ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಪಂಚ ಮಹಾರಥೋತ್ಸವ ಸಂಪನ್ನ
ಮೈಸೂರು, ಮಾರ್ಚ್ 17: ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಸರಳ ಮತ್ತು ಸಂಪ್ರದಾಯವಾಗಿ ನಡೆದಿದ್ದ ದಕ್ಷಿಣ ಕಾಶಿ ನಂಜನಗೂಡಿನ ಪಂಚ ಮಹಾರಥೋತ್ಸವ ಈ ಬಾರಿ (ಮಾ.16, ಬುಧವಾರ) ಅದ್ಧೂರಿಯಾಗಿ ನಡೆಯಿತು. ಈ ಐತಿಹಾಸಿಕ ರಥೋತ್ಸವವನ್ನು ಲಕ್ಷಾಂತರ ಮಂದಿ ಭಕ್ತರು ಕಣ್ತುಂಬಿಸಿಕೊಂಡು ಪುನೀತರಾದರು.
ಮುಂಜಾನೆ ನಡೆದ ಪಂಚ ರಥೋತ್ಸವ
ಬುಧವಾರ ಮುಂಜಾನೆ 3.30ರ ಮಕರ ಲಗ್ನದಲ್ಲಿ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷೀತ್, ಶಂಕರ್ ದೀಕ್ಷೀತ್, ವಿಶ್ವನಾಥ್ ದೀಕ್ಷೀತ್ ನೀಲಕಂಠ ದೀಕ್ಷಿತ್, ಸ್ಥಳ ಪುರೋಹಿತ ಶ್ರೀಕಂಠ ಜೋಯಿಸ್, ಸದಾಶಿವು, ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸುವ ಮೂಲಕ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಪೂಜೆ ಸಲ್ಲಿಸುವ ಮೂಲಕ 5.10 ಗಂಟೆಗೆ ದೊಡ್ಡ ರಥಕ್ಕೆ ಚಾಲನೆ ನೀಡಿದರು.
ಮರುಕಳಿಸಿದ ಮೇಲುಕೋಟೆ ಚೆಲುವರಾಯನ ವೈಭವ, ವೈರಮುಡಿಗಿದೆ ಪೌರಾಣಿಕ ನಂಟು!
ಅನಂತರ ಗಣಪತಿ, ಶ್ರೀಕಂಠೇಶ್ವರ, ಸುಬ್ರಹ್ಮಣ್ಯ, ಚಂಡಿಕೇಶ್ವರ ಹಾಗೂ ಅಮ್ಮನವರ ರಥಗಳು ಸೇರಿದಂತೆ ಪಂಚರಥೋತ್ಸವವು ನಂಜನಗೂಡು ನಗರದ ರಾಜಬೀದಿಯಲ್ಲಿ ಸಾಗಿದವು. ಭಕ್ತರು ರಥವನ್ನು ಎಳೆಯುತ್ತಿದ್ದರೆ, ನೆರೆದಿದ್ದ ಭಕ್ತರು, ನವ ವಧು-ವರರು ಉಘೇ ಶ್ರೀಕಂಠ ಉದ್ಘೋಷದೊಂದಿಗೆ ಜೈಕಾರ ಮೊಳಗಿಸಿದರು. ರಾಜಬೀದಿಯಲ್ಲಿ ರಥ ಸಾಗುತ್ತಿದ್ದರೆ ಭಕ್ತರು ಭಕ್ತಿಯಿಂದ ಹೂವು, ಹಣ್ಣು ಎಸೆದು ಭಕ್ತಿಯಿಂದ ನಮಿಸಿದರು. ಸಂಪ್ರದಾಯದಂತೆ ಸಾಗಿದ ರಥಗಳು ಬಳಿಕ 6.30ಕ್ಕೆ ಸ್ವಸ್ಥಾನ ತಲುಪಿದವು.
ವಿದ್ಯುದ್ದೀಪಗಳಿಂದ ಕಂಗೊಳಿಸಿದ ನಂಜನಗೂಡು
ರಥೋತ್ಸವದ ಅಂಗವಾಗಿ ಮಂಗಳವಾರವೇ ರಾಜ್ಯದ ವಿವಿದ ಭಾಗಗಳಿಂದ ಆಗಮಿಸಿದ ಭಕ್ತರು ಬುಧವಾರ ಮುಂಜಾನೆ ಕಪಿಲ ನದಿಯಲ್ಲಿ ಸ್ನಾನ ಮಾಡಿ, ದೇವಸ್ಥಾನದ ಆವರಣದಲ್ಲಿ ಉರುಳು ಸೇವೆ ಮಾಡುವ ಮೂಲಕ ಹರಕೆ ತೀರಿಸಿದರು, ಇನ್ನು ಕೆಲವರು ಮುಡಿ ಅರ್ಪಿಸಿದರು.
ರಥೋತ್ಸವದ ಅಂಗವಾಗಿ ನಗರದಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ರಾತ್ರಿಯಿಡೀ ದೇವಾಲಯದ ಮುಂಭಾಗದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಮುಂಜಾನೆ ರಥೋತ್ಸವ ನಡೆಯುವುದರೊಂದಿಗೆ ಬಹಳ ದಿನಗಳಿಂದ ಕಾಯುತ್ತಿದ್ದ ಪಂಚ ರಥೋತ್ಸವವು ನಿರ್ವಿಘ್ನವಾಗಿ ನೆರವೇರಿತು.
ಮಾ.18ರಂದು ತೆಪ್ಪೋತ್ಸವ
ರಥೋತ್ಸವದ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಲಾಗಿತ್ತು. ಇನ್ನೊಂದೆಡೆ ಸಂಘ- ಸಂಸ್ಥೆಗಳು ಅಲ್ಲಲ್ಲಿ ಭಕ್ತರಿಗೆ ನೀರು, ಮಜ್ಜಿಗೆ, ಮೊಸರನ್ನ, ಸಿಹಿ ಪೊಂಗಲ್, ಪುಳಿಯೋಗರೆ ಹೀಗೆ ಅನ್ನಸಂತರ್ಪಣೆ ನಡೆಸಲಾಯಿತು. ರಥೋತ್ಸವದ ಅಂಗವಾಗಿ ಮಾ.18ರ ಶುಕ್ರವಾರ ಸಂಜೆ ಕಪಿಲಾ ನದಿಯಲ್ಲಿ ದೇವಾಲಯದಲ್ಲಿ ತೆಪ್ಪೋತ್ಸವ ನಡೆಯಲಿದೆ. ಇದೆಲ್ಲದರ ನಡುವೆ ರಥೋತ್ಸವದ ವೇಳೆ ಅಭಿಮಾನಿಗಳು ನಟ ಅಪ್ಪುವಿನ ಭಾವಚಿತ್ರ ಪ್ರದರ್ಶಿಸಿ ಆತ್ಮಕ್ಕೆ ಶಾಂತಿ ಕೋರಿದರು.
90 ಅಡಿ ಎತ್ತರದ ಮಹಾರಥ
ನಂಜನಗೂಡಿನ ಪಂಚ ರಥೋತ್ಸವದ ಬಗ್ಗೆ ಹೇಳುವುದಾದರೆ, ಮೈಸೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ನಂಜನಗೂಡು ಪುರಾಣ ಪ್ರಸಿದ್ಧ ಕ್ಷೇತ್ರವಾಗಿದ್ದು, ಇಲ್ಲಿರುವ ಶ್ರೀಕಂಠೇಶ್ವರ ದೇಗುಲ ಇತಿಹಾಸ ಪ್ರಸಿದ್ಧವಾಗಿದೆ. ವರ್ಷಂಪ್ರತಿ ಮೀನ ಮಾಸದಲ್ಲಿ ಉತ್ತರ ನಕ್ಷತ್ರದ ದಿನದಂದು ಉತ್ತಮ ಲಗ್ನದಲ್ಲಿ ಪಂಚಮಹಾರಥೋತ್ಸವ ನಡೆಯುತ್ತದೆ.
ಪಂಚರಥೋತ್ಸವದಲ್ಲಿ ಗಣಪತಿ, ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಹಾಗೂ ಗೌತಮ ರಥಗಳಿದ್ದು, ಈ ಐದು ರಥಗಳ ಪೈಕಿ ಗೌತಮ ರಥ ಮುಖ್ಯವಾಗಿದೆ. ಪಂಚ ರಥೋತ್ಸವದ ಪ್ರಮುಖ ಆಕರ್ಷಣೆಯಾಗಿದ್ದು, ಈ ರಥವು ಸುಮಾರು 205 ಟನ್ ತೂಕ, 90 ಅಡಿ ಎತ್ತರವನ್ನು ಹೊಂದಿದೆ. ವಿವಿಧ ಬಣ್ಣದ ಬಟ್ಟೆಗಳನ್ನು ಸುತ್ತಿ, ಹೂವಿನಿಂದ ಅಲಂಕರಿಸಲಾಗುವ ರಥದ ತುದಿಯಲ್ಲಿ ಧ್ವಜವನ್ನು ಕಟ್ಟಲಾಗಿರುತ್ತದೆ.
ನವದಂಪತಿಗಳು ಹರಕೆ ತೀರಿಸುತ್ತಾರೆ
ಬಳಿಕ ನವರತ್ನ ಹಾಗೂ ಹೂವಿನಿಂದ ಕಂಗೊಳಿಸುವ ಶ್ರೀಕಂಠಸ್ವಾಮಿಯ ವಿಗ್ರಹವನ್ನು ರಥದಲ್ಲಿ ಪ್ರತಿಷ್ಠಾಪಿಸಿ ಮುಂಜಾನೆ ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ವಿಧಿವಿಧಾನದಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ನಂತರ ರಥಕ್ಕೆ ಮಹಾಮಂಗಳಾರತಿಯನ್ನು ಮಾಡುವ ಮೂಲಕ ರಥಕ್ಕೆ ಚಾಲನೆ ನೀಡಲಾಗುತ್ತದೆ.
ರಥವು ಜನಸಾಗರದೊಂದಿಗೆ ಚಲಿಸಿ ರಾಜಗೋಪುರಕ್ಕೆ ನೇರವಾಗಿ ಬಂದು ನಿಂತಾಗ ಕಂಡು ಬರುವ ದೃಶ್ಯ ಮನಮೋಹಕವಾಗಿರುತ್ತದೆ. ನೂತನವಾಗಿ ವಿವಾಹವಾದ ನವದಂಪತಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಹೂ, ಹಣ್ಣು ಎಸೆಯುವ ಮೂಲಕ ತಮ್ಮ ಹರಕೆಯನ್ನು ಒಪ್ಪಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.