ಆಯೋಧ್ಯಾ ರಾಮಮಂದಿರಕ್ಕೆ ಚಿನ್ನದ ಇಟ್ಟಿಗೆ ನೀಡುತ್ತೇನೆಂದ ಮೊಘಲರ ವಂಶಸ್ಥ
ಮೊಘಲರ ಕೊನೆ ದೊರೆ ಬಹಾದ್ದೂರ್ ಷಾ ಜಾಫರ್ ನ ವಂಶಸ್ಥ ತಾನು ಎಂದು ಹೇಳಿಕೊಳ್ಳುವ ಹಬೀಬುದ್ದೀನ್ ಟುಸಿ ಅವರು ಅಯೋಧ್ಯಾದ ರಾಮಮಂದಿರಕ್ಕೆ ಚಿನ್ನದ ಇಟ್ಟಿಗೆ ದಾನವಾಗಿ ನೀಡುತ್ತೇನೆ ಎಂದಿದ್ದಾರೆ. ಬಾಬ್ರಿ ಮಸೀದಿ- ರಾಮ ಜನ್ಮಭೂಮಿಯ ಸ್ಥಳವನ್ನು ಅವರಿಗೆ ಹಸ್ತಾಂತರಿಸಬೇಕು ಎಂದು ಬಯಸಿದ್ದಾರೆ.
ಮೊಘಲರ ಮೊದಲ ದೊರೆ ಬಾಬರ್ ನ ವಂಶಸ್ಥನಾದ ತಾನು ಆ ಸ್ಥಳದ ಹಕ್ಕುದಾರ ಮಾಲೀಕ ಎಂದು ಹಬೀಬುದ್ದೀನ್ ಹೇಳಿಕೊಂಡಿದ್ದಾರೆ. ಅಂದ ಹಾಗೆ 1529ರಲ್ಲಿ ಬಾಬ್ರಿ ಮಸೀದಿಯನ್ನು ನಿರ್ಮಿಸಿದ್ದು ಬಾಬರ್. ಭಾನುವಾರದಂದು ಟುಸಿ ಮಾತನಾಡಿ, ಒಂದು ವೇಳೆ ವಿವಾದಿತ ಸ್ಥಳವನ್ನು ಸುಪ್ರೀಂ ಕೋರ್ಟ್ ನನಗೆ ಹಸ್ತಾಂತರ ಮಾಡಿದರೆ, ಯಾವ ಬಾಬ್ರಿ ಮಸೀದಿ ಜಾಗದಲ್ಲಿ ರಾಮ ಮಂದಿರ ಇತ್ತು ಅನ್ನುತ್ತಿದ್ದಾರೋ ಅಲ್ಲಿ ಮಂದಿರ ನಿರ್ಮಾಣಕ್ಕೆ ಸ್ಥಳ ನೀಡುವುದಾಗಿ ಹೇಳಿದ್ದಾರೆ.
ಬಾಬ್ರಿ ಮಸೀದಿ ಹಕ್ಕನ್ನು ಪ್ರತಿಪಾದಿಸಲು ದಾಖಲೆ ನೀಡಿ: ಸುಪ್ರೀಂ
ಐವತ್ತು ವರ್ಷದ ಟುಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಮಾಲೀಕತ್ವದ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನನ್ನು ಸಹ ಸೇರಿಸಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಅವರ ಅರ್ಜಿಯನ್ನು ವಿಚಾರಣೆಗೆ ಇನ್ನೂ ಪರಿಗಣನೆಗೆ ತೆಗೆದುಕೊಂಡಿದ್ದಾಲ್ಲ. ಈಗ ಅರ್ಜಿ ಹಾಕಿಕೊಂಡಿರುವ ಎರಡೂ ಕಡೆಯವರ ಬಳಿ ತಮ್ಮ ವಾದ ಸಮರ್ಥನೆ ಮಾಡಿಕೊಳ್ಳುವ ದಾಖಲೆಗಳಿಲ್ಲ. ಆದರೆ ಮೊಘಲರ ವಂಶಸ್ಥರಾಗಿರುವ ತನ್ನ ಬಳಿ ಆ ದಾಖಲಾತಿಗಳು ಇವೆ ಎಂದಿದ್ದಾರೆ.
ಇನ್ನು ಇಡೀ ಭೂಮಿಯನ್ನು ದೇವಾಲಯ ನಿರ್ಮಾಣಕ್ಕಾಗಿ ನೀಡಬೇಕು ಎಂದು ಈಗಾಗಲೇ ತೀರ್ಮಾನ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ. ಮೂರು ಬಾರಿ ಅಯೋಧ್ಯೆಗೆ ಭೇಟಿ ನೀಡಿರುವ ಟುಸಿ ಪ್ರಾರ್ಥನೆ ಸಲ್ಲಿಸಿದ್ದಾರೆ. ರಾಮಮಂದಿರವನ್ನು ಕೆಡವಿದ ಕಾರಣಕ್ಕೆ ಹಿಂದೂಗಳನ್ನು ಕ್ಷಮೆ ಕೂಡ ಕೇಳಿದ್ದಾರೆ. ಸಾಂಕೇತಿಕವಾಗಿ ಕ್ಷಮೆ ಕೇಳಿರುವ ಟುಸಿ, ಚರಣ ಪಾದುಕೆಯನ್ನು ತಮ್ಮ ತಲೆಯ ಮೇಲೆ ಇಟ್ಟುಕೊಂಡಿದ್ದರು.
ಡಿಸೆಂಬರ್ 6, 1992ರಲ್ಲಿ ನೂರಾರು ಮಂದಿ ಕರ ಸೇವಕರು ಸೇರಿ ಬಾಬ್ರಿ ಮಸೀದಿಯನ್ನು ಕೆಡವಿದ್ದರು.