ಸ್ವಯಂ ಸಾಕ್ಷಾತ್ಕಾರಕ್ಕೆ ಹಿಮಾಲಯದತ್ತ ನರೇಂದ್ರ ಮೋದಿ ಪಯಣ
Recommended Video
ಒಂದಿಲ್ಲೊಂದು ಸಮಯದಲ್ಲಿ ನಮ್ಮ ಮೇಲೆಯೇ ಸಂಶಯ ಮೂಡಿರುತ್ತದೆ. ಜೀವನದಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದು ಗೊತ್ತಾಗದಂಥ ಅನಿಶ್ಚಿತತೆ, ಯೌವನ ಮತ್ತು ಪ್ರೌಢಾವಸ್ಥೆಯ ನಡುವಿನ ತೊಳಲಾಟ ನಮ್ಮನ್ನು ಆ ಸಮಯದಲ್ಲಿ ಆವರಿಸಿರುತ್ತದೆ. ನಿಮಗೆ ಗೊತ್ತಿರಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ನಮಗಿಂತ ಹೊರತಾಗಿರಲಿಲ್ಲ. ಮೋದಿಯವರು 17 ವರ್ಷದವರಿದ್ದಾಗಲೇ ಜೀವನದ ಉದ್ದೇಶವನ್ನು ಅರಸುತ್ತ ಪಯಣಿಸಲು ನಿರ್ಧರಿಸಿದರು.
"ನನ್ನಲ್ಲಿ ಖಚಿತ ನಿರ್ಧಾರವಿರಲಿಲ್ಲ, ಮಾರ್ಗದರ್ಶನವಿರಲಿಲ್ಲ, ಸ್ಪಷ್ಟತೆ ಇರಲಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಹ್ಯೂಮನ್ಸ್ ಆಫ್ ಬಾಂಬೆ ಜೊತೆ ತಮ್ಮ ಜೀವನದ ಅನುಭವವನ್ನು ಹಂಚಿಕೊಂಡಿದ್ದಾರೆ. "ನಾನು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಮತ್ತು ಏಕೆ ಮಾಡಬೇಕು ಎಂದು ಗೊತ್ತಿರಲಿಲ್ಲ. ಗೊತ್ತಿದ್ದದ್ದು ಒಂದೇ ಎಂದರೆ, ಏನಾದರೂ ಮಾಡಬೇಕು ಎಂಬುದು ಮಾತ್ರ."
ನಾವೆಲ್ಲ ಜೀವನದ ಉದ್ದೇಶವನ್ನು ಪೂರೈಸಬೇಕೆಂಬ ನಿಟ್ಟಿನಲ್ಲಿ ಪಯಣಿಸುತ್ತಿರುತ್ತೇವೆ. ಯಾವುದೇ ಪಯಣ ಆರಂಭಿಸಬೇಕಿದ್ದರೆ ರಸ್ತೆಗೆ ಇಳಿಯಲೇಬೇಕಲ್ಲ? ಆದರೆ, ಯುವಕ ಮೋದಿಯವರು ಯಾವುದೇ ಕಾರು, ಸ್ನೇಹಿತರು, ಬುತ್ತಿಯ ಗಂಟಿಲ್ಲದೆ ಹಿಮಾಲಯದ ದಾರಿ ಹಿಡಿದರು. "ಹಿಮಾಲಯದ ಉದ್ದಗಲಕ್ಕೂ ಅಲೆದಾಡಿದೆ, ರಾಮಕೃಷ್ಣ ಮಿಷನ್ ಗೆ ಭೇಟಿ ನೀಡಿದೆ, ಹಲವಾರು ಸಾಧು ಸಂತರನ್ನು ಸಂಧಿಸಿದೆ, ಅವರೊಂದಿಗೆ ಸಮಯ ಕಳೆದೆ ಮತ್ತು ಆಂತರ್ಯದ ಹುಡುಕಾಟ ಆರಂಭಿಸಿದೆ" ಎಂದು ಅವರು ನೆನಪಿನಂಗಳಕ್ಕೆ ಜಿಗಿದರು.
ಸ್ನೇಹಿತ ಸುದೀರ್ಘ ಸ್ನಾನ ಮಾಡುವ ಬಗ್ಗೆ, ಎಲ್ಲ ಬಿಸಿ ನೀರನ್ನು ಖಾಲಿ ಮಾಡುವ ಕುರಿತು ಗೊಣಗುತ್ತಿರುತ್ತೇವೆ. ಆದರೆ, ಮೋದಿಯವರು ನಸುಕಿನ 3 ಗಂಟೆಯ ಸಮಯದಲ್ಲಿ ಹಿಮಾಲಯದ ಕೊರೆಯುವ ಚಳಿಯಲ್ಲಿ ತಣ್ಣೀರ ಸ್ನಾನ ಮಾಡುತ್ತಿದ್ದರು ಮತ್ತು "ಒಂದು ಜಲಪಾತದ ಸದ್ದಿನಲ್ಲಿಯೂ ಶಾಂತಿ, ಏಕಾಂತ ಮತ್ತು ಧ್ಯಾನವನ್ನು ಕಂಡುಕೊಳ್ಳಬಹುದು" ಎಂಬುದನ್ನು ಕಲಿತರು. ತಣ್ಣೀರು ಸ್ನಾನದ ಬಗ್ಗೆ ಗೊಣಗುವವರು ಮೋದಿಯವರ ಈ ವಿಶಿಷ್ಟ ಅನುಭವವನ್ನು, ಕಂಡುಕೊಂಡ ಸತ್ಯವನ್ನು ಮನನ ಮಾಡಿಕೊಳ್ಳಬೇಕು.
ಯೌವನದಲ್ಲಿದ್ದಾಗಲೇ ಮೋದಿಯವರು ತಮ್ಮ ಜೀವನವನ್ನು ಇತರರ ಸೇವೆಗಾಗಿ ಮತ್ತು ಸೇನೆಗಾಗಿ ಮುಡಿಪಾಗಿಡಬೇಕೆಂದು ನಿರ್ಧರಿಸಿದ್ದರು. ಆದರೆ, ಹಲವರೊಂದಿಗೆ ನಡೆಸಿದ ಮಾತುಕತೆ ಅವರ ಅಭಿಮತ ಬದಲಾಗುವಂತೆ ಮಾಡಿತು ಮತ್ತು ಜಗತ್ತು ನೀಡುವ ಇತರ ಹಲವಾರು ಸಾಧ್ಯತೆಗಳತ್ತ ತೆರೆದುಕೊಳ್ಳುವಂತೆ ಪ್ರೇರೇಪಿಸಿತು. ಆ ಸಂಕಲ್ಪದೊಂದಿಗೆ ತನ್ನತನ ಕಂಡುಕೊಳ್ಳುವ ಪಯಣವನ್ನು ಆರಂಭಿಸಿದರು. ಅವರು ಅಂದು ಆರಂಭಿಸಿದ ಪಯಣದಿಂದ ಕಲಿತ ಪಾಠಗಳು, ಇಂದು ಅವರಿಗೆ ದಂಡಿಯಾಗಿ ಸಹಾಯಕ್ಕೆ ಬರುತ್ತಿವೆ.
"ಅಂದು ಕಂಡುಕೊಂಡ ಹೊಂದಾಣಿಕೆಗಳು ಮತ್ತು ಅಚ್ಚರಿಯ ಅರಿವು ಇಂದಿಗೂ ನನಗೆ ಸಹಾಯ ಮಾಡುತ್ತಿವೆ. ನಾವೆಲ್ಲ ನಮ್ಮ ವಿಚಾರಗಳು ಮತ್ತು ಇತಿಮಿತಿಗಳ ಚೌಕಟ್ಟಿನಲ್ಲಿಯೇ ಬಂದಿಯಾಗಿದ್ದೇವೆ ಎಂಬುದನ್ನು ನಾನು ಕಂಡುಕೊಂಡಿದ್ದೇನೆ. ನೀವು ಯಾವಾಗ ಸಂಪೂರ್ಣ ಶರಣಾಗತರಾಗಿ ಅಗಾಧತೆಯ ಎದುರಿಗೆ ನಿಲ್ಲುತ್ತೀರೋ, ಆಗ ಈ ಸಮಸ್ತ ವಿಶ್ವದ ಮುಂದೆ ಅತ್ಯಂತ ಕುಬ್ಜರಾಗಿ ಕಾಣಿಸುತ್ತೀರಿ. ಇದನ್ನು ನೀವು ಅರಿತುಕೊಂಡಾಗ ನಿಮ್ಮಲ್ಲಿನ ಅಹಂಕಾರ ತಾನಾಗಿಯೇ ಕರಗಿಹೋಗುತ್ತದೆ ಮತ್ತು ನಿಜವಾದ ಜೀವನ ಆರಂಭವಾಗುತ್ತದೆ. ಇದನ್ನು ಕಂಡುಕೊಂಡಾಗಲೇ ಎಲ್ಲ ಬದಲಾವಣೆಯಾಯಿತು. ಎರಡು ವರ್ಷಗಳ ನಂತರ ಅತ್ಯಂತ ಸ್ಪಷ್ಟತೆಯೊಂದಿಗೆ ಮತ್ತು ಮಾರ್ಗದರ್ಶಕ ಶಕ್ತಿಯೊಂದಿಗೆ ಮನೆಗೆ ಮರಳಿದೆ" ಎಂದು ಅವರು ಕಂಡುಕೊಂಡ ದಿಗ್ದರ್ಶನದ ಪರಿಚಯ ಮಾಡುತ್ತಾರೆ.
ಅವರು ತನ್ನತನ ಕಂಡುಕೊಳ್ಳುವ ಪಯಣದಿಂದ, ನಾವು ನಮ್ಮ ವಿಚಾರಧಾರೆಗಳ ಮತ್ತು ಇತಿಮಿತಿಗಳ ಆಳಾಗಿರುತ್ತೇವೆ ಎಂಬುದನ್ನು ಅರಿತರು. ಆದರೆ ಅದೆಲ್ಲವನ್ನು ಮೀರಿ ಮುನ್ನುಗ್ಗಿದಾಗ ಅದ್ಭುತ ಸಾಧನೆಯನ್ನು ಮಾಡುವುದರಿಂದ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅದನ್ನೇ ಮಾಡಿದ್ದು ಮತ್ತು ಸಾಧಿಸಿದ್ದು. ಹ್ಯೂಮನ್ಸ್ ಆಫ್ ಬಾಂಬೆಗೆ ನೀಡಿದ, ಐದು ಭಾಗಗಳಲ್ಲಿನ ಸಂದರ್ಶನದಲ್ಲಿ, ಅವರು ಜೀವನದಲ್ಲಿ ನಡೆಸಿದ ಹೋರಾಟ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸ್ಥಿತಪ್ರಜ್ಞತೆಯನ್ನು ಕಳೆದುಕೊಳ್ಳಬಾರದ ಗುಣಗಳ ಬಗ್ಗೆ ಸವಿವರವಾಗಿ ಮಾತಾಡಿದ್ದಾರೆ. 8 ವರ್ಷದವನಿದ್ದಾಗ ಗುಜರಾತ್ ಪ್ರವಾಹ ಪೀಡಿತರಿಗೆ ಸಹಾಯ ಮಾಡಿದಾಗಿನಿಂದ 17 ವರ್ಷದವನಿದ್ದಾಗ ಸ್ವಯಂ ಸಾಕ್ಷಾತ್ಕಾರದ ಹುಡುಕಾಟದಲ್ಲಿ ಪಯಣಿಸುವವರೆಗೆ ಅವರು ಸಾರ್ಥಕ ಜೀವನವನ್ನು ಕಳೆದಿದ್ದಾರೆ.
ಮೋದಿಯವರು ಕಾಡಿಗೆ ಹೋಗುತ್ತಿದ್ದುದಾದರೂ ಏತಕ್ಕೆ?