Mood Of The Nation ಸಮೀಕ್ಷೆ: ರೈತರ ಪ್ರತಿಭಟನೆ ನಿರ್ವಹಣೆಗೆ ಶೇ 80ರಷ್ಟು ಜನರ ತೃಪ್ತಿ
2020 ನರೇಂದ್ರ ಮೋದಿ ಸರ್ಕಾರಕ್ಕೆ ಸವಾಲಿನ ವರ್ಷ. ಕೋವಿಡ್ ಸೋಂಕಿನ ಹರಡುವಿಕೆ ದೇಶದ ಆರೋಗ್ಯ ಮತ್ತು ಆರ್ಥಿಕತೆಗೆ ಭಾರಿ ಹೊಡೆತ ನೀಡಿದೆ. ಒಂದೆಡೆ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿದ್ದರೆ, ಸರ್ಕಾರದ ವಿರುದ್ಧ ರೈತರ ಹೋರಾಟ ತೀವ್ರವಾಗುತ್ತಿದೆ.
ಕೃಷಿ ಕಾಯ್ದೆಗಳ ವಿಚಾರದಲ್ಲಿ ರೈತರ ಬಿಗಿಪಟ್ಟು, ಕೇಂದ್ರ ಸರ್ಕಾರದ ಹಠಮಾರಿ ಧೋರಣೆ ಹಲವು ತಿಂಗಳಿನಿಂದ ಗೊಂದಲಮಯ ವಾತಾವರಣ ಮುಂದುವರಿದಿದೆ. ಇದರಿಂದ ಕೇಂದ್ರ ಸರ್ಕಾರದ ವಿರುದ್ಧ ಒಂದು ವರ್ಗದಲ್ಲಿ ಆಕ್ರೋಶ ಮಡುಗಟ್ಟುತ್ತಿದೆ. ಅದರ ನಡುವೆಯೇ ಅನೇಕರು ಕೃಷಿ ಕಾಯ್ದೆಗಳ ಪರವಾಗಿ ಕೇಂದ್ರದ ಬೆಂಬಲಕ್ಕೆ ನಿಂತಿದ್ದಾರೆ. ಈ ಎರಡು ಬಗೆಯ ಅಭಿಪ್ರಾಯಗಳು ದೇಶದ ಎಲ್ಲ ಮೂಲೆಗಳ ಎಲ್ಲ ವರ್ಗದ ಜನರಲ್ಲಿಯೂ ಯಾವ ರೀತಿ ಇದೆ? ರೈತರ ವಿಚಾರದಲ್ಲಿ ಸರ್ಕಾರ ತಪ್ಪು ಮಾಡುತ್ತಿದೆಯೇ ಎಂದು ದೇಶದ ಜನತೆಗೆ ಅನಿಸಿದೆಯೇ?
Mood Of The Nation ಸಮೀಕ್ಷೆ: ಈಗ ಚುನಾವಣೆ ನಡೆದರೂ ಗೆಲ್ಲೋದು ಎನ್ಡಿಎ
'ಇಂಡಿಯಾ ಟುಡೆ' ಸುದ್ದಿ ವಾಹಿನಿಯು ಕಾರ್ವಿ ಸಂಸ್ಥೆಯೊಂದಿಗೆ ಜತೆಗೂಡಿ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯಲ್ಲಿ ರೈತರ ಪ್ರತಿಭಟನೆಯ ವಿಚಾರವನ್ನು ಮುಂದಿಟ್ಟಾಗ, ಹೆಚ್ಚಿನ ಜನರ ಬೆಂಬಲ ಕೇಂದ್ರ ಸರ್ಕಾರದ ಪರವಾಗಿ ಇದೆ. ಈ ಪ್ರಕರಣವನ್ನು ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ನಿಭಾಯಿಸಿದೆ ಎಂದು ಶೇ 80ರಷ್ಟು ಜನರಿಗೆ ಎನಿಸಿದೆ. ಮುಂದೆ ಓದಿ.
ರೈತರ ಪ್ರತಿಭಟನೆ ನಿರ್ವಹಣೆ
ಕೃಷಿ ಕಾಯ್ದೆಯ ವಿಚಾರದಲ್ಲಿ ರೈತರ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ ಎಂದು ಶೇ 80ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಶೇ 16ರಷ್ಟು ಮಂದಿ ಸರ್ಕಾರ ತುಂಬಾ ಅದ್ಭುತವಾಗಿ ನಿಭಾಯಿಸಿದೆ ಎಂದೆನಿಸಿದೆ. ಶೇ 41ರಷ್ಟು ಮಂದಿ ತೃಪ್ತಿಕರ ಹಾಗೂ ಬಹಳ ಕೆಟ್ಟದಾಗಿದೆ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಾಯ್ದೆಗಳು ರೈತರಿಗೆ ಸಹಕಾರಿ
ಕೃಷಿ ಕಾಯ್ದೆಗಳು ರೈತರಿಗೆ ಸಹಕಾರಿಯಾಗಿವೆ ಎಂದು ಶೇ 34ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಶೇ 32ರಷ್ಟು ಜನರು ಈ ಕಾಯ್ದೆಗಳು ಕಾರ್ಪೊರೇಟ್ ಕಂಪೆನಿಗಳಿಗೆ ಲಾಭದಾಯಕ ಎಂದಿದ್ದಾರೆ. ಶೇ 25ರಷ್ಟು ಜನರಿಗೆ ಎರಡೂ ಕಡೆಯವರಿಗೆ ಕಾಯ್ದೆಗಳು ಪ್ರಯೋಜನಕಾರಿ ಎನಿಸಿದೆ. ಇನ್ನು ಶೇ 8ರಷ್ಟು ಜನರು ಇದರ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
Mood Of The Nation ಸಮೀಕ್ಷೆ: ಕೋವಿಡ್ ನಿರ್ವಹಣೆ ವಿಚಾರದಲ್ಲಿ ಮೋದಿ ಸರ್ಕಾರಕ್ಕೆ ಜೈ ಎಂದ ಜನ
ತಿದ್ದುಪಡಿಗೆ ಜನರ ಒಲವು
ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೇ ಅಥವಾ ತಿದ್ದುಪಡಿ ಮಾಡಿದರೆ ಸಾಕೇ ಎಂಬ ಪ್ರಶ್ನೆಯನ್ನು ಜನರ ಮುಂದೆ ಇರಿಸಲಾಗಿತ್ತು. ಅದಕ್ಕೆ ಶೇ 28ರಷ್ಟು ಜನರು ರೈತರ ಬೇಡಿಕೆಯಂತೆಯೇ ಕಾಯ್ದೆಗಳನ್ನು ರದ್ದುಗೊಳಿಸುವುದೇ ಸೂಕ್ತ ಎಂದಿದ್ದಾರೆ. ಇನ್ನು ಶೇ 55ರಷ್ಟು ಜನರಿಗೆ ಕಾಯ್ದೆಯಲ್ಲಿ ತಿದ್ದುಪಡಿ ತಂದರೆ ಸಾಕು ಎನಿಸಿದೆ. ಶೇ 10ಜನರಿಗೆ ಸರ್ಕಾರ ಹೇಗೆ ಇದೆಯೋ ಹಾಗೆಯೇ ಕಾಯ್ದೆಗಳನ್ನು ಜಾರಿಗೆ ತರಲು ಎಂಬ ಅಭಿಪ್ರಾಯ ಮೂಡಿದೆ.
ಎನ್ಡಿಎಗೆ ಗೆಲುವು
ಈಗಿನ ಸಂದರ್ಭದಲ್ಲಿ ಚುನಾವಣೆ ನಡೆದರೆ ಎನ್ಡಿಎ 321 ಸೀಟುಗಳ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ತಿಳಿಸಿದೆ. ಅಲ್ಲದೆ ಎನ್ಡಿಎ ಒಕ್ಕೂಟ ಶೇ 43ರಷ್ಟು ಮತಗಳನ್ನು ಗಳಿಸಲಿದೆ. ಬಿಜೆಪಿಗೆ ಶೇ 37ರಷ್ಟು ಮತಗಳು ಸಿಗಲಿವೆ ಎಂದು ಹೇಳಲಾಗಿದೆ.