ಪುನೀತ್ ಸಾವಿನ ನಂತರ ನಕ್ಕೀರನ್ ಗೋಪಾಲ್ ಹೊರಗಿಟ್ಟ ಸತ್ಯ - ಭಾಗ 2
ಮೊದಲನೇ ಭಾಗದಿಂದ ಮುಂದುವರಿಸಲಾಗಿದೆ..
"ಯಾರಿಗೂ ಹೇಳಬಾರದು ಎನ್ನುವ ಕಂಡೀಷನ್ನೊಂದಿಗೆ ಪುನೀತ್ ಸಹಾಯ ಮಾಡುತ್ತಿದ್ದರು. ಶಿವಣ್ಣ ಕೂಡಾ ಸಹಾಯ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ, ಕೋವಿಡ್ ಸಮಯದಲ್ಲಿ ಎಷ್ಟೋ ಜನರಿಗೆ ಮೂರು ತಿಂಗಳು ಸಹಾಯವನ್ನು ಮಾಡಿದ್ದರು. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಎಂದು ಡಾ.ರಾಜಕುಮಾರ್ ಅವರು ಕಾಡಿನಲ್ಲಿ ಇರಬೇಕಾದಾಗಲೂ ನನ್ನಲ್ಲಿ ಹೇಳಿದ್ದರು" ಎಂದು ನಕ್ಕೀರನ್ ಗೋಪಾಲ ಹಿಂದಿನ ಘಟನೆಯನ್ನು ವಿವರಿಸಿದ್ದಾರೆ.
"ಪುನೀತ್ ರಾಜಕುಮಾರ್ ಚೆನ್ನಾಗಿ ಹಾಡುತ್ತಾರೆ ಎಂದು ಅವರ ತಂದೆ ಕಾಡಿನಲ್ಲಿ ನನ್ನ ಬಳಿ ಹೇಳಿದ್ದರು. ಕೆಲವೊಂದು ಚಿತ್ರಗಳಿಗೆ ಪುನೀತ್ ಹಾಡುತ್ತಾರೆ, ಅದರಿಂದ ಸಂಭಾವನೆಯನ್ನು ಎಷ್ಟೋ ಬಾರಿ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಇದ್ದವರಿಗೆ ಕೊಡುತ್ತಿದ್ದರು" - ನಕ್ಕೀರನ್ ಗೋಪಾಲ್.
"ಒಂದು ಹಾಡಿಗೆ ಪುನೀತ್ ಮೂರು ಲಕ್ಷ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದರು. ಅದರಿಂದ ಬರುವ ಸಂಭಾವನೆಯನ್ನು ಸಾಮಾಜಿಕ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರು. ಅದೆಷ್ಟೋ ಅನಾಥ ಮಕ್ಕಳಿಗೆ ಪುನೀತ್ ಸಹಾಯ ಮಾಡಿದ್ದರು. ಈಗ ಪುನೀತ್ ನಿಧನದಿಂದ ಮತ್ತೆ ಆ ಮಕ್ಕಳು ಅನಾಥರಾದರು" - ನಕ್ಕೀರನ್ ಗೋಪಾಲ್.
"ತಮಿಳು ನಟ ವಿಶಾಲ್ ಆ ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ಹೇಳಿದ್ದಾರೆ, ಅವರಿಗೆ ಒಳ್ಳೆಯದಾಗಲಿ. ಪುನೀತ್ ಅವರ ಸಾಮಾಜಿಕ ಕೆಲಸ, ವ್ಯಕ್ತಿತ್ವ ನಾಲ್ಕು ಜನರಿಗೆ ಗೊತ್ತಾಗಬೇಕು ಎನ್ನುವ ಕಾರಣಕ್ಕಾಗಿ ಈ ವಿಡಿಯೋ ಮಾಡುತ್ತಿದ್ದೇನೆ" - ನಕ್ಕೀರನ್ ಗೋಪಾಲ್.
ಪುಟ್ಟಪರ್ತಿ ಬಾಬಾ ಆತ್ಮದ ಜೊತೆ ಮಾತನಾಡಿದ್ದೆ, ಪುನೀತ್ ಆತ್ಮದ ಜೊತೆಗೂ ಮಾತನಾಡುವೆ!
ಪುನೀತ್ ರಾಜಕುಮಾರ್ ಅವರಿಗೆ ಗೋಲ್ಡನ್ ಅವರ್ ಸಿಗದೇ ಹೋಯಿತು
"ಪುನೀತ್ ರಾಜಕುಮಾರ್ ಅವರಿಗೆ ಗೋಲ್ಡನ್ ಅವರ್ ಸಿಗದೇ ಹೋಯಿತು. ಪುನೀತ್ ಅಂದರೆ ಅವರ ತಂದೆಗೆ ಪ್ರಾಣ, ರಾಜಕುಮಾರ್ ವಿಚಾರವನ್ನು ಅವರ ಕುಟುಂಬದ ಬಳಿ ಚರ್ಚಿಸಲು ಹೋದಾಗ, ಪುನೀತ್ಗೆ ನಾನು ಹೇಳಿದ್ದೆ, ನಿನ್ನ ತಂದೆಯ ಆಸೆಯನ್ನು ನೆರವೇರಿಸು ಎಂದು. ಅದೇ ಪುನೀತ್ ರಾಜಕುಮಾರ್ ನನ್ನು ಬೆಂಗಳೂರಿನಲ್ಲಿ ಜನರು ತಲೆಯ ಮೇಲೆ ಇಟ್ಟುಕೊಂಡು ಗೌರವಿಸುತ್ತಿದ್ದಾರೆ. ನನಗಂತೂ ಒಂದು ಮಾಣಿಕ್ಯ ಒಡೆದಂತಾಗಿದೆ" - ನಕ್ಕೀರನ್ ಗೋಪಾಲ್.
ಆದರೆ ಪುನೀತ್ ಅವರ ಡ್ಯಾನ್ಸ್ ನೋಡಿ ಆಶ್ಚರ್ಯ ಪಟ್ಟಿದ್ದೆ
"ರಾಘವ ಲಾರೆನ್ಸ್, ಪ್ರಭುದೇವ, ಅಲ್ಲು ಅರ್ಜುನ್ ಅವರ ಡ್ಯಾನ್ಸ್ ಉತ್ತಮ ಎಂದು ಅಂದುಕೊಂಡಿದ್ದೆ, ಆದರೆ ಪುನೀತ್ ಅವರ ಡ್ಯಾನ್ಸ್ ನೋಡಿ ಆಶ್ಚರ್ಯ ಪಟ್ಟಿದ್ದೆ. ನನಗೆ ಪುನೀತ್ ಅಂತಿಮ ಕ್ರಿಯೆಯನ್ನು ಮಾಡಬೇಕಾಗಿತ್ತು, ಅವನಿಗೆ ನಾನು ಮಾಡಬೇಕಾದಂತಹ ದುರ್ದೈವ ಬಂದಿದೆ ಎಂದು ಶಿವಣ್ಣ ನನ್ನಲ್ಲಿ ಹೇಳಿ ಬೇಸರ ಪಟ್ಟಿಕೊಂಡರು. ನನ್ನ ತಂದೆಯನ್ನು ವಾಪಸ್ ಕರೆಸಿಕೊಂಡು ಬರಲು ನೀವು ಮಾಡಿದ ಸಹಾಯವನ್ನು ನಾವು ಮರೆಯುವುದಿಲ್ಲ ಎಂದು ಶಿವಣ್ಣ ಆ ಸಂದರ್ಭದಲ್ಲಿ ನನ್ನ ಬಳಿ ಹೇಳಿದರು" - ನಕ್ಕೀರನ್ ಗೋಪಾಲ್.
ಏನಾದರೂ ತೊಂದರೆಯಾದರೆ ನಾವ್ಯಾರೂ ಬದುಕಿ ಉಳಿಯುತ್ತಿರಲಿಲ್ಲ
"ನೀವು ಅಂದು ಕಷ್ಟ ಪಡದೇ ನಮ್ಮ ತಂದೆಗೆ ಏನಾದರೂ ತೊಂದರೆಯಾದರೆ ನಾವ್ಯಾರೂ ಬದುಕಿ ಉಳಿಯುತ್ತಿರಲಿಲ್ಲ ಎಂದು ಶಿವಣ್ಣ ಹೇಳಿದರು. ಆಗ, ನೀವೆಲ್ಲಾ ಯಾಕೆ, ನಾನೂ ಬದುಕುತ್ತಿರಲಿಲ್ಲ ಎಂದು ಶಿವಣ್ಣಗೆ ಹೇಳಿದ್ದೆ. ಡಾ.ರಾಜಕುಮಾರ್ ಅವರು ಒಳ್ಳೆಯ ಯೋಗ ಪಟು, ನನಗೆ ಮತ್ತು ವೀರಪ್ಪನ್ಗೂ ಯೋಗ ಕಲಿಸಿಕೊಟ್ಟಿದ್ದರು. ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು ರಾಜಕುಮಾರ್ ಹೇಳುತ್ತಿದ್ದರು, ಅದನ್ನು ಪುನೀತ್ ಮಾಡಿದ್ದರು" - ನಕ್ಕೀರನ್ ಗೋಪಾಲ್.
ನಕ್ಕೀರನ್ ಗೋಪಾಲ್ ವಿಡಿಯೋ ಮೂಲಕ ಪುನೀತ್ ರಾಜಕುಮಾರ್ ಗೆ ಶ್ರದ್ದಾಂಜಲಿ
"ಕಾಡಿನಲ್ಲಿ 108 ದಿನ ನಾವು ಪಟ್ಟಪಾಡು ಅಷ್ಟಿಷ್ಟಲ್ಲ. ಒಂದು ವೇಳೆ ರಾಜಕುಮಾರ್ ಅವರನ್ನು ಕಾಡಿನಿಂದ ತರಲು ಸಾಧ್ಯವಾಗದೇ ಇದ್ದಿದ್ದರೆ ನಕ್ಕೀರನ್ ಕೂಡಾ ಇರುತ್ತಿರಲಿಲ್ಲ. ರಾಜಕುಮಾರ್ ಅವರಿಗೆ ಏನಾದರೂ ಕಾಡಿನಲ್ಲಿ ತೊಂದರೆಯಾದರೆ, ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಎಷ್ಟು ತಮಿಳರು ಇದ್ದಾರೆ, ಅವರಿಗೆ ಏನಾಗುತ್ತಿತ್ತು ಎನ್ನುವ ಅರಿವು ನನಗಿತ್ತು. ಒಂದು ಅಪೂರ್ವ ಮಣಿಯನ್ನು ನಾವು ಕಳೆದುಕೊಂಡೆವು" ಎಂದು ನಕ್ಕೀರನ್ ಗೋಪಾಲ್ ವಿಡಿಯೋ ಮೂಲಕ ಪುನೀತ್ ರಾಜಕುಮಾರ್ ಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ.