ವಿಜಯ್ ಶಂಕರ್ ಸಂದರ್ಶನ:'ಪ್ರತಿ ಪಕ್ಷಕ್ಕೆ ಸೂಕ್ತ ಉತ್ತರ ನೀಡಬೇಕಿದೆ'
ಮೈಸೂರು, ಏಪ್ರಿಲ್ 15:ಪ್ರತಿಷ್ಠಿತ ಚುನಾವಣಾ ರಣ ಕಣ ಎಂದೇ ಹೆಸರಾದ ಮೈಸೂರು - ಕೊಡಗು ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರತಾಪ್ ಸಿಂಹ ಸ್ಪರ್ಧೆಗಿಳಿದರೆ, ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಸಿಎಚ್ ವಿಜಯ್ ಶಂಕರ್ ಸ್ಪರ್ಧಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಬಾರಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನೇರ ಹಣಾ- ಹಣಿ ಪಕ್ಷಗಳಿಗಿಂತ ನಾಯಕರ ನಡುವೆ ಎಂದರೆ ತಪ್ಪಾಗಲು ಸಾಧ್ಯವಿಲ್ಲ. ಮೈಸೂರಿನಲ್ಲಿ ಜೆಡಿಎಸ್ - ಕಾಂಗ್ರೆಸ್ ದೋಸ್ತಿ ನಾಯಕರು ಉರುಳಿಸಿರುವ ದಾಳದ ಮೇಲೆ ಈ ಕ್ಷೇತ್ರದ ಫಲಿತಾಂಶ ನಿರ್ಧಾರವಾಗಲಿದೆ ಎಂದರೆ ತಪ್ಪಾಗಲು ಸಾಧ್ಯವಿಲ್ಲ.
ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಪ್ಲಸ್ ಹಾಗೂ ಮೈನಸ್ ಗಳೇನು?
ಕ್ಷೇತ್ರದಲ್ಲಿ ಒಕ್ಕಲಿಗರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ ಕುರುಬ ಸಮಾಜದವರು. ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿದ್ದರಾಮಯ್ಯನವರು ಪರಸ್ಪರ ರಾಜಕೀಯ ಎದುರಾಳಿಗಳಾದ ನಂತರ ಮೈಸೂರು ಜಿಲ್ಲೆಯಲ್ಲಿ ಒಕ್ಕಲಿಗರು ಹಾಗೂ ಕುರುಬ ಸಮಾಜದ ಮತಗಳು ತಮ್ಮ ನಾಯಕರ ಪರ ಹೆಚ್ಚಿನ ಪ್ರಮಾಣದಲ್ಲಿ ಕ್ರೋಢೀಕರಣಗೊಂಡಿದೆ. ಆ ಸಮುದಾಯದ ಮತಗಳು ವಿಜಯ್ ಶಂಕರ್ ಗೆ ಲಭಿಸಲಿದೆಯಾ ಕಾದು ನೋಡಬೇಕಿದೆ.
ಅನೇಕ ಟೀಕೆಗಳು, ಸಿದ್ದರಾಮಯ್ಯನವರ ಶಕ್ತಿ, ಜೆಡಿಎಸ್ ನಲ್ಲಿನ ಗೊಂದಲಗಳು ಎಲ್ಲವೂ ವಿಜಯ್ ಶಂಕರ್ ಮುಂದಿದೆ. ಅವರು ಈ ಬಾರಿಯ ಚುನಾವಣೆಯನ್ನು ಹೇಗೆ ಎದುರಿಸುತ್ತಾರೆ ? ಟೀಕೆಯ ಕುರಿತಾದ ಅವರ ನಿಲುವುಗಳೇನು? ಎಂಬುದರ ಕುರಿತಾದ ಸಂದರ್ಶನ ಇಲ್ಲಿದೆ.
ಒನ್ ಇಂಡಿಯಾ:ಈ ಹಿಂದೆ ನೀವು ಕ್ಷೇತ್ರಕ್ಕೆ ನೀಡಿದ ಕೊಡುಗೆ ಏನು?
ವಿಜಯ್ ಶಂಕರ್: ಮೈಸೂರು ರೈಲ್ವೆ ನಿಲ್ದಾಣಕ್ಕೆ ಕೇವಲ 3 ಪ್ಲಾಟ್ ಫಾರ್ಮ್ ಗಳಿತ್ತು. ನಾನು ಸಂಸದನಾದ ಬಳಿಕ ರೈಲ್ವೆ ಸ್ಟ್ಯಾಚುಟರಿ ಸ್ಟ್ಯಾಂಡಿಂಗ್ ಕಮಿಟಿ ಸದಸ್ಯನಾಗಿದ್ದರಿಂದ ಹೆಚ್ಚುವರಿಯಾಗಿ ಪ್ಲಾಟ್ ಫಾರ್ಮ್ ಗಳನ್ನು ಅನುಮೋದನೆ ಪಡೆದು 28 ಕೋಟಿ ರೂ.ಹಣ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದೆ. ರೈಲು ಬಳಕೆದಾರರಿಗೆ ನಿಲ್ದಾಣದ ಪಶ್ಚಿಮ ಭಾಗದಲ್ಲಿ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದಲ್ಲದೇ ಅಲ್ಲಿಯೂ ಟಿಕೆಟ್ ಕೌಂಟರ್ ಆರಂಭಿಸಿದೆವು. ಅಶೋಕಪುರಂನ ರೈಲ್ವೆ ವರ್ಕ್ ಶಾಪ್ ಉನ್ನತೀಕರಣಕ್ಕಾಗಿ 39 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ತದನಂತರ ಈವರೆಗೆ ಅಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಕೈಗೊಂಡಿಲ್ಲ.
ವಿಮಾನ ನಿಲ್ದಾಣದ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸಿ, ಮೈಸೂರಿನಿಂದ ವಿಮಾನ ಹಾರಾಟ ಆರಂಭವಾಗಿದ್ದು, ನಾನು ಸಂಸದನಾಗಿದ್ದಾಗ. ನಿಲ್ದಾಣ ಮೇಲ್ದರ್ಜೆಗೆ ಎರಡನೇ ಹಂತದ ಕಾಮಗಾರಿ ಒಪ್ಪಿಗೆ ಪಡೆದು, ವಿಸ್ತರಣೆಗಾಗಿ ಭೂಸ್ವಾಧೀನ ಪ್ರಕ್ರಿಯೆಗೂ ನನ್ನ ಅವಧಿಯಲ್ಲೇ ಚಾಲನೆ ನೀಡಲಾಗಿದ್ದು ಈಗಲೂ ನಿಲ್ದಾಣ ಅದೇ ಹಂತದಲ್ಲಿದೆ ಹೊರತೂ ಈವರೆಗೂ ರನ್ ವೇ ಸಹ ವಿಸ್ತರಣೆಯಾಗಿಲ್ಲ.
ರಾಮಕೃಷ್ಣ ಹೆಗಡೆ ಅವರು 1998ರಲ್ಲಿ 3,750 ಅಧಿಕೃತ ತಂಬಾಕು ಬೆಳೆಗಾರರಿಗೆ ಮಂಡಳಿಯಿಂದ ಅಧಿಕೃತ ಕಾರ್ಡ್ ಕೊಡಿಸಿದ್ದಲ್ಲದೆ ನಂತರ 29,374 ತಂಬಾಕು ಬೆಳೆಗಾರರಿಗೆ ಲೈಸೆನ್ಸ್ ನೀಡಲಾಯಿತು. ರೈತ ಬೆಳೆದ ತಂಬಾಕಿಗೆ ಮಾರುಕಟ್ಟೆ ಇರಲಿಲ್ಲ. ನಾನು ಮೂರು ಕಡೆ ತಂಬಾಕು ಹರಾಜು ಮಾರುಕಟ್ಟೆ ನಿರ್ಮಿಸಿ ತಂಬಾಕು ಬೆಳೆಗಾರರಿಗೆ ಅನುಕೂಲ ಮಾಡಿಕೊಟ್ಟ ಸಂತೃಪ್ತಿಯಿದೆ.
ಒನ್ ಇಂಡಿಯಾ:ಪ್ರತಾಪ್ ಸಿಂಹ ಅವರು ನಮ್ಮ ಅವಧಿಯಲ್ಲೇ ಹೆಚ್ಚು ಕೆಲಸವಾಗಿದ್ದು ಎನ್ನುತ್ತಿದ್ದಾರೆ?
ವಿಜಯ್ ಶಂಕರ್: ಮೈಸೂರು- ಬೆಂಗಳೂರು ರೈಲು ಜೋಡಿ ಮಾರ್ಗ ಆರಂಭ. ವಿಮಾನ ನಿಲ್ದಾಣ ನಿರ್ಮಾಣ ನಮ್ಮ ಅವಧಿಯಲ್ಲಿ ಕಳೆದ ಐದು ವರ್ಷದಲ್ಲಿ ಆದದ್ದು. ನಮ್ಮ ಕಾಲದಲ್ಲಿ ಆದ ಅದೆಷ್ಟೋ ಕೆಲಸವನ್ನು ನಾನು ಮಾಡಿದ್ದು ಎನ್ನುತ್ತಿರುವವರನ್ನು ಜನ ಗಮನಿಸುತ್ತಿದ್ದಾರೆ. ಎರಡು ಅವಧಿಯಲ್ಲಿ ನನ್ನನ್ನು ಸಂಸದನಾಗಿ ಕ್ಷೇತ್ರದ ಪ್ರಜ್ಞಾವಂತ ಮತದಾರರು ಆಯ್ಕೆ ಮಾಡಿದ ಅವಧಿಯಲ್ಲಿ ಮೈಸೂರು - ಕೊಡಗು ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಕಾಫಿ, ಮೆಣಸು ಹಾಗೂ ತಂಬಾಕು ಬೆಳೆಗಾರರ ಹಿತ ಕಾಪಾಡಲು ಕೇಂದ್ರದಿಂದ ಸಾಕಷ್ಟು ನೆರವು ನೀಡಿದ್ದೇನೆ. ಎಲ್ಲದಕ್ಕಿಂತ ಮಿಗಿಲಾಗಿ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ನಾನು ಸದಾ ಜನರೊಟ್ಟಿಗೆ ಇದ್ದೇನೆ.
ಪ್ರತಾಪ್ ಸಿಂಹ ಸಂದರ್ಶನ:'ರಾಜಕಾರಣಕ್ಕೆ ಹೊಸಬರು ಬರಲು ಸಾಧ್ಯವಾಗುತ್ತಿಲ್ಲ'
ಒನ್ ಇಂಡಿಯಾ:ಕಾಂಗ್ರೆಸ್ ಅಭ್ಯರ್ಥಿಗೆ ದಳದಿಂದ ಪೂರ್ಣ ಸಹಕಾರ ಸಿಗುತ್ತಿಲ್ಲ ಎನ್ನುವ ಮಾತಿದೆ?
ವಿಜಯ್ ಶಂಕರ್: ರಾಜ್ಯದಲ್ಲಿ ಮೈತ್ರಿ ಸರ್ಕಾರ ಈಗಷ್ಟೇ ಆರಂಭವಾಗಿದೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇದ್ದ ವೈಮನಸ್ಸು ಇನ್ನೂ ಕಾರ್ಯಕರ್ತರಲ್ಲಿ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಪಕ್ಷದ ಮುಖಂಡರು ಅದನ್ನು ಸರಿಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ಜಿ.ಟಿ.ಡಿ ಅವರೊಂದಿಗೆ ಈ ವಿಚಾರವಾಗಿ ಚರ್ಚಿಸಿ ತೀರ್ಮಾನ ಕೈಗೊಂಡಿದ್ದಾರೆ. ಇದಲ್ಲದೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಕಾರ್ಯಕರ್ತರ ನಡುವಿನ ಅಸಮಾಧಾನ ಶಮನಗೊಂಡಿದೆ .
ಮೈಸೂರಿನ ಕಾಂಗ್ರೆಸ್ ಮತ್ತು ಬಣದ ಕಾರ್ಯಕರ್ತರಲ್ಲಿ ಒಮ್ಮತ ಮೂಡುತ್ತಿಲ್ಲ ಎನ್ನಲಾಗುತ್ತಿದೆ. ಇದು ಕೆಲವರ ಭಾವ. ಮೈತ್ರಿ ಪಕ್ಷದ ಅಭ್ಯರ್ಥಿ ಘೋಷಣೆ ಆಗುವವರೆಗೂ ಕಾಂಗ್ರೆಸ್ ನಲ್ಲೂ ಭಿನ್ನಾಭಿಪ್ರಾಯ ಹೋರಾಟವಿತ್ತು. ಅಭ್ಯರ್ಥಿ ಘೋಷಣೆಯಾದ ನಂತರ ಎರಡೂ ಪಕ್ಷದವರು ಹಾಗೂ ಕಾರ್ಯಕರ್ತರು ಸಂತೋಷವಾಗಿ ಒಪ್ಪಿಕೊಂಡಿದ್ದಾರೆ.
ಒನ್ ಇಂಡಿಯಾ:ಹಿಂದೆ ಬಿಜೆಪಿ ಸಂಸದರಾಗಿದ್ದು, ಈಗ ಆ ಪಕ್ಷದ ಎದುರಾಳಿಯಾಗಿ ಸ್ಪರ್ಧಿಸುತ್ತಿದ್ದೀರಿ?
ವಿಜಯ್ ಶಂಕರ್: ಕೆಲ ಸನ್ನಿವೇಶಗಳಿಂದಾಗಿ ನಾನು ಪಕ್ಷ ಬದಲಿಸಿರಬಹುದು. ಆದರೆ ನನ್ನ ವೈಯಕ್ತಿಕ ನಡವಳಿಕೆ, ನೀತಿ ನಿಲುವುಗಳು ಹಾಗೆಯೇ ಇದೇ. ಎದುರಾಳಿ ಯಾರು ಅನ್ನುವುದಕ್ಕಿಂತ ನಾನು ಯಾರು ಹೇಗೆ ಎಂಬುದು ಮತದಾರರಿಗೆ ಗೊತ್ತು. ಹಾಗಾಗಿ ನನ್ನ ಗೆಲುವು ಸುಲಭ. ಪ್ರೀತಿ ಜಗತ್ತನ್ನೇ ಗೆಲ್ಲುತ್ತದೆ ಎನ್ನುವ ಸಿದ್ಧಾಂತದಲ್ಲಿ ವಿಶ್ವಾಸವಿಟ್ಟುಕೊಂಡು ಜೀವಿಸುತ್ತಿರುವವ ನಾನು. ಅಧಿಕಾರ ಇಲ್ಲದಿದ್ದಾಗ ಹೇಗಿದ್ದೆನೋ ಅಧಿಕಾರ ಇದ್ದಾಗಲೂ ಅದೇ ವಿಶ್ವಾಸದಲ್ಲಿದ್ದೇನೆ. 40 ವರ್ಷ ಜನರ ನಡುವೆ ಜೀವಿಸಿದ್ದೇನೆ, ಜನ ಮೆಚ್ಚಿದ್ದಾರೋ, ಇಲ್ಲವೋ ಫಲಿತಾಂಶ ಬಂದಾಗ ತಿಳಿಯುತ್ತದೆ.
ಮೈಸೂರು, ಮಂಡ್ಯ ರಾಜಕೀಯ ಅಸ್ತಿತ್ವದ ಕ್ಷೇತ್ರಗಳಂತೆ.. ಯಾರಿಗೆ ಗೊತ್ತಾ?
ಒನ್ ಇಂಡಿಯಾ:ಪ್ರತಾಪ್ ಸಿಂಹಗೆ ನೀವು ಏನು ಹೇಳುತ್ತೀರಾ ?
ವಿಜಯ್ ಶಂಕರ್: ಜನರು ನಮ್ಮನ್ನು ಗಮನಿಸುತ್ತಿರುತ್ತಾರೆ. ಅದನ್ನು ಪರಾಮರ್ಶೆ ಮಾಡುವ ಅವಕಾಶ ಅವರಿಗೂ ಬರುತ್ತದೆ. ಅಧಿಕಾರವಿದ್ದಾಗ ನಮ್ಮ ನಡವಳಿಕೆ ಹೇಗಿರುತ್ತೆ, ಇಲ್ಲದಾಗ ಹೇಗಿರುತ್ತೆ, ನಮ್ಮ ಮಾತು ಸಂಪರ್ಕ ಒಡನಾಟ ಮನೆ ಬಾಗಿಲು ಬರುವವರನ್ನು ಹೇಗೆ ಮಾತಾಡ್ತೀವಿ ಅವರೊಂದಿಗೆ ನಡೆದುಕೊಳ್ಳುವ ರೀತಿ ಸಾರ್ವಜನಿಕರೊಂದಿಗೆ ನಮಗಿರುವ ಸಂಬಂಧ ಇವೆಲ್ಲಕ್ಕೂ ಜನ ತಾಳೆ ಹಾಕುತ್ತಾರೆ.
ಒನ್ ಇಂಡಿಯಾ:ಕೊಡಗಿನ ಕೆಲವು ಸಮಸ್ಯೆಗಳು ನಿವಾರಣೆಯಾಗಿಲ್ಲ ಎಂಬ ಕೂಗಿದೆ ?
ವಿಜಯ್ ಶಂಕರ್: ಕೊಡಗು ಜಿಲ್ಲೆಯಲ್ಲಿ ಬೆಳೆದ ಕಾಳು ಮೆಣಸು ಹೆಚ್ಚು ಬೇಡಿಕೆ ಇದೆ. ಇದರಿಂದ ಸಹಜವಾಗಿ ಹಿಂದೆ ಬೆಲೆ ಹೆಚ್ಚಾಗಿಯೇ ಇತ್ತು. ಕಳೆದ ಐದು ವರ್ಷದಲ್ಲಿ ವಿಯೆಟ್ನಾಂನಿಂದ ಮೆಣಸು ಆಮದಿಗೆ ಅವಕಾಶ ನೀಡಿ ಉದ್ದಿಮೆದಾರರ ಹಿತ ಕಾಪಾಡಲು ಮುಂದಾಗಿದ್ದರಿಂದ, ಕೇಂದ್ರ ಸರ್ಕಾರ ನಮ್ಮ ಮೆಣಸಿಗೆ ಬೆಲೆ ಇಲ್ಲದಂತೆ ಮಾಡಿದೆ. ಕಾಫಿ ಬೆಳೆಗಾರರ ಹಿತ ಕಾಪಾಡುವಲ್ಲಿ ನಾನು ಎಂದೂ ಹಿಂದೆ ಬಿದ್ದಿಲ್ಲ. ನಾನು ಗೆದ್ದು ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಲ್ಲಿ, ನಿಶ್ಚಿತವಾಗಿಯೂ ಕಾಫಿ ಮತ್ತು ಕರಿಮೆಣಸಿಗೆ ಉತ್ತಮ ಬೆಲೆ ಸಿಗುವಂತೆ ಎಲ್ಲ ಪ್ರಯತ್ನವನ್ನು ಮಾಡಲಿದ್ದೇನೆ .
ಮೈಸೂರು ಆಯ್ತು, ಈಗ ಕೊಡಗಿನಲ್ಲೂ ಮೈತ್ರಿ ನಾಯಕರಲ್ಲಿ ಅಸಮಾಧಾನದ ಹೊಗೆ
ಒನ್ ಇಂಡಿಯಾ:ಕಾಂಗ್ರೆಸ್ ನಿಂದ ಸ್ಪರ್ಧಿಸುವುದು ಅನೇಕ ಜೆಡಿಎಸ್, ಕಾಂಗ್ರೆಸ್ ಮುಖಂಡರೇ ವಿರೋಧಿಸಿದ್ದರೇಕೆ?
ವಿಜಯ್ ಶಂಕರ್: ಕುಮಾರಸ್ವಾಮಿ ಅವರು ಇನ್ನೂ 4 ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ ಮುಂದುವರಿಯಬೇಕಿದೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರ್ಣಗೊಳಿಸಬೇಕೆಂಬ ಉದ್ದೇಶದಿಂದಲೇ ಉಭಯ ಪಕ್ಷಗಳ ವರಿಷ್ಠರು ಮೈತ್ರಿಗೆ ನಿರ್ಧರಿಸಿದ್ದಾರೆ. ಎರಡೂ ಪಕ್ಷದ ನಾಯಕರಿಗೆ ಆಜ್ಞೆಯನ್ನೂ ಸಹ ನೀಡಿದ್ದಾರೆ. ಅದರಂತೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ದೇವೇಗೌಡ ನೇತೃತ್ವದಲ್ಲಿ ಎಲ್ಲಾ ನಾಯಕರು ನಮ್ಮೊಂದಿಗೆ ಸಹಕರಿಸುತ್ತಿದ್ದಾರೆ. ಇದೇ ಪರಿಸ್ಥಿತಿ ಮಂಡ್ಯ, ಹಾಸನ, ಚಾಮರಾಜನಗರ ಕ್ಷೇತ್ರಗಳಲ್ಲೂ ಇರುವುದರಿಂದ ಭಿನ್ನಾಭಿಪ್ರಾಯದ ಪ್ರಶ್ನೆಯೇ ಇಲ್ಲ .
ಒನ್ ಇಂಡಿಯಾ: ಈಗ ಕೊಡಗು ಜಿಲ್ಲೆಯಲ್ಲೂ ಮೋದಿ ಅಲೆ ಜೋರಾಗಿದೆ ಎಂಬ ಮಾತಿದೆಯಲ್ಲ?
ವಿಜಯ್ ಶಂಕರ್: ನಮ್ಮ ಎದುರಾಳಿ ಯಾರು ಎನ್ನುವುದಕ್ಕಿಂತ ನಾನು ಯಾರು ಎಂಬುದು ಮತದಾರರಿಗೆ ಗೊತ್ತಿದೆ. ಕೊಡಗು ಭಾಗದಲ್ಲಿ ಬಿಜೆಪಿಗಿಂತ ಎರಡರಷ್ಟು ಕಾಂಗ್ರೆಸ್ ಪ್ರಬಲವಾಗಿದೆ. ಅತ್ಯಂತ ಹೆಚ್ಚು ಸಂಖ್ಯೆಯ ನಮ್ಮ ಕಾರ್ಯಕರ್ತರು ಅಲ್ಲಿದ್ದಾರೆ. ಎಲ್ಲ ಸಮುದಾಯದವರು ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಹಳೆಯ ಮೈಸೂರು ಭಾಗದಲ್ಲಿ ಮೋದಿ ಅಲೆ ಇಲ್ಲ. ಈ ಬಾರಿ ಅಧಿಕ ಮತಗಳ ಅಂತರದಿಂದ ಮೈತ್ರಿ ಅಭ್ಯರ್ಥಿಯಾದ ನಾನು ಆಯ್ಕೆಯಾಗಲಿದ್ದೇನೆ. ನನ್ನ ಗೆಲುವು ನಿಶ್ಚಿತ. ನಾನು ಮೂಲತಃ ಕಾಂಗ್ರೆಸ್ಸಿಗ. ಈಗ ನಾನು ಮಾತೃಪಕ್ಷಕ್ಕೆ ವಾಪಸ್ ಬಂದಿದ್ದೇನೆ. ಬಿಜೆಪಿಗೆ ಹೋದರೂ ನನ್ನ ಆಸಕ್ತಿಯಿಂದ ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಇದೀಗ ಬದಲಾದ ಸ್ಥಿತಿಯನ್ನು ಮತದಾರರು ಅರ್ಥ ಮಾಡಿಕೊಂಡಿದ್ದಾರೆ. ಮೈತ್ರಿ ಎಷ್ಟು ಅನಿವಾರ್ಯ ಎನ್ನುವುದು ಗೊತ್ತಿದೆ. ಹಳಿತಪ್ಪಿರುವ
ಒನ್ ಇಂಡಿಯಾ: ಸಿಮೆಂಟ್ ಮಾರುತ್ತಿದ್ದವರನ್ನು ಸಂಸದರಾಗಿ ಮಾಡಿರುವುದು ಬಿಜೆಪಿ ಎಂದು ವ್ಯಂಗ್ಯವಾಡಿದ್ದಾರೆ?
ವಿಜಯ್ ಶಂಕರ್: ಅದೇ ಪ್ರತಾಪ್ ಸಿಂಹ ಅವರಿಗೂ ನನಗೂ ಇರುವ ವ್ಯತ್ಯಾಸ. ನಾನು ಸ್ವಾಭಿಮಾನದ ಬದುಕಿಗಾಗಿ ಸಿಮೆಂಟ್ ಮಾರಿದ್ದೇ. ಅದು ನನ್ನ ವೃತ್ತಿ. ಕಳ್ಳತನ ಮಾಡಿಲ್ಲ. ಯಾರಿಗೂ ವಂಚಿಸಿಲ್ಲ. ಚಹಾ ಮಾರುತ್ತಿದ್ದವರನ್ನು ಈ ದೇಶದ ಪ್ರಧಾನಿ ಮಾಡಲಾಗಿದೆ. ಪ್ರಜಾಪ್ರಭುತ್ವದ ವಿಶೇಷತೆಯೇ ಇದು. ಸಿಮೆಂಟ್ ವ್ಯಾಪಾರ ಮಾಡುತ್ತಿದ್ದವರು ಸಂಸದರಾಗಬಾರದೆ ? ಅವರ ಮನಸ್ಥಿತಿಯನ್ನು ಇಂತಹ ಆರೋಪ ಎತ್ತಿ ತೋರಿಸುತ್ತದೆ. ನನಗೆ ಪ್ರಚಾರದ ಗೀಳಿಲ್ಲ. ಮತ್ತೊಬ್ಬರು ಮಾಡಿದ ಕೆಲಸವನ್ನು ನನ್ನದು ಎಂದು ಹೇಳಿರುವ ಅಭ್ಯಾಸವೂ ಇಲ್ಲ. ಜನರು ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುವುದೇ ನನ್ನ ಗುರಿ. ಬದ್ಧತೆ ಅಂದು ಇದೆ, ಇಂದು ಇದೆ. ಪ್ರತಿ ಆರು ತಿಂಗಳಿಗೊಮ್ಮೆ ಹಿಂದುಳಿದವರ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ. ಈ ಹಿಂದೆ ಸಂಸದರಾಗಿದ್ದಾಗ ಆರಂಭಿಸಿದ ಹಲವು ಕಾರ್ಯಗಳನ್ನು ಮುಂದುವರಿಸುತ್ತಾನೆ ಬೆಳೆಗಾರರು ರೈತರ ಸಮಸ್ಯೆ ಖಂಡಿತ ನಿವಾರಿಸುತ್ತೇನೆ.
ಒನ್ ಇಂಡಿಯಾ: ನೀವು ಗೆದ್ದರೆ ಜನ ನಿಮ್ಮಿಂದ ಏನು ನಿರೀಕ್ಷಿಸಬಹುದು?
ವಿಜಯ್ ಶಂಕರ್: ವಿಯೆಟ್ನಾಂನಿಂದ ಕಾಳು ಮೆಣಸು ಆಮದು ಮಾಡಿಸಲಿದ್ದೇನೆ. ಸ್ಥಳೀಯ ರೈತರ ಉತ್ಪನ್ನಕ್ಕೆ ಉತ್ತಮ ಬೆಲೆ ಕೊಡಿಸುವುದು, ಕಾಫಿ ಬೆಳೆಗಾರರಿಗೆ ಪ್ರತಿಕ್ರಿಯೆ, ಸಂಸದರ ಅನುದಾನವನ್ನು ಸಮರ್ಪಕವಾಗಿ ಬಳಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ.