ದಸರಾ ಉದ್ಘಾಟನೆ - ಸಾಮಾನ್ಯಳಿಗೆ ಸಿಕ್ಕ ದೊಡ್ಡ ಸನ್ಮಾನ : ಸುಧಾ ಮೂರ್ತಿ
Recommended Video
ಬೆಂಗಳೂರು, ಅಕ್ಟೋಬರ್ 06 : "ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಯ ಗೌರವ ನೀಡಿರುವುದು ನನಗೆ ನೀಡಿರುವ ಅತೀ ದೊಡ್ಡ ಸನ್ಮಾನ. ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಮಹತ್ವದ್ದಾಗಿರುವ ನಾಡಹಬ್ಬದಲ್ಲಿ ಕನ್ನಡತಿಯೊಬ್ಬರಿಗೆ ಈ ಗೌರವ ಸಿಕ್ಕಿದ್ದರಿಂದ ತುಂಬಾ ಸಂತೋಷವಾಗಿದೆ."
ಹೀಗೆಂದು ನುಡಿದವರು, ಇನ್ಫೋಸಿಸ್ ಫೌಂಡೇಷನ್ ಮೂಲಕ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಕನ್ನಡ ನಾಡಿನ ಹೆಮ್ಮೆಯ ಲೇಖಕಿ, ಸರಳತೆ ಮತ್ತು ಸಜ್ಜನಿಕೆಯ ಸಾಕಾರಮೂರ್ತಿ ಆಗಿರುವ ಸುಧಾ ಮೂರ್ತಿ ಅವರು. ಅಕ್ಟೋಬರ್ 10ರಿಂದ ಆರಂಭವಾಗಲಿರುವ ಹೆಮ್ಮೆಯ ಮೈಸೂರು ದಸರಾವನ್ನು ಉದ್ಘಾಟಿಸಲಿರುವ ಅವರು, ತಮ್ಮ ಅನಿಸಿಕೆಗಳನ್ನು ಒನ್ಇಂಡಿಯಾ ಕನ್ನಡದ ಜೊತೆ ಹಂಚಿಕೊಂಡರು.
ಈ ಬಾರಿ ಸಾಂಪ್ರದಾಯಿಕ ದಸರಾ, ಉದ್ಘಾಟನೆ ಮಾಡಲಿದ್ದಾರೆ ಸುಧಾಮೂರ್ತಿ
ಕ್ರಿಶ 1610ರಿಂದ ಆಚರಿಸಿಕೊಂಡು ಬರಲಾಗುತ್ತಿರುವ ವೈಭವದ ಮೈಸೂರು ದಸರಾ ಉತ್ಸವ ಅಕ್ಟೋಬರ್ 10ರಿಂದ ಆರಂಭವಾಗಲಿದ್ದು, 19ರಂದು ವಿಜಯದಶಮಿಯಂದು ಸಂಪನ್ನವಾಗಲಿದೆ. ಅತೀವೃಷ್ಟಿ ಅನಾವೃಷ್ಟಿಗಳ ನಡುವೆಯೂ, ಕರ್ನಾಟಕದ ಅತೀದೊಡ್ಡ ಹಬ್ಬವಾಗಿರುವ ದಸರಾದ ಸಾಂಪ್ರದಾಯಿಕ ಆಚರಣೆಗೆ ಕುಂದು ಬರದಂತೆ ಆಚರಿಸಲಾಗುತ್ತಿದೆ. ತಮ್ಮ ಬಿಡುವಿಲ್ಲದ ಸಮಯದ ನಡುವೆ ಮಾತಿಗೆ ಸಿಕ್ಕವರು ಸುಧಾ ಮೂರ್ತಿ ಅವರು. ಅವರ ಮಾತುಗಳಲ್ಲಿಯೇ ಕೇಳಿರಿ.
ಮೈಸೂರು ದಸರಾ ಉದ್ಘಾಟನೆ ನಿರೀಕ್ಷೆಯೇ ಇರಲಿಲ್ಲ
ಮೈಸೂರು ದಸರಾ ಉದ್ಘಾಟನೆಯ ಗೌರವ ನನಗೆ ಸಿಗುತ್ತದೆಯೆಂದು ನೂರಕ್ಕೆ ನೂರರಷ್ಟು ನಿರೀಕ್ಷೆಯಿರಲಿಲ್ಲ. ಆ ಬಗ್ಗೆ ನಿರೀಕ್ಷೆ ಮಾಡುವುದಿರಲಿ, ವಿಚಾರ ಕೂಡ ಯಾವತ್ತೂ ಮಾಡಿರಲಿಲ್ಲ, ಮೈಸೂರು ದಸರಾ ಉದ್ಘಾಟಿಸಲು ಅವಕಾಶ ಸಿಗಬೇಕೆಂಬ ಆಸೆಯಂತೂ ಇಲ್ಲವೇ ಇರಲಿಲ್ಲ. ಆದರೂ, ನಾನು ಉದ್ಘಾಟನೆ ಮಾಡಬೇಕೆಂದು ಆಹ್ವಾನ ಬಂದಾಗ ತುಂಬಾ ಸಂತೋಷವಾಯಿತು. ಏಕೆಂದರೆ, ಇದು ಮೈಸೂರಿನ ಹಬ್ಬ ಮಾತ್ರವಲ್ಲ, ಇಡೀ ಕನ್ನಡ ನಾಡಿನ ಸಾಂಸ್ಕೃತಿಕ ಮಹೋತ್ಸವ. ಅದರಲ್ಲೂ ನನ್ನಂಥ ಓರ್ವ ಸಾಮಾನ್ಯ ಕನ್ನಡತಿಗೆ ಈ ಸೌಭಾಗ್ಯ ದಕ್ಕಿದ್ದರಿಂದ ನನಗೆ ಖುಷಿಯಾಯಿತು.
ಮಹಾರಾಜರ ಖಾಸಗಿ ದರ್ಬಾರ್: ನಿಜಕ್ಕೂ ಹೇಗೆ ನಡೆಯುತ್ತಿತ್ತು?
ಸಾಮಾನ್ಯರಲ್ಲಿ ಸಾಮಾನ್ಯಳಿಗೆ ಸಿಕ್ಕ ದೊಡ್ಡ ಸನ್ಮಾನ
ದಸರಾ ಉದ್ಘಾಟಿಸುತ್ತಿರುವ ನನಗೆ ಸಿಕ್ಕ ದೊಡ್ಡ ಸನ್ಮಾನವೆಂದೇ ನಾನು ಭಾವಿಸುತ್ತೇನೆ. ಏಕೆಂದರೆ, ಈ ಉತ್ಸವವನ್ನು ಹಿಂದೆ ಉದ್ಘಾಟಿಸಿದವರು ಅಂಥಿಂಥವರಲ್ಲ. ಅತಿರಥ ಮಹಾರಥರು. ಕನ್ನಡ ಸಾಂಸ್ಕೃತಿಕ ಲೋಕದ ದಿಗ್ಗಜರಾದ ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿ, ನಾಟಕಕಾರ ಡಾ. ಚಂದ್ರಶೇಖರ ಕಂಬಾರರು, ಖ್ಯಾತ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು, ನಮ್ಮ ಹುಬ್ಬಳ್ಳಿಯವರೇ ಆದ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ ಅವರು, ನಿತ್ಯೋತ್ಸವದ ಕವಿ ಡಾ. ನಿಸಾರ್ ಅಹ್ಮದ್ ಅವರಂಥವರು ಉದ್ಘಾಟಿಸಿದ್ದಾರೆ. ಆದರೆ, ನಾನು ಸಾಮಾನ್ಯರಲ್ಲಿ ಸಾಮಾನ್ಯಳು. ಇಂಥ ಸಾಮಾನ್ಯಳಿಗೆ ಈ ದೊಡ್ಡ ಗೌರವ ಸಿಕ್ಕಿರುವುದು ದೊಡ್ಡ ಸನ್ಮಾನವೇ ಅಲ್ಲವೆ?
ಕರ್ನಾಟಕ ಪೊಲೀಸ್ ಗೆ ಇನ್ಫೋಸಿಸ್ ನಿಂದ ಸೈಬರ್ ಲ್ಯಾಬ್ ನಿರ್ಮಾಣ
ರಿಬ್ಬನ್ ಕೊಂಡಿದ್ದು, ಸಿಹಿ ತಿಂದಿದ್ದು ಇನ್ನೂ ಹಸಿರು
ನಾನು ಮೊದಲ ಬಾರಿ ಮೈಸೂರು ದಸರಾ ನೋಡಲು ಬಂದಿದ್ದು 1959ರಲ್ಲಿ ತಂದೆ ತಾಯಿಯ ಜೊತೆಗೆ (ಆಗ ಅವರಿಗೆ 9 ವರ್ಷ). ಅಂದು ನೋಡಿದ ವೈಭವೋಪೇತ ಮೈಸೂರು ದಸರಾ ಇನ್ನೂ ಹಚ್ಚಹಸಿರಾಗಿದೆ. ಆಗ ಸ್ವತಃ ಮೈಸೂರು ಮಹಾರಾಜರೇ ಆನೆಯ ಅಂಬಾರಿಯ ಮೇಲೆ ಕೂಡುತ್ತಿದ್ದರು. ಆಗ ನಾವು ಸಂಬಂಧಿಯೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದೆವು. ಬಂಜೂ ಸವಾರಿ ನೋಡುವಾಗ ಇಕ್ಕೆಲಗಳಲ್ಲಿಯೂ ಸಾವಿರಾರು ಜನರು ಸೇರಿದ್ದು, ಬಣ್ಣಬಣ್ಣದ ರಿಬ್ಬನ್ ಬಳೆಗಳನ್ನು ಕೊಂಡಿದ್ದು, ರಸ್ತೆಬದಿಯಲ್ಲಿ ಸಿಹಿಯನ್ನು ಕೊಂಡು ತಿಂದಿದ್ದು, ಕೃಷ್ಣರಾಜ ಸಾಗರ ಅಣೆಕಟ್ಟು ನೋಡಿದ್ದು ಈಗಲೂ ಮನದಲ್ಲಿ ಅಚ್ಚಳಿಯದ ನೆನಪುಗಳನ್ನು ಮೂಡಿಸಿದೆ. ಆಗ ನಾನು ಮೈಸೂರಿಗೆ ಬಂದಿದ್ದೂ ಮೊದಲ ಬಾರಿಗೆ, ದಸರಾ ನೋಡಿದ್ದೂ ಮೊದಲ ಬಾರಿಯೇ. ಈಗ ಮತ್ತೆ ಅದೇ ಮೈಸೂರು ದಸರಾದಲ್ಲಿ ಭಾಗಿಯಾಗಲು, ಉತ್ಸವವನ್ನು ಉದ್ಘಾಟಿಸಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ.
ಎಲ್ಇಡಿ ಪರದೆ ಮೂಲಕ ಜಂಬೂ ಸವಾರಿ, ಪಂಜಿನ ಕವಾಯತು ವೀಕ್ಷಣೆಗೆ ವ್ಯವಸ್ಥೆ
ಮಕ್ಕಳಿಗೆ ದಸರಾ ತೋರಿಸಿ ಅಭಿಮಾನ ಮೂಡಿಸಬೇಕು
ಇದನ್ನು ಮೈಸೂರು ದಸರಾ ಅಂತ ಕರೆದರೂ ಇದು ಇಡೀ ಕನ್ನಡ ನಾಡಿನ ಹೆಮ್ಮೆಯ ಹಬ್ಬ. ಆನೆ (ಅರ್ಜುನ) ಚಿನ್ನದ ಅಂಬಾರಿ ಮೇಲೆ ತಾಯಿ ಚಾಮುಂಡೇಶ್ವರಿ ಕುಳಿತು, ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವುದನ್ನು, ಇಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳನ್ನು, ವೈವಿಧ್ಯಮಯ ಕಲಾಪ್ರದರ್ಶನವನ್ನು ಪೋಷಕರು ತಮ್ಮ ಮಕ್ಕಳಿಗೂ ತೋರಿಸಿ, ಅವರಲ್ಲಿ ಕನ್ನಡ ನಾಡಿನ ಶ್ರೀಮಂತ ಸಂಸ್ಕೃತಿಯ ಬಗ್ಗೆ ತಿಳಿವಳಿಕೆ ಮೂಡುವಂತೆ ಮಾಡಬೇಕು, ನಮ್ಮ ನಾಡಿನ ಬಗ್ಗೆ ಅಭಿಮಾನ ಮೂಡುವಂತೆ ಮಾಡಬೇಕು. ಈ ಕಾರಣಕ್ಕಾಗಿಯಾದರೂ ಪಾಲಕರು ಬಿಡುವು ಮಾಡಿಕೊಂಡು ಮೈಸೂರು ದಸರಾದಲ್ಲಿ ತಮ್ಮ ಮಕ್ಕಳೊಂದಿಗೆ ಭಾಗವಹಿಸಬೇಕು.
ಮೈಸೂರು ದಸರಾ: ಖಾಸಗಿ ದರ್ಬಾರ್ ಗೆ ಸಿದ್ಧವಾದ ರತ್ನ ಖಚಿತ ಸಿಂಹಾಸನ
ಇದು ನಾಡಹಬ್ಬ ಮಾತ್ರವಲ್ಲ, ಸಾಧಕರ ಹಬ್ಬ
ಕರ್ನಾಟಕದ ಸಮೃದ್ಧ ಸಂಸ್ಕೃತಿಯ ಪ್ರತೀಕವಾಗಿರುವ ಮೈಸೂರು ದಸರಾ ಎಂಬುದು ನಾಡಹಬ್ಬ ಮಾತ್ರವಲ್ಲ ಇದು ಸಾಧಕರ ಹಬ್ಬ. ಕರ್ನಾಟಕದಲ್ಲಿ ಹಲವಾರು ಸಾಧಕರು ಹಲವಾರು ಸಾಧನೆ ಮಾಡಿದ್ದಾರೆ. ಅವರ ಬಗ್ಗೆ ಮಕ್ಕಳಿಗೆ ಪರಿಚಯಿಸುವಂಥ ಕೆಲಸವೂ ದಸರಾ ಸಂದರ್ಭದಲ್ಲಿ ಆಗಬೇಕು. ಅವರ ಬಗ್ಗೆ ಸಾಕ್ಷ್ಯಚಿತ್ರಗಳನ್ನು ಮಾಡಿ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ತೋರಿಸಬೇಕು. ಕರ್ನಾಟಕದ ಪರಂಪರೆಯ ಬಗ್ಗೆ ಎಲ್ಲ ಕನ್ನಡಿಗರಿಗೂ ಹೆಮ್ಮೆ ಮೂಡಬೇಕು ಎಂಬುದು ನನ್ನ ಆಶಯ.
ದಸರಾ ಸರಳವಾಗಿದ್ದಷ್ಟೂ ಸುಂದರವಾಗಿರುತ್ತದೆ.
ಕೆಲವೆಡೆ ಅತೀವೃಷ್ಟಿ ಕೆಲವೆಡೆ ಅನಾವೃಷ್ಟಿಯಾಗಿರುವ ಈ ಸಂದರ್ಭದಲ್ಲಿ ದುಂದುವೆಚ್ಚ ಮಾಡದೆ ಅತ್ಯಂತ ಸರಳವಾಗಿ ಈ ಹಬ್ಬ ಆಚರಿಸಬೇಕು. ಹಬ್ಬ ಸರಳವಾದಷ್ಟೂ ಸುಂದರವಾಗಿರುತ್ತದೆ ಎಂಬುದು ನನ್ನ ಅಭಿಪ್ರಾಯ ಎಂದು ಒನ್ಇಂಡಿಯಾ ಕನ್ನಡದ ಜೊತೆಗಿನ ಚುಟುಕು ಸಂದರ್ಶನವನ್ನು ಮುಗಿಸಿದರು ಇನ್ಫೋಸಿಸ್ ಫೌಂಡೇಷನ್ ನ ಅಧ್ಯಕ್ಷೆಯಾಗಿರುವ ಸುಧಾ ಮೂರ್ತಿ ಅವರು. ಕನ್ನಡ ಜನತೆಯ ಸೇವೆಗೆ ಸದಾ ಸಿದ್ಧರಿರುವ ಸುಧಾ ಮೂರ್ತಿ ಅವರು ಇತ್ತೀಚೆಗೆ ಕೊಡಗಿನಲ್ಲಿ ಜಲಪ್ರಳಯವಾದಾಗ ಅಲ್ಲಿನ ಜನರ ಕಣ್ಣೀರಿಗೆ ಮರುಗಿದ್ದರು, ಮಿಡಿದಿದ್ದರು. ತಾವೇ ಖುದ್ದಾಗಿ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಿ ಸಾವಿರಾರು ಸಂತ್ರಸ್ತರಿಗೆ ನೆರವು ನೀಡಿದ್ದರು.