ಇಷ್ಟಕ್ಕೂ ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಾರೆ ಗೊತ್ತಾ?
ನಟ-ನಟಿಯರು, ವಿದ್ಯಾರ್ಥಿಗಳು, ಅಧಿಕಾರಿಗಳು, ಉದ್ಯೋಗಿಗಳು, ರೈತರು ಹೀಗೆ ಒಬ್ಬರಲ್ಲ ಒಬ್ಬರು ಒಂದೊಂದು ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ಬಹುತೇಕ ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಳ್ಳುವ ತನಕವೂ ಅವರು ಅಂತಹ ಮನಸ್ಥಿತಿಗೊಳಗಾಗಿದ್ದಾರೆ ಎಂಬುದು ಗೊತ್ತೇ ಆಗುವುದಿಲ್ಲ. ಇಷ್ಟಕ್ಕೂ ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಾರೆ ಎಂಬುದು ಬಹುತೇಕರ ಪ್ರಶ್ನೆಯಾಗಿದೆ.
ನಮ್ಮ ಬದುಕನ್ನು ಸಂಸ್ಕಾರಗಳು ಸುಂದರಗೊಳಿಸುತ್ತವೆ. ಸಂಸ್ಕಾರವನ್ನು ಕಲಿಯದೆ ಹೋದರೆ ಅದರಿಂದ ಅನಾನುಕೂಲಗಳೇ ಜಾಸ್ತಿ ಎಂಬುದನ್ನು ನಮ್ಮ ಸುತ್ತಮುತ್ತಲಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ಹೇಳುತ್ತಿವೆ.
Astrology Tips: ಮಾನಸಿಕ ಒತ್ತಡ ನಿವಾರಣೆಗೆ ಯಾವ ರಾಶಿಯವರು ಏನು ಮಾಡಬೇಕು?
ಬದುಕನ್ನು ಜಾಲಿಯಾಗಿ ಕಳೆಯಬೇಕೆಂಬ ಮನೋಭಾವ ಹೆಚ್ಚುತ್ತಿರುವುದರಿಂದ ಮತ್ತು ಕೈಗೆಟುಕದ್ದನ್ನು ಪಡೆಯುವ ಹುಚ್ಚು ಹಠಗಳು. ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆನ್ನುವ ಬಯಕೆಗಳು, ಅವರಿಗಿಂತ ನಾನೇನು ಕಡಿಮೆ ಎಂಬ ಅಹಂ, ಹಾಸಿಗೆಯಿದ್ದಷ್ಟೇ ಕಾಲು ಚಾಚು ಎಂಬ ಗಾದೆಗೆ ಗೋಲಿ ಹೊಡೆದು ಸಾಮರ್ಥ್ಯ ಮೀರಿ ಕಾಲು ಚಾಚುವ ಪ್ರಯತ್ನಗಳು. ಹೀಗೆ ಹತ್ತಾರು ನಮ್ಮ ಹುಚ್ಚಾಟಗಳು ನಮಗರಿವಿಲ್ಲದಂತೆ ನಮ್ಮ ಬದುಕಿಗೆ ಮಾರಕವಾಗಿ ಬಿಡುತ್ತಿವೆ.
ಮನಸ್ಸು ಸರಿಯಿಲ್ಲ ಎನ್ನುವವರೇ ಗಮನಿಸಿ
ಭೂಮಿ ಮೇಲೆ ಹುಟ್ಟಿದ ಮನುಷ್ಯನಿಗೆ ಅವನದ್ದೇ ಆದ ಗುರುತು ಪರಿಚಯವಿದೆ. ಆದ್ದರಿಂದ ಬೇರೆಯವರಂತೆ ಬದುಕೋದಕ್ಕಿಂತ ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಪ್ರಯತ್ನಿಸಬೇಕು. ತನ್ನನ್ನು ಬೇರೆಯವರಿಗೆ ಹೋಲಿಸಿಕೊಂಡು ದುಃಖಪಡುವುದಕ್ಕಿಂತ ಅವನಲ್ಲಿರದ ಯಾವುದೋ ಒಂದು ಪ್ರತಿಭೆ ನಮ್ಮಲ್ಲಿರಬಹುದು ಅದನ್ನು ಗುರುತಿಸಿ ಬೆಳೆಸುವ ಪ್ರಯತ್ನ ಮಾಡಬೇಕು. ಎಲ್ಲವನ್ನು ಗುಡ್ಡೆ ಹಾಕಿಕೊಂಡು ನೆಮ್ಮದಿಯಿಲ್ಲದೆ ಬದುಕುವುದಕ್ಕಿಂತ ಏನಿಲ್ಲದಿದ್ದರೂ ನೆಮ್ಮದಿಯನ್ನು ಜತೆಯಾಗಿಸಿಕೊಂಡು ಬದುಕೋದರಲ್ಲಿಯೂ ಜಾಣತನವಿದೆ.
ಕೃಷ್ಣನ ನೋಡುವ ಬಯಕೆ; ಮಥುರಾದಲ್ಲಿ ರಷ್ಯಾ ಮಹಿಳೆ ಆತ್ಮಹತ್ಯೆ
ಆತ್ಮಹತ್ಯೆಗಳನ್ನು ತಡೆಯಲು ಸಹಾಯವಾಣಿಯನ್ನು ಆರಂಭಿಸಲಾಗಿದೆ. 091529 87821 ಸಂಖ್ಯೆಗೆ ಜನರು ಕರೆ ಮಾಡಬಹುದು. ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆಯ ತನಕ ಇದು ಕಾರ್ಯ ನಿರ್ವಹಣೆ ಮಾಡಲಿದ್ದು, ಇಂಗ್ಲಿಶ್, ಹಿಂದಿ, ಮರಾಠಿ, ತಮಿಳು, ತೆಲಗು ಸೇರಿದಂತೆ ಹಲವು ಭಾಷೆಗಳಲ್ಲಿ ಸಂಹವನ ಲಭ್ಯವಿದೆ.
ಶ್ರಮವಹಿಸಲು ನಾವು ತಯಾರಿಲ್ಲ
ಇತ್ತೀಚೆಗೆ ನಮ್ಮಲ್ಲೊಂದು ರೋಗ ಶುರುವಾಗಿದೆ. ಅದು ಏನೆಂದರೆ ಎಲ್ಲವೂ ತಕ್ಷಣದಲ್ಲಿಯೇ ಆಗಿಬಿಡಬೇಕು. ಕೆಲಸ ಮಾಡದೆ ಹಣ ಬರಬೇಕು, ಕಷ್ಟ ಪಡದೆ ಯಶಸ್ಸು ಸಿಗಬೇಕು ಹೀಗೆ ಎಲ್ಲವೂ ಸುಲಭದಲ್ಲಿ ಆಗಿಬಿಡಬೇಕು. ಅದಕ್ಕಾಗಿ ಶ್ರಮವಹಿಸಲು ತಯಾರಿಲ್ಲ ಹೀಗಿರುವಾಗ ಅಂದುಕೊಂಡದ್ದು ಆಗದೆ ಇದ್ದಾಗ ಮಾನಸಿಕವಾಗಿ ಖಿನ್ನತೆ ಕಾಡಲಾರಂಭಿಸುತ್ತದೆ. ಬೇರೆಯವರೊಂದಿಗೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳುತ್ತಾ ನಮ್ಮ ಬಗ್ಗೆ ನಾವೇ ಕೀಳರಿಮೆ ಬೆಳೆಸಿಕೊಳ್ಳಲು ಶುರು ಮಾಡುತ್ತೇವೆ. ಇದು ಮುಂದುವರೆದರೆ ಬದುಕಿಗೆ ಗಂಡಾಂತರ ತಂದು ಬಿಡುತ್ತದೆ.
ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಳ
ಹಾಗೆ ನೋಡಿದರೆ ನಮ್ಮನ್ನು ಕಾಡುವ ಬಹಳಷ್ಟು ಕಾಯಿಲೆಗಳು ಹೊರಗಿನವರಿಗೆ ಗೊತ್ತಾಗುತ್ತದೆ. ಜತೆಗೆ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ ಬೇರೆಯವರಿಗೆ ಗೊತ್ತೇ ಆಗದೆ ತಮ್ಮಲ್ಲೇ ನೊಂದು, ಬೆಂದು, ಖಿನ್ನತೆಗೊಳಗಾಗಿ ಕೊನೆಗೆ ಆತ್ಮಹತ್ಯೆಗೆ ಶರಣಾಗುವ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಇದೊಂದು ರೀತಿಯ ರೋಗದಂತೆಯೂ ಭಾಸವಾಗ ತೊಡಗಿದೆ. ಇನ್ನು ನಾವು ಆತ್ಮಹತ್ಯೆ ಕುರಿತಂತೆ ನೋಡುವುದಾದರೆ ಇತ್ತೀಚೆಗಿನ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೆಚ್ಚಿನ ಸಂದರ್ಭಗಳಲ್ಲಿ ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟಗಳು ಕಾರಣವಾಗಿದ್ದರೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಬೇರೆ, ಬೇರೆ ಕಾರಣಗಳು ಕೂಡ ಇಲ್ಲದಿಲ್ಲ. ಎಲ್ಲ ವಯೋಮಾನದವರು ಆತ್ಮಹತ್ಯೆ ಮಾಡಿಕೊಂಡರೂ ಹೆಚ್ಚಾಗಿ 15 ರಿಂದ 29ರ ವಯೋಮಾನವರು ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದು ಬಂದ ಅಂಶವಾಗಿದೆ.
ತಜ್ಞರೊಂದಿಗೆ ಸಮಾಲೋಚನೆ ಅಗತ್ಯ
ಆತ್ಮಹತ್ಯೆಯ ಪ್ರಮುಖ ಚಿಹ್ನೆಗಳೆಂದರೆ ಸಾಯುವ ಬಗೆಗಿನ ಮಾತು, ಓದು, ಮಾರ್ಗಗಳ ಬಗ್ಗೆ ತಿಳಿದುಕೊಳ್ಳುವುದು, ಮಾನಸಿಕ ಕಾಯಿಲೆಗಳು, ಕುಡಿತದ ವ್ಯಸನ, ಈ ಮೊದಲೇ ಆತ್ಮಹತ್ಯೆ ಪ್ರಯತ್ನ, ಕುಟುಂಬದಲ್ಲಿ ಆತ್ಮಹತ್ಯೆ ಪ್ರಕರಣ ನಡೆದಿದ್ದರೆ, ಹತಾಶೆ ಭಾವನೆ, ಭವಿಷ್ಯದ ಬಗ್ಗೆ ನಿರಾಶೆ, ಅಸಹನೀಯ ಭಾವನೆ, ಮನಸ್ಸಿನ ಹೊಯ್ದಾಟ, ಹಠಾತ್ ಬದಲಾವಣೆ, ಬಂಡಾಯದ ವ್ಯಕ್ತಿತ್ವ, ನಿರಾಸಕ್ತಿ, ತನ್ನ ಬಗ್ಗೆಯೇ ನಿರ್ಲಕ್ಷ್ಯತನ, ಆಹಾರ, ನಿದ್ರೆಯಲ್ಲಿ ಬದಲಾವಣೆ ಇತ್ಯಾದಿಗಳಾಗಿವೆ. ಆತ್ಮಹತ್ಯೆ ಕಡೆಗೆ ವಾಲುತ್ತಿದ್ದಾನೆ ಎಂಬ ಸುಳಿವು ಸಿಕ್ಕ ವ್ಯಕ್ತಿಯನ್ನು ಮಾನಸಿಕ ತಜ್ಞರ ಬಳಿಗೆ ಕರೆದೊಯ್ದು ಸಮಾಲೋಚನೆ ನಡೆಸುವುದು, ಮನವೊಲಿಸುವುದು, ಔಷಧೋಪಚಾರದ ಬಗ್ಗೆ ಮಾಹಿತಿ ನೀಡಿ ಬದುಕಿನ ಬಗ್ಗೆ ಆಸಕ್ತಿ ಮೂಡಿಸುವುದು, ಅಡ್ಡ ಪರಿಣಾಮಗಳ ಬಗ್ಗೆ ತಿಳಿಸುವ ಕಾರ್ಯವನ್ನು ಮಾಡಬೇಕು.
ಸರಕಾರಾತ್ಮಕ ಜೀವನ ಪದ್ಧತಿ ಪ್ರೋತ್ಸಾಹಿಸಿ
ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ದೃಢ ನಿರ್ಧಾರ ಮಾಡಿದ್ದಲ್ಲಿ ಆ ವ್ಯಕ್ತಿಗೆ ಸಹಾಯದ ಬಗ್ಗೆ ನಂಬಿಕೆ ಇರುವುದಿಲ್ಲ. ಸಹಾಯವನ್ನೂ ನಿರೀಕ್ಷಿಸುವುದಿಲ್ಲ. ಹೀಗಾಗಿ ಆತನ ನಡೆ ಗಮನಿಸಿ ಸಹಾಯ ನೀಡಬೇಕಾಗುತ್ತದೆ. ಸರಕಾರಾತ್ಮಕ ಜೀವನ ಪದ್ಧತಿಗೆ ಪ್ರೋತ್ಸಾಹಿಸಿ, ನಿದ್ರೆ ನಡಿಗೆ, ವ್ಯಾಯಾಮದತ್ತ ಸೆಳೆಯಬೇಕು. ಇನ್ನು ಸುರಕ್ಷತಾಕ್ರಮಗಳಾಗಿ ಮನೆಯಲ್ಲಿ ಮಾತ್ರೆ, ಹರಿತ ಆಯುಧ, ಕೀಟನಾಶಕ, ಹಗ್ಗ ಇನ್ನಿತರ ವಸ್ತುಗಳು ಸುಲಭವಾಗಿ ಕೈಗೆ ಸಿಗದಂತೆ ನೋಡಿಕೊಳ್ಳಬೇಕು. ಒಂಟಿಯಾಗಿರಲು ಬಿಡದೆ ಜನರೊಂದಿಗೆ ಸೇರುವ ಅವಕಾಶ ಮಾಡಿಕೊಡಬೇಕು. ಇದರಿಂದ ಅವರ ಮನಸ್ಸನ್ನು ಬೇರೆಡೆಗೆ ವರ್ಗಾಯಿಸಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಖಿನ್ನತೆ, ಮಾದಕ ವ್ಯಸನ, ಸ್ಕಿಜೋಫ್ರೆನಿಯ, ವ್ಯಕ್ತಿತ್ವ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಆತ್ಮಹತ್ಯೆಯತ್ತ ಯೋಚಿಸುತ್ತಾರೆ. ಆತ್ಮಹತ್ಯೆ ಮಾಡಿಕೊಂಡವರಲ್ಲಿ ಶೇ.90ರಷ್ಟು ಮಾನಸಿಕ ಕಾಯಿಲೆಗಳಿಂದ ಬಳಲುವವರೇ ಆಗಿದ್ದಾರೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಅಡ್ಡ ಪರಿಣಾಮಗಳಿಂದ ಜೀವನದಲ್ಲಿ ಜಿಗುಪ್ಸೆ
ಆತ್ಮಹತ್ಯೆಗೆ ಶರಣಾದವರಲ್ಲಿ ಶೇ.20ರಷ್ಟು ಜನರು ಈ ಮೊದಲೇ ಪ್ರಯತ್ನ ಮಾಡಿರುತ್ತಾರೆ. ಇಂತಹವರಲ್ಲಿ ಆತ್ಮಹತ್ಯೆ ಪುನರಾವರ್ತನೆ ಆಗಬಹುದು. ಬಹಳ ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದರೆ ಅಡ್ಡ ಪರಿಣಾಮಗಳಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಆತ್ಮಹತ್ಯೆ ಅನುಕರಣೆ ಮಾಡುವ ನಡವಳಿಕೆಯಿಂದಲೂ ನಡೆಯುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೀಟನಾಶಕಗಳು ಸುಲಭವಾಗಿ ಲಭ್ಯವಾಗುವುದರಿಂದ ಕೆಲ ಸಂದರ್ಭಗಳಲ್ಲಿ ದಿಢೀರ್ ನಿರ್ಧಾರಗಳು ಕೂಡ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿಬಿಡುತ್ತದೆ. ಇನ್ನು ಜೀನ್ಸ್, ಮಿದುಳಿನ ರಚನೆ ಸೆರೋಟೋನಿನ್ ಮುಂತಾದವುಗಳು ಆತ್ಮಹತ್ಯೆಯಿಂದ ಮರಣಹೊಂದಿದವರಲ್ಲೂ ಮತ್ತು ಇತರೆ ಕಾರಣಗಳಿಂದ ಮರಣ ಹೊಂದಿದವರಲ್ಲೂ ಭಿನ್ನವಾಗಿರುತ್ತದೆ.
ಸದಾ ಒಳ್ಳೆಯದನ್ನೇ ಯೋಚಿಸುತ್ತಿರಬೇಕು
ನಾವು ಶರೀರಿಕ ಆರೋಗ್ಯದ ಬಗ್ಗೆ ಮಾತ್ರ ಯೋಚಿಸದೆ ಮಾನಸಿಕ ಆರೋಗ್ಯದ ಬಗ್ಗೆಯೂ ಯೋಚಿಸಬೇಕು. ಮಾನಸಿಕ ಆರೋಗ್ಯ ದೃಢವಾಗಿದ್ದರೆ ಆತ್ಮಹತ್ಯೆಯಂತಹ ಆಲೋಚನೆಗಳು ನಮ್ಮನ್ನು ಸುಳಿಯದೆ, ಎಲ್ಲ ಸಮಸ್ಯೆಗಳನ್ನು ನಿಂತು ಎದುರಿಸುತ್ತೇನೆ ಎಂಬ ಮನೋ ಸ್ಥೈರ್ಯವನ್ನು ತುಂಬುತ್ತದೆ. ಅದು ಸಾಧ್ಯವಾಗಬೇಕಾದರೆ ನಾವು ಸದಾ ಒಳ್ಳೆಯದನ್ನೇ ಯೋಚಿಸುತ್ತಿರಬೇಕು. ಹೆತ್ತವರು ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರವನ್ನು ಕಲಿಸಬೇಕು. ವ್ಯಕ್ತಿತ್ವ ವಿಕಸನ, ಆಧ್ಯಾತ್ಮ ವಿಚಾರಗಳ ಅಧ್ಯಯನ ಕೂಡ ನಮ್ಮ ಮನಸ್ಸನ್ನು ತಿಳಿಗೊಳಿಸಿ ಒಂದೊಳ್ಳೆಯ ಮಾರ್ಗದಲ್ಲಿ ಮುನ್ನಡೆಯಲು ಅನುವು ಮಾಡಿಕೊಡಬಹುದು.