ಮೈಸೂರು ದಸರಾ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಬೊಂಬೆಗಳಿಗೆ ಭಾರೀ ಡಿಮ್ಯಾಂಡ್
ರಾಮನಗರ, ಅಕ್ಟೋಬರ್ 12: ಬೊಂಬೆನಗರಿ ಚನ್ನಪಟ್ಟಣದ ಬೊಂಬೆಗಳ ಅಂದಕ್ಕೆ ಮಾರು ಹೋಗದವರೇ ಇಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಕೂಡಾ ಚನ್ನಪಟ್ಟಣದ ಬೊಂಬೆಗಳು ವಿಶ್ವದಾದ್ಯಂತ ಪ್ರಸಿದ್ದಿ ಪಡೆದಿದ್ದು, ವಿದೇಶಿಗರು ಕೂಡಾ ಆಕರ್ಷಿತರಾಗಿದ್ದಾರೆ.
ವಿಶ್ವದ ದೊಡ್ಡಣ್ಣ ಅಮೆರಿಕದ ವೈಟ್ಹೌಸ್ ಚನ್ನಪಟ್ಟಣದ ಬೊಂಬೆ ಸ್ಥಾನ ಪಡೆದಿವೆ. ಆದರೆ ಇತ್ತೀಚೆಗೆ ಚನ್ನಪಟ್ಟಣದ ಬೊಂಬೆಗಳಿಗೆ ಚೀನಾದ ಬೊಂಬೆಗಳ ಆಕ್ರಮಣ ಹಾಗೂ ಮಹಾಮಾರಿ ಕೊರೊನಾ ಮಾರುಕಟ್ಟೆಯಲ್ಲಿ ಹೊಡೆತ ನೀಡಿತ್ತು. ಆದರೆ ಇದೀಗ ಮೈಸೂರು ದಸರಾ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಬೊಂಬೆಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಅದರಲ್ಲೂ ಮೈಸೂರು ದಸರಾವನ್ನೇ ಪ್ರದರ್ಶಿಸುವ ಬೊಂಬೆಗಳಿಗೆ ಇದೀಗ ಮಾರುಕಟ್ಟೆಯಲ್ಲಿ ಸಖತ್ ಡಿಮ್ಯಾಂಡ್ ಸೃಷ್ಟಿಯಾಗಿದೆ.
ಹಳೆಯ ಸಂಪ್ರದಾಯದ ಬಗ್ಗೆ ತಿಳಿದುಕೊಳ್ಳಲು ಖರೀದಿ
ಇನ್ನು ಬೊಂಬೆ ಪ್ರಿಯರು ಸಹ ಮೈಸೂರು ದಸರಾ ಹಿನ್ನೆಲೆಯ ಬೊಂಬೆಗಳಿಗೆ ಮಾರು ಹೋಗಿದ್ದು, ತಮಗೆ ಬೇಕಾದ ರೀತಿಯ ಬೊಂಬೆಗಳಿಗೆ ಆರ್ಡರ್ ಕೊಟ್ಟು ಖರೀದಿ ಮಾಡುತ್ತಿದ್ದಾರೆ. ಮನೆಗಳಲ್ಲಿ ಬೊಂಬೆಗಳನ್ನು ಕೂರಿಸುವ ಹಿನ್ನೆಲೆಯಲ್ಲಿ ಇದೀಗ ಬೊಂಬೆಗಳಿಗೆ ಬೇಡಿಕೆಯುಂಟಾಗಿರುವುದು ಸಹ ಬೊಂಬೆ ಮಾರಾಟಗಾರರಲ್ಲಿ ಖುಷಿಯನ್ನುಂಟು ಮಾಡಿದೆ.
ಮೈಸೂರು ದಸರಾ ಅಂದರೆ ಇಂದಿನ ಯುವಸಮುದಾಯದಲ್ಲಿ ಸಾಕಷ್ಟು ಕ್ರೇಜ್ ಇರುತ್ತದೆ. ಅದರಲ್ಲೂ ಹಳೆಯ ಸಂಪ್ರದಾಯದ ಬಗ್ಗೆ ತಿಳಿದುಕೊಳ್ಳಲು ಇದೀಗ ಬೊಂಬೆ ಮನೆಗಳು ತೆರೆದುಕೊಳ್ಳುತ್ತಿವೆ. ಹಿಂದೂ ಪುರಾಣದ ಸಂಪ್ರದಾಯ, ರಾಮಾಯಣ, ಮಹಾಭಾರತ, ಕೃಷಿ ನಿರತ ರೈತರು, ದೇವತೆಗಳು, ವಿಷ್ಣುವಿನ ಅವತಾರಗಳಲ್ಲದೇ ಸಾಕಷ್ಟು ಸಾವಿರಾರು ರೀತಿಯ ಬೊಂಬೆಗಳನ್ನು ಕೂರಿಸಿ ಪ್ರದರ್ಶನಕ್ಕೆ ಇಡಲಾಗುತ್ತದೆ.
ದಸರಾದ ಜಂಬೂಸವಾರಿ ಮಾದರಿ ಬೊಂಬೆ
ಇದೀಗ ನವರಾತ್ರಿಯ ಮೈಸೂರು ದಸರಾ ಹಿನ್ನೆಲೆಯಲ್ಲಿ ಮನೆಗಳಲ್ಲಿ ಬೊಂಬೆಗಳನ್ನು ನಿರ್ಮಿಸಲು ಜನರು ಕೂಡಾ ಮುಂದಾಗಿದ್ದಾರೆ. ಅದಕ್ಕೆ ತಕ್ಕಂತೆ ದಸರಾದ ಜಂಬೂಸವಾರಿ, ಮೈಸೂರು ಅರಮನೆ, ದೊಡ್ಡ ಗಡಿಯಾರ, ಕೆ.ಆರ್. ಸರ್ಕಲ್, ಸಿ.ಆರ್. ಸರ್ಕಲ್, ಪಟ್ಟದ ಆನೆ, ದಸರಾದ ಗೊಂಬೆ, ಪಟ್ಟದ ಬೊಂಬೆ ಅಲ್ಲದೇ ವಿಷ್ಣವಿನ ಅವತಾರಗಳು, ರಾಮಾಯಣ, ಮಹಾಭಾರತ ಕಥೆಗಳನ್ನು ಹೇಳುವ ಬೊಂಬೆಗಳು, ಅಷ್ಟಲಕ್ಷ್ಮಿಯರ ನವರಾತ್ರಿಯ ಬೊಂಬೆಗಳಿಗೆ ಭಾರೀ ಡಿಮ್ಯಾಂಡ್ ಇದೆ.
ಗೊಂಬೆಗಳ ಬೇಡಿಕೆಯಿಂದ ಬದುಕು ಕಳೆಗಟ್ಟಿದೆ
ಕಳೆದ ಎರಡು ವರ್ಷಗಳಿಂದ ಬೊಂಬೆನಾಡಿನ ಕರಕುಶಲಕರ್ಮಿಗಳು ಕೊರೊನಾ ಏಟಿಗೆ ಸಿಕ್ಕಿ ಸೊರಗಿ ಹೋಗಿದ್ದರು. ಕಳೆದ ಎರಡು ವರ್ಷಗಳಿಂದ ಕೊರೊನಾ ಅಬ್ಬರಕ್ಕೆ ನಲುಗಿರುವ ಬೊಂಬೆ ತಯಾರಕರ ಬದುಕು ಕಳೆಗುಂದಿತ್ತು. ಎರಡು ವರ್ಷಗಳ ನಂತರ ಇದೀಗ ದಸರಾ ಗೊಂಬೆಗಳ ಬೇಡಿಕೆಯಿಂದ ಕೊಂಚ ಕಳೆಕಟ್ಟಿದೆ.
ಕೆಲಸ ಕಳೆದುಕೊಂಡು ಮನೆ ಸೇರಿಕೊಂಡಿದ್ದರು
ಕೋವಿಡ್ ಮಹಾಮಾರಿ ಹೊಡೆತಕ್ಕೆ ಬೊಂಬೆ ತಯಾರಕರು ಸಾಕಷ್ಟು ಹೊಡೆತ ತಿಂದಿದ್ದರು. ಆ ಎರಡು ವರ್ಷಗಳಲ್ಲಿ ಎಷ್ಟೋ ಮಂದಿ ಜನರು ಕೆಲಸಗಳನ್ನು ಕಳೆದುಕೊಂಡು ಮನೆ ಸೇರಿಕೊಂಡಿದ್ದರು. ಆದರೆ ಈ ಬಾರಿಯ ದಸರಾ ಗೊಂಬೆಗಳ ಬೇಡಿಕೆಯಿಂದ ಕೊಂಚ ಚೇತರಿಕೊಂಡಿಸಿಕೊಂಡಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಅಲ್ಲದೇ ದೇಶದ ಮೂಲೆ ಮೂಲೆಗಳಿಂದಲೂ ದಸರಾ ಗೊಂಬೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಿಂದ ಸೊರಗಿದ್ದ ಗೊಂಬೆ ತಯಾರಕರು ಖುಷಿಯಾಗಿದ್ದಾರೆ ಎನ್ನುತ್ತಾರೆ ಬೊಂಬೆ ತಯಾರಕ ಕೌಸರ್.
ಅದ್ಧೂರಿಯಾಗಿ ಆಚರಣೆ ಮಾಡುತ್ತೇವೆ
ಕೊರೊನಾದಿಂದ ಜನರ ಪ್ರಾಣ ರಕ್ಷಣೆಯ ನಿಟ್ಟಿನಲ್ಲಿ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಇದೇ ಕಾರಣಕ್ಕಾಗಿ ನಾಡ ಹಬ್ಬವಾದ ದಸರಾವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಕೊಂಚ ರಿಲೀಫ್ ಆಗಿರುವುದರಿಂದ ಅದ್ಧೂರಿಯಾಗಿ ಜನರನ್ನು ಕರೆದು ಹಬ್ಬ ಆಚರಣೆ ಮಾಡುತ್ತೇವೆ ಎನ್ನುತ್ತಾರೆ ದಸರಾ ಗೊಂಬೆಗಳನ್ನು ಖರೀದಿ ಮಾಡಲು ಬಂದ ಅಶ್ವಿನಿ ಎಂಬ ಗ್ರಾಹಕಿ.