ಮೈಸೂರು ಅರಮನೆಯ ವರ್ಣಿಸಲಸದಳ ದೃಶ್ಯಗಳು...
ಮೈಸೂರು, ಅಕ್ಟೋಬರ್ 21: ಕಲೆ, ಸಂಸ್ಕೃತಿ, ಪರಂಪರೆಯ ವೈಭವದೊಂದಿಗೆ ನಿಸರ್ಗ ಸುಂದರತೆಯನ್ನು ಹೊಂದಿ ಎಲ್ಲರನ್ನೂ ತನ್ನೆಡೆಗೆ ಸೆಳೆಯುತ್ತಾ, ಬದುಕಿಗೆ ಆಶ್ರಯ ನೀಡಿ ದಿನದಿಂದ ದಿನಕ್ಕೆ ವಿಸ್ತರಣೆಯಾಗುತ್ತಾ ಆಧುನಿಕತೆಗೆ ತೆರೆದುಕೊಂಡು ಬೆಳೆಯುತ್ತಿರುವ ಮೈಸೂರು ನಗರ ನಿವೃತ್ತರ ಸ್ವರ್ಗವೂ ಹೌದು.
ಈಗಾಗಲೇ ದೇಶ, ವಿದೇಶಗಳಿಂದ ಬಂದವರು ಮೈಸೂರು ನಗರವನ್ನು ಮೆಚ್ಚಿ ಕೊಂಡಾಡಿದ್ದಾರೆ. ಅಷ್ಟೇ ಅಲ್ಲ ಅವತ್ತಿನ ಕಾಲದಲ್ಲಿ ನಗರದಲ್ಲಿ ಓಡಾಡಿದ್ದ ಮಹನೀಯರು ಮೈಸೂರು ನಗರದ ದೊಡ್ಡ ದೊಡ್ಡ ರಸ್ತೆಗಳಿಂದ, ಉತ್ತಮ ಸೌಧಗಳಿಂದ, ವಿದ್ಯಾಕೇಂದ್ರಗಳಿಂದ, ಅರಮನೆ, ಗುರುಮನೆ, ದೇವರಮನೆಯಿಂದ ಕೂಡಿ ಶೋಭಾಯಮಾನವಾಗಿದೆ. ಅಷ್ಟೇ ಅಲ್ಲದೆ ಮನುಷ್ಯನ ಬುದ್ಧಿವಂತಿಕೆ, ಪ್ರಕೃತಿ ಸೌಂದರ್ಯ ಮತ್ತು ದೈವದತ್ತ ಆಶೀರ್ವಾದದ ಬಲದಿಂದ ನಗರ ತ್ರಿವೇಣಿ ಸಂಗಮದಂತಿದೆ ಎಂದು ಹೊಗಳಿದ್ದರು. ಇಷ್ಟು ಸಾಕು ಮೈಸೂರು ನಗರದ ಹಿರಿಮೆ ಹೇಳಲು.
ಅಂಬಾರಿ ಹೊರಲಿರುವ ಅಭಿಮನ್ಯುಗೆ ಜಂಬೂಸವಾರಿ ಹೊಸತೇನಲ್ಲ...
ಆಹ್ಲಾದಕರ ವಾತಾವರಣ
ಸಮುದ್ರಮಟ್ಟದಿಂದ 2525 ಅಡಿ ಎತ್ತರದಲ್ಲಿರುವ ನಗರ ಬೇಸಿಗೆಯಲ್ಲಿ ಹೆಚ್ಚು ಸೆಕೆಯಿಲ್ಲದೆ, ಚಳಿಗಾಲದಲ್ಲಿ ಅತಿ ಹೆಚ್ಚು ಚಳಿಯೂ ಇಲ್ಲದೆ ಉಲ್ಲಾಸಕರ ವಾತಾವರಣವನ್ನು ಹೊಂದಿದೆ. ಹೀಗಾಗಿ ಹೆಚ್ಚಿನವರು ಇಲ್ಲಿನ ವಾತಾವರಣವನ್ನು ಇಷ್ಟಪಟ್ಟು ತಮ್ಮ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಬಂದರೆ, ಪ್ರವಾಸಿಗರು ಒಂದಷ್ಟು ದಿನ ಕಳೆದು ಹೋಗಲು ಬರುತ್ತಾರೆ. ದಸರಾ ಸಂದರ್ಭ ಮಾತ್ರವಲ್ಲದೆ, ಎಲ್ಲ ದಿನಗಳಲ್ಲಿಯೂ ಪ್ರವಾಸಿಗರ ದಂಡು ಇತ್ತ ಸುಳಿಯುತ್ತಲೇ ಇರುತ್ತದೆ.
ಶಿಲ್ಪಿಗಳ ಕೈಚಳಕದ ಪ್ರತಿಬಿಂಬ
ಮೈಸೂರು ನಗರ ಎಂಬುದು ಮಾನವನ ಕೌಶಲ್ಯದ ಜತೆಗೆ ನಿಸರ್ಗ ಸೌಂದರ್ಯವು ಮಿಲನವಾಗಿರುವ ಮನೋಹರ ನಗರ ಎಂದು ಬಣ್ಣಿಸಿದ್ದರೆ, ಮೈಸೂರು ಅರಮನೆ ಎಂಬುದು ನುರಿತ ಶಿಲ್ಪಿಗಳ ಕೈಚಳಕದ ಪ್ರತಿಬಿಂಬ, ಕನಸಿನಲ್ಲಿ ಕಂಡ ಆಕೃತಿಯನ್ನು ಧರೆಗಿಳಿಸಿರುವ ಸ್ವಪ್ನ ಸೌಂದರ್ಯದ ಸವಿನೆನಪು ಎಂದು ಹಾಡಿ ಹೊಗಳಲಾಗಿದೆ.
ಧರೆಗಿಳಿಯುವ ಅಮರಾವತಿ
ದಸರಾ ಬರುತ್ತಿದ್ದಂತೆ ಹೊಸರೂಪ ಪಡೆಯುವ ಅರಮನೆ ನಗರದ ಪ್ರಮುಖ ಆಕರ್ಷಣೆಯಾಗುತ್ತದೆ. ರಾತ್ರಿ ವೇಳೆ ವಿದ್ಯುದ್ದೀಪಗಳು ಬೆಳಗುತ್ತಿದ್ದರೆ, ಇಂದ್ರನ ಆಸ್ಥಾನ ಅಮರಾವತಿಯೇ ಧರೆಗಿಳಿದು ಬಂದಂತೆ ಗೋಚರವಾಗುತ್ತದೆ. ಇನ್ನು ದಸರಾದ ಎಲ್ಲ ಕೈಂಕರ್ಯಗಳು ಇಲ್ಲಿಯೇ ನಡೆಯುತ್ತದೆ. ಅದರಲ್ಲೂ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ದಸರಾ ಅರಮನೆಗಷ್ಟೆ ಸೀಮಿತವಾಗಿರುವುದರಿಂದ, ಎಲ್ಲರ ಚಿತ್ತವೂ ಅರಮನೆಯತ್ತ ನೆಟ್ಟಿರುವುದು ಎದ್ದು ಕಾಣುತ್ತಿದೆ. ಆದರೆ ದಸರಾ ಕಳೆಯುತ್ತಿದ್ದಂತೆಯೇ ನಿರಾಭರಣ ಸುಂದರಿಯಾಗಿ ಅರಮನೆ ಕಂಗೊಳಿಸುತ್ತಿದೆ.
ಅರಮನೆಯಿಂದ ಸುಂದರ ನೋಟ
ಹೊರಗಿನಿಂದ ನಿಂತು ಅರಮನೆಯ ದೃಶ್ಯಗಳನ್ನು ಹಲವು ರೀತಿಯಲ್ಲಿ ಸೆರೆಹಿಡಿದುಕೊಂಡು ಹೋಗುತ್ತಾರೆ. ಸಾಮಾನ್ಯವಾಗಿ ಹೊರಗಿನಿಂದ ಅರಮನೆಯ ನೂರಾರು ದೃಶ್ಯಗಳು ನೋಡಲು ಸಿಗುತ್ತವೆ. ಆದರೆ ಅರಮನೆಯಿಂದ ನಿಂತು ಹೊರಗೆ ನೋಡುವಾಗಿನ ದೃಶ್ಯಗಳೇ ವಿಭಿನ್ನವಾಗಿವೆ. ಹಿಂದೆ ಮಹಾರಾಜರ ಕಾಲದಲ್ಲಿ ರಾಜಪರಿವಾರ ಅರಮನೆಯ ಮೇಲೆ ನಿಂತು ನಗರದ ಸೌಂದರ್ಯವನ್ನು ಸವಿಯುತ್ತಾ ಸಮಯ ಕಳೆಯುತ್ತಿದ್ದರು.
ವರ್ಣಿಸಲಸದಳದ ದೃಶ್ಯಗಳು
ಸಾಮಾನ್ಯವಾಗಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಅರಮನೆಯ ಒಳಾಂಗಣವನ್ನು ವೀಕ್ಷಿಸುವುದರಲ್ಲೇ ಸಮಯ ಕಳೆದು ಬಿಡುತ್ತಾರೆ. ಜತೆಗೆ ಅರಮನೆಯ ಮೇಲೆ ತೆರಳಲು ಸಾರ್ವಜನಿಕರಿಗೆ ಅವಕಾಶವಿಲ್ಲದ ಕಾರಣ ಅರಮನೆಯಿಂದ ಹೊರ ನೋಟ ಅಲಭ್ಯ. ಒಂದು ವೇಳೆ ಅರಮನೆಯ ಮೇಲೆ ನಿಂತು ನೋಡಿದರೆ ಅಲ್ಲಿಂದ ಕಂಡು ಬರುವ ಆ ಸುಂದರ ದೃಶ್ಯಗಳು ಮಾತ್ರ ವರ್ಣಿಸಲು ಅಸಾಧ್ಯವಾಗಿರುತ್ತದೆ.
ಮನೋಲ್ಲಾಸದ ಚಿತ್ರಣಗಳು
ಸುತ್ತಲೂ ಹಸಿರಿನಿಂದ ಕಂಗೊಳಿಸುವ ಸುಂದರ ನಿಸರ್ಗ, ಕಣ್ಣೆದುರಿಗೆ ವೀರಾಜಮಾನಳಾಗಿರುವ ಚಾಮುಂಡಿತಾಯಿ, ಹಾಗೆ ಸುಮ್ಮನೆ ಕಣ್ಣು ಹಾಯಿಸಿದರೆ ಮಹಿಷಾಸುರ ಮಲಗಿದಂತೆ ಭಾಸವಾಗುವ ಬೆಟ್ಟ. ಸುಣ್ಣ, ಬಣ್ಣ ಬಳಿದು ಸ್ವಚ್ಛವಾಗಿ ಕಂಗೊಳಿಸುವ ಕಟ್ಟಡ, ಜನ ವಸತಿ ಪ್ರದೇಶಗಳು, ಅವರ ಮನೆ ಸುತ್ತಮುತ್ತ ಅರಳಿ ನಗುವ ಹೂಬನಗಳು ಹೀಗೆ ಒಂದೇ ಎರಡೇ ಹತ್ತಾರು ಮನೋಲ್ಲಾಸಗೊಳಿಸುವ ಚಿತ್ರಣಗಳು ಕಣ್ಣಿಗೆ ರಾಚುತ್ತವೆ.