ಮೋದಿ 2.0 ಸಂಪುಟದಲ್ಲಿ ಕರ್ನಾಟಕದಿಂದ ಯಾರಿಗೆ ಅದೃಷ್ಟ?
Recommended Video
ಲೋಕಸಭೆ ಚುನಾವಣೆಯಲ್ಲಿ ಇಷ್ಟು ದೊಡ್ಡ ಜನಾದೇಶ ಸಿಕ್ಕಿರುವುದು ನಮಗೆ ಸಂತೋಷ ತಂದಿದೆ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಊಹಾಪೋಹಗಳನ್ನು ನಂಬಬೇಡಿ, ಎನ್ಡಿಎ ಮಿತ್ರಪಕ್ಷಗಳ ಎಲ್ಲಾ ಸಂಸದರಿಗೂ ಪ್ರಾತಿನಿಧ್ಯ ನೀಡಲಾಗುವುದು, ಎಲ್ಲಾ ಪಕ್ಷದ ಮುಖಂಡರ ಜೊತೆ ಮಾತುಕತೆ ನಡೆಸಿ, ಸಚಿವ ಸಂಪುಟ ಅಂತಿಮಗೊಳಿಸಲಾಗುವುದು ಎಂದು ಮೋದಿ ಹೇಳಿದ್ದಾರೆ.
2019ರ ಮೋದಿ ಸರ್ಕಾರದ ಕೇಂದ್ರ ಸಚಿವ ಸಂಪುಟ ಸದಸ್ಯರು
ಆದರೆ, ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಿಂದ 25 ಮಂದಿ ಸಂಸದರು ಆಯ್ಕೆಯಾಗಿರುವುದರಿಂದ ಸಹಜವಾಗಿ ಮೋದಿ ಸಚಿವ ಸಂಪುಟದಲ್ಲಿ ಸಿಂಹಪಾಲು ಕೇಳುವ ಸಾಧ್ಯತೆಯಿದೆ. ದಕ್ಷಿಣ ಭಾರತ ರಾಜ್ಯಗಳಲ್ಲಿ ಕರ್ನಾಟಕದಲ್ಲಿಯೇ ಬಿಜೆಪಿ ಉತ್ತಮ ಸಾಧನೆ ತೋರಿದೆ. ಹೀಗಾಗಿ, ಕನಿಷ್ಠ 2-3 ಕ್ಯಾಬಿನೆಟ್, ಒಂದೆರಡು ರಾಜ್ಯ ಸಚಿವ ಖಾತೆಗಳ ನಿರೀಕ್ಷೆ ಹುಟ್ಟಿದೆ.
ಮೋದಿಯಿಂದ ಅಚ್ಚರಿಯ ಆಯ್ಕೆ, ರಾಜಸ್ಥಾನದ ಸಂಸದನಿಗೆ ಚಾನ್ಸ್
ಮೇ 30ರಂದು ರಾಷ್ಟ್ರಪತಿ ಭವನದ ರೈಸಿನಾ ಹಿಲ್ಸ್ ನಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಾರಿ 6 ಸಾವಿರಕ್ಕೂ ಹೆಚ್ಚು ಆಹ್ವಾನಿತ ಅತಿಥಿಗಳು ಭಾಗವಹಿಸಲಿದ್ದಾರೆ.
ಹರಿದಾಡುತ್ತಿರುವ
ಸಚಿವ
ಸ್ಥಾನ
ಪಟ್ಟಿಯನ್ನು
ನಂಬಬೇಡಿ:
ಮೋದಿ
'ನವ ಭಾರತ' ನಿರ್ಮಾಣಕ್ಕೆ ಸಿದ್ಧವಾಗಿರುವ ಮೋದಿ ಅವರು ತಮ್ಮ ಹೊಸ ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವ ಸುಳಿವು ನೀಡಿದ್ದಾರೆ.
ಮೋದಿ ಸರ್ಕಾರ್ 2ನಲ್ಲಿ ಶಿವಸೇನೆಯ ಅರವಿಂದ್ ಗೆ ಸ್ಥಾನ
ಜೊತೆಗೆ ನಿತೀಶ್ ಕುಮಾರ್ ಅವರ ಜೆಡಿಯು, ತಮಿಳುನಾಡಿನ ಎಐಎಡಿಎಂಕೆ ಸದಸ್ಯರಿಗೆ ಸಚಿವ ಸ್ಥಾನ ಮೀಸಲಾಗಿರುತ್ತದೆ. ಪಶ್ಚಿಮ ಬಂಗಾಳದಲ್ಲಿ ಉತ್ತಮ ಪ್ರದರ್ಶನ ನೀಡಿರುವುದರಿಂದ ಹಾಗೂ 2021ರ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಬೆಂಗಾಲದ ಸಂಸದರಿಗೂ ಮಣೆ ಹಾಕುವ ಸಾಧ್ಯತೆಯಿದೆ.
ಪ್ರತಾಪ್ ಸಿಂಹ -ಕೊಡಗು -ಮೈಸೂರು
ಕೊಡಗು-ಮೈಸೂರು ಕ್ಷೇತ್ರದಿಂದ ಸಂಸದರಾಗಿ ಎರಡನೇ ಬಾರಿಗೆ ಆಯ್ಕೆ. ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಮೋದಿ ಆಶಯಕ್ಕೆ ಅನುಗುಣವಾಗಿ ಯುವಕೋಟಾದಲ್ಲಿ ಪ್ರತಾಪ್ ಸಿಂಹ(42 ವರ್ಷ) ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಒಕ್ಕಲಿಗ ಸಮುದಾಯಕ್ಕೆ ಸೇರಿರುವುದರಿಂದ ಆ ಕೋಟಾವನ್ನು ತುಂಬಿದಂತಾಗುತ್ತದೆ. ಮೈಸೂರಿಗೆ ವಿವಿಧ ರೈಲ್ವೆ ಯೋಜನೆ, ಕಾಮಗಾರಿಗಳನ್ನು ತರುವಲ್ಲಿ ಪ್ರತಾಪ್ ಯಶಸ್ವಿಯಾಗಿದ್ದಾರೆ. ಪತ್ರಕರ್ತರಾಗಿ ವೃತ್ತಿ ಬದುಕು ಅರಂಭಿದರು. ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿದ್ದು, ಜನಾನುರಾಗಿಯಾಗಿದ್ದಾರೆ ಎಂದು ಅವರ ಬೆಂಬಲಿಗರ ವಾದ.
ಕೊಡಗಿನ ಜಲ ಪ್ರವಾಹ, ಕಸ್ತೂರಿ ರಂಗನ್ ವರದಿ ಅನುಷ್ಠಾನ, ಕಾಡು ಅಶ್ರಯಿಸಿರುವ ಸಮುದಾಯದ ಪುನರ್ವಸತಿ, ಪ್ರವಾಸೋದ್ಯಮ ಅಭಿವೃದ್ಧಿ, ವಿಮಾನ ನಿಲ್ದಾಣ ಕಾಮಗಾರಿ ಹೀಗೆ ಗಮನ ಹರಿಸಬೇಕಾದ ಸಾಕಷ್ಟು ಕಾರ್ಯಗಳಿವೆ.ಶೋಭಾ ಕರಂದ್ಲಾಜೆ - ಉಡುಪಿ-ಚಿಕ್ಕಮಗಳೂರು
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಸಂಸದರಾಗಿದ್ದಾರೆ. ಮಹಿಳಾ ಕೋಟಾದಡಿ ಸಚಿವ ಸ್ಥಾನದ ಆಕಾಂಕ್ಷಿ. ಒಕ್ಕಲಿಗ ಸಮುದಾಯದವರಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಶಿಫಾರಸ್ಸು ಶ್ರೀರಕ್ಷೆಯಾಗಿ ಸಚಿವ ಸ್ಥಾನ ದೊರಕಿಸಿಕೊಡಬಹುದು. ಸಾಮಾನ್ಯ ಕಾರ್ಯಕರ್ತಳಾಗಿ, ಹೋರಾಟಗಾರ್ತಿಯಾಗಿ ಬಿಜೆಪಿ- ಆರೆಸ್ಸೆಸ್ ನ ಬೆಂಬಲದಿಂದ ರಾಜಕೀಯ ಬದುಕು ಕಟ್ಟಿಕೊಂಡಿರುವ ಗಟ್ಟಿಗಿತ್ತಿ. ಪಶ್ಚಿಮಘಟ್ಟ ಉಳಿಸಲು ಹೋರಾಟ ನಡೆಸಿದ್ದ ಶೋಭಾ ನಂತರ ನೇತ್ರಾವತಿ ತಿರುವು ಯೋಜನೆ, ಎತ್ತಿನಹೊಳೆ ಯೋಜನೆ ಬಗ್ಗೆ ಮೌನವಹಿಸಿದರು. ಉಡುಪಿ -ಚಿಕ್ಕಮಗಳೂರು ಕ್ಷೇತ್ರದ ಕಾಫಿ ಬೆಳೆಗಾರರ ಸಮಸ್ಯೆ, ಕಾಡು ಪ್ರಾಣಿಗಳು ಕಾಡಂಚಿನ ಗ್ರಾಮಸ್ಥರ ಸಮಸ್ಯೆಗೆ ಪರಿಹಾರ, ಪ್ರವಾಸೋದ್ಯಮ ಅಭಿವೃದ್ಧಿ, ರೈಲ್ವೆ ಯೋಜನೆ ಹೀಗೆ ಅನೇಕ ವಿಷಯಗಳತ್ತ ಗಮನ ಹರಿಸುವ ಭರವಸೆ ನಿರೀಕ್ಷೆಗಳಿವೆ.
ಸುರೇಶ್ ಅಂಗಡಿ-ಬೆಳಗಾವಿ
ಬೆಳಗಾವಿ ಕ್ಷೇತ್ರದ 63 ವರ್ಷ ವಯಸ್ಸಿನ ಸುರೇಶ್ ಅಂಗಡಿ ಅವರು ಮೂರನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ಈ ಬಾರಿ ಕಾಂಗ್ರೆಸ್ಸಿನ ಅಭ್ಯರ್ಥಿ ಸಾಧುನ್ನವರ್ ವಿರುದ್ಧ ಉತ್ತಮ ಅಂತರದಿಂದ ಗೆಲುವು ಸಾಧಿಸಿದರು. ಲಿಂಗಾಯತ ಕೋಟಾದಡಿಯಲ್ಲಿ ಸುರೇಶ್ ಅಂಗಡಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ. ಬಿಎಸ್ ಯಡಿಯೂರಪ್ಪ ಅವರ ಶಿಫಾರಸ್ಸು ಪಟ್ಟಿಯಲ್ಲಿ ಇವರ ಹೆಸರು ಇರುವುದು ನಿರೀಕ್ಷಿತ. 3 ಬಾರಿ ಗೆಲುವು ಸಾಧಿಸಿರುವ ಅಂಗಡಿ ಅವರಿಗೆ ಸ್ವಕ್ಷೇತ್ರದಲ್ಲಿ ಗಡಿ ಸಮಸ್ಯೆ, ನಗರಾಭಿವೃದ್ಧಿ, ಪ್ರವಾಸೋದ್ಯಮ, ವಿಮಾನ ಯಾನ, ನದಿ ನೀರು ಹಂಚಿಕೆ ಸಮಸ್ಯೆಗಳತ್ತ ಗಮನ ಹರಿಸಬೇಕಿದೆ.
ಶಿವಕುಮಾರ ಉದಾಸಿ -ಹಾವೇರಿ
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್ ಪಾಟೀಲ್ ಸೋಲಿಸಿ, ಸಂಸತ್ ಗೆ ಆಯ್ಕೆಯಾಗಿರುವ ಶಿವಕುಮಾರ ಉದಾಸಿ ಸತತ 3 ಬಾರಿ ಸಂಸದರಾಗಿದ್ದಾರೆ. ಲಿಂಗಾಯತ ಕೋಟಾದಲ್ಲಿ ಸಚಿವ ಸ್ಥಾನ ಬಯಸಿದ್ದಾರೆ. ಬಿಇ ಪದವೀಧರರಾಗಿದ್ದು, ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆ ಬಲ್ಲವರು. 1.4 ಲಕ್ಷಕ್ಕೂ ಅಧಿಕ ಅಂತರದಿಂದ ಜಯದಾಖಲಿಸಿದ್ದಾರೆ.
ಪಿಸಿ ಮೋಹನ್ -ಬೆಂಗ್ಳೂರು ಸೆಂಟ್ರಲ್
ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ವಿರುದ್ಧ 70,968 ಅಂತರದಿಂದ ಪಿಸಿ ಮೋಹನ್ ಜಯದಾಖಲಿಸಿದ್ದಾರೆ. ಈ ಗೆಲುವಿನ ಮೂಲಕ ಹ್ಯಾಟ್ರಿಕ್ ಬಾರಿಸಿರುವ ಪಿಸಿ ಮೋಹನ್ ಅವರು ಹಿಂದುಳಿದ ವರ್ಗಗಳ ಕೋಟಾದಡಿಯಲ್ಲಿ ಸಚಿವ ಸ್ಥಾನ ಬಯಸಿದ್ದಾರೆ. ಸಂಸದರಾಗಿ ಹೆಚ್ಚು ಪ್ರಶ್ನೆ ಕೇಳುವ ಮೂಲಕ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿದ್ದಾರೆ. ಹೈಕಮಾಂಡ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು, ಈ ಬಾರಿ ಸಚಿವರಾಗುವ ಸಾಧ್ಯತೆ ಹೆಚ್ಚಿದೆ.
ಅನಂತ್ಕುಮಾರ್ ಹೆಗಡೆ-ಉತ್ತರ ಕನ್ನಡ
ಮೋದಿ 1.0 ಸರ್ಕಾರದಲ್ಲಿ ಕೌಶಲಾಭಿವೃದ್ಧಿ ರಾಜ್ಯ ಖಾತೆ ಸಚಿವರಾಗಿದ್ದ ಅನಂತ್ಕುಮಾರ್ ಹೆಗಡೆ ಅವರು ಈ ಬಾರಿ ಉತ್ತರ ಕನ್ನಡ ಕ್ಷೇತ್ರದಿಂದ ನಾಲ್ಕು ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ಸಿನ ಆನಂದ್ ಆಸ್ನೋಟಿಕರ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಹಿಂದುಪರ ಉಗ್ರ ಭಾಷಣದ ಮೂಲಕವೇ ಹೆಸರುವಾಸಿಯಾಗಿ ಚರ್ಚಾಸ್ಪದವಾಗಿರುವ ಹೆಗಡೆ ಅವರು 6ನೇ ಬಾರಿ ಸಂಸದರಾಗಿದ್ದು, ಬ್ರಾಹ್ಮಣ ಕೋಟಾದಡಿಯಲ್ಲಿ ಸಚಿವ ಸ್ಥಾನ ಬಯಸಿದ್ದಾರೆ.
ಶ್ರೀನಿವಾಸ ಪ್ರಸಾದ್- ಚಾಮರಾಜನಗರ
ಚಾಮರಾಜನಗರ (ಮೀಸಲು) ಕ್ಷೇತ್ರದಿಂದ ಕಾಂಗ್ರೆಸ್ ಪ್ರಬಲ ಸ್ಪರ್ಧಿ ಆರ್.ಧ್ರುವನಾರಾಯಣ್ ವಿರುದ್ಧ 1817 ಮತಗಳ ಅಂತರದಿಂದ ಗೆಲುವು ಸಾಧಿಸಿ, ನಂಜನಗೂಡು ಉಪ ಚುನಾವಣೆ ಸೇಡು ತೀರಿಸಿಕೊಂಡಿದ್ದಾರೆ. ಈ ಗೆಲುವಿನ ಮೂಲಕ 6ನೇ ಬಾರಿ ಸಂಸದರಾಗಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಪ್ರಸಾದ್ ಅವರು ನಂತರ ಕಾಂಗ್ರೆಸ್ ಸೇರಿದ್ದರು. ದಲಿತ ಸಮುದಾಯದ ನಾಯಕರಾಗಿರುವ ಪ್ರಸಾದ್ ಅವರು ದಲಿತ ಕೋಟಾದಡಿ ಸಚಿವ ಸ್ಥಾನ ಗಳಿಸಲು ಬಯಸಿದ್ದಾರೆ.ನಳಿನ್ ಕುಮಾರ್ ಕಟೀಲು-ದಕ್ಷಿಣ ಕನ್ನಡ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಗೆದ್ದಿರುವ ನಳೀನ್ ಕುಮಾರ್ ಕಟೀಲು ಅವರು ದಲಿತ ಕೋಟಾದಡಿಯಲ್ಲಿ ಸಚಿವ ಸ್ಥಾನ ಬಯಸಿದ್ದಾರೆ. 2.7 ಲಕ್ಷಕ್ಕೂ ಅಧಿಕ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿರುದ್ಧ ಜಯ ಗಳಿಸಿದ್ದಾರೆ. 52 ವರ್ಷ ವಯಸ್ಸಿನ ನಳಿನ್ ಅವರು ಪ್ರಬಲ ಹಿಂದುತ್ವವಾದಿ, ಆರೆಸ್ಸೆಸ್ ನಿಷ್ಠಾವಂತರಾಗಿದ್ದಾರೆ.
ಉಮೇಶ್ ಜಾಧವ್ -ಕಲಬುರಗಿ
ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಾ. ಉಮೇಶ್ ಜಾಧವ್ ಅವರು 95 452 ಮತಗಳ ಅಂತರದಿಂದ ಸೋಲಿಸಿ ದೈತ್ಯ ಸಂಹಾರಿ ಎನಿಸಿಕೊಂಡರು. ಚಿಂಚೋಳಿಯಿಂದ ಮೂರು ಬಾರಿ ಶಾಸಕರಾಗಿದ್ದ ಉಮೇಶ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಲ್ಲದೆ ಉಪ ಚುನಾವಣೆಯಲ್ಲಿ ತಮ್ಮ ಪುತ್ರ ಅವಿನಾಶ್ ರನ್ನು ನಿಲ್ಲಿಸಿ ಗೆಲ್ಲುವಂತೆ ಮಾಡಿದ್ದಾರೆ. ಲಂಬಾಣಿ ಸಮುದಾಯ, ಎಸ್ ಸಿ, ದಲಿತ ಕೋಟಾದಡಿಯಲ್ಲಿ ಸಚಿವ ಸ್ಥಾನ ಸಿಗಬಹುದು.
ಪ್ರಹ್ಲಾದ ಜೋಶಿ-ಧಾರವಾಡ
ನಾಲ್ಕು ಬಾರಿ ಸಂಸದರಾಗಿರುವ ಪ್ರಲ್ಹಾದ ಜೋಶಿ ಅವರು ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಉತ್ತಮ ಸಂಸದೀಯ ಪಟು ಎನಿಸಿಕೊಂಡವರು. ಉತ್ತಮ ಸಂಘಟಕರಾಗಿದ್ದು, ಬ್ರಾಹ್ಮಣ ಕೋಟಾದಡಿಯಲ್ಲಿ ಸಚಿವ ಸ್ಥಾನ ಬಯಸಿದ್ದಾರೆ. ಅನಂತ್ ಕುಮಾರ್ ಅವರ ಅಕಾಲಿಕ ನಿಧನದಿಂದಾಗಿ ಆ ಸ್ಥಾನ ತುಂಬಲು ಜೋಶಿಯನ್ನು ಆಯ್ಕೆ ಮಾಡಬಹುದು. ಇನ್ನು ಅನಂತಕುಮಾರ್ ಹೆಗಡೆ ಸಚಿವ ಸ್ಥಾನ ಸಾಧ್ಯತೆ ಕಡಿಮೆ ಇರುವುದರಿಂದ ಬ್ರಾಹ್ಮಣ ಕೋಟಾದಡಿಯಲ್ಲಿ ಜೋಶಿ ಮುಂಚೂಣಿಯಲ್ಲಿದ್ದಾರೆ. ಈ ಬಾರಿ ಕಾಂಗ್ರೆಸ್ಸಿನ ವಿನಯ್ ಕುಲಕರ್ಣಿ ವಿರುದ್ಧ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.
ಜಿಎಸ್ ಬಸವರಾಜು -ತುಮಕೂರು
ಭಾರಿ ಕುತೂಹಲ ಕೆರಳಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ವಿರುದ್ಧ ಜಿಎಸ್ ಬಸವರಾಜು ಅವರು 13, 339ಮತಗಳ ಅಂತರದಿಂದ ಗೆಲುವು ದಾಖಲಿಸಿ ದೇಶದ ಗಮನ ಸೆಳೆದಿದ್ದಾರೆ. 5ಬಾರಿ ಸಂಸದರಾಗಿರುವ ಬಸವರಾಜು ಯಡಿಯೂರಪ್ಪ ಅವರ ಆಪ್ತರಾಗಿದ್ದು, ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಲಿಂಗಾಯತ ಕೋಟಾದಡಿಯಲ್ಲಿ ಅಂಗಡಿ, ಉದಾಸಿ ಜತೆ ಪೈಪೋಟಿಯಲ್ಲಿದ್ದಾರೆ.