ಕುಸ್ತಿಪಟುಗಳಿಗೆಂದೇ ಇತ್ತು ಮೈಸೂರಿನ ಜಟ್ಟಿ ಆಸ್ಪತ್ರೆಗಳು
ಸಾಮಾನ್ಯವಾಗಿ ಮೈಸೂರು ನಗರದಲ್ಲಿ ಅಡ್ಡಾಡುವಾಗ ಜಟ್ಟಿ ಆಸ್ಪತ್ರೆ ಎಂಬ ನಾಮಫಲಕಗಳನ್ನು ಎಲ್ಲರೂ ನೋಡಿರುತ್ತಾರೆ. ಅಷ್ಟೇ ಅಲ್ಲ ಈ ಆಸ್ಪತ್ರೆ ಬಗ್ಗೆ ಕುತೂಹಲವೂ ಮೂಡದಿರದು.
ದಸರಾ ಸಮಯದಲ್ಲಿ ಈ ಜಟ್ಟಿ ಆಸ್ಪತ್ರೆಗಳ ಬಗ್ಗೆ ಮತ್ತು ಆ ವೈದ್ಯರ ಕುರಿತಂತೆ ಹೇಳಲೇಬೇಕಾಗುತ್ತದೆ. ಮೈಸೂರು ಮಹಾರಾಜರ ಕಾಲದಲ್ಲಿ ಅಸ್ತಿತ್ವಕ್ಕೆ ಬಂದಿರುವ ಜಟ್ಟಿ ಆಸ್ಪತ್ರೆ ಬಗ್ಗೆಯೇ ಒಂದು ಇತಿಹಾಸವಿದೆ. ಮೈಸೂರು ಗರಡಿ ಮನೆಗಳ ತವರೂರು ಎಂದರೆ ತಪ್ಪಾಗಲಾರದು. ಮೈಸೂರು ರಾಜರ ಕಾಲದಲ್ಲಿ ಗರಡಿ ಮನೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿತ್ತು. ಹೀಗಾಗಿ ನಗರದಾದ್ಯಂತ ಗರಡಿ ಮನೆಗಳು ಅಸ್ತಿತ್ವದಲ್ಲಿದ್ದವು.
ಗರಡಿಮನೆಗಳ ತವರು ಮೈಸೂರು
ಆಗಾಗ್ಗೆ ಗರಡಿ ಮನೆಗಳಿಂದ ತರಬೇತಿ ಪಡೆದುಬರುತ್ತಿದ್ದ ಜಟ್ಟಿಗಳು ಆಯಾಯ ಗರಡಿ ಮನೆ ಮತ್ತು ಆ ಬೀದಿ, ಊರಿನ ಹೆಸರನ್ನು ಪ್ರತಿನಿಧಿಸುತ್ತಿದ್ದರು. ಅಲ್ಲಲ್ಲಿ ಕುಸ್ತಿ ಪಂದ್ಯಾವಳಿಗಳು ನಡೆಯುತ್ತಿದ್ದವು. ಹಲವು ಕುಸ್ತಿ ಪಟುಗಳನ್ನು ಸೋಲಿಸಿ ಗೆಲುವು ಪಡೆದ ಪೈಲ್ವಾನ್ ಗಳನ್ನು ಸನ್ಮಾನಿಸಲಾಗುತ್ತಿತ್ತು.
ಅಂಧ ಬಾಲಕ ಮೈಸೂರು ಆಸ್ಥಾನದ ವಿದ್ವಾಂಸನಾದ ಕಥೆ
ಮೈಸೂರಿನಲ್ಲಿ ಕುಸ್ತಿಪಟುಗಳನ್ನು ಪ್ರೀತಿಸಿ ಪ್ರೋತ್ಸಾಹಿಸುತ್ತಿದ್ದರಿಂದ ಪೈಲ್ವಾನ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ತಯಾರಾಗುತ್ತಿದ್ದರು. ಕೆಲವೊಮ್ಮೆ ಗರಡಿ ಮನೆಗಳಲ್ಲಿ ತಾಲೀಮು ಮಾಡುವಾಗ ಅಥವಾ ಕುಸ್ತಿ ವೇಳೆಯಲ್ಲಿ ಕೈಕಾಲಿಗೆ ಪೆಟ್ಟು ಬಿದ್ದರೆ, ಮೂಳೆ ಮುರಿದರೆ ಅದನ್ನು ಸರಿ ಪಡಿಸಲು ಅಸ್ಥಿ ವೈದ್ಯರ ಮೊರೆಹೋಗುತ್ತಿದ್ದರು. ಇವತ್ತು ಅಲ್ಲಲ್ಲಿ ಆಸ್ಪತ್ರೆಗಳು ಇವೆ. ಆದರೆ ಹಿಂದೆ ಅಸ್ಥಿ ವೈದ್ಯರು, ಪಂಡಿತರೇ ಚಿಕಿತ್ಸೆ ನೀಡಬೇಕಾಗಿತ್ತು.
ಜಟ್ಟಿ ಆಸ್ಪತ್ರೆಗೂ ಗತ ಇತಿಹಾಸವಿದೆ
ಇವತ್ತು ಮೈಸೂರಿನಲ್ಲಿ ಕಾಣಸಿಗುವ ಜಟ್ಟಿ ಆಸ್ಪತ್ರೆ ಕೂಡ ಒಂದು ಕಾಲದಲ್ಲಿ ಕೈಕಾಲು ಮುರಿದುಕೊಂಡು ಬರುತ್ತಿರುವ ಜಟ್ಟಿಗಳಿಗೆ ಶುಶ್ರೂಷೆ ನೀಡುತ್ತಿದ್ದ ಆಸ್ಪತ್ರೆಯಾಗಿದೆ. ನಗರದ ಕೆಲವೆಡೆ ಜಟ್ಟಿ ಆಸ್ಪತ್ರೆ ಎಂಬ ನಾಮಫಲಕ ಕಾಣಿಸಿದರೂ ಚಾಮರಾಜ ಜೋಡಿ ರಸ್ತೆಯಲ್ಲಿರುವ ಸೀತಾವಿಲಾಸ ಛತ್ರದಲ್ಲಿರುವ ಜಟ್ಟಿ ಆಸ್ಪತ್ರೆಗೆ ಇತಿಹಾಸವಿರುವುದನ್ನು ನಾವು ಕಾಣಬಹುದಾಗಿದೆ.
ಸೀತಾ ವಿಲಾಸ ಛತ್ರದ ಎಡಭಾಗದ ದೊಡ್ಡ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಟ್ಟಿ ಆಸ್ಪತ್ರೆಯು ಹಲವರ ಕೈಕಾಲುಗಳನ್ನು ಸರಿಪಡಿಸಿದ ಖ್ಯಾತಿ ಹೊಂದಿದೆ. ಅಷ್ಟೇ ಅಲ್ಲ ಈ ಆಸ್ಪತ್ರೆ ಐದು ತಲೆಮಾರುಗಳಿಂದ ನಡೆದುಕೊಂಡು ಬರುತ್ತಿದ್ದು, ಇವತ್ತಿಗೂ ಇಲ್ಲಿಗೆ ಹಲವರು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.
1902ರಲ್ಲಿ ಆರಂಭವಾದ ಜಟ್ಟಿ ಆಸ್ಪತ್ರೆ
ಜಟ್ಟಿ ಆಸ್ಪತ್ರೆಯು 1902ರಲ್ಲಿ ಆರಂಭವಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅರಮನೆಯಲ್ಲಿ ಅಸ್ಥಿ ವೈದ್ಯರಾಗಿದ್ದ ಪಂಡಿತ್ ಲಕ್ಷ್ಮಣರಾಜು ಅವರು ಇದರ ಸಂಸ್ಥಾಪಕರಾಗಿದ್ದಾರೆ. ಪಂಡಿತ್ ಲಕ್ಷ್ಮಣರಾಜು ಅವರು ಅರಮನೆಯಲ್ಲಿ ಅಸ್ಥಿ ವೈದ್ಯರಾಗಿದ್ದು, ರಾಜರಿಗಾಗಲಿ, ರಾಜ ಪರಿವಾರಕ್ಕಾಗಲಿ ಹಾಗೂ ಕುಸ್ತಿಯ ವೇಳೆ, ವಜ್ರಮುಷ್ಟಿ ಕಾಳಗದ ಸಂದರ್ಭದಲ್ಲಿ ಮೂಳೆ ಮುರಿತವಾದಾಗ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸುವ ಕಾಯಕ ಮಾಡುತ್ತಿದ್ದರು. ಇವರ ಸೇವೆ ಕೇವಲ ಅರಮನೆಗಷ್ಟೆ ಸೀಮಿತವಾಗದೆ ಸಾರ್ವಜನಿಕರಿಗೂ ದೊರಕಲಿ ಎಂಬ ಉದ್ದೇಶದಿಂದ ಸೀತಾವಿಲಾಸ ಛತ್ರದಲ್ಲಿ ಕೊಠಡಿಯನ್ನು ನೀಡಿ ಆಸ್ಪತ್ರೆ ಆರಂಭಿಸಲು ಸೂಚಿಸಿದರು. ಅದರಂತೆ ಪಂಡಿತ್ ಲಕ್ಷ್ಮಣರಾಜು ಅವರು ಆಸ್ಪತ್ರೆಯನ್ನು ಆರಂಭಿಸಿದರು.
ಮೈಸೂರು ದಸರಾ ವೈಭವಕ್ಕೆ ಸಾಕ್ಷಿಯಾಗಿರುವ ಸೀತಾವಿಲಾಸ ಛತ್ರ
ಪಂಡಿತ ಕೃಷ್ಣರಾಜು ಅವರಿಂದ ಚಿಕಿತ್ಸೆ
ವಿವಿಧ ರೀತಿಯ ಮೂಳೆಯ ಸಮಸ್ಯೆಯಿಂದ ಬಳಲುತ್ತಿದ್ದವರು ಇಲ್ಲಿ ಚಿಕಿತ್ಸೆ ಪಡೆದುಕೊಂಡು ಹೋಗಲಾರಂಭಿಸಿದರು. ಹೀಗೆ ದಿನ ಕಳೆದಂತೆ ಜಟ್ಟಿ ಆಸ್ಪತ್ರೆಯ ಹೆಸರು ಇಮ್ಮಡಿಸಿತು. ಮೈಸೂರು ಮಾತ್ರವಲ್ಲದೆ ದೂರದಿಂದಲೂ ಇಲ್ಲಿಗೆ ಚಿಕಿತ್ಸೆಗಾಗಿ ಬರಲಾರಂಭಿಸಿದರು. ಅವರೆಲ್ಲರಿಗೂ ಲಕ್ಷ್ಮಣರಾಜು ಅವರು ಚಿಕಿತ್ಸೆ ನೀಡಿ ಕೆಲವೇ ದಿನಗಳಲ್ಲಿ ಗುಣಪಡಿಸುತ್ತಿದ್ದರು.
ಪಂಡಿತ ಲಕ್ಷ್ಮಣರಾಜು ಅವರ ಕಾಲಾನಂತರ ಅವರ ಸಹೋದರ ಕೃಷ್ಣರಾಜು, ಅವರ ಪುತ್ರ ಪಂಡಿತ್ ಎಂ.ಕೆ. ಅನಂತರಾಜು, ಅವರ ಪುತ್ರ ಎನ್.ಕೆ.ಸುಬ್ಬರಾಜು ಜಟ್ಟಿ ಆಸ್ಪತ್ರೆಯನ್ನು ಮುನ್ನಡೆಸುತ್ತ ಬಂದಿದ್ದು ಆ ನಂತರ ಸುಬ್ಬರಾಜು ಪುತ್ರ ರಾಮಕೃಷ್ಣರಾಜು ಅವರು ಅಸ್ಥಿ ಚಿಕಿತ್ಸೆ ನೀಡುತ್ತಿದ್ದರು. ಇದೀಗ ಅವರ ಪುತ್ರ ಅಜಯ್ ರಾಜ್ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.