ಸ್ಫೋಟವಾಯಿತು ಶರವಣ ಅಸಮಾಧಾನ, ಜೆಡಿಎಸ್ ನಲ್ಲಿ ಭಾರೀ ಕಂಪನ
Recommended Video
ಬೆಂಗಳೂರು, ಜೂನ್ 5: "ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು ಅನ್ನೋದು ನನ್ನ ಪ್ರಾರ್ಥನೆ. ಆ ದೇವರಲ್ಲಿ ನಾನು ಕೇಳಿಕೊಂಡ ವರ. ಅದು ಈಡೇರಿತು ಅನ್ನೋ ಕಾರಣಕ್ಕೆ ಶಿರಡಿಗೆ ಹೋಗಿ ಸಾಯಿಬಾಬರಲ್ಲಿ ಪ್ರಾರ್ಥನೆ ಸಲ್ಲಿಸಿ ಬಂದೆ. ನಿನ್ನೆ ತಿರುಪತಿ ತಿಮಪ್ಪನಿಗೆ ಪ್ರಾರ್ಥನೆ ಸಲ್ಲಿಸಿದೆ" ಎಂದರು ಜೆಡಿಎಸ್ ನ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ.
ಪಕ್ಷದೊಳಗಿನ ಈಚೆಗಿನ ಬೆಳವಣಿಗೆ ಬಗ್ಗೆ ಅಸಮಾಧಾನಗೊಂಡಿದ್ದಾರೆ ಶರವಣ ಎಂಬ ಮಾಹಿತಿ ಬಗ್ಗೆ ಪ್ರಶ್ನೆ ಕೇಳಲು ಒನ್ಇಂಡಿಯಾ ಕನ್ನಡದಿಂದ ಕರೆ ಮಾಡಿ ವಿಚಾರಿಸಿದಾಗ, ಅವರು ಹೇಳಿದ ಮೊದಲ ಮಾತುಗಳಿವು. ಅಂದಹಾಗೆ ಶರವಣ ಅವರ ಅಸಮಾಧಾನಕ್ಕೆ ಕಾರಣ ಏನು? ಏಕೆ ಬೇಸರಗೊಂಡಿದ್ದಾರೆ?
ದೇವೇಗೌಡರ ಮಾನಸ ಪುತ್ರ ಶರವಣಗೆ ಒಲಿಯುತ್ತಾ ಸಚಿವ ಸ್ಥಾನ?
ಈಚೆಗೆ ನಡೆದ ಜೆಡಿಎಸ್ ನ ಶಾಸಕಾಂಗ ಸಭೆಯ ಎರಡು ಸಂದರ್ಭದಲ್ಲೂ ಪಕ್ಷದ ಯಾವ ವಿಧಾನಪರಿಷತ್ ಸದಸ್ಯರಿಗೂ ಆಹ್ವಾನ ನೀಡಿಲ್ಲ. ಇದರಿಂದ ಬೇಸರ ಆಗಿದೆ. ಇನ್ನು ಈ ಸಲ ಮೈತ್ರಿ ಸರಕಾರದ ರಚನೆಗೂ ಮುನ್ನ ಪಕ್ಷದ ಶಾಸಕರನ್ನು ರೆಸಾರ್ಟ್ ನಲ್ಲಿ ಕಾದುಕೊಂಡಿರುವವರು ನಾವು. ನಮ್ಮನ್ನೇ ನಿರ್ಲಕ್ಷ್ಯ ಮಾಡಿದರೆ ಬೇಸರ ಸಹಜ ಅಲ್ಲವೆ?
ಜೆಡಿಎಸ್ ನ ಬೆಳವಣಿಗೆಯಿಂದ ಬೇಸತ್ತ ವೈಎಸ್ ವಿ ದತ್ತ
ಅದು ಯಾವುದೇ ವೇದಿಕೆ ಇರಲಿ, ಪಕ್ಷವನ್ನು ಸಮರ್ಥನೆ ಮಾಡಿಕೊಂಡಿದ್ದೇನೆ. ಜೆಡಿಎಸ್ ವಕ್ತಾರನಾಗಿ ಪರಿಣಾಮಕಾರಿ ಕೆಲಸ ಮಾಡಿದ್ದೇನೆ. ಅಂಥದ್ದರಲ್ಲಿ ಪಕ್ಷಕ್ಕೆ ಅಧಿಕಾರ ಸಿಕ್ಕಾಗ ಜವಾಬ್ದಾರಿ ಬಯಸುವುದರಲ್ಲಿ ತಪ್ಪೇನು ಎಂದು ಪ್ರಶ್ನೆ ಎಸೆದರು ಶರವಣ.
ವಿಧಾನಪರಿಷತ್ ಸದಸ್ಯರಿಗೆ ಆಹ್ವಾನ ನೀಡಿಲ್ಲ
"ಯಾವುದೇ ಸಭೆ- ಸಮಾರಂಭದಲ್ಲಿದ್ದರೂ, ಯಾರು ಆ ವಿಚಾರದ ಬಗ್ಗೆ ನಂಬಿಕೆ ಇಟ್ಟರೂ ಇಡದಿದ್ದರೂ ನಾನು ಮಾತ್ರ ಭವಿಷ್ಯದ ಮುಖ್ಯಮಂತ್ರಿ ಕುಮಾರಣ್ಣ ಅಂತಲೇ ಕರೆಯುತ್ತಿದ್ದೆ. ಆದರೆ ಈಚೆಗೆ ನಡೆದ ಶಾಸಕಾಂಗ ಸಭೆಯಲ್ಲಿ ಜೆಡಿಎಸ್ ನಿಂದ ಆಯ್ಕೆ ಆಗಿರುವ ಯಾವ ವಿಧಾನಪರಿಷತ್ ಸದಸ್ಯರಿಗೂ ಆಹ್ವಾನ ನೀಡಿಲ್ಲ. ಆ ಬಗ್ಗೆ ಅಸಮಾಧಾನ ಇದೆ" ಎಂದು ಹೇಳಿದರು.
ಶರವಣಗೆ ಸಚಿವ ಸ್ಥಾನಕ್ಕಾಗಿ ಆರ್ಯ ವೈಶ್ಯ ಸಮುದಾಯದ ಆಗ್ರಹ
ನನ್ನನ್ನು ಕೈ ಬಿಡಲ್ಲ ಎಂದು ದೇವೇಗೌಡರು ಮಾತು
"ಕುಮಾರಣ್ಣ ಮುಖ್ಯಮಂತ್ರಿ ಆದರೆ ನನ್ನನ್ನು ಕೈ ಬಿಡಲ್ಲ. ಒಳ್ಳೆ ಹುದ್ದೆ ಕೊಡ್ತೀನಿ ಎಂದು ದೇವೇಗೌಡರು ಮಾತು ಕೊಟ್ಟಿದ್ದರು. ದಶಕಗಳ ಕಾಲದಿಂದ ಅವರ ಜತೆಯಲ್ಲಿರುವ ನಾನು ಪಕ್ಷಕ್ಕಾಗಿ ದುಡಿದಿದ್ದೀನಿ. ಊರೂರು ತಿರುಗಿ ಪಕ್ಷ ಸಂಘಟನೆ ಮಾಡಿದ್ದೀನಿ. ನಾನು ಪ್ರತಿನಿಧಿಸುವ ಆರ್ಯವೈಶ್ಯ ಸಮಾಜಕ್ಕೆ ಸೇವೆ ಮಾಡಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದೀನಿ. ನನ್ನನ್ನು ಹೊರತುಪಡಿಸಿ ನಮ್ಮ ಸಮಾಜದಿಂದ ಮೂರೂ ಪ್ರಮುಖ ಪಕ್ಷಗಳಲ್ಲಿ ಜನಪ್ರತಿನಿಧಿಗಳಿಲ್ಲ" ಎಂದರು.
ಟಿ.ಎ.ಶರವಣ ಸಂದರ್ಶನ : ಎಚ್ಡಿಕೆ ಸಿಎಂ ಆಗುವುದನ್ನು ಯಾರೂ ತಪ್ಪಿಸಲಾರರು
ನಮ್ಮ ಸೇವೆಗೆ ಬೆಲೆ ಇಲ್ಲವಾ?
"ಈಗ ಅಧಿಕಾರದಲ್ಲಿ ಇರುವುದು ಮೈತ್ರಿ ಸರಕಾರ ಅನ್ನೋದು ನಿಜ. ಹಾಗಂತ ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ಕೊಡಲೇಬಾರದು ಅಂತಿದೆಯಾ? ಈಗಿರುವುದು ಕಷ್ಟದ ಸನ್ನಿವೇಶ ಎಂಬುದು ನನಗೆ ತಿಳಿದಿದೆ. ಆದರೆ ವಿಧಾನಪರಿಷತ್ ಸದಸ್ಯರಾಗಿ ಪಕ್ಷಕ್ಕೆ ನಾವು ಸಲ್ಲಿಸಿದ ಸೇವೆಗೆ ಬೆಲೆ ಇಲ್ಲವಾ? ದೇವೇಗೌಡರು ನನ್ನನ್ನು ಈಗಲೂ ಕೈ ಬಿಡಲ್ಲ ಎಂಬ ನಂಬಿಕೆಯಿಂದಲೇ ಕಾಯುತ್ತಾ ಇದ್ದೇನೆ" ಎಂದು ಹೇಳಿದರು.
ನನ್ನ ಅಪ್ಪ-ಅಮ್ಮನ ಹೆಸರು ಇಡಲಿಲ್ಲ, ಇಟ್ಟಿದ್ದು ದೇವೇಗೌಡರ ಹೆಸರು
"ನನಗೆ ದೇವೇಗೌಡರು, ಕುಮಾರಣ್ಣ ಅಂದರೆ ಅದೆಷ್ಟು ಪ್ರೀತಿ ಹಾಗೂ ವಿಶ್ವಾಸ ಎಂಬುದು ಜಗಜ್ಜಾಹೀರು. ಹನುಮಂತನಗರ ಹತ್ತಿರ ನಮ್ಮ ಅಪ್ಪಾಜಿ ಕ್ಯಾಂಟೀನ್ ಅಂತ ಮಾಡಿ. ಅದಕ್ಕೆ ನನ್ನ ಅಪ್ಪ- ಅಮ್ಮನ ಹೆಸರನ್ನು ಇಡಲಿಲ್ಲ. ಇಟ್ಟಿದ್ದು ದೇವೇಗೌಡರ ಹೆಸರು. ಇಂದಿರಾ ಕ್ಯಾಂಟೀನ್ ಶುರು ಆಗುವುದಕ್ಕೆ ಮುಂಚೆಯೇ ಅದು ಶುರು ಆಗುವಂತೆ ನೋಡಿಕೊಂಡೆ. ದೇವೇಗೌಡರ ಇಷ್ಟದಂತೆ ಅಲ್ಲಿ ಕಡಿಮೆ ಬೆಲೆಗೆ ಮುದ್ದೆ ಊಟ ಸಿಗುವಂತೆ ನೋಡಿಕೊಂಡಿದ್ದೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಈಚಿನ ಬೆಳವಣಿಗೆಯಿಂದ ಅಸಮಾಧಾನ ಆಗಿರುವುದು ನಿಜ" ಎಂದು ಹೇಳಿದರು.
ಒಂದು ವೇಳೆ ಸಚಿವ ಸ್ಥಾನ ಸಿಗದಿದ್ದರೆ..?
ಒಂದು ವೇಳೆ ಮಂತ್ರಿ ಸ್ಥಾನ ಸಿಗದಿದ್ದರೆ ಮುಂದಿನ ನಡೆ ಏನು ಎಂದು ಶರವಣ ಅವರನ್ನು ಕೇಳಿದ್ದಕ್ಕೆ, "ಈ ಹಿಂದೆ ಕೂಡ ಕುಮಾರಣ್ಣ ಮುಖ್ಯಮಂತ್ರಿ ಆಗದಿದ್ದರೆ ಎಂದು ಮಾಧ್ಯಮಗಳಲ್ಲಿ ಪ್ರಶ್ನೆ ಕೇಳಿದ್ದರು. ಆಗೆಲ್ಲ, ಈ ಸಲ ಕುಮಾರಣ್ಣ ಮುಖ್ಯಮಂತ್ರಿ ಆಗೋದು ದೈವ ಸಂಕಲ್ಪ ಅಂತ ಹೇಳಿದ್ದೆ. ಈಗಲೂ ಅಷ್ಟೇ. ದೇವೇಗೌಡರು, ಕುಮಾರಣ್ಣ ನನ್ನನ್ನು ಕೈ ಬಿಡಲ್ಲ" ಎಂದು ವಿಶ್ವಾಸ ವ್ಯಕ್ತಪಡಿಸಿದರು..