ರೈತ ಪುತ್ರ 'ಸೂರ್ಯಕಾಂತ' ಚಂದ್ರಯಾನ2ರ 'ಅಯಸ್ಕಾಂತ'
ಕೋಲ್ಕತ್ತಾ, ಜುಲೈ 22: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮಹತ್ವದ ಯೋಜನೆ ಚಂದ್ರಯಾನ 2 ಯೋಜನೆಗಾಗಿ ದುಡಿದವರ ಪರಿಶ್ರಮಕ್ಕೆ ಇಸ್ರೋ ಅಧ್ಯಕ್ಷ ಕೆ ಶಿವನ್ ವಂದಿಸಿದ್ದಾರೆ. ಚಂದ್ರಯಾನ2 ತಂಡದಲ್ಲಿದ್ದವರ ಪೈಕಿ 'ಅಯಸ್ಕಾಂತ' ದಂತೆ ಸೆಳೆಯುವವರು 'ಚಂದ್ರಕಾಂತ'.
ಪಶ್ಚಿಮ ಬಂಗಾಳದ ಹೂಗ್ಲಿಯ ಶಿಬಪುರ್ ಗ್ರಾಮದ ರೈತರೊಬ್ಬರ ಪುತ್ರ ಇಂದು ಹಿರಿಯ ವಿಜ್ಞಾನಿಯಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಂದ್ರಯಾನ2 ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಚಂದ್ರಯಾನ-2: ಯಶಸ್ವಿಯಾಗಿ ನಭಕ್ಕೆ ಹಾರಿದ ಬಾಹುಬಲಿ
ಚಂದ್ರಕಾಂತ ನಾಮಕರಣ: ಚಂದ್ರಕಾಂತ ಅವರಿಗೆ ಚಿಕ್ಕಂದಿನಲ್ಲಿ ಅವರ ತಂದೆ ಕುಮಾರ್ ಅವರು 'ಸೂರ್ಯಕಾಂತ' ಎಂದು ಹೆಸರಿಡಲು ಬಯಸಿದ್ದರಂತೆ, ಆದರೆ, ಶಾಲಾ ಶಿಕ್ಷಕರೊಬ್ಬರು ಸೂರ್ಯಕಾಂತ ಎನ್ನುವ ಹೆಸರಿನ ಬದಲು ಚಂದ್ರಕಾಂತ ಎಂದು ಹೆಸರಿಡಿ, 'ಚಂದ್ರ ತಂಪಾದ ಕಾಂತಿ' ಹೆಸರಿನಲ್ಲಿರಲಿ ಎಂದಿದ್ದಾರೆ. ಅದೇ ಹೆಸರನ್ನಿಟ್ಟಿದ್ದಾರೆ.
ನ್ಯೂಸ್18 ಜೊತೆ ಮಾತನಾಡಿದ ಚಂದ್ರಕಾಂತ ತಂದೆ ಕುಮಾರ್, "ಚಂದ್ರಯಾನ2 ಮೊದಲ ಯತ್ನದಲ್ಲಿ ತಾಂತ್ರಿಕ ತೊಂದರೆ ಎದುರಾದಾಗ, ನಮಗೆಲ್ಲ ತೀವ್ರ ಬೇಸರವಾಯಿತು, ಭಾರತದ ಅತ್ಯಂತ ಮಹತ್ವದ ಯೋಜನೆಯ ಭಾಗವಾಗಿ ನನ್ನ ಮಗ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ" ಎಂದಿದ್ದಾರೆ.
ಚಂದ್ರಯಾನ1ರಲ್ಲೂ ಕಾರ್ಯ ನಿರ್ವಹಣೆ
ಚಂದ್ರಕಾಂತ ಅವರು, ಭಾರತ ಉಪಗ್ರಹ ಹಾಗೂ ಭೂಕಕ್ಷೆ ಕೇಂದ್ರದ ಆಂಟೆನಾ ವ್ಯವಸ್ಥೆಯ ವಿಭಾಗದಲ್ಲಿ ಡೆಪ್ಯುಟಿ ಯೋಜನಾ ನಿರ್ದೇಶಕರಾಗಿದ್ದಾರೆ. ಚಂದ್ರಯಾನ1ರಲ್ಲೂ ಯೋಜನಾ ವ್ಯವಸ್ಥಾಪಕರಾಗಿ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು, ಜಿಸ್ಯಾಟ್1, ಆಸ್ಟ್ರೋಸ್ಯಾಟ್ ಯಶಸ್ವಿ ಉಡಾವಣೆಯನ್ನು ನೋಡಿಕೊಂಡಿದ್ದರು.
ಯುಆರ್ ರಾವ್ ಕೇಂದ್ರದಲ್ಲಿ ಯೋಜನಾ ನಿರ್ದೇಶಕ
ಯುಆರ್ ರಾವ್ ಕೇಂದ್ರದಲ್ಲಿ ಚಂದ್ರಯಾನ2ರ ರೇಡಿಯೋ ಫ್ರೀಕ್ವೆನ್ಸಿ, ಎಲೆಕ್ಟ್ರೋ ಮ್ಯಾಗ್ನೆಟಿಕ್ಸ್ ವಿಭಾಗದಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. 2001ರಲ್ಲಿ ಇಸ್ರೋ ಸೇರಿದ ಚಂದ್ರಕಾಂತ ಅವರ ಸೋದರ ಶಶಿಕಾಂತ್ ಕೂಡಾ ವಿಜ್ಞಾನಿಯಾಗಿದ್ದು, ಅವರ ಹೆಸರಿನಲ್ಲೂ ಚಂದ್ರನಿರುವುದು ವಿಶೇಷ.
ಚಂದ್ರಯಾನ-2: ಉದ್ದೇಶ ಹಾಗೂ ಉಪಯೋಗವೇನು?
ಬಾಹುಬಲಿ ರಾಕೆಟ್ ಉಡಾವಣೆ
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಅತ್ಯಂತ ತೂಕವನ್ನು ಹೊರಬಲ್ಲ MkIII ರಾಕೆಟ್ ಮೂಲಕ ಅಧ್ಯಯನ ನೌಕೆಯನ್ನು ಸೋಮವಾರ ಮಧ್ಯಾಹ್ನ 2.43ಕ್ಕೆ ಉಡಾವಣೆ ಮಾಡಲಾಗಿದೆ. ಭಾರತದ ಅತಿ ಭಾರದ ರಾಕೆಟ್ 'ಬಾಹುಬಲಿ' ಎಂದು ಹೆಸರಿಸಲಾದ ಜಿಎಸ್ಎಲ್ವಿ ಎಂಕೆ-3, ಒಟ್ಟು 14 ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ಯುತ್ತಿದೆ.
ಟಿವಿಯಲ್ಲಿ ಲೈವ್ ನೋಡಿ ಆನಂದಿಸಿದೆ
"ಬೆಳಗ್ಗೆ ನನ್ನ ಮಗ ಕರೆ ಮಾಡಿ, ಟಿವಿಯಲ್ಲಿ ಚಂದ್ರಯಾನ 2 ಲೈವ್ ನೋಡುವಂತೆ ಹೇಳಿದ, ಚಿಕ್ಕಂದಿನಿಂದ ವಿಜ್ಞಾನಿಯಾಗುವ ಕನಸು ಕಂಡಿದ್ದ, ಹೆಮ್ಮೆಯ ಪುತ್ರನಾಗಿ ದೇಶವೇ ಹೊಗಳುತ್ತಿದೆ. ನನ್ನ ಸಂತೋಷಕ್ಕೆ ಪಾರವೇ ಇಲ್ಲ" ಎಂದು ಚಂದ್ರಕಾಂತ ಅವರ ತಾಯಿ ಪ್ರತಿಕ್ರಿಯಿಸಿದ್ದಾರೆ.