ಭ್ರಷ್ಟರಿನ್ನು ಕನಸಿನಲ್ಲೂ ಕಕ್ಕಾಬಿಕ್ಕಿ; ಅಂಥ ಆದೇಶ ಕೊಟ್ಟಿದೆ ಸುಪ್ರೀಂ ಕೋರ್ಟ್!
ನವದೆಹಲಿ, ಜುಲೈ 27: ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಗಳನ್ನು ತನಿಖೆ ನಡೆಸುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಭುಜಬಲ ಹೆಚ್ಚಿಸುವ ಆದೇಶವೊಂದನ್ನು ಸುಪ್ರೀಂ ಕೋರ್ಟ್ ಬುಧವಾರ ಹೊರಡಿಸಿದೆ.
ಭ್ರಷ್ಟರ ಬೇಟೆಗೆ ಇಳಿಯುವ ಇಡಿ ಅಧಿಕಾರಿಗಳಿಗೆ ಯಾವುದೇ ರೀತಿಯ ನಿರ್ಬಂಧಗಳನ್ನು ಹೇರುವಂತಿಲ್ಲ. ಮನಿ ಲಾಂಡರಿಂಗ್ ಕೇಸ್ ವಿಚಾರಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ಸಂಪೂರ್ಣ ಅಧಿಕಾರವನ್ನು ನೀಡಿದೆ.
Video: ದೆಹಲಿಯ ನಡುರಸ್ತೆಯಲ್ಲೇ ಪ್ರತಿಭಟನೆ ಕುಳಿತ ರಾಹುಲ್ ಗಾಂಧಿ ಖಾಕಿ ವಶಕ್ಕೆ
ಕೇಂದ್ರದ ಅಕ್ರಮ ಹಣ ವರ್ಗಾವಣೆ ಕಾಯ್ದೆಯನ್ನು ಪ್ರಶ್ನಿಸುವ ಹಾಗೂ ತನಿಖಾ ಸಂಸ್ಥೆ ಬಗ್ಗೆ ಆಕ್ಷೇಪಣೆಯನ್ನು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮಹತ್ವದ ಆದೇಶವನ್ನು ನೀಡಿದೆ. ಇಡಿ ವಿರುದ್ಧ ಸಲ್ಲಿಸಿದ ಎಲ್ಲ ಆಕ್ಷೇಪಣಾ ಅರ್ಜಿಗಳನ್ನು ಕೋರ್ಟ್ ತಿರಸ್ಕರಿಸಿದೆ. ಇದರ ಜೊತೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಯಾವೆಲ್ಲ ಅಧಿಕಾರವನ್ನು ಹೊಂದಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ಸುಪ್ರೀಂಕೋರ್ಟ್ ನೀಡಿರುವ ಆದೇಶದಲ್ಲಿ ಏನಿದೆ ಎಂಬುದರ ಕುರಿತು ವಿಶೇಷ ವರದಿ ಇಲ್ಲಿದೆ.
ಮನಿ ಲಾಂಡರಿಂಗ್ ತಡೆ ಕಾಯ್ದೆ ಎತ್ತಿ ಹಿಡಿದ ಸುಪ್ರೀಂಕೋರ್ಟ್
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಶೋಧ ಕಾರ್ಯಾಚರಣೆ, ವಶಪಡಿಸಿಕೊಳ್ಳುವಿಕೆ ಮತ್ತು ಬಂಧನ ಅಧಿಕಾರವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಆ ಮೂಲಕ ಕಾಯ್ದೆಯ ಎಲ್ಲಾ ನಿಬಂಧನೆಗಳನ್ನು ಕೋರ್ಟ್ ಎತ್ತಿ ಹಿಡಿದಿದೆ. ಈ ಪ್ರಕರಣಗಳ ಅಡಿಯಲ್ಲಿ ಬಂಧನದ ಆಧಾರ ಅಥವಾ ಸಾಕ್ಷ್ಯವನ್ನು ತಿಳಿಸದೆ ಆರೋಪಿಗಳನ್ನು ಬಂಧಿಸುವ ಅನಿಯಂತ್ರಿತ ಅಧಿಕಾರವು ಅಸಾಂವಿಧಾನಿಕ ಎಂದು ಅರ್ಜಿದಾರರು ವಾದಿಸಿದ್ದರು. ಅಲ್ಲದೇ ವಿಚಾರಣೆ ವೇಳೆ ಆರೋಪಿಗಳಿಂದ ದೋಷಾರೋಪಣಾತ್ಮಕ ಹೇಳಿಕೆ ದಾಖಲಿಸಿಕೊಳ್ಳುವ ಇಡಿ ಅಧಿಕಾರಿಗಳು ಬೆದರಿಕೆ ಹಾಕುತ್ತಾರೆ. ಮಾಹಿತಿ ತಡೆ ಹಿಡಿದಿದ್ದಕ್ಕಾಗಿ ದಂಡ ವಿಧಿಸುವುದಾಗಿ ಬೆದರಿಸುವುದು ಬಲವಂತಕ್ಕೆ ಸಮವಾಗಿದ್ದು ಎಂದು ಅರ್ಜಿದಾರರು ಹೇಳಿದ್ದಾರೆ.
ಇಸಿಐಆರ್ ಪಡೆಯಲು ಆರೋಪಿ ಅರ್ಹನಲ್ಲ
ಜಾರಿ ನಿರ್ದೇಶನಾಲಯವು ಪ್ರತಿ ಪ್ರಕರಣದ ಮಾಹಿತಿ ವರದಿ ಪ್ರತಿ(ECIR)ಯನ್ನು ಪೂರೈಸುವುದು ಕಡ್ಡಾಯವೇನಲ್ಲ, ಏಕೆಂದರೆ ಅದು ಆಂತರಿಕ ದಾಖಲೆ ಆಗಿರುತ್ತದೆ. ಇದು ಎಫ್ಐಆರ್ನಂತೆ ಇರುತ್ತದೆ. ಆದರೆ ಆರೋಪಿಯು ಈ ನಕಲು ಪ್ರತಿಯನ್ನು ಪಡೆಯಲು ಅರ್ಹನಾಗಿದ್ದಾನೆ ಎಂಬ ಅರ್ಜಿದಾರರ ಸವಾಲನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಆರೋಪಿಯ ಬಂಧನದ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯವು ಬಂಧನಕ್ಕೆ ಕಾರಣವನ್ನು ಬಹಿರಂಗಪಡಿಸಿದರೆ ಸಾಕು ಎಂದು ಕೋರ್ಟ್ ಹೇಳಿದೆ.
ಆರೋಪಿಗಳ ಮೇಲೆ ಪುರಾವೆಯ ಹೊರೆಗೆ ಸಮರ್ಥನೆ
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಗಳ ಮೇಲೆ ಸಾಕ್ಷ್ಯದ ಹೊರೆ ಹಾಕುವುದನ್ನು ಅರ್ಜಿದಾರರು ಪ್ರಶ್ನಿಸಿದರು. ಇದು ಸಮಾನತೆಯ ಹಕ್ಕು ಮತ್ತು ಜೀವಿಸುವ ಹಕ್ಕು ಸೇರಿದಂತೆ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅಕ್ರಮ ಹಣ ವರ್ಗಾವಣೆ ಅಪರಾಧಗಳು ಗಂಭೀರ ಸ್ವರೂಪವನ್ನು ಹೊಂದಿರುತ್ತದೆ. ಅದನ್ನು ತಡೆಯುವ ಸಾಮಾಜಿಕ ಅಗತ್ಯತೆಯಿಂದ ಆರೋಪಿಗಳ ಮೇಲೆ ಪುರಾವೆಯ ಹೊರೆ ಹಾಕುವುದು ಸಮರ್ಥನೀಯವಾಗಿದೆ ಎಂದು ಹೇಳಿದ್ದಾರೆ.
2002ಕ್ಕಿಂತ ಮೊದಲು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಜಾರಿಗೆ ಬಂದ ವೇಳೆಯಲ್ಲಿ ಪ್ರಕರಣಗಳ ಮೇಲೆ ಪಿಎಂಎಲ್ಎ ಆರೋಪ ಸಲ್ಲಿಸುವುದು ಅಸಂವಿಧಾನಿಕವಾಗಿದೆ ಎಂದು ಪ್ರಶ್ನಿಸಲಾಗಿದ್ದು, ಇದನ್ನು ಸಹ ಕೋರ್ಟ್ ತಿರಸ್ಕರಿಸಿದೆ. ಮನಿ ಲಾಂಡರಿಂಗ್ ನಿರಂತರ ಅಪರಾಧ ಎಂದು ಹೇಳುವ ಮೂಲಕ ಕೇಂದ್ರವು ಅದನ್ನು ಸಮರ್ಥಿಸಿಕೊಂಡಿದೆ. ಇದು ಕೇವಲ ಒಂದು ಕೃತ್ಯವಲ್ಲದೇ ನಿರಂತರ ಸರಪಳಿಯ ರೀತಿಯಲ್ಲಿ ಬೆಳೆಯುತ್ತದೆ ಎಂದು ಸರ್ಕಾರ ತಿಳಿಸಿದೆ.
ಮೋದಿ ಸರ್ಕಾರದಲ್ಲಿ ಜಾರಿ ನಿರ್ದೇಶನಾಲಯ ದಾಳಿ ಹೆಚ್ಚಳ
ಭಾರತದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ದಾಳಿಯು 26 ಪಟ್ಟು ಹೆಚ್ಚಳವಾಗಿದೆ. ಆದರೆ ಆರೋಪಿಗಳ ಶಿಕ್ಷೆಯ ಪ್ರಮಾಣ ಮಾತ್ರ ಕಡಿಮೆಯಾಗಿದೆ. ಕಳೆದ 8 ವರ್ಷಗಳಲ್ಲಿ 3010 ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಮಾಡಲಾಗಿದೆ. ಈ ಪೈಕಿ ಕೇವಲ 23 ಆರೋಪಿಗಳಿಗೆ ಮಾತ್ರ ಶಿಕ್ಷೆಯಾಗಿದೆ ಎಂದು ಹಣಕಾಸು ಸಚಿವಾಲಯ ರಾಜ್ಯಸಭೆಯಲ್ಲಿ ತಿಳಿಸಿದೆ. 2004-14ರ ನಡುವೆ ನಡೆಸಿದ 112 ಇಡಿ ದಾಳಿಗಳಲ್ಲಿ ಯಾವುದೇ ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ಕಂಡು ಬಂದಿರಲಿಲ್ಲ ಎಂದು ಹಣಕಾಸು ಸಚಿವಾಲಯ ನೀಡಿದ ಮಾಹಿತಿಯಲ್ಲೇ ಉಲ್ಲೇಖಿಸಲಾಗಿದೆ.
ಮೋದಿ ಸರ್ಕಾರದ ಅವಧಿಯಲ್ಲಿ ಅಕ್ರಮ ಹಣ ವರ್ಗಾವಣೆ
2014 ರಿಂದ 2022ರ ನಡುವೆ 99,356 ಕೋಟಿ ಮೌಲ್ಯದ ಅಪರಾಧವನ್ನು ಪಟ್ಟಿ ಮಾಡಲಾಗಿದ್ದು, ಅದೇ 2004 ರಿಂದ 2014ರ ನಡುವೆ 5,346 ಕೋಟಿ ಮೌಲ್ಯ ಅಪರಾಧವನ್ನು ಗುರುತಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಪ್ರಧಾನಿ ಮೋದಿ ಸರ್ಕಾರದ ಅಡಿಯಲ್ಲಿ 888 ದೂರುಗಳನ್ನು ದಾಖಲಿಸಲಾಗಿದ್ದು, 2004 ರಿಂದ 14ರ ಅವಧಿಯಲ್ಲಿ ಕೇವಲ 104 ದೂರುಗಳನ್ನು ದಾಖಲಿಸಲಾಗಿದೆ. ಇದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಮೋದಿ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ ಎಂಬುದು ಕೇಂದ್ರ ಹಣಕಾಸು ಸಚಿವಾಲಯದ ವಾದವಾಗಿದೆ.
Recommended Video