ಮಾಧ್ಯಮ ಸ್ವಾತಂತ್ರ್ಯ ಮತ್ತು ಅಜ್ಜ ಹೇಳಿದ ಗಾಂಧಿ ಕಥೆ
(ಮೊದಲೇ ಹೇಳಿ ಬಿಡುತ್ತೇನೆ. ನೆಲದ ಕಾನೂನಿಗೆ ಯಾರೂ ಹೊರತಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ)
ಮುಖ್ಯಮಂತ್ರಿ ಸುಪುತ್ರನ ಭ್ರಷ್ಟಾಚಾರ ಆರೋಪದ ಬಗ್ಗೆ ವರದಿ ಮಾಡಿದ್ದ ಖಾಸಗಿ ಚಾನಲ್ ಒಂದನ್ನು ಸರ್ಕಾರ ಪೊಲೀಸರನ್ನು ಬಿಟ್ಟು ಬಂದ್ ಮಾಡಿಸಿದೆ, ಎಂಬ ಆರೋಪ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಜೊತೆಗೆ ಖಾಸಗಿ ಚಾನಲ್ ನಡೆಸುವವರ (ಪತ್ರಕರ್ತರನ್ನು ಹೊರತುಪಡಿಸಿ) ಹಿನ್ನೆಲೆ ಹಾಗೂ ಉದ್ದೇಶಗಳ ಬಗ್ಗೆಯೂ ಒಳ್ಳೆಯ ಅಭಿಪ್ರಾಯಗಳು ಕೇಳಿಬರುತ್ತಿಲ್ಲ. ಹಾಗಾಗಿ ಒಂದು ಕಥೆ ನೆನಪಾಗುತ್ತಿದೆ. ಕನಕಪುರದ ನನ್ನ ಹಿರಿಯ ಗೆಳೆಯ ಮುನಿಚೌಡಪ್ಪನ ತಾತ ಗಾಂಧಿಯನ್ನು ಬ್ರಿಟೀಷರು ಏಕೆ ಕೊಲ್ಲಲಾಗಲಿಲ್ಲ ಎಂಬುದಕ್ಕೆ ತಾನೇ ತನ್ನ ಸ್ಮೃತಿಯೊಳಗೆ ಕಟ್ಟಿಕೊಂಡಿದ್ದ ಕಥೆ ಇದು.
ಮಂಗಳವಾರವೂ ಸ್ಥಗಿತಗೊಂಡ ಪವರ್ ಪ್ರಸಾರ: ಸಾಮಾಜಿಕ ಜಾಲತಾಣ ಪ್ರತಿರೋಧ!
ಭ್ರಷ್ಟಾಚಾರದ ಬಗ್ಗೆ ಮಾತನಾಡುವವರಿಗೆ ನೈತಿಕ ಶಕ್ತಿ ಬೇಕು
"ಗಾಂಧಿ ಮಹಾತ್ಮ ಸಾಕ್ಷಾತ್ ದೇವ್ರು ಕಣ್ ಮಗಾ, ಬ್ರಿಟಿಷ್ ನವರು ಅವರನ್ನ ಯಾಕೆ ಕೊಲ್ಲಕಾಗ್ಲಿಲ್ಲ ಹೇಳು ಮತ್ತೆ ನೋಡಾನ...? ಅವ್ರತಾವ ಏಪ್ಯಾಪಾಟಿ ಬಂದೂಕು ಇದ್ವು ಅಂತಾ ಗೊತ್ತೇ..? ಆದ್ರೂ ಅವ್ರ ಕೈಲಿ ಸಾಯ್ಸಾಕೆ ಆಗ್ಲಿಲ್ಲ. ಅವ್ರು ಬಂದೂಕ ಇಡ್ಕಂಡು ಗಾಂಧಿ ಕೊಲ್ಲುಮ ಅಂತ ಗುರಿ ಇಟ್ರೆ, ಎದ್ರುಗೆ ಬರೋ ಜನಾ ಎಲ್ಲಾ ಗಾಂಧಿ ಕಂಡಂಗೆ ಕಂಡಾರಂತೆ. ಯಾರನ್ ಕೊಂದಾನು ಬ್ರಿಟೀಶಪ್ಪ".
ಈ ಗಾಂಧಿ ಕಥೆ ನಮಗೆ ಏನು ಹೇಳುತ್ತೆ ಎಂಬುದನ್ನು ಪರಿಶೀಲಿಸೋಣ. ಮೇಲ್ನೋಟಕ್ಕೆ "ಸತ್ಯ ನಿಷ್ಠೆ ಹಾಗೂ ನ್ಯಾಯಪರವಾದ ನೈಜ ಹೋರಾಟಗಾರನನ್ನು ಮುಟ್ಟುವುದು ಸುಲಭದ ಮಾತಲ್ಲ" ಎಂದು ನನಗನಿಸುತ್ತದೆ. ಹಾಗಾಗಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವವರಿಗೆ ನೈತಿಕವಾದ ಶಕ್ತಿ ಇರಬೇಕು.
ರಾಜಕಾರಣಿಗಳು-ರಾಜಕೀಯ ಪಕ್ಷಗಳು
'ಗಾಜಿನ ಮನೇಲಿ ಕೂತು ಎಂಚಿನ ಮನೆಗೆ ಕಲ್ಲು ಹೊಡಿಯೋ ಕೆಲಸ ಆದರೆ ಪ್ರಯೋಜನವಿಲ್ಲ'. ನೇರವಾಗಿ ವಿಷಯಕ್ಕೆ ಬರುವುದಾದರೆ ಒಂದು ಭ್ರಷ್ಟಾಚಾರದ ಕುರಿತಾಗಿ ಧ್ವನಿ ಎತ್ತಬೇಕಾದರೆ, ತಾನು ನೈತಿಕವಾಗಿ ಬಲಿಷ್ಠವಾಗಿರಬೇಕಾಗುತ್ತದೆ. ಆಗ ಎದುರಾಳಿ ಸುಲಭಕ್ಕೆ ನಿಮ್ಮನ್ನು ಮುಟ್ಟಲು ಸಾಧ್ಯವಿಲ್ಲ. ಮುನಿಚೌಡಪ್ಪನ ತಾತನ ಪ್ರಕಾರ ಬ್ರಿಟೀಷರು ಗಾಂಧಿಯನ್ನು ಮುಟ್ಟಲಾಗಲಿಲ್ಲವಲ್ಲ ಹಾಗೆ.
ರಾಜಕಾರಣಿಗಳು ರಾಜಕೀಯ ಪಕ್ಷಗಳು ಪರಸ್ಪರ ಭ್ರಷ್ಟಾಚಾರದ ಆರೋಪ ಹೊರಿಸಿಕೊಳ್ಳುತ್ತವಲ್ಲ, ಅದನ್ನು ನೋಡಿದರೆ ನನಗೆ ನಗೆ ಬರುತ್ತದೆ. ಒಬ್ಬರು ಉಳ್ಳೀಕಾಳು ಬೆಳೆದು ಮಾರಿ ಗಳಿಸಿದ ದುಡ್ಡಲ್ಲಿ ರಾಜಕಾರಣ ಮಾಡುತ್ತಿರುವಂತೆ ಮಾತನಾಡಿದರೆ, ಮತ್ತೊಬ್ಬರು ಕೂಲಿ ಮಾಡಿ ಸಂಪಾದಿಸಿದ ಹಣದಲ್ಲಿ ರಾಜಕಾರಣ ಮಾಡುತ್ತಿರುವ ರೇಂಜಿಗೆ ಭಾಷಣ ಬಿಗಿಯುತ್ತಾರೆ.ನೂರಾರು ಪತ್ರಕರ್ತರಿಗೆ ಕೆಲಸ ಕೊಟ್ಟು ನೆರಳಾದವು
ಅದನ್ನು ನಾವು ಪತ್ರಕರ್ತರು ಕೇಳಿಸಿಕೊಂಡು ಬಂದು ಕೆಲವರು "ವೃತ್ತಿ ನಿಷ್ಟೆಗೆ" ಹಲವರು "ನಮ್ಮ ನಮ್ಮ ಜಾತಿ ಹಾಗೂ ಪಕ್ಷ ನಿಷ್ಟೆ"ಗಳಿಗೆ ಅನುಗುಣವಾಗಿ ಬರೆಯುತ್ತೇವೆ. ನೇರ ವಿಷಯಕ್ಕೆ ಬರೋಣ. ಕಳೆದ ಎರಡು ದಶಕದಿಂದೀಚೆಗೆ ಹುಟ್ಟಿಕೊಂಡ ಮಾಧ್ಯಮ ಸಂಸ್ಥೆಗಳು ಅದರಲ್ಲೂ ಟಿವಿ ಮಾಧ್ಯಮಗಳು, ನೂರಾರು ಪತ್ರಕರ್ತರಿಗೆ ಕೆಲಸ ಕೊಟ್ಟು ನೆರಳಾದವು ಅನ್ನುವುದನ್ನು ಹೊರತುಪಡಿಸಿ ಕೆಲ ಅಂಶಗಳ ಬಗ್ಗೆ ಗಮನಹರಿಸಬೇಕು. ಈ ಟಿವಿ ಸಂಸ್ಥೆಗಳಿಗೆ ಬಂಡವಾಳ ಹಾಕಿದವರು ಯಾರು? ಅವರ ಹಿನ್ನೆಲೆ ಏನು? ಏತಕ್ಕಾಗಿ ಅವರಿಗೆ ಮಾಧ್ಯಮ ಬೇಕಿದೆ ಎಂಬುದನ್ನು ಒಮ್ಮೆ ಯೋಚಿಸಬೇಕಿದೆ, ಪರಿಶೀಲಿಸಬೇಕಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?
ನಮಗೆ ಉದ್ಯೋಗ ಏಕೆ ಬೇಕು ?
ನಮಗೆ ಉದ್ಯೋಗ ಬೇಕು, ಬಂಡವಾಳ ಯಾರದ್ದು, ಅವರ ಹಿನ್ನೆಲೆ ಏನು, ಅಲ್ಲಿ ಕೆಲಸ ಮಾಡಬಹುದೇ, ಇಲ್ಲವೇ ಎಂದು ಯೋಚಿಸುವ ಅವಕಾಶಗಳೂ ನಮ್ಮೆದುರಿಲ್ಲ. we are no longer choosers . ಕೆಲಸ ಅಷ್ಟೆ ಬೇಕು. ಮನೆ ಬಾಡಿಗೆ ಕಟ್ಟಬೇಕು, ಹುಚ್ಚು ಸಾಧನೆ ಮಾಡಲು ಹೊರಟು ಕೈಸುಟ್ಟುಕೊಂಡು ಮಾಡಿದ ಸಾಲಗಳನ್ನು ತೀರಿಸಲು, EMI ಕಟ್ಟಲು ದುಡಿಯಬೇಕು. ಮಕ್ಕಳ ಓದಿಗೆ, ಮನೆ ನಡೆಸಲು ಹಣಬೇಕು. ನಮ್ಮನ್ನು ನಾವು ಉಳಿಸಿಕೊಳ್ಳಬೇಕು. ಜೊತೆಗೆ ಕುಟುಂಬಗಳನ್ನೂ.
ಇಂತಿಪ್ಪ ಪರಿಸ್ಥಿತಿಯಲ್ಲಿ ಬಂಡವಾಳಿಗರು, ಭ್ರಷ್ಟರು, ದುಷ್ಟರು ಅವರವರ ರೇಂಜಿಗೆ ಅವರು ವ್ಯಾಪಾರ ವಹಿವಾಟು ಡೀಲುಗಳಲ್ಲಿ ತೊಡಗಿರುತ್ತಾರೆ. ನಾವು ಬದುಕಬೇಕೆಂದರೆ ಆ ಕೂಪದಲ್ಲೇ ಬೇಯಬೇಕು.