ಮೊಹರಂ ಆಚರಣೆ ಏಕೆ? ಏನಿದು ಕರ್ಬಲಾದ ಯುದ್ಧ, ಹುಸೇನರ ಬಲಿದಾನ
ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಮೊದಲ ತಿಂಗಳಾದ ಮೊಹರಂನ 10ನೇ ದಿನದಂದು ಹುಸೇನರ ತ್ಯಾಗ, ಬಲಿದಾನವನ್ನು ಸ್ಮರಿಸುವ ದಿನವಾಗಿದೆ. ಇಸ್ಲಾಂ ಧರ್ಮ ಸ್ಥಾಪಕ ಪ್ರವಾದಿ ಮೊಹಮ್ಮದ ಮೊಮ್ಮಗ ಇಮಾಮ್ ಹುಸೇನ್ ಹಾಗೂ 72 ಹಿಂಬಾಲಕರು ಧರ್ಮದ ಉಳಿವಿಗಾಗಿ ಯುದ್ಧ ಮಾಡಿ ಹುತಾತ್ಮರಾದ ದಿನವಾಗಿದೆ. ಕುರಾನ್ ನಲ್ಲಿ ಹೇಳಲಾಗಿರುವ ನಾಲ್ಕು ಪವಿತ್ರ ಮಾಸಗಳಲ್ಲಿ ಮೊಹರಂ ಕೂಡಾ ಒಂದಾಗಿದ್ದು, ತಿಂಗಳ ಕೊನೆದಿನವನ್ನು ಪವಿತ್ರ ದಿನವಾಗಿ ಆಚರಿಸಲಾಗುತ್ತದೆ.
Recommended Video
ಕ್ರಿ. ಶ 680ರಲ್ಲಿ ಇರಾಕಿನ ಕರ್ಬಲಾ ಮರುಭೂಮಿಯಲ್ಲಿ ಅರಬ್ ದೊರೆ ಯಜೀದ್ ವಿರುದ್ಧ ನಡುವೆ 10 ದಿನಗಳ ಕಾಲ ನಡೆದ ಯುದ್ಧದಲ್ಲಿ ಹುಸೇನರು ಹುತಾತ್ಮರಾಗುತ್ತಾರೆ. ಮೊಹರಂ ಮಾಸದಲ್ಲಿ ಯಾವುದೇ ಪ್ರಮುಖ ಸಂಭ್ರಮಾಚರಣೆ ಕೈಗೊಳ್ಳುವುದಿಲ್ಲ. ಕರ್ಬಲಾದ ಯುದ್ಧ ನಾಟಕ ರೂಪದಲ್ಲಿ ಹಲವೆಡೆ ಪ್ರದರ್ಶನವಾಗುತ್ತದೆ. ಯುದ್ಧ ಸಲಕರಣೆ ಹಿಡಿದುಕೊಂಡು ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳುತ್ತಾರೆ. ಈ ರೀತಿ ರಕ್ತ ಬರುವಂತೆ ಸ್ವಯಂಶಿಕ್ಷೆ ಬಗ್ಗೆ ಇಸ್ಲಾಂ ಧರ್ಮದಲ್ಲಿ ಯಾವುದೇ ಸ್ಪಷ್ಟ ಉಲ್ಲೇಖವಿಲ್ಲ.
ಮುಸಲ್ಮಾನರಿಲ್ಲದ ಊರಲ್ಲಿ ಮೊಹರಂ ಆಚರಣೆ
ಮೊಹರಂ ಆಚರಣೆ ಸಂದರ್ಭದಲ್ಲಿ ಮುಸ್ಲಿಮರು ಉರೂರುಗಳಲ್ಲಿ ಮೆರವಣಿಗೆ ನಡೆಸಿ ಇಮಾಮ್ ಅವರು ತೋರಿಸಿದ ಮಾನವೀಯತೆ ಸಂದೇಶ ಸಾರುತ್ತಾರೆ. ಕೆಲವರು ಈ ತಿಂಗಳ 9, 10 ಹಾಗೂ 11ನೇ ದಿನಗಳಲ್ಲಿ ರೋಜ್ ಎ ಆಷುರಾ(10ನೇ ದಿನ) ಹೆಸರಿನಲ್ಲಿ ಉಪವಾಸ ಕೈಗೊಳ್ಳುತ್ತಾರೆ. ಎಲ್ಲೆಡೆ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗುತ್ತದೆ. ಕರ್ಬಲಾದ ಕದನದ ನೆನಪು ಮಾಡಿಕೊಳ್ಳಲಾಗುತ್ತದೆ.
ಆಚರಣೆ ಹೇಗೆ?
ಶಿಯಾ ಪಂಗಡಕ್ಕೆ ಸೇರಿದ ಮುಸ್ಲಿಮರು ಕಜಿಯಾಸ್ ಎಂಬ ಕಾಗದಗಳನ್ನು ಮತ್ತು ಇತರ ಕೆಲ ವಸ್ತುಗಳಿಂದ ತಯಾರಿಸಿದ ಹಲವು ರೀತಿಯ ಹಲಗೆಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಸಣ್ಣ ಪ್ರಮಾಣದ ಕತ್ತಿಯಂಥ ಆಯುಧಗಳನ್ನು ಮೆರವಣಿಗೆಯಲ್ಲಿ ಕೈಯಲ್ಲಿ ಹಿಡಿದಿರುತ್ತಾರೆ. ಆಲಾಯಿ ಕುಣಿತ, ಹುಸೇನರ ತ್ಯಾಗ ಸಂಕೇತವಾಗಿ ಹಸ್ತ ಸಂಕೇತ ಬಳಕೆ, ಮೊಹರಂ ಹಾಡುಗಾರಿಕೆ, ಬೆಂಕಿ ಕುಂಡದಲ್ಲಿ ನಡಿಗೆ, ಹೀಗೆ ಹಿಂದೂ-ಮುಸ್ಲಿಂ ಸೇರಿ ನಡೆಸುವ ಆಚರಣೆ ವಿವಿಧೆಡೆ ಕಾಣಬಹುದು. ಈ ವೇಳೆ ದೇವರನ್ನು ಹೊತ್ತು ತಿರುಗುವವರು ನಾಡಿಗೆ ಒಳ್ಳೆಯದಾಗಲಿ ಎಂದು ಹಿತನುಡಿಗಳನ್ನು ಹೇಳುತ್ತಾರೆ. ಕೆಲವೆಡೆ ಭಕ್ತರ ಕೋರಿಕೆಯನ್ನು ಆಲಿಸುತ್ತಾರೆ. ಕರ್ಬಲಾದಲ್ಲಿ ಹುಸೇನರ ಪರಿವಾರಕ್ಕೆ ಯಜೀದಿಗಳು ನೀರು ಸಿಗದಂತೆ ಮಾಡಿದ್ದರ ಸ್ಮರಿಸಿ ಅವರ ಸ್ಮರಣೆಯೊಂದಿಗೆ ಜನರಿಗೆ ಪಾನಕ ಹಂಚುವ ಪರಿಪಾಠವೂ ಹಲವೆಡೆ ಇದೆ.
ಇಮಾಮ್ ಹುಸೇನ್
ಪ್ರವಾಸಿ ಮೊಹಮ್ಮದರ ಮಗಳು ಬೀಬಿ ಫಾತಿಮಾರ ಪತಿ ಹಜರತ್ ಅಲಿ(ನಾಲ್ಕನೇ ಖಲೀಫ) ಅವರ ಪುತ್ರ ಇಮಾನ್ ಹುಸೇನ್ ಇಬ್ನ್ ಅಲಿ. ಕ್ರಿ.ಶ 620ರಲ್ಲಿ ಜನಿಸಿದರು. ಪ್ರವಾದಿ ಮೊಹಮ್ಮದರು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ಹುಸೇನ್ ಸಾಗುತ್ತಾರೆ. ಹಜರತ್ ಅಲಿ ನಂತರ ಖಲೀಫರಾಗುವ ಎಲ್ಲಾ ಅರ್ಹತೆ ಹಾಗೂ ಅಧಿಕಾರ ಇರುತ್ತದೆ. ಆದರೆ, ಪ್ರವಾದಿ ಕಾಲವಾದ ನಂತರ ಹಿಂಸಾಚಾರ, ದೌರ್ಜನ್ಯದಿಂದ ಇಸ್ಲಾಂ ರಾಜ್ಯದಲ್ಲಿ ಭೀತಿ ಹುಟ್ಟಿಸುತ್ತಿದ್ದ ಯಜೀದಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಇಸ್ಲಾಂ ಧರ್ಮ ಗ್ರಂಥಗಳನ್ನೇ ಬದಲಾಯಿಸಲು ಯತ್ನಿಸುತ್ತಾರೆ. ಖಲೀಫ ಪಟ್ಟಕ್ಕೂ ಆಸೆಪಟ್ಟು ಹುಸೇನ್ ಹತ್ಯೆಗೆ ಯತ್ನಿಸುತ್ತಾರೆ.
ಕರ್ಬಲಾದ ಯುದ್ಧ
ಪ್ರವಾದಿ ಮೊಹಮ್ಮದರಂತೆ ಮೆಕ್ಕಾದಿಂದ ಮದೀನಾಕ್ಕೆ ಯಾತ್ರೆ ಕೈಗೊಳ್ಳುವಂತೆ ಹುಸೇನರು ಕರ್ಬಲಾದ ದಾರಿ ಹಿಡಿಯುತ್ತಾರೆ. ಹುಸೇನರ ಜೊತೆಗೆ 72 ಮಂದಿ ಇಸ್ಲಾಂ ಧರ್ಮನಿಷ್ಠರಿರುತ್ತಾರೆ. ಹುಸೇನರ ಸೋದರ ಹಸನ್ ರನ್ನು ವಿಷಾಹಾರ ಮೂಲಕ ಕೊಲ್ಲಲಾಗುತ್ತದೆ. ಕರ್ಬಲಾ ಮರುಭೂಮಿಯಲ್ಲಿ ಯಜೀದ್ ಗಳು ಹುಸೇನ್ ಹಾಗೂ ಪರಿವಾರವನ್ನು ಅಡ್ಡಗಟ್ಟಿ ನೀರು, ಆಹಾರ ಕೊಡದಂತೆ ಹಿಂಸಿಸುತ್ತಾರೆ. ಕೊನೆಗೆ 10 ದಿನದಂದು ನಮಾಜ್ ಮಾಡುವಾಗ ಹುಸೇನರನ್ನು ಮೋಸದಿಂದ ಕೊಲ್ಲಲಾಗುತ್ತದೆ.
ಬಲಿದಾನ ದಿನವಾಗಿ ಆಚರಿಸುತ್ತಾರೆ
ಮೊಹರಂನ್ನು ಶಿಯಾಗಳು ಹುತಾತ್ಮರಾದ ಹಜರತ ಅಲಿ ಹುಸೇನರ ಬಲಿದಾನ ದಿನವಾಗಿ ಆಚರಿಸುತ್ತಾರೆ, ಇದನ್ನು ಸುನ್ನೀಗಳು ಪ್ರಬಲವಾಗಿ ವಿರೋಧಿಸುತ್ತಾರೆ. ಸುನ್ನಿ ಮತ್ತು ಶಿಯಾ ಪಂಗಡಗಳ ನಡುವೆ ಇಂದಿಗೂ ಯುದ್ಧ ನಡೆಯುತ್ತಲೇ ಇದೆ. ಆದರೆ ಅಂದು ಕರ್ಬಲಾದಲ್ಲಿ ಹುಸೇನರ ಬಲಿದಾನದ ಬಗ್ಗೆ ತಿಳಿದ ನಂತರ ಯಜೀದ್ ಪಶ್ಚಾತ್ತಾಪ ಪಟ್ಟು, ತನ್ನ ತಪ್ಪಿಗೆ ಶಿಕ್ಷೆ ನೀಡುವಂತೆ ಅಲ್ಲಾಹ್ ನಲ್ಲಿ ಪ್ರಾರ್ಥಿಸಿ, ಕೌರ್ಯವನ್ನು ಇಂದಿಗೆ ಕೊನೆಗೊಳಿಸುತ್ತೇನೆ, ಮೊಹಮ್ಮದರ ಮಾರ್ಗದಲ್ಲಿ ನಡೆಯುತ್ತೇನೆ ಎಂದು ಘೋಷಿಸುತ್ತಾನೆ.