ಸಮೀರ್ ವಾಂಖೆಡೆ ಹೆಸರು ಕೇಳಿದ್ರೆ ಬಾಲಿವುಡ್ ಬ್ಯಾಡ್ ಬಾಯ್ಸ್ ಬೆಚ್ಚುವುದೇಕೆ?
ಮುಂಬೈ, ಅಕ್ಟೋಬರ್ 04: ಡ್ರಗ್ಸ್, ಅಕ್ರಮ ಹಣ ದಂಧೆಯಲ್ಲಿ ತೊಡಗಿರುವ ಹಿಂದಿ ಚಿತ್ರರಂಗದ ಸೆಲೆಬ್ರಿಟಿಗಳ ಪಾಲಿಗೆ ಭಾರತೀಯ ಕಂದಾಯ ಸೇವೆ(IRS) ಅಧಿಕಾರಿ ಸಮೀರ್ ವಾಂಖೆಡೆ ಸಿಂಹಸ್ವಪ್ನವಾಗಿದ್ದಾರೆ. ಮುಂಬೈನಿಂದ ಗೋವಾದೆಡೆಗೆ ತೆರಳುತ್ತಿದ್ದ ಕ್ರೂಸ್ ಶಿಪ್ Cordelia Cruises' Empressನ ಡ್ರಗ್ಸ್ ಪಾರ್ಟಿ ಮೋಜು ಮಸ್ತಿಗೆ ಬ್ರೇಕ್ ಹಾಕಿ ಶಾರುಖ್ ಖಾನ್ ಪುತ್ರ ಆರ್ಯನ್ ಸೇರಿದಂತೆ ಉದ್ಯಮಿಗಳ ಪುತ್ರರ ಹೆಡೆಮುರಿ ಕಟ್ಟಿದ್ದು ಸಮೀರ್ ಹಾಗೂ ಎನ್ ಸಿ ಬಿ ತಂಡ.
ಕ್ರೂಸ್ ಶಿಪ್ನಲ್ಲಿ ಬಾಲಿವುಡ್, ಫ್ಯಾಷನ್, ಉದ್ಯಮಿ ಮಂದಿಯನ್ನು ಒಳಗೊಂಡ ಈ ಪಾರ್ಟಿಯಲ್ಲಿ ನಿಷೇಧಿತ ಡ್ರಗ್ಸ್ ಸೇವನೆ, ಬಳಕೆಯಾಗುತ್ತಿದೆ ಎಂಬುದರ ಬಗ್ಗೆ ಎನ್ ಸಿ ಬಿ ಅಧಿಕಾರಿಗಳಿಗೆ ಮುಂಚಿತವಾಗಿ ಸುಳಿವು ಸಿಗುತ್ತದೆ. ನಂತರ ಸಮೀರ್ ಹಾಗೂ ತಂಡದವರು ಪ್ರಯಾಣಿಕರ ಸೋಗಿನಲ್ಲಿ ಹಡಗಿನೊಳಗೆ ಪ್ರವೇಶ ಪಡೆಯುತ್ತಾರೆ. ನಂತರ ನಶೆಯಲ್ಲಿದ್ದ ಸೆಲೆಬ್ರಿಟಿಗಳ ಮಕ್ಕಳನ್ನು ರೌಂಡಪ್ ಮಾಡಿ ತೇಲುವ ಹಡಗಿನಿಂದ ಮುಂಬೈಗೆ ಕರೆ ತರುತ್ತಾರೆ.
ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅಲ್ಲದೆ ಆತನ ಗೆಳೆಯರಾದ ಅರ್ಬಾಜ್ ಮರ್ಚಂಟ್(29), ಮುನ್ಮುನ್ ಧಮೇಚಾ(39), ನೂಪೂರ್ ಸಾರಿಕಾ, ಇಸ್ಮಿತ್ ಸಿಂಗ್, ಮೋಹಕ್ ಜಸ್ವಾಲ್, ವಿಕ್ರಾಂತ್ ಛೊಕರ್ ಹಾಗೂ ಗೋಮಿತ್ ಛೋಪ್ರಾ ರನ್ನು ವಿಚಾರಣೆಗೊಳಪಡಿಸಲಾಗಿದೆ.
ಹೈ ಪ್ರೊಫೈಲ್ ಕೇಸ್
ಆತ್ಮಹತ್ಯೆ ಮಾಡಿಕೊಂಡ ಜನಪ್ರಿಯ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣಕ್ಕೂ ಬಾಲಿವುಡ್ ಡ್ರಗ್ಸ್ ದಂಧೆಗೂ ಸಂಬಂಧ ಇದೆ ಎಂಬುದನ್ನು ಪತ್ತೆ ಹಚ್ಚಿದ ಸಮೀರ್ ಅವರು ನಟ ರಿಯಾ ಚಕ್ರವರ್ತಿರನ್ನು ವಿಚಾರಣೆಗೊಳಪಡಿಸಿದ್ದರು. ಅರ್ಧದಷ್ಟು ಬಾಲಿವುಡ್ ಮಂದಿ ಎನ್ ಸಿ ಬಿ ಕಚೇರಿ ಹಾದಿ ತುಳಿಯುವಂತೆ ಮಾಡಿದರು. ದೀಪಿಕಾ ಪಡುಕೋಣೆ, ಭಾರ್ತಿ ಸಿಂಗ್ ಮುಂತಾದವರು ವಿಚಾರಣೆ ಎದುರಿಸಿದರು. ಹಲವು ಹಳೆ ಕೇಸ್ಗಳು ಹೊರ ಬಂದವು. ಸ್ಟಾರ್ ನಟ, ನಟಿಯರು ಅವರ ಮಕ್ಕಳ ಡ್ರಗ್ಸ್ ಜಾಲ ಬಹಿರಂಗವಾಯಿತು.
ಬಾಲಿವುಡ್ ನಂಟು
ಬಾಲಿವುಡ್ ಬ್ಯಾಡ್ ಬಾಯ್ಸ್ ಪಾಲಿಗೆ ದುಃಸ್ವಪ್ನವಾದರೂ ಸಮೀರ್ ವಾಂಖೆಡೆ ಅವರು ಮದುವೆಯಾಗಿರುವುದು ಒಬ್ಬ ನಟಿಯನ್ನು ಎಂಬುದು ವಿಶೇಷ. 2017ರಲ್ಲಿ ಮರಾಠಿ ನಟಿ ಕ್ರಾಂತಿ ರೇಡ್ಕರ್ ಅವರನ್ನು ಸರಳವಾಗಿ ಮದುವೆಯಾದರು. ಕ್ರಾಂತಿ ಅವರು ಮರಾಠಿ ಸಿನಿಮಾವಲ್ಲದೆ 2003ರಲ್ಲಿ ತೆರೆ ಕಂಡ ಅಜಯ್ ದೇವಗನ್ ಅವರ ಗಂಗಾಜಲ್ ಚಿತ್ರದಲ್ಲಿ ನಟಿಸಿದ್ದಾರೆ.
IRS ಅಧಿಕಾರಿ
2008ರ ಬ್ಯಾಚಿನ ಐಆರ್ ಎಸ್ ಅಧಿಕಾರಿ ಸಮೀರ್ ಅವರು ಮೊದಲಿಗ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಯಾಗಿದ್ದರು. ಸಮೀರ್ ಹಾಗೂ ಅವರ ತಂಡ ಎರಡು ವರ್ಷಗಳಲ್ಲಿ ಸುಮಾರು 17,000 ಕೋಟಿ ರು ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡು ದಾಖಲೆ ಬರೆದಿದೆ.
ಏರ್ ಇಂಟಲಿಜೆನ್ಸ್ ಯೂನಿಟ್ (ಎಐಯು) ಡೆಪ್ಯುಟಿ ಕಮಿಷನರ್, ರಾಷ್ಟ್ರೀಯ ತನಿಖಾ ದಳ(ಎನ್ಐಎ) ಎಸ್ ಪಿ, ಕಂದಾಯ ಇಲಾಖೆ ಗುಪ್ತಚರ ವಿಭಾಗದ ಜಂಟಿ ಆಯುಕ್ತ ಹಾಗೂ ಎನ್ ಸಿ ಬಿ ಪ್ರಾದೇಶಿಕ ನಿರ್ದೇಶಕ ಹುದ್ದೆಯನ್ನು ಸಮೀರ್ ನಿಭಾಯಿಸಿದ್ದಾರೆ.
ಕಸ್ಟಮ್ ವಿಭಾಗದಲ್ಲಿ ಭರ್ಜರಿ ಬೇಟೆ
ಅಕ್ರಮವಾಗಿ ವಿದೇಶಿ ಕರೆನ್ಸಿ ಹೊಂದಿದ್ದ ಗಾಯಕ ಮಿಕಾ ಸಿಂಗ್ ರನ್ನು ವಿಮಾನ ನಿಲ್ದಾಣದ ಬಳಿ ವಶಕ್ಕೆ ಪಡೆದುಕೊಂಡಿದ್ದರು. ಅನುರಾಗ್ ಕಶ್ಯಪ್, ವಿವೇಕ್ ಒಬೆರಾಯ್, ರಾಮ್ ಗೋಪಾಲ್ ವರ್ಮಾ ಕೂಡಾ ಸಮೀರ್ ವಿಚಾರಣೆ ಎದುರಿಸಿದ್ದಾರೆ. 2011ರಲ್ಲಿ ವಿಶ್ವಕಪ್ ಹೊತ್ತು ತಂದ ಕ್ರಿಕೆಟ್ ತಂಡವನ್ನು ನಿಲ್ಲಿಸಿ, ನಿಗದಿತ ಪ್ರಮಾಣಕ್ಕಿಂತ ಅಧಿಕ ಚಿನ್ನ ವನ್ನು ಟ್ರೋಫಿ ಹೊಂದಿದೆ, ಎಂದು ಹೇಳಿ ಅಬಕಾರಿ ಶುಲ್ಕ ಪಾವತಿಸುವಂತೆ ಮಾಡಿದ್ದರು. ಸರಿ ಸುಮಾರು 2000ಕ್ಕೂ ಅಧಿಕ ಸೆಲೆಬ್ರಿಟಿಗಳನ್ನು ವಿವಿಧ ಹಂತದಲ್ಲಿ ಪ್ರಶ್ನಿಸಿರುವ ಸಮೀರ್ ಹಾಗೂ ತಂಡದ ಮೇಲೆ ಕಳೆದ ವರ್ಷ ಗೊರೆಂಗಾವ್ ಸಮೀಪದಲ್ಲಿ ದಾಳಿ ಮಾಡಲಾಗಿತ್ತು. ಸಮೀರ್ ಹಾಗೂ ತಂಡದ ಕಾರುಗಳನ್ನು ಜಖಂಗೊಳಿಸಲಾಗಿತ್ತು. ಏಜೆನ್ಸಿಗಳ ಮೇಲೆ ದಾಳಿ ಮಾಡಲು ಎಷ್ಟು ಧೈರ್ಯ? ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸಮೀರ್ ಗುಟುರು ಹಾಕಿದ್ದರು. ಡ್ರಗ್ಸ್ ದಂಧೆಕೋರರ ವಿರುದ್ಧ ತಮ್ಮ ಸಮರ ಮುಂದುವರೆಸಿದರು.