ಮುಂಬೈ ಪೊಲೀಸರ ಬೇಹುಗಾರಿಕೆ ಆರೋಪ: ಸಮೀರ್ ವಾಂಖೆಡೆಗೆ ಹೊಸ ಭದ್ರತಾ ವ್ಯವಸ್ಥೆ
ಮುಂಬೈ ಅಕ್ಟೋಬರ್ 14: ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮುಂಬೈ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ ಬೆನ್ನಲ್ಲೆ ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಸ್ತುತ ಸಮೀರ್ ವಾಂಖೆಡೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರನ ಡ್ರಗ್ಸ್ ಕೇಸ್, ಸುಶಾಂತ್ ಸಿಂಗ್ ರಜಪೂತ್ ಗೆ ಸಂಬಂಧಿಸಿದ ಡ್ರಗ್ಸ್ ಕೇಸ್ ತನಿಖೆ ನಡೆಸುತ್ತಿದ್ದು, 9 ತಿಂಗಳ ಹಿಂದೆ ಮಹಾರಾಷ್ಟ್ರ ಸಚಿವ ನವಾಬ್ ಮಲ್ಲಿಕ್ ಸಂಬಂಧಿ ಸಮೀರ್ ಖಾನ್ ಭಾಗಿಯಾದ ಆರೋಪದ ವಿರುದ್ಧ ಡ್ರಗ್ಸ್ ಕೇಸ್ ಅನ್ನೂ ವಿಚಾರಣೆ ನಡೆಸುತ್ತಿದ್ದಾರೆ.
ಸಮೀರ್ ವಾಂಖೆಡೆಗೆ ಹೊಸ ಭದ್ರತಾ ವ್ಯವಸ್ಥೆ: ಸಮೀರ್ ವಾಂಖೆಡೆ ಮೊನ್ನೆಯಷ್ಟೇ ಇಬ್ಬರು ಪೊಲೀಸರು ತಮ್ಮ ಚಲನವಲನವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆಂದು ಆರೋಪಿಸಿದ್ದರು. ಇದರ ಬೆನ್ನಲ್ಲೆ ಮುಂಬೈ ಪೊಲೀಸ್ ಮತ್ತು ಎನ್ಸಿಬಿಯಿಂದ ಹಲವಾರು ಶಸ್ತ್ರಸಜ್ಜಿತ ಅಂಗರಕ್ಷಕರನ್ನು ಅವರ ಭದ್ರತಾ ಪಡೆಗೆ ಸೇರಿಸಲಾಗಿದೆ. ಭದ್ರತಾ ಕಾರಣಗಳಿಂದಾಗಿ ಅವರ ಅಧಿಕೃತ ವಾಹನವನ್ನೂ ಬದಲಿಸಲಾಗಿದೆ.
ಸಮೀರ್ ವಾಂಖೆಡೆ ಹೆಸರು ಕೇಳಿದ್ರೆ ಬಾಲಿವುಡ್ ಬ್ಯಾಡ್ ಬಾಯ್ಸ್ ಬೆಚ್ಚುವುದೇಕೆ?
ಮೂಲಗಳ ಪ್ರಕಾರ, ಸಮೀರ್ ವಾಂಖೆಡೆ ತನ್ನ ತಾಯಿಯನ್ನು ಸಮಾಧಿ ಮಾಡಿದ ಸ್ಮಶಾನಕ್ಕೆ ಭೇಟಿ ನೀಡಿದಾಗ ಇಬ್ಬರು ಮುಂಬೈ ಪೊಲೀಸರು ಆತನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಸೋಮವಾರ ದೂರು ದಾಖಲಿಸಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳು ಓಶಿವಾರ ಪೊಲೀಸ್ ಠಾಣೆಯವರು ಎಂದು ಗುರುತಿಸಲಾಗಿದೆ. ಅವರು ಸಮೀರ್ ವಾಂಖೆಡೆ ಅವರ ಚಲನವಲನವನ್ನು ಮೇಲ್ವಿಚಾರಣೆ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ.
ಇಬ್ಬರು ಪೊಲೀಸರ ಮೇಲೆ ಬೇಹುಗಾರಿಕೆ ಆರೋಪ
ಸಮೀರ್ ವಾಂಖೆಡೆ ಸುಮಾರು ಆರು ವರ್ಷಗಳಿಂದ ಆಗಾಗ ತನ್ನ ತಾಯಿಯ ಸಮಾಧಿಯ ಬಳಿ ತೆರಳುತ್ತಾರೆ. ಇತ್ತೀಚೆಗೆ ಓಶಿವಾರ ಪೊಲೀಸ್ ಠಾಣೆಯ ಇಬ್ಬರು ಅಧಿಕಾರಿಗಳು ಸ್ಮಶಾನಕ್ಕೆ ತೆರಳಿ ಅಲ್ಲಿ ತನ್ನ ಚಲನವಲನದ ಮೇಲೆ ಕಣ್ಣಿಟ್ಟಿರುವುದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಪ್ರತಿಕ್ರಿಯೆ ನೀಡಲು ಸಮೀರ್ ವಾಂಖೆಡೆ ನಿರಾಕರಿಸಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಈ ವಿಚಾರವಾಗಿ ಚರ್ಚಿಸಿದ್ದಾರೆ. ಮೂಲಗಳ ಪ್ರಕಾರ, ಸಮೀರ್ ವಾಂಖೆಡೆ ತಾವು ಅಧಿಕಾರ ಸ್ವೀಕರಿಸಿದಾಗಿನಿಂದ ಹಲವಾರು ದೊಡ್ಡ ಮಟ್ಟದ ಪ್ರಕರಣಗಳನ್ನು ತನಿಖೆ ಮಾಡಿದ್ದು, ಈ ರೀತಿಯ ಬೇಹುಗಾರಿಕೆಯನ್ನು ಈ ಮೊದಲು ಎದುರಿಸಿರಲಿಲ್ಲ.
ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು
2015ರಲ್ಲಿ ತಮ್ಮ ತಾಯಿಯ ನಿಧನ ನಂತರ ದಹನ ಮಾಡಿದ್ದ ಮುಂಬೈಯ ಉಪ ನಗರದ ಒಶಿವಾರ ಸ್ಮಸಾನಕ್ಕೆ ನಿಯಮಿತವಾಗಿ ವಾಂಖೆಡೆ ಬಂದು ಹೋಗುತ್ತಿರುತ್ತಾರೆ. ಒಶಿವಾರ ಪೊಲೀಸ್ ಠಾಣೆಯ ಇಬ್ಬರು ಅಧಿಕಾರಿಗಳು ಸ್ಮಶಾನ ಬಳಿ ಹೋಗಿ ವಾಂಖೆಡೆಯವರ ಚಲನವಲನಗಳನ್ನು ತಿಳಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎನ್ಸಿಬಿ ಅಧಿಕಾರಿ ವಿರುದ್ಧವೇ ಮುಂಬೈ ಪೊಲೀಸರ ಬೇಹುಗಾರಿಕೆ?
ತಮ್ಮ ಮೇಲೆ ಅಕ್ರಮವಾಗಿ ಪೊಲೀಸರು ಕಣ್ಗಾವಲು ಇರಿಸಿದ್ದಾರೆ ಎಂದು ಸಮೀರ್ ವಾಂಖೆಡೆಯವರು ಮಹಾರಾಷ್ಟ್ರದ ಉನ್ನತ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ತಮ್ಮ ಚಲನವಲನಗಳ ಮೇಲೆ
ನಿಗಾ ಇರಿಸಲಾಗಿದೆ ಎಂದು ದೂರು ನೀಡಿರುವ ಸಮೀರ್ ವಾಂಖೆಡೆಯವರು ತಮ್ಮ ದೂರಿಗೆ ಪೂರಕವಾಗಿ ಪುಷ್ಠೀಕರಿಸಲು ಒಶಿವಾರ ಸ್ಮಶಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಸಲ್ಲಿಸಿದ್ದಾರೆ.
ಮುಂಬೈ ಕ್ರೂಸ್ ಡ್ರಗ್ ಪಾರ್ಟಿ ಮೇಲೆ ದಾಳಿ
ಅಕ್ಟೋಬರ್ 2ರಂದು ತಡರಾತ್ರಿ ಮುಂಬೈಯ ಕ್ರೂಸ್ ಹಡಗಿನ ಮೇಲೆ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಮಂದಿಯನ್ನು ಬಂಧಿಸಿದ್ದು ಮಾತ್ರವಲ್ಲದೆ ಕಳೆದ ವರ್ಷ ಜೂನ್ ನಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಕೇಳಿಬಂದ ಬಾಲಿವುಡ್ ಡ್ರಗ್ ಕೇಸು ಹಾಗೂ ಇತರೆ ಹೈಪ್ರೊಫೈಲ್ ಡ್ರಗ್ ಕೇಸುಗಳ ವಿಚಾರಣೆಗಳನ್ನು ಸಹ ನಡೆಸಿದ್ದರು. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರ (ಅಕ್ಟೋಬರ್ 13) ದಂದು ನಡೆಸುವುದಾಗಿ ಎನ್ಡಿಪಿಎಸ್ ವಿಶೇಷ ನ್ಯಾಯಾಲಯ ಹೇಳಿದೆ.
ಜಾಮೀನು ನಿರೀಕ್ಷಿಯಲ್ಲಿ ಆರ್ಯನ್
ವಿ.ವಿ. ಪಾಟೀಲ್, ಎನ್ ಡಿ ಪಿ ಎಸ್ ಕಾಯ್ದೆಗೆ ಸಂಬಂಧಿಸಿದ ಅರ್ಜಿಗೆ ಅಕ್ಟೋಬರ್ 13 ರಂದು ಉತ್ತರ ನೀಡುವಂತೆ ಎನ್ ಸಿಬಿ ವಿಶೇಷ ನ್ಯಾಯಾಲಯ ಸೂಚನೆ ನೀಡಿದೆ. ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇತ ಮಾದಕ ವಸ್ತು ಸೇವನೆ ಆರೋಪದಡಿ ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 3 ರಂದು ಬಂಸಲಾಯಿತು. ಆರ್ಯನ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ಮುಂಬೈ ಜೈಲಿನಲ್ಲಿ ಇದ್ದಾರೆ. ಕಳೆದ ವಾರ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತನ್ನ ಮನವಿ ಯನ್ನು ತಿರಸ್ಕರಿಸಿದ ನಂತರ ಜಾಮೀನಿಗಾಗಿ ಆರ್ಯನ್ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು.