ಹಿಂದೂ ಸಹೋದರಿಯರಿಗೆ ಮದುವೆ ಮಾಡಿಸಿದ ಮುಸ್ಲಿಂ ವ್ಯಕ್ತಿ: ಮಾನವೀಯ ಕಥೆ
ಅಹಮದ್ ನಗರ, ಆಗಸ್ಟ್ 24: ಈಗ ಎಲ್ಲೆಡೆ ಕೋಮುವಾದ, ಧರ್ಮಗಳ ನಡುವಿನ ಸಂಘರ್ಷಗಳದ್ದೇ ಚರ್ಚೆ, ಸುದ್ದಿ. ಕೋಮು ಸೌಹಾರ್ದತೆ ಎನ್ನುವುದು ನಿಧಾನವಾಗಿ ಸಮಾಜದ ಭಾವನೆಗಳಿಂದ ಕಳೆದುಹೋಗುತ್ತಿದೆ ಎಂಬ ಆತಂಕ ಮತ್ತು ನೋವು ಅನೇಕರನ್ನು ಕಾಡುತ್ತಿದೆ. ಹಿಂದೂ ಮುಸ್ಲಿಂ ಎಂಬ ಭೇದಭಾವಗಳಿಲ್ಲದೆ ಎಲ್ಲರೂ ಒಂದಾಗಿ ಬಾಳುತ್ತಿದ್ದವರು ಒಂದು ಶತ್ರುಗಳಂತೆ ಕಾದಾಡುತ್ತಿದ್ದಾರೆ. ಇದಕ್ಕೆ ರಾಜಕೀಯ ಷಡ್ಯಂತ್ರಗಳೇ ಕಾರಣ. ಜನರ ಮನಸ್ಸಲ್ಲಿ ಕೋಮು ವೈಷಮ್ಯದ ಭಾವಗಳನ್ನು ಬಿತ್ತಲಾಗುತ್ತಿದೆ ಎಂಬ ಆರೋಪವಿದೆ.
ಈ ಜಗಳ, ದ್ವೇಷಗಳ ನಡುವೆ ಆಗಾಗ ಕೋಮು ಸೌಹಾರ್ದ ಸಂಬಂಧದ ಅಪರೂಪದ ಘಟನೆಗಳು ಸುದ್ದಿಯಾಗುತ್ತಿರುತ್ತವೆ. ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಅಂತಹದ್ದೊಂದು ಸ್ಫೂರ್ತಿದಾಯಕ ಘಟನೆ ನಡೆದಿದೆ. ವೈರತ್ವ, ಘರ್ಷಣೆಯ ಸಂಗತಿಗಳನ್ನೇ ಕೇಳಿ ಬೇಸೆತ್ತಿದ್ದವರಿಗೆ ಈ ಘಟನೆ ಭರವಸೆಯ ಕಿರಣದಂತೆ ಕೋಮು ಸಾಮರಸ್ಯದ ಕುರಿತಾದ ಆಶಯಗಳನ್ನು ಚಿಗುರಿಸಿದೆ.
ಕೆಲಸ ಬಿಟ್ಟು, ಮೀನು ಮಾರಿ ತಿಂಗಳಿಗೆ 1 ಲಕ್ಷ ದುಡಿಯುತ್ತಿದ್ದಾನೆ ಈ ಇಂಜಿನಿಯರ್
ಮಹಾರಾಷ್ಟ್ರದ ಅಹಮದ್ ನಗರದ ಮುಸ್ಲಿಂ ವ್ಯಕ್ತಿ ಬಾಬಾಭಾಯಿ ಪಠಾಣ್ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಬಾಬಾಭಾಯಿ ಅವರ ಹೃದಯ ವೈಶಾಲ್ಯವನ್ನು ಜನರು ಕೊಂಡಾಡುತ್ತಿದ್ದಾರೆ. ಮುಂದೆ ಓದಿ.
ಮಾನವೀಯತೆಯ ಸೆಲೆ
ಇಬ್ಬರು ಹಿಂದೂ ಸಹೋದರಿಯರನ್ನು ದತ್ತು ತೆಗೆದುಕೊಂಡಿದ್ದ ಪಠಾಣ್, ಇದುವರೆಗೂ ಅವರ ಜೀವನ ಮತ್ತು ಯೋಗ ಕ್ಷೇಮ ನೋಡಿಕೊಂಡಿದ್ದರು. ಕೊನೆಗೆ ತಮ್ಮದೇ ಖರ್ಚು ವೆಚ್ಚ ಭರಿಸಿ ಉಳಿತಾಯದ ಹಣದಲ್ಲಿ ಆ ಹೆಣ್ಣುಮಕ್ಕಳಿಬ್ಬರ ಮದುವೆ ಮಾಡಿದ್ದಾರೆ. ಈ ಮೂಲಕ ದೇಶದಲ್ಲಿ ಮಾನವೀಯತೆ ಮತ್ತು ಕೋಮು ಸಾಮರಸ್ಯದ ಅಸ್ತಿತ್ವ ಇನ್ನೂ ಇದೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.
ಹಿಂದೂ ಸಂಪ್ರದಾಯದಂತೆ ಮದುವೆ
ಹಿಂದೂ ಧರ್ಮದ ಈ ಹೆಣ್ಣುಮಕ್ಕಳ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸಿರುವ ಪಠಾನ್, ಶಾಸ್ತ್ರಗಳಿಗೆ ಅನುಗುಣವಾಗಿ ಕನ್ಯಾದಾನ ಮಾಡಿದ್ದಾರೆ. ಈ ಘಟನೆ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಪಠಾಣ್ ಅವರ ಮಾನವೀಯ ಮುಖ ಮತ್ತು ಇನ್ನೊಂದು ಧರ್ಮದೆಡೆಗಿನ ಗೌರವ ಹಾಗೂ ನಂಬಿಕೆಗಳನ್ನು ಜನರು ಶ್ಲಾಘಿಸುತ್ತಿದ್ದಾರೆ.
ಪಂಚೆಯುಟ್ಟು ಬರಿಗಾಲಲ್ಲಿ ಕಾಲೇಜಿಗೆ ಹೋದವರು ಈಗ ಇಸ್ರೋ ಅಧ್ಯಕ್ಷ: ಶಿವನ್ ಯಶೋಗಾಥೆ
ತಮ್ಮದೇ ಖರ್ಚಿನಲ್ಲಿ ಮದುವೆ
ಇಬ್ಬರು ಅನಾಥ ಸಹೋದರಿಯರನ್ನು ದತ್ತು ತೆಗೆದುಕೊಂಡಿದ್ದ ಬಾಬಾಭಾಯಿ ಪಠಾಣ್, ಅವರನ್ನು ಇಷ್ಟು ಸಮಯ ಸಾಕಿದ್ದಲ್ಲದೆ, ಈಗ ಹಿಂದೂ ಸಂಪ್ರದಾಯದ ಆಚರಣೆಗಳಿಗೆ ತಕ್ಕಂತೆ ಅವರಿಬ್ಬರಿಗೂ ತಮ್ಮದೇ ಖರ್ಚಿನಲ್ಲಿ ಮದುವೆ ಮಾಡಿಸಿದ್ದಾರೆ ಎಂದು ಹೇಳಲಾಗಿದೆ. ನವವಿವಾಹಿತ ಹೆಣ್ಣುಮಕ್ಕಳಿಬ್ಬರೂ ಪಠಾಣ್ ಅವರನ್ನು ಪ್ರೀತಿಯಿಂದ ಅಪ್ಪಿಕೊಂಡು ಕಣ್ಣೀರಿನೊಂದಿಗೆ ವಿವಾದ ಹೇಳುತ್ತಿರುವ ಚಿತ್ರಗಳು ಮನಕಲಕುವಂತಿದೆ.
ರಾಖಿ ಸಹೋದರ ಪಠಾಣ್
ಆದರೆ ಕೆಲವು ಮಾಧ್ಯಮ ವರದಿಗಳ ಪ್ರಕಾರ ಈ ಇಬ್ಬರೂ ಹೆಣ್ಣುಮಕ್ಕಳು ಅನಾಥರಲ್ಲ. ಅವರಿಗೆ ಅಹಮದ್ ನಗರದ ನಿವಾಸಿಯಾಗಿರುವ ತಾಯಿ ಭುಸಾರೆ ಇದ್ದಾರೆ. ತಮಗೆ ಸಹೋದರರಿಲ್ಲದ ಕಾರಣ ಅವರು ಪಠಾಣ್ ಅವರಿಗೆ ಪ್ರತಿ ವರ್ಷ ರಾಖಿ ಕಟ್ಟುತ್ತಾರೆ. ಭುಸಾರೆ ಪತಿಯನ್ನು ಕಳೆದುಕೊಂಡಿದ್ದರು. ಹೀಗಾಗಿ ಸಹೋದರಿಯ ಹೆಣ್ಣುಮಕ್ಕಳ ಜೀವನಕ್ಕೆ ಪಠಾಣ್ ಆಧಾರವಾಗಿದ್ದರು. ಅವರ ಮದುವೆಯನ್ನೂ ಅವರೇ ಸ್ವಂತ ಸೋದರಮಾವನಂತೆ ಮುಂದೆ ನಿಂತು ಮಾಡಿಸಿದ್ದಾರೆ.