ಟ್ ಆಗಿ ಬಿಡುತ್ತೆ. ಏಕೆಂದರೆ ಮನುಷ್ಯನ ಅತಿಯಾಗಿ ಕಾಡಿದ ಹಾಗೂ ಕಾಡುತ್ತಿರುವ ಗ್ರಹ ಅದು. ಹೀಗಾಗಿಯೇ ಅಂಗಾರಕನ ಅಂಗಳದ ಮೇಲೆ ಒಂದು ಮನೆಯ ಕಟ್ಟಬೇಕು ಅಂತಾ ಮನುಷ್ಯ ಅರ್ಧ ಶತಮಾನಗಳಿಂದಲೂ ಕಷ್ಟಪಡುತ್ತಾ ಬಂದಿದ್ದಾನೆ. ಹೀಗೆ ನಾಸಾ ಸಂಸ್ಥೆ ಮಂಗಳ ಗ್ರಹದ ಅಧ್ಯಯನ ನಡೆಸಲು ರಾಶಿ ರಾಶಿ ರೋವರ್ಗಳನ್ನ ಅಲ್ಲಿ ಲ್ಯಾಂಡ್ ಮಾಡಿದೆ.
ಇದೀಗ ನಾಸಾ ಸಂಸ್ಥೆಯ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹದ ಮುಗಿಲಿನಲ್ಲಿ ಮೋಡಗಳ ಸಾಲನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದೆ. ಬಣ್ಣ ಬಣ್ಣದ ಮೋಡಗಳು ಮಂಗಳ ಗ್ರಹದ ಮೇಲೆ ಮೆಲ್ಲಗೆ ಸಾಗಿವೆ. ಹಾಗಂತ ಇವು ಜೀವಜಲ ತುಂಬಿದ, ನೀರಿನ ಮೋಡಗಳು ಅಂದುಕೊಳ್ಳಬೇಡಿ.
ಏಕೆಂದರೆ ಮಂಗಳ ಗ್ರಹದ ಮೇಲೆ ಅಸಲಿಗೆ ಅಷ್ಟು ಪ್ರಮಾಣದಲ್ಲಿ ನೀರಿಲ್ಲ, ಭೂಮಿ ಮೇಲೆ ಯಥೇಚ್ಛವಾಗಿ ನೀರಿದ್ದರೂ ಮಂಗಳ ಗ್ರಹದಲ್ಲಿ ಅಷ್ಟು ನೀರಿಲ್ಲ. ನೀರು ಇದ್ದರೂ ಮಂಗಳ ಗ್ರಹದ ಒಳಭಾಗದಲ್ಲಿ ಅಡಗಿ ಕೂತಿದೆ. ಹೀಗಾಗಿ ಈ ಮೋಡಗಳ ಬಗ್ಗೆ ನಿಖರವಾದ ಮಾಹಿತಿ ಇನ್ನೂ ಲಭಿಸಿಲ್ಲವಾದರೂ ಅಧ್ಯಯನ ಮುಂದುವರಿದಿದೆ.
ಮಂಗಳ ಗ್ರಹದಲ್ಲಿ ‘ಜೀವಜಲ’
ಅಷ್ಟಕ್ಕೂ ಕೆಂಪು ಗ್ರಹ ಮಂಗಳನ ಮೇಲೆ ನೂರಾರು ಕೋಟಿ ವರ್ಷಗಳ ಹಿಂದೆ ನೀರು ಇತ್ತು ಎಂಬ ಸತ್ಯವನ್ನು ಇತ್ತೀಚೆಗೆ ವಿಜ್ಞಾನಿಗಳು ಕಂಡುಕೊಂಡಿದ್ದರು. ಆದರೆ ಆ ನೀರು ಹೋಗಿದ್ದು ಎಲ್ಲಿಗೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು, ಮಂಗಳ ಗ್ರಹದ ಮೇಲೆ ಇದ್ದ ನೀರು ದಿಢೀರ್ ನಾಪತ್ತೆ ಆಗಲು ಅದರ ಗುರುತ್ವ ಬಲದಲ್ಲಿನ ಬದಲಾವಣೆ ಪ್ರಮುಖ ಕಾರಣ ಎನ್ನಲಾಗಿದೆ. ನಾಸಾ ಸಂಶೋಧನೆ ಹೇಳುವಂತೆ, ಮಂಗಳ ಗ್ರಹದಿಂದ ನೀರು ಆಕಾಶಕ್ಕೆ ಹಾರಿ ಹೋಗಿಲ್ಲ, ಅದೇ ಗ್ರಹದಲ್ಲಿ ಇದೆ. ಆದರೆ ಅದು ಮಂಗಳನ ನೆಲದಲ್ಲಿ ಹುದುಗಿದೆಯಂತೆ.
ನೀರು ಆವಿಯಾಗಿತ್ತು ಎಂದಿದ್ದರು..!
ಕೆಲವು ತಿಂಗಳ ಹಿಂದೆ ವರದಿಯೊಂದು ಹೊರಬಿದ್ದಿತ್ತು. ಆ ವರದಿ ಪ್ರಕಾರ ಮಂಗಳ ಗ್ರಹದಲ್ಲಿ 4 ಬಿಲಿಯನ್ ವರ್ಷ ಅಂದರೆ 400 ಕೋಟಿ ವರ್ಷಗಳ ಹಿಂದೆ ಅಪಾರ ಪ್ರಮಾಣದಲ್ಲಿ ನೀರು ಇತ್ತು, ಆದರೆ ಮಂಗಳ ಗ್ರಹದ ಉಷ್ಣಾಂಶದ ಕಾರಣ ಆವಿಯಾಗಿದೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದರು. ಆದರೆ ಹೊಸ ಸಂಶೋಧನೆಗಳು ಎಲ್ಲಾ ಹೇಳಿಕೆಗಳನ್ನ ಉಲ್ಟಾ ಮಾಡಿದೆ. ಮಂಗಳ ಗ್ರಹದ ಗುರುತ್ವ ಬಲದಲ್ಲಿ ಉಂಟಾದ ಬದಲಾವಣೆ ನೀರನ್ನು ನಾಪತ್ತೆ ಮಾಡಿದೆ ಎಂಬುದು ಗೊತ್ತಾಗಿದೆ. ಹಾಗೆಂದು ಮಂಗಳ ಗ್ರಹದ ಮೇಲಿದ್ದ ನೀರು ಎಲ್ಲಿಗೂ ಹೋಗಿಲ್ಲ. ಆದರೆ ನಾಪತ್ತೆಯಾದ ನೀರು ಮಂಗಳ ಗ್ರಹದ ನೆಲದಲ್ಲೇ ಹುದುಗಿದೆ ಎನ್ನಲಾಗಿದೆ.
ಮಂಗಳ ಗ್ರಹದಲ್ಲಿ ಅಂತರ್ಜಲ..?
ಭೂಮಿ ಮೇಲೆ ಬೋರ್ ತೋಡಿದಂತೆ ಮಂಗಳ ಗ್ರಹದಲ್ಲೂ ಬೋರ್ವೆಲ್ ತೋಡುವ ದಿನಗಳು ದೂರವಿಲ್ಲ. ಏಕೆಂದರೆ ವಿಜ್ಞಾನಿಗಳು ಇದೀಗ ನೀಡಿರುವ ವರದಿಯ ಪ್ರಕಾರ ಮಂಗಳನ ಮೇಲೆ ನಾಪತ್ತೆಯಾಗಿರುವ ನೀರು, ಮಂಗಳ ಗ್ರಹದ ನೆಲದ ಒಳಗೆ ಸೇರಿದೆ ಎನ್ನಲಾಗುತ್ತಿದೆ. ವಿಜ್ಞಾನಿಗಳು ಹೇಳಿದಂತೆ ನೀರು ಮಂಗಳನ ನೆಲದಲ್ಲಿ ಹುದುಗಿದ್ದರೆ, ಅಂತರ್ಜಲ ಹೊರತೆಗೆಯಲು ಬೋರ್ವೆಲ್ ತೋಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಆಗ ಮಂಗಳ ಗ್ರಹದ ಮೇಲೂ ಬೋರ್ವೆಲ್ ತೋಡುವ ಕಂಪನಿಗಳು ಶುರುವಾದರೂ ಅಚ್ಚರಿ ಏನಿಲ್ಲ. ಇದು ಬಾಹ್ಯಾಕಾಶ ಪ್ರೇಮಿಗಳು ಹಾಗೂ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಆಂತರಿಕ ಕ್ರಿಯೆ ಮುಳುವಾಯ್ತಾ..?
ಭೂಮಿ ಒಳಗೆ ನಡೆಯುವ ಆಂತರಿಕ ಕ್ರಿಯೆಗಳಂತೆ ಮಂಗಳ ಗ್ರಹದಲ್ಲೂ ಆಂತರಿಕ ಕ್ರಿಯೆಗಳು ನಡೆಯುತ್ತವೆ. ಈ ಆಂತರಿಕ ಕ್ರಿಯೆ ಇಲ್ಲದ ಹೊರತಾಗಿ ಒಂದು ಗ್ರಹಕ್ಕೆ ಅಸ್ತಿತ್ವ ಇರುವುದಿಲ್ಲ. ಏಕೆಂದರೆ ಬಾಹ್ಯ ಒತ್ತಡಗಳಿಗೆ ಸರಿಸಮನಾಗಿ ಆಂತರಿಕ ಒತ್ತಡವೂ ಇರಬೇಕು. ಹೀಗೆ ಆಂತರಿಕ ಒತ್ತಡದ ಏರಿಳಿತ ಒಂದು ಗ್ರಹದ ಗುರುತ್ವದ ಮೇಲೂ ಪ್ರಭಾವ ಬೀರುತ್ತದೆ. ಇದೇ ರೀತಿ ಮಂಗಳ ಗ್ರಹದಲ್ಲೂ ಗುರುತ್ವಬಲದ ಏರಿಳಿತದಿಂದ ನೀರು ಇತರ ಸಂಯುಕ್ತಗಳ ಜೊತೆ ಸೇರಿ ಮಂಗಳ ಗ್ರಹದ ಅಂತರ್ಜಲ ಸೇರಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಂಶೋಧನೆಗಳು ಮುಂದುವರಿದಿದ್ದು, ಸದ್ಯದಲ್ಲೇ ಸ್ಪಷ್ಟನೆ ಸಿಗಲಿದೆ.
Recommended Video
2 ಕಿ.ಮೀ. ದಪ್ಪವಾಗಿತ್ತು ಹಿಮ..!
ಮಂಗಳ ಗ್ರಹದ ಮೇಲೆ 400 ಕೋಟಿ ವರ್ಷಗಳ ಹಿಂದೆ ಭಾರಿ ಪ್ರಮಾಣದಲ್ಲಿ ಹಿಮ ಹುದುಗಿತ್ತು. ಮಂಗಳನ ನೆಲದ ಮೇಲೆ ಹರಡಿದ್ದ ಈ ಹಿಮದ ಪ್ರಮಾಣ ಬರೋಬ್ಬರಿ 2 ಕಿ.ಮೀ. ದಪ್ಪವಾಗಿತ್ತು ಎಂಬ ವಿಚಾರವನ್ನೂ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಹೀಗೆ ಇಡೀ ಗ್ರಹದಲ್ಲಿ ಹರಡಿದ್ದ ಹಿಮ ಕ್ರಮೇಣ ಕರಗುತ್ತಾ ಸಾಗಿದೆ. ಮಂಗಳ ಗ್ರಹದ ಗುರುತ್ವ ಬಲದ ಬದಲಾವಣೆ ಪರಿಣಾಮ ಹಿಮ ಕರಗಿ, ಆ ನೀರು ಕೂಡ ಇತರ ಸಂಯುಕ್ತದೊಂದಿಗೆ ಬೆರೆತು ನೆಲ ಸೇರಿದೆ ಎನ್ನಲಾಗುತ್ತಿದೆ. ಇದರ ಬಗ್ಗೆ ಹೆಚ್ಚಿನ ಸಂಶೋಧನೆ ಮುಂದುವರಿಸಿದ್ದಾರೆ ವಿಜ್ಞಾನಿಗಳು.