ಕೊಳಗೇರಿ ಮಕ್ಕಳ ಬದುಕಿಗೆ ಹೊಸ 'ದಿಕ್ಕು': ನರ್ಮದಾ ಕುರ್ತಕೋಟಿ ಸಂದರ್ಶನ
ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕನ್ನಡದ ಪ್ರಸಿದ್ಧ ವಿಮರ್ಶಕ, ಸಾಹಿತಿ ಕೀರ್ತಿನಾಥ ಕುರ್ತಕೋಟಿ ಅವರ ಹೆಸರನ್ನು ಕೇಳದವರ್ಯಾರು? ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. 2003 ರಲ್ಲಿ ಇಹಲೋಕ ತ್ಯಜಿಸಿದ ಅವರು, 'ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್' ಮೂಲಕ ಇಂದಿಗೂ ಜೀವಂತವಾಗಿದ್ದಾರೆ!
ಧಾರವಾಡದಲ್ಲಿರುವ ಕೀರ್ತಿನಾಥ ಕುರ್ತಕೋಟಿ ಅವರ ಸೊಸೆ ನರ್ಮದಾ ಕುರ್ತಕೋಟಿ, ಮತ್ತವರ ಕುಟುಂಬ ಕುರ್ತಕೋಟಿ ಅವರ ಸಮಾಜಮುಖಿ ಆಶಯಗಳು ಅವರ ಕಾಲಾನಂತರವೂ ಜೀವಂತವಾಗಿರುವಂತೆ ನೋಡಿಕೊಳ್ಳುತ್ತಿದೆ.
ವನವಾಸಿಗಳ ಬದುಕಲ್ಲಿ ಬೆಳಕು ತಂದ ದಾಂಡೇಲಿಯ ಕೌಸಲ್ಯ ರವೀಂದ್ರ
ನವೆಂಬರ್ 2005 ರಂದು ಆರಂಭವಾದ ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್, ಕೀರ್ತಿನಾಥ ಕುರ್ತಕೋಟಿ ಅವರ ಪುಸ್ತಕಗಳನ್ನು ಮುದ್ರಿಸಿ, ಅವುಗಳಿಂದ ಬಂದ ಹಣವನ್ನು ಆರ್ಥಿಕವಾಗಿ ಅನಾನುಕೂಲತೆಯಿಂದ ಬಳಲುತ್ತಿರುವವರಿಗೆ ನೀಡುತ್ತಿದೆ. ಇದರ ಒಂದು ಭಾಗವಾಗಿ 2008 ರಲ್ಲಿ ದಿಕ್ಕು ಯೋಜನೆ ಆರಂಭವಾಯ್ತು. ದಿಕ್ಕುವಿನ ಮುಖ್ಯ ಗುರಿ, ಕೊಳಗೇರಿಯಲ್ಲಿರುವ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು. ಈ ಕೆಲಸವನ್ನು ಕಳೆದೊಂದು ದಶಕಗಳಿಂದ ಯಾವ ಪ್ರಚಾರದ ಆಸೆಯಿಲ್ಲದೆ ಈ ಟ್ರಸ್ಟ್ ಮಾಡಿಕೊಂಡು ಬರುತ್ತಿದೆ.
ಈ ಕುರಿತು ಒನ್ ಇಂಡಿಯಾ ಜೊತೆ ಮಾತನಾಡಿದ ನರ್ಮದಾ ಕುರ್ತಕೋಟಿ, 'ನನಗೆ ನನ್ನ ಬಗ್ಗೆಯೇ ಹೇಳಿಕೊಳ್ಳೋಕೆ ಇಷ್ಟವಿಲ್ಲ. ನಮ್ಮ ಟ್ರಸ್ಟ್ ಬಗ್ಗೆ ಒಂಚೂರು ಹೇಳಬಲ್ಲೆ ಅಷ್ಟೆ' ಎಂದು ನಗುನಗುತ್ತಲೇ ಮಾತು ಆರಂಭಿಸಿದರು. ನರ್ಮದಾ ಕುರ್ತಕೋಟಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ದಿಕ್ಕು ಬಗ್ಗೆ ಅವರು ಹಂಚಿಕೊಂಡ ಕೆಲವು ಮಹತ್ವದ ವಿಷಯಗಳು ಇಲ್ಲಿವೆ.
ಕುರ್ತಕೋಟಿ ಅವರ ನೆನಪಿನಲ್ಲಿ...
ನಮ್ಮ ಮಾವನವರಾದ ಕೀರ್ತಿನಾಥ ಕುರ್ತಕೋಟಿ ಅವರ ಸ್ಮರಣೆಗಾಗಿ, ಅವರು ತೀರಿಕೊಂಡ (2003)ಎರಡು ವರ್ಷದ ನಂತರ ಅಂದರೆ 2005 ನವೆಂಬರ್ 28 ರಂದು ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್ ನೋಂದಣಿಯಾಯಿತು. ತಮ್ಮ 'ಉರಿಯ ನಾಲಗೆ' ಪುಸ್ತಕಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(1995) ಪಡೆದ ಕುರ್ತಕೋಟಿ ಅವರ ಹಲವು ಪುಸ್ತಕಗಳನ್ನು ಪ್ರಕಾಶಿಸಿ, ಅದರಿಂದ ಸಂಗ್ರಹವಾಗುವ ಹಣವನ್ನು ಆರ್ಥಿಕವಾಗಿ ಅನಾನುಕೂಲತೆಯಿಂದ ಬಳಲುತ್ತಿರುವ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೀಡುವ ಕೆಲಸವನ್ನು ದಿಕ್ಕು ಮಾಡುತ್ತಿದೆ. ನಮ್ಮ ಮೊದಲ ಆದ್ಯತೆ ಧಾರವಾಡದ ಸುತ್ತ ಮುತ್ತಲಿರುವ ಕೊಳಗೇರಿ ಮಕ್ಕಳ ಶಿಕ್ಷಣ.
ದಿಕ್ಕುವಿನ ಗುರಿ
ದಿಕ್ಕು ಟ್ರಸ್ಟ್ ನ ಮುಖ್ಯ ಗುರಿ ಎಂದರೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಕ್ಕಳಿಗೆ ಶಿಕ್ಷಣ ನೀಡುವುದು. ಈ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದು. ಅಷ್ಟೇ ಅಲ್ಲ, ಮಕ್ಕಳು ಶಾಲೆಗೆ ಹೋಗಲು ಬೇಕಾದ ಮೂಲಭೂತ ಅಗತ್ಯಗಳನ್ನು ಒದಗಿಸುವುದು, ಬೇರೆ ಬೇರೆ ಶಿಬಿರಗಳನ್ನು ಆಯೋಜಿಸಿ ಮಕ್ಕಳಲ್ಲಿ ಕೌಶಲ್ಯ ಬೆಳೆಸುವ ಕೆಲಸ ಮಾಡುವುದು, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ವೇದಿಕೆ ಒದಗಿಸುವುದು ಈ ಎಲ್ಲ ಉದ್ದೇಶ ದಿಕ್ಕುವಿನದು. ಕಳೆದೊಂದು ದಶಕಗಳಿಂದ ಈ ಎಲ್ಲ ಉದ್ದೇಶಗಳ ಈಡೇರಿಸುವಲ್ಲಿ ದಿಕ್ಕು ಸಂಪಲವಾಗಿದೆ.
ಸೌಂದರ್ಯಳನ್ನು ಜೀವಂತವಾಗಿಟ್ಟಿರುವ ಅತ್ತಿಗೆ ನಿರ್ಮಲಾ!
ಹೊಟ್ಟೆಗೆ ಹಿಟ್ಟಿಲ್ಲದಿರುವಾಗ ಶಿಕ್ಷಣ ಯಾರಿಗೆ ಬೇಕು?!
ಒಂದು ಸಮೀಕ್ಷೆಯ ಪ್ರಕಾರ ಧಾರವಾಡ ನಗರದಲ್ಲೇ ಸುಮಾರು 33 ಕೊಳಗೇರಿಗಳಿವೆ. ಇಲ್ಲಿರುವ ಒಟ್ಟು 8300 ಕುಟುಂಬಗಳಿಗೆ ಆಶ್ರಯವಿಲ್ಲ! ಈ ಕೊಳಗೇರಿಯ್ಲಿರುವ ಮಕ್ಕಳ ಪಾಲಕರೆಲ್ಲ ಅನ ಕ್ಷರಸ್ಥರು. ಅವರಿಗೆ ಒಂದು ಹೊತ್ತಿನ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾಗಿರುವಾಗಶಿಕ್ಷಣ ಯಾರಿಗೆ ಬೇಕು ಎಂಬುದು ಅವರ ಪ್ರಶ್ನೆ!
ಕೊಳಗೇರಿ ಮಕ್ಕಳಲ್ಲಿ ಅಗಾಧ ಪ್ರತಿಭೆ
ಕೊಳೆಗೇರಿ ಮಕ್ಕಳಲ್ಲಿರುವ ಅಗಾಧ ಪ್ರತಿಭೆಯನ್ನು ಕಂಡರೆ ಅಚ್ಚರಿಯಾಗುತ್ತದೆ. ಬಡತನದಿಂದಾಗಿ ಅವಕಾಶ ವಂಚಿತರಾಗಿ, ಕೀಳರಿಮೆಯಿಂದ ಬಳಲುತ್ತಿರುವ, ಸಮಾಜದ ಮುಖ್ಯ ವಾಹಿನಿಗೆ ಬರಲಾಗದೆ ಪರಿತಪಿಸುತ್ತಿರುವ ಅವರಿಗೆ ಕೊಂಚ ಅವಕಾಶ, ಒಂದಷ್ಟು ಆರ್ಥಿಕ ನೆರವು, ಹಿಡಿಯಷ್ಟು ಪ್ರೋತ್ಸಾಹ ನೀಡಿದರೆ ಅವರು ಖಂಡಿತ ಅಸಾಧ್ಯವಾದುದನ್ನು ಸಾಧಿಸಬಲ್ಲರು. ಅದಕ್ಕೆಂದೇ ನಾವು ಈ ಎಲ್ಲ ಕೊಳಗೇರಿಯಿಂದ ಆಯ್ದ ಸುಮಾರು 150 ಕ್ಕೂ ಹೆಚ್ಚು ಮಕ್ಕಳಿಗೆ ಆರ್ಥಿಕ ನೆರವು, ಅವರ ಶಾಲಾ ಶುಲ್ಕ ಭರಿಸುವುದು, ಅವರಿಗೆ ಅಗತ್ಯವಿರುವ ಸಾಮಾಗ್ರಿಗಳನ್ನು ಒದಗಿಸುವುದು, ಟ್ಯೂಶನ್ ನೀಡುವುದು, ಕಂಪ್ಯೂಟರ್ ಮತ್ತು ಸ್ಪೋಕನ್ ಇಂಗ್ಲಿಶ್ ತರಬೇತಿ ನೀಡುವ ಕೆಲಸ ಮಾಡುತ್ತಿದ್ದೇವೆ.
ಇವರು ಯಾರಿಗೂ ಕಡಿಮೆಯಿಲ್ಲ!
ಕೇವಲ ಪಠ್ಯ ವಿಷಯಗಳನ್ನು ಕಲಿಸುವುದಷ್ಟೇ ಅಲ್ಲ. ಈ ಮಕ್ಕಳಲ್ಲಿರುವ ಇನ್ನಿತರ ಪ್ರತಿಭೆಗಳನ್ನೂ ಹೊರತೆಗೆಯುವ ಕೆಲಸ ದಿಕ್ಕುವಿನಲ್ಲಿ ನಡೆಯುತ್ತದೆ. ಆದ್ದರಿಂದಲೇ ಆಗಾಗ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮಕ್ಕಳಿಗೆ ವೇದಿಕೆ ನೀಡುತ್ತೇವೆ. ನೃತ್ಯ, ಹಾಡುಗಾರಿಕೆ, ಆಟ, ಓಟ... ಹೀಗೆ ಎಲ್ಲ ವಿಷಯಗಳಲ್ಲೂ ಈ ಮಕ್ಕಳು ತೋರುವ ಆಸಕ್ತಿಯನ್ನು ನೋಡಿದರೆ ಇವರು ಯಾರಿಗೂ ಕಡಿಮೆಯಿಲ್ಲ ಅನ್ನಿಸುತ್ತೆ.
ಆರೋಗ್ಯ, ಸ್ವಚ್ಛತೆಯ ಅರಿವು
ಕೇವಲ ಶಿಕ್ಷಣವಷ್ಟೇ ಅಲ್ಲ, ಮನುಷ್ಯ ಬದುಕುವುದಕ್ಕೆ ಆರೋಗ್ಯವೂ ಅಷ್ಟೇ ಮುಖ್ಯ. ಈ ಮಕ್ಕಳಲ್ಲಿ ಸ್ವಚ್ಛತೆ ಮತ್ತು ಆರೋಗ್ಯ ಕಾಯ್ದುಕೊಳ್ಳುವ ಬಗ್ಗೆ ಅರಿವು ಮೂಡಿಸುವ ಜೊತೆಗೆ, ಆರೋಗ್ಯ ತಪಾಸಣಾ ಶಿಬಿರಗಳನ್ನೂ ನಡೆಸುತ್ತೇವೆ. ಮಕ್ಕಳು ಮತ್ತು ಪಾಲಕರು ಇಬ್ಬರಿಗೂ ಆಪ್ತಸಲಹೆ ನೀಡಿ, ಅವರಲ್ಲಿ ಆರೋಗ್ಯದ ಕುರಿತು ಕಾಳಜಿ ಮೂಡುವಂತೆ ಮಾಡುತ್ತೇವೆ.