ಮೈಸೂರು, ಮಂಡ್ಯ ರಾಜಕೀಯ ಅಸ್ತಿತ್ವದ ಕ್ಷೇತ್ರಗಳಂತೆ.. ಯಾರಿಗೆ ಗೊತ್ತಾ?
Recommended Video
ಮೈಸೂರು, ಏಪ್ರಿಲ್ 12: ನೆತ್ತಿ ಸುಡುವ ಬಿಸಿಲಿಗಿಂತಲೂ ಲೋಕಸಭಾ ಚುನಾವಣೆಯ ಕಾವು ಇದೀಗ ಹೆಚ್ಚಾಗಿದೆ. ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ತಡೆಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ತಮ್ಮೆಲ್ಲ ಅಸಮಾಧಾನ, ರಾಜಕೀಯ ದ್ವೇಷವನ್ನು ಮರೆತು ಕೈಹಿಡಿದು ಜತೆಯಾಗಿ ಮತಭಿಕ್ಷೆಗೆ ಕೈಯೊಡ್ಡಿ ನಿಂತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಒಂದು ವೇಳೆ ರಾಜ್ಯ ನಾಯಕರು ಅಂದುಕೊಂಡಂತೆ ಕಾಂಗ್ರೆಸ್ನ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರು ಒಂದಾಗಿ ಬಿಟ್ಟಿದ್ದರೆ ಬಹುಶಃ ಬಿಜೆಪಿ ಕರ್ನಾಟಕದಲ್ಲಿ ಖತಂ ಆಗಿಬಿಡುತ್ತಿತ್ತೇನೋ? ಆದರೆ ಅಂತಹದೊಂದು ಬೆಳವಣಿಗೆ ಆಗಲೇ ಇಲ್ಲ.
ಅದು ಒಟ್ಟಾಗಿ ರಾಜ್ಯದಲ್ಲಿ ಆಡಳಿತ ಹಿಡಿದ ದಿನದಿಂದ ಇಲ್ಲಿಯವರೆಗೂ ಸಾಧ್ಯವಾಗದ ಕಾರಣದಿಂದಾಗಿ ಇವತ್ತಿಗೂ ಒಗ್ಗಟ್ಟಾಗಿ ಕ್ಷೇತ್ರಗಳಲ್ಲಿ ಕೆಲಸ ಮಾಡಲಾಗದೆ ಪರದಾಡುತ್ತಿರುವುದು ಕಂಡು ಬರುತ್ತಿದೆ. ಹಾಸನ, ಮಂಡ್ಯ ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳು ಬಹುಮುಖ್ಯ ಕ್ಷೇತ್ರಗಳಾಗಿ ಬಿಂಬಿತವಾಗಿವೆ. ಕಾರಣ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಅವರ ಮೊಮ್ಮಕ್ಕಳು ಈ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಪ್ರತಿಷ್ಠೆಯ ವಿಷಯವಾಗಿರುವುದರಿಂದ ಗೆಲುವು ಸಾಧಿಸಲೇಬೇಕಾಗಿದೆ.
ನಿಖಿಲ್ ಗೆಲುವಿಗಾಗಿ ಮಂಡ್ಯದಲ್ಲಿ ಇಂದು ಗುರು-ಶಿಷ್ಯರ ಜಂಟಿ ಪ್ರಚಾರ
ಈ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಂದುಕೊಂಡಂತೆ ಕಾಂಗ್ರೆಸ್ ಮುಖಂಡರಾಗಲೀ, ಕಾರ್ಯಕರ್ತರಾಗಲೀ ಜೆಡಿಎಸ್ ಗೆ ಬೆಂಬಲ ನೀಡುತ್ತಿಲ್ಲ ಎನ್ನುವುದು ಅಷ್ಟೇ ಸತ್ಯ. ಕುಟುಂಬ ರಾಜಕಾರಣದ ಕಿಚ್ಚು ಹತ್ತಿಸಿ ಈಗಾಗಲೇ ಮತದಾರರಲ್ಲಿ ತೇಲಿ ಬಿಟ್ಟಿರುವ ಬಿಜೆಪಿ ಈ ಕುರಿತಂತೆ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಮುಂದೆ ಓದಿ...
ಸುಮಲತಾ ಪರ ಕಾಂಗ್ರೆಸ್ ಪ್ರಚಾರ
ಸಾಮಾಜಿಕ ಜಾಲತಾಣಗಳು, ಜನರು ಕುಟುಂಬ ರಾಜಕಾರಣದ ವಿರುದ್ಧ ಮಾತನಾಡತೊಡಗಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್ ನಾಯಕ ಎ.ಮಂಜು ಅವರೇ ಬಿಜೆಪಿಗೆ ಸೇರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದರಿಂದಾಗಿ ಬಿಜೆಪಿ ಮತದ ಜೊತೆಗೆ ಒಂದಷ್ಟು ಅತೃಪ್ತ ಕಾಂಗ್ರೆಸ್ಸಿಗರು ಬೆಂಬಲ ನೀಡಬಹುದು ಎಂಬ ಧೈರ್ಯದಲ್ಲಿ ಮಂಜು ಅವರಿದ್ದಾರೆ. ಅತ್ತ ಮಂಡ್ಯದಲ್ಲಿ ಖುದ್ದು ಸಿದ್ದರಾಮಯ್ಯ ಅವರೇ ದೇವೇಗೌಡರೊಂದಿಗೆ ತೆರಳಿ ಪ್ರಚಾರ ನಡೆಸುತ್ತಿದ್ದರೂ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಅದಕ್ಕೆ ಸೊಪ್ಪು ಹಾಕದೆ ಸುಮಲತಾ ಅಂಬರೀಶ್ ಪರ ಕಾಂಗ್ರೆಸ್ ಬಾವುಟ ಹಿಡಿದುಕೊಂಡೇ ಪ್ರಚಾರ ಮಾಡುತ್ತಿದ್ದಾರೆ.
ಸುಮಲತಾಗೆ ಬೆಂಬಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಉಚ್ಛಾಟನೆ
ಬೇರೆ ಕ್ಷೇತ್ರದ ಬಗ್ಗೆಯೂ ಮಾತನಾಡುತ್ತಿಲ್ಲ
ಇದೆಲ್ಲದರ ನಡುವೆ ಮೊಮ್ಮಕ್ಕಳನ್ನು ಗೆಲ್ಲಿಸಲೇ ಬೇಕಾಗಿರುವುದರಿಂದ ದೇವೇಗೌಡರು ತಮ್ಮ ಕ್ಷೇತ್ರ ತುಮಕೂರನ್ನು ಬಿಟ್ಟು ಬಂದು ಪ್ರಚಾರ ನಡೆಸುವಂತಾಗಿದೆ. ರಾಜ್ಯದಲ್ಲಿನ 28 ಲೋಕಸಭಾ ಕ್ಷೇತ್ರಗಳೂ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ಅವರು ಭೇಟಿ ನೀಡಿ ಅಲ್ಲಿನ ಅಭ್ಯರ್ಥಿಗಳ ಪರ ಪ್ರಚಾರ ಮಾಡಬೇಕಾಗಿದೆ. ಆದರೆ ಅದ್ಯಾಕೋ ಗೊತ್ತಿಲ್ಲ ಈ ಇಬ್ಬರು ನಾಯಕರು ಹಳೇ ಮೈಸೂರಿಗಷ್ಟೇ ಸೀಮಿತರಾಗಿ ಪ್ರಚಾರ ನಡೆಸುತ್ತಿದ್ದು, ಅದರಲ್ಲೂ ಮಂಡ್ಯ ಹೊರತುಪಡಿಸಿದಂತೆ ಬೇರೆ ಯಾವ ಕ್ಷೇತ್ರದ ಬಗ್ಗೆಯೂ ಮಾತನಾಡುತ್ತಿಲ್ಲ.
ಸಚಿವ ಸಾ.ರಾ.ಮಹೇಶ್ ಹೇಳಿಕೆ
ಈ ನಡುವೆ ಸಚಿವ ಸಾ.ರಾ.ಮಹೇಶ್ ಅವರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಂಡ್ಯ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಗಳು ರಾಜಕೀಯ ಅಸ್ಥಿತ್ವದ ಪ್ರಶ್ನೆಯಾಗಿವೆ ಎಂದು ಹೇಳಿದ್ದಾರೆ. ಈ ಇಬ್ಬರು ರಾಜ್ಯ ನಾಯಕರಿಗೆ ಗೌರವ ಕೊಡುವ ನಿಟ್ಟಿನಲ್ಲಿ ಕಾರ್ಯಕರ್ತರು ನಡೆದುಕೊಳ್ಳಬೇಕು. ಕಿಡಿಗೇಡಿಗಳು ಮಾಡುವ ಅಪಪ್ರಚಾರಗಳಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಿವಿಗೊಡದೆ ಎರಡು ಪಕ್ಷಗಳ ವರಿಷ್ಠರ ಆದೇಶವನ್ನು ಪಾಲನೆ ಮಾಡಬೇಕು. ಮೈತ್ರಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿರುವುದರಿಂದ ಕಾರ್ಯಕರ್ತರು ಮತ್ತು ಮುಖಂಡರು ಚಿಹ್ನೆಯನ್ನು ಪರಿಗಣಿಸದೆ ಸ್ಪರ್ಧಿಸಿರುವ ಅಭ್ಯರ್ಥಿಯೇ ತಮ್ಮದೇ ಪಕ್ಷದವರು ಎಂದು ಅರ್ಥೈಸಿಕೊಂಡು ಸ್ಥಳೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ದೇಶದ ಹಿತದೃಷ್ಠಿಯಿಂದ ಮತ್ತು ರಾಜ್ಯ ಮಟ್ಟದ ವರಿಷ್ಠರುಗಳ ಆದೇಶಕ್ಕೆ ಮನ್ನಣೆ ನೀಡಿ ಮತದಾನ ಮಾಡಬೇಕು. ನಿಖಿಲ್ ಕುಮಾರಸ್ವಾಮಿ ಸಂಸದರಾದರೆ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಸಾಕಷ್ಟು ಅನುದಾನವನ್ನು ತರಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಪತಿಷ್ಠಾ ಕ್ಷೇತ್ರಗಳಲ್ಲಿ ಪ್ರಚಾರ
ಇತ್ತ ಕೈ ಮತ್ತು ತೆನೆ ನಾಯಕರು ಕೆಲವೇ ಕೆಲವು ಕ್ಷೇತ್ರಗಳನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಅಲ್ಲಿ ಗೆಲುವಿಗಾಗಿ ತಂತ್ರ ನಡೆಸುತ್ತಿದ್ದರೆ, ಬಿಜೆಪಿ ನಾಯಕರು ಮಾತ್ರ ರಾಜ್ಯದಾದ್ಯಂತ ಎಲ್ಲ ಕ್ಷೇತ್ರಗಳಲ್ಲಿ ಓಡಾಡುತ್ತಾ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಪಡೆಯುವ ನಿಟ್ಟಿನಲ್ಲಿ ಆಯಕಟ್ಟಿನ ಕ್ಷೇತ್ರಗಳಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಯಿಸಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿರುವಂತೆ ಕೆಲವು ಪತಿಷ್ಠಾ ಕ್ಷೇತ್ರಗಳು ಏನಿವೆಯೋ ಅಲ್ಲಿ ಹೆಚ್ಚು ಒತ್ತು ನೀಡಿ ಪ್ರಚಾರ ನಡೆಸುತ್ತಿದ್ದಾರೆ. ಅದು ಬಿಟ್ಟು ಅಲ್ಲಿಂದ ಹೊರ ಬಂದು ಇತರೆ ಕ್ಷೇತ್ರಗಳಿಗೂ ಭೇಟಿ ನೀಡಿ ಅಲ್ಲಿನ ಅಭ್ಯರ್ಥಿಗಳ ಪರ ಪ್ರಚಾರ ಮಾಡಬೇಕಾಗಿದೆ. ಅದು ಬಿಟ್ಟು ಕೆಲವೇ ಕ್ಷೇತ್ರಗಳಿಗೆ ಸೀಮಿತವಾಗಿ ಹೋದರೆ ಅದರಿಂದ ಅಡ್ಡಪರಿಣಾಮಗಳೇ ಜಾಸ್ತಿ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.