ಚಂದ್ರನಲ್ಲಿದೆ ಭಾರಿ ಪ್ರಮಾಣ ನೀರು, ‘ಸೋಫಿಯಾ’ ಹೇಳಿದ್ದೇನು?
ಚಂದ್ರನ ಮೇಲೆ ಭಾರಿ ಪ್ರಮಾಣದ ನೀರು ಹುದುಗಿದೆ ಎಂಬ ವಿಚಾರವನ್ನು ಇದೇ ಮೊದಲಬಾರಿಗೆ ನಾಸಾ ವಿಜ್ಞಾನಿಗಳು ಬಾಯಿಬಿಟ್ಟಿದ್ದಾರೆ. ಮಾನವನ ಭವಿಷ್ಯವನ್ನೇ ಬದಲಿಸುವ ಸಂಶೋಧನೆ ಇದಾಗಿದೆ. ಅಷ್ಟಕ್ಕೂ ನೀರು, ನೆರಳಿಗಾಗಿ ಮನುಷ್ಯ ಭೂಮಿ ಬಿಟ್ಟು ಬ್ರಹ್ಮಾಂಡದಲ್ಲೆಲ್ಲಾ ತಡಕಾಡುತ್ತಿರುವಾಗ ಭೂಮಿ ಮಗ್ಗುಲಲ್ಲೇ ನೀರಿನ ಖಜಾನೆ ಸಿಕ್ಕಿದೆ. ಅಷ್ಟಕ್ಕೂ ನೀರಿನ ನಿಧಿ ಕಂಡುಬಂದಿರುವುದು ಯಾವುದೋ ಗೊತ್ತಿಲ್ಲದ ಜಾಗದಲ್ಲಿ ಅಲ್ಲ, ಲಕ್ಷಾಂತರ ವರ್ಷದಿಂದ ಭೂಮಿ ಪಕ್ಕದಲ್ಲೇ ಮನೆ ಮಾಡಿರುವ ಚಂದಿರನಲ್ಲಿ. ಹೌದು ನಿಮಗೆ ಇದು ಅಚ್ಚರಿ ಎನಿಸಿದರೂ ಸತ್ಯ.
ಭೂಮಿ ಮೇಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಒತ್ತಡ, ಕ್ಷಣಕ್ಷಣಕ್ಕೂ ಸದ್ದೇ ಇಲ್ಲದೆ ಬಂದೆರಗುತ್ತಿರುವ ಅವಘಡಗಳು ಮಾನವ ಸಂಕುಲವನ್ನು ಕಂಗಾಲು ಮಾಡಿದೆ. ಇದು ಭವಿಷ್ಯವನ್ನು ಅಲ್ಲೋಲ ಕಲ್ಲೋಲ ಮಾಡುವ ಜೊತೆಗೆ ಭೂಮಿಯಂತಹ ಇನ್ನೊಂದು ಗ್ರಹ ಹುಡುಕುವಂತೆ ಒತ್ತಡವನ್ನೂ ಹಾಕುತ್ತಿದೆ. ಹೀಗಾಗಿಯೇ ಮನುಷ್ಯ ಕೋಟ್ಯಂತರ ಕಿಲೋಮೀಟರ್ ದೂರದ ಗ್ರಹಗಳಿಗೂ ಟೆಲಿಸ್ಕೋಪ್ ಇಟ್ಟು, ಝೂಮ್ ಹಾಕುತ್ತಿದ್ದ. ಆದರೆ ಅಲ್ಲೆಲ್ಲೂ ಪತ್ತೆಯಾಗದಷ್ಟು ನೀರು ಚಂದಿರನಲ್ಲೇ ಪತ್ತೆಯಾಗಿಬಿಟ್ಟಿದೆ. ನೇಚರ್ ಅಸ್ಟ್ರಾನಮಿಯಲ್ಲಿ ಪ್ರಕಟವಾಗಿರುವ 2 ಹೊಸ ಅಧ್ಯಯನ ವರದಿಗಳು ಸಂತಸದ ಸಂಗತಿಯನ್ನು ಮನುಕುಲಕ್ಕೆ ನೀಡಿವೆ. ದಸರಾ ಸಂಭ್ರಮದ ನಡುವೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.
ಚಂದ್ರನ ಅಂಗಳದಲ್ಲಿ ಮತ್ತಷ್ಟು ನೀರು: ನಾಸಾ ಅಧ್ಯಯನ
‘ಸೋಫಿಯಾ’ ಯಾರು ಗೊತ್ತಾ..?
ಅಷ್ಟಕ್ಕೂ 'ಸೋಫಿಯಾ' ಎಂದರೆ ಯಾವುದೋ ಸುಂದರಿಯ ಹೆಸರಲ್ಲ. 'ಸೋಫಿಯಾ' ಎಂಬುದು ನಾಸಾ ನಿರ್ಮಿತ ಟೆಲಿಸ್ಕೋಪ್ ನಾಮಧೇಯ. ಅವರೋಹಿತ ಅಥವಾ ಅತಿಗೆಂಪು ಖಗೋಳ ವಿಜ್ಞಾನಕ್ಕಾಗಿಯೇ ವಿಶೇಷವಾಗಿ ಈ ದೂರದರ್ಶಕ (telescope)ವನ್ನು ತಯಾರಿಸಲಾಗಿದೆ. ಇದನ್ನು ಹಾರುವ ದೂರದರ್ಶಕ ಎಂದು ಕರೆಯಲಾಗುತ್ತದೆ. ಇದರ ಸಹಾಯದಿಂದಲೇ ಚಂದಿರ ಮೇಲೆ ನೀರಿರುವುದನ್ನು ನಾಸಾ ವಿಜ್ಞಾನಿಗಳು ಕನ್ಫರ್ಮ್ ಮಾಡಿರುವುದು. ನೀರು (H2O) ಮತ್ತು ಹೈಡ್ರಾಕ್ಸಿಲ್ ನಡುವಿನ ವ್ಯತ್ಯಾಸವನ್ನು ಕಂಡುಹಿಡಿಯಲು ಇದೇ ಟೆಲಿಸ್ಕೋಪ್ ಸಹಾಯ ಮಾಡಿದ್ದು, ಚಂದ್ರನ ಮೇಲೆ ಭಾರಿ ನೀರು ಇರುವುದು ಪಕ್ಕಾ ಆಗಿದೆ.
ನಾಸಾ ಮತ್ತು ನೋಕಿಯಾ ಯೋಜನೆ: ಚಂದ್ರನ ಮೇಲೆ ಸ್ಥಾಪನೆಯಾಗಲಿದೆ 4ಜಿ ನೆಟ್ವರ್ಕ್
ಭಾರತವೇ ಮೊದಲು ಹೇಳಿದ್ದು..!
ಹೌದು, ಈ ಹಿಂದೆ ಚಂದಿರನ ಮೇಲೆ ನೀರು ಇದೆ ಅಂತಾ ವಿಜ್ಞಾನಿಗಳು ಅಂದಾಜಿಸಿರಲಿಲ್ಲ. ಆದರೆ ಕಳೆದ 1 ದಶಕದಿಂದ ಈಚೆಗೆ ಚಂದಿರನಲ್ಲಿ ನೀರಿದೆ ಎಂಬುದು ಸ್ಪಷ್ಟವಾಗಿತ್ತು. ಭಾರತದ ಹೆಮ್ಮೆಯ 'ಇಸ್ರೋ' ಸಂಸ್ಥೆ ಮೊಟ್ಟಮೊದಲು ಈ ಸತ್ಯ ಹೊರಗೆಡವಿತ್ತು. 2008ರಲ್ಲಿ ಚಂದಿರನ ಅಧ್ಯಯನಕ್ಕಾಗಿ 'ಇಸ್ರೋ' ಕೈಗೊಂಡಿದ್ದ 'ಚಂದ್ರಯಾನ-1' ಯೋಜನೆಯೇ ಈ ಬಗ್ಗೆ ಮೊಟ್ಟಮೊದಲು ಕುರುಹು ಕೊಟ್ಟಿತ್ತು. ಚಂದ್ರನ ಮೇಲೆ ನೀರು ಇದೆ ಎಂದು ತಿಳಿಸಿತ್ತು. ಇದಾದ ಬಳಿಕ ವಿಶ್ವದ ಅನೇಕ ದೇಶಗಳು ಚಂದ್ರನ ಮೇಲೆ ಅಧ್ಯಯನ ಕೈಗೊಂಡು ನೀರು ಇರುವುದನ್ನು ಖಚಿತಪಡಿಸಿವೆ. ಹೀಗಾಗಿ ಚಂದ್ರನ ಮೇಲೆ ನೀರು ಇದೆ ಎಂದು ಹೇಳಿದ ದೇಶಗಳ ಪೈಕಿ ಭಾರತವೇ ನಂ. 1 ಎಂಬುದು ಸ್ಪಷ್ಟ.
ಶಿವಮೊಗ್ಗ ಜಿಲ್ಲೆಗಿಂತ 5 ಪಟ್ಟು ಹೆಚ್ಚು ನೀರು..!
ಚಂದ್ರನ ಮೇಲೆ ಈಗ ಎಷ್ಟು ಪ್ರಮಾಣದ ನೀರು ಸಿಕ್ಕಿರಬಹುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಆ ಕುತೂಹಲಕ್ಕೂ ನಾಸಾ ವಿಜ್ಞಾನಿಗಳು ಉತ್ತರ ನೀಡಿದ್ದಾರೆ. ಚಂದ್ರನ ಮೇಲೆ ಈಗ ಪತ್ತೆಯಾಗಿರುವ ನೀರಿನ ಪ್ರಮಾಣ ಸುಮಾರು 40,000 ಸ್ಕ್ವೇರ್ ಕಿಲೋಮೀಟರ್. ಇದನ್ನ ಸಾಮಾನ್ಯ ಅಂದಾಜಿನಲ್ಲಿ ಹೇಳುವುದಾದರೆ ಶಿವಮೊಗ್ಗ ಜಿಲ್ಲೆಯ ಒಟ್ಟು ಜಾಗದ 5 ಪಟ್ಟು. ಅಂದರೆ ಚಂದ್ರನ ಮೇಲಿರುವ ನೀರನ್ನು ಭೂಮಿಗೆ ತಂದರೆ, ಆ ನೀರನ್ನು ಶಿವಮೊಗ್ಗ ಜಿಲ್ಲೆಗೆ 5 ಬಾರಿ ತುಂಬಿಸಬಹುದು. ಅಂದರೆ ಲೆಕ್ಕ ಹಾಕಿ ಭವಿಷ್ಯದಲ್ಲಿ ಚಂದಿರನ ಮೇಲೂ ಮನೆ ಕಟ್ಟಲು ಈ ನೀರು ಬಳಸಲು ಲಭ್ಯವಾದೀತು. ಬರೀ ಮನೆ ಕಟ್ಟಲು ಸಾಕೆ ಕುಡಿಯಲು, ಕೃಷಿ ಮಾಡಲು ಕೂಡ ಬಳಸಬಹುದಾಗಿದೆ. ಮುಂದೆ ಭೂಮಿ ಬೇಜಾರಾದರೆ ಚಂದ್ರನ ಮೇಲೆ ಹೋಗಿ ವಾಸ ಮಾಡಬಹುದು.
ಚಂದ್ರನ ಮೇಲೆ ಶೌಚಾಲಯ ಕಟ್ಟಲು 'ಐಡಿಯಾ ಕೊಡಿ' ಎಂದ ನಾಸಾ
ಅಂದುಕೊಂಡಿದ್ದು 1, ಆಗಿದ್ದು 20..!
ಹೌದು, ಈ ಹಿಂದೆ ಚಂದ್ರನ ಮೇಲೆ ಎಷ್ಟು ನೀರಿದೆ ಅಂತಾ ವಿಜ್ಞಾನಿಗಳು ಊಹೆ ಮಾಡಿದ್ದರೋ ಅದಕ್ಕಿಂತ 20 ಪಟ್ಟು ಹೆಚ್ಚು ನೀರು ಚಂದ್ರನ ಮೇಲೆ ಹುದುಗಿದೆ. ಚಂದ್ರನ ಕುಳಿಗಳಲ್ಲಿ ಈ ನೀರು ಭದ್ರವಾಗಿ ಶೇಖರಣೆ ಆಗಿದೆ. ಈ ಮೊದಲು ಚಂದ್ರನ ಮೇಲೆ ಬೆಳಕು ಬೀಳದ ಹಾಗೂ ಶಾಶ್ವತವಾಗಿ ನೆರಳು ಇರುವ ಧ್ರುವ ಪ್ರದೇಶ ಹಾಗೂ ಸುತ್ತಮುತ್ತ ನೀರು ಮಂಜುಗಡ್ಡೆ ರೂಪದಲ್ಲಿ ಇದೆ ಎನ್ನಲಾಗಿತ್ತು. ಆದರೆ ಈಗಿನ ಅಧ್ಯಯನ ಹೇಳುತ್ತಿದೆ ಚಂದ್ರನ ಮೇಲೆ ಬಿಸಿಲು ಬೀಳುವ ಜಾಗದಲ್ಲೂ ನೀರಿದೆ ಎಂದು. ಹೀಗಾದರೆ ಚಂದ್ರನ ವಾತಾವರಣದ ಕುರಿತು ಹಲವು ಅನುಮಾನಗಳು ಮೂಡುತ್ತಿದ್ದು, ಚಂದ್ರ ಕೂಡ ಭೂಮಿ ರೀತಿಯ ವಾತಾವರಣ ಹೊಂದಿದ್ದಾನಾ..? ಎಂಬ ಅನುಮಾನ ಹುಟ್ಟುಹಾಕಿದೆ.
ವಾತಾವರಣ ತೆಳುವಾಗಿದ್ದರೆ ನೀರು ಖಾಲಿಯಾಗುತ್ತಿತ್ತು
ಅಂದಹಾಗೆ ಈ ಹಿಂದೆ ವಿಜ್ಞಾನಿಗಳು ಚಂದ್ರನ ಮೇಲೆ ನೀರು ಇಲ್ಲ ಎಂದು ವಾದಿಸುತ್ತಿದ್ದರು. ಏಕೆಂದರೆ ಚಂದ್ರ ಗಟ್ಟಿಯಾದ ವಾತಾವರಣ ಹೊಂದಿಲ್ಲ. ತೆಳುವಾದ ವಾತಾವರಣ ಇರುವ ಕಾರಣ ಚಂದ್ರನಲ್ಲಿ ನೀರು ಇರಲು ಸಾಧ್ಯವೇ ಇಲ್ಲ ಎನ್ನುತ್ತಿದ್ದರು. ಆದರೆ 2008ರಲ್ಲಿ ಇಸ್ರೋ ಅಧ್ಯಯನದ ಬಳಿಕ ಈ ನಿರ್ಧಾರ ಬದಲಾಗುತ್ತಾ ಸಾಗಿತ್ತು. ಆಳವಾಗಿ ಅಧ್ಯಯನ ನಡೆದ ಬಳಿಕ 2020ರಲ್ಲಿ ಚಂದ್ರನಲ್ಲೂ ಭಾರಿ ಪ್ರಮಾಣದ ನೀರು ಇದೆ ಎಂದು ಒಪ್ಪಿಕೊಂಡಿದ್ದಾರೆ ನಾಸಾ ವಿಜ್ಞಾನಿಗಳು. ಅದರಲ್ಲೂ ಸೂರ್ಯನ ಬೆಳಕು ಬೀಳುವ ಪ್ರದೇಶದಲ್ಲೂ ನೀರು ಇದೆ ಎಂಬುದು ಕನ್ಫರ್ಮ್ ಆಗಿದೆ. ಹಾಗಾದರೆ ಇಷ್ಟುದಿನ ಚಂದ್ರನ ವಾತಾವರಣ ತೆಳುವಾಗಿದೆ ಎಂಬ ವಾದಕ್ಕೂ ಅಂತ್ಯ ಹಾಡುತ್ತಾರಾ..? ಚಂದ್ರನಲ್ಲೂ ಭೂಮಿ ರೀತಿ ವಾತಾವರಣವಿದೆ ಎಂಬುದನ್ನು ಅಧ್ಯಯನ ನಡೆಸುತ್ತಾರಾ ಎಂಬ ಅನುಮಾನ ಮೂಡುತ್ತಿದೆ. ಏಕೆಂದರೆ ವಾತಾವರಣ ತೆಳುವಾಗಿದ್ದರೆ ಚಂದ್ರನಲ್ಲಿರುವ ನೀರು ಆವಿಯಾಗಿ ಬಾಹ್ಯಾಕಾಶ ಸೇರಬೇಕಿತ್ತು. ಆದರೆ ನೀರು ಚಂದ್ರನ ಮೇಲೆ ಹಾಗೇ ಉಳಿದುಕೊಂಡು ಬಂದಿದೆ.
ನೀರು ಬಂದಿದ್ದಾರೂ ಎಲ್ಲಿಂದ..?
ನಮ್ಮ ಸೌರವ್ಯೂಹದಲ್ಲಿ ನೀರು ಹರಿದುಬಂದಿದ್ದು ಕ್ಯೂಪರ್ ಬೆಲ್ಟ್ ಎಂಬ ಉಲ್ಕೆ ಹಾಗೂ ಕ್ಷುದ್ರಗ್ರಹಗಳ ಸಮೂಹದಿಂದ. ಕ್ಯೂಪರ್ ಬೆಲ್ಟ್ ಎಂಬುದು ನಮ್ಮ ಸೌರಮಂಡಲದ ಕೊನೆಯಲ್ಲಿ ಸಿಗುವ ಪ್ರದೇಶವಾಗಿದೆ. ಇಲ್ಲಿ ಊಹೆಗೂ ನಿಲುಕದಷ್ಟು ಚಳಿ ಇರುತ್ತದೆ. ಅಷ್ಟು ಚಳಿಯನ್ನು ನೀವು ಸೌರವ್ಯೂಹದಲ್ಲಿ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗ ಅಲ್ಲಿರುವ ಕ್ಷುದ್ರಗ್ರಹ ಹಾಗೂ ಉಲ್ಕೆಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ಮಂಜುಗಡ್ಡೆ ರೂಪದಲ್ಲಿ ಇರುತ್ತದೆ. ಆದರೆ ಸೂರ್ಯನ ಗುರುತ್ವದ ಬಲದಿಂದ ಈ ಕ್ಷುದ್ರಗ್ರಹಗಳು ಅಥವಾ ಉಲ್ಕೆಗಳು ಕ್ಯೂಪರ್ ಬೆಲ್ಟ್ ಗುರುತ್ವ ಬಂಧನದಿಂದ ತಪ್ಪಿಸಿಕೊಂಡು ಸೂರ್ಯನತ್ತ ಓಡೋಡಿ ಬರುತ್ತವೆ. ಹೀಗೆ ಬರುವ ಉಲ್ಕೆಗಳು ಹಾಗೂ ಕ್ಷುದ್ರಗ್ರಹಗಳು ಭೂಮಿಗೂ ನೀರು ತಂದಿದ್ದವು. ಭೂಮಿಯ ಮೇಲೆ ಬಿದ್ದ ಉಲ್ಕೆ ಹಾಗೂ ಕ್ಷುದ್ರಗ್ರಹಗಳಿಂದಲೇ ಭೂಮಿ ಮೇಲೆ ಈಗ ನೀರು ಸಿಗುತ್ತಿದೆ. ಇದೇ ರೀತಿ ಚಂದ್ರನ ಮೇಲೂ ಉಲ್ಕೆ ಹಾಗೂ ಕ್ಷುದ್ರಗ್ರಹಗಳಿಂದಲೇ ನೀರು ಬಂದಿರಬಹುದು ಎನ್ನಲಾಗುತ್ತಿದೆ.