ವಾಹನಗಳಿಗೆ ಹೊಸ ರೂಪ ಕೊಡುವ ಮೈಸೂರು ಯುವಕನ ಕೈಚಳಕ
ಈಗ ಕಾರು ಕೊಂಡು ಅದಕ್ಕೊಂದು ಗ್ರಾಫಿಕ್ ಡಿಸೈನ್ ಮಾಡಿಸುವುದು ಟ್ರೆಂಡ್ ಆಗಿದೆ. ಈ ಟ್ರೆಂಡ್ ಗೆ ತಕ್ಕಂತೆ, ಆಧುನಿಕ ಅಭಿರುಚಿಗೆ ತಕ್ಕಂತೆ ಡಿಸೈನ್ ಮಾಡಿಕೊಡುವಲ್ಲಿ ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಸ್ಟಿಕ್ಕರ್ ಪ್ಲಾನೆಟ್ ಶಾಪ್ ನ ಎಸ್.ಪಿ.ಅರುಣ್ ಶೇಖರ್ ಎತ್ತಿದ ಕೈ.
ಈಗಾಗಲೇ ಇವರು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಹಲವು ರೀತಿಯ ವಿನ್ಯಾಸ ಮಾಡಿಕೊಡುವ ಮೂಲಕ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ಇವರು ಕಾರೊಂದಕ್ಕೆ ಮಾಡಿಕೊಟ್ಟ ಅಪಘಾತದ ಕುರಿತು ಅರಿವು ಮೂಡಿಸುವ ವಿನ್ಯಾಸ ಲಿಮ್ಕಾ ದಾಖಲೆ ಬರೆದಿದೆ. ಕಳೆದೊಂದು ದಶಕದಿಂದ ಗ್ರಾಫಿಕ್ ಡಿಸೈನ್ ಮತ್ತು ಸ್ಟಿಕ್ಕರಿಂಗ್ ಕೆಲಸ ಮಾಡಿಕೊಂಡು ಬರುತ್ತಿರುವ ಇವರು ತಮ್ಮ ಕೆಲಸದಲ್ಲಿ ಸದಾ ಏನಾದರೊಂದು ಹೊಸತನ ಹುಡುಕುತ್ತಿರುವ ಉತ್ಸಾಹಿ ಯುವಕ. ಇವರ ಕೆಲಸದಲ್ಲಿನ ಉತ್ಸಾಹ ಮತ್ತು ಕ್ರಿಯಾಶೀಲತೆಯೇ ಅವರನ್ನು ಇನ್ನಷ್ಟು ಕೆಲಸಗಳನ್ನು ಮಾಡಲು ಸಾಧ್ಯವಾಗಿಸಿದೆ. ಇವರ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ...
ವಾಹನಗಳ ಮೇಲೆ ಹೊಸ ಡಿಸೈನ್
ಹಾಗೆ ನೋಡಿದರೆ ಅರುಣ್ ಶೇಖರ್ ಓದಿದ್ದು ಇಂಜಿನಿಯರಿಂಗ್. ಆದರೆ ಇವರಿಗೆ ಚಿಕ್ಕಂದಿನಿಂದಲೂ ಅನಿಮೇಷನ್ ನಲ್ಲಿ ಆಸಕ್ತಿಯಿತ್ತು. ಹೀಗಾಗಿ ಇವರು ಆಂಟ್ ಸಂಸ್ಥೆಯಲ್ಲಿ ಅನಿಮೇಷನ್ ಇನ್ ಡಿಪ್ಲೋಮಾ ಮಾಡುವ ಮೂಲಕ ಡಿಸೈನ್ ಮಾಡುವ ಕಲೆಯನ್ನು ಕರಗತಗೊಳಿಸಿಕೊಂಡರಲ್ಲದೆ, ಬಳಿಕ ಪುಟ್ಟದೊಂದು ಅಂಗಡಿ ತೆರೆದು ಬದುಕು ಕಟ್ಟಿಕೊಂಡರು. ಅದರಲ್ಲೇ ಈಗ ಹೊಸ ಹೊಸದನ್ನು ರೂಪಿಸುತ್ತಾ ಜನರ ಗಮನ ಸೆಳೆಯುತ್ತಿದ್ದಾರೆ.
ಗಿನ್ನಿಸ್ ದಾಖಲೆ ಬರೆದ ವಜ್ರದುಂಗುರ ಆನ್ಲೈನ್ನಲ್ಲಿ ಹರಾಜು
ವಿನ್ಯಾಸದ ಮೂಲಕ ಸಂದೇಶ
ಯಾವುದೇ ಕಂಪೆನಿಯ ಕಾರಾಗಿರಲಿ, ಅದಕ್ಕೆ ಗ್ರಾಹಕರಿಗೆ ಇಷ್ಟವಾಗುವ ರೀತಿ ವಿನ್ಯಾಸ ಮಾಡಿಕೊಡುವುದು ಅರುಣ್ ಶೇಖರ್ ಅವರ ಕೆಲಸ. ಅವರ ಕೈಚಳಕ ಬರೀ ಸುಂದರ ವಿನ್ಯಾಸವನ್ನಷ್ಟೆ ತೋರದೇ ಅದರ ಹಿಂದೆ ಏನಾದರೊಂದು ಸಂದೇಶ ರವಾನಿಸುತ್ತದೆ.
ವಾಹನಗಳಿಗೆ ಸ್ಟಿಕ್ಕರ್ ಹಾಗೂ ಗ್ರಾಫಿಕ್ ಡಿಸೈನ್ ಮಾಡಿಕೊಡುವುದು ಅಷ್ಟೇ ಅಲ್ಲದೇ ಜಾಹೀರಾತಿಗೆ ಉಪಯೋಗವಾಗುವಂತಹ ಹಾಗೂ ಕ್ರೀಡೆಯಲ್ಲಿ ಆಸಕ್ತಿಯುಳ್ಳವರಿಗೆ ಹಾಗೂ ಪರಿಸರ ಸ್ನೇಹಿಯಾದವರಿಗೆ ಇಷ್ಟವಾದ ಗ್ರಾಫಿಕ್ಸ್, ಲೇಸರ್ ಪ್ರಿಂಟ್ ಡಿಸೈನ್, ಸಾಲ್ವೆಂಟ್ ಡಿಸೈನ್ ಗಳನ್ನು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ತಮ್ಮ ಶೈಲಿ ಹಾಗೂ ಕಲೆಯನ್ನು ವಾಹನಗಳ ಮೇಲೆ ಬಿಂಬಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಾರುಗಳಿಗೆ ಸ್ಕ್ರಾಚ್ ಪ್ರೂಫ್ ಕವರ್
ಇದಲ್ಲದೆ ಕಾರುಗಳಿಗೆ ಸ್ಕ್ರಾಚ್ ಪ್ರೂಫ್ ಕವರ್ ಅಳವಡಿಸಿಕೊಡುತ್ತಿದ್ದಾರೆ. ಇದನ್ನು ಸಿಂಗಪೂರ್ ನಿಂದ ಆಮದು ಮಾಡಿಕೊಂಡು ಗ್ರಾಹಕರ ಕಾರುಗಳಿಗೆ ಹಾಕಿಕೊಡುತ್ತಿದ್ದಾರೆ. ಇದನ್ನು ಅಳವಡಿಸಿದರೆ ಕಾರಿಗೆ ಸ್ವಲ್ಪವೂ ಡ್ಯಾಮೇಜ್ ಆಗದಂತೆ ಪೇಂಟ್ ಪ್ರೊಡಕ್ಷನ್ ಎಂಬ ವಸ್ತುವನ್ನು ಬಳಕೆ ಮಾಡಿಕೊಂಡು ಅದರ ಮೇಲ್ಮೈಗೆ ಅಂಟಿಸಿ ಸ್ಕ್ರಾಚ್ ರಹಿತ ಹಾಗೂ ಕಾರಿನ ಬಣ್ಣವನ್ನು ಹಾಳಾಗದಂತೆ ಕಾಪಾಡಿಕೊಳ್ಳುವ ಕೆಲಸ ಮಾಡಿಕೊಡುತ್ತಿದ್ದಾರೆ.
ನಶಿಸುತ್ತಿರುವ ಮೈಸೂರಿನ ಪಾರಂಪರಿಕ ಕುಂದನ ಕಲೆಯಲ್ಲಿ ಅರಳಿದ ಮೋದಿ ಮತ್ತು ತಾಯಿಯ ಚಿತ್ರ
ಇನ್ನು ಇವರ ಹೆಸರು ಲಿಮ್ಕಾ ದಾಖಲೆ ಬರೆದಿದ್ದು ಕೂಡ ಅಪರೂಪದ ಸಂದರ್ಭದಲ್ಲಿಯೇ.. ಗ್ರಾಹಕರೊಬ್ಬರು ಸ್ಪರ್ಧೆಯಲ್ಲಿ ಭಾಗವಹಿಸುವ ಸಲುವಾಗಿ, ಅಪಘಾತದಲ್ಲಿ ಆಗುವ ಸಾವಿನ ಕುರಿತ ವಿಷಯದಲ್ಲಿ ಕಾರಿನ ಮೇಲೆ ವಿನ್ಯಾಸ ಮಾಡಿಕೊಡುವಂತೆ ಹೇಳಿದರು. ಯಾವ ರೀತಿ ವಿನ್ಯಾಸ ಮಾಡಿದರೆ ಪರಿಣಾಮ ಬೀರುತ್ತದೆ ಎಂಬುದರ ಕುರಿತಂತೆ ಚರ್ಚಿಸಿ ಕೇವಲ ಮೂರು ಗಂಟೆಗಳಲ್ಲಿ ಅವರ ಟೊಯೋಟಾ ಇನೊವಾ ಕಾರಿಗೆ ಬ್ಲಡ್ ಸ್ಪ್ಲಾಟರ್ ಮಾದರಿಯ ಡಿಸೈನ್ ಮಾಡಿ ಕೊಟ್ಟರು.
ಲಿಮ್ಕಾ ದಾಖಲೆ ಬರೆದ ವಿನ್ಯಾಸ
ಇದು ಹೇಗಿತ್ತೆಂದರೆ ಅಪಘಾತದ ಸಂದರ್ಭದಲ್ಲಿ ಅಪಘಾತಕ್ಕೊಳಗಾದವರ ರಕ್ತ ಕಾರಿನ ಮೇಲ್ಮೈ ಚೆಲ್ಲಿರುವಂತೆ ಗೋಚರಿಸುವ ವಿನ್ಯಾಸವಾಗಿತ್ತು. ಅಷ್ಟೇ ಅಲ್ಲದೆ ಇದು ಅಪಘಾತದ ಅರಿವು ಮೂಡಿಸುವಂತಿತ್ತು. ಕಾರು ಸ್ಪರ್ಧೆಯಲ್ಲಿ ಭಾಗವಹಿಸಿದ ಆ ಗ್ರಾಹಕರಿಗೆ ಪ್ರಥಮ ಸ್ಥಾನ ದೊರೆಯುವುದಲ್ಲದೆ, ವಿನ್ಯಾಸ ಮಾಡಿಕೊಟ್ಟ ಅರುಣ್ ಶೇಖರ್ ಅವರ ವಿನ್ಯಾಸ 2015ರಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೆ ಸೇರಿತ್ತು.