ಕರ್ನಾಟಕದತ್ತ ದೃಷ್ಟಿ ನೆಟ್ಟಿರುವ ಮಾಯಾವತಿಯ ನಿರೀಕ್ಷೆಗಳೇನು?
Recommended Video
ಲೋಕಸಭಾ ಚುನಾವಣೆಯ ಭರಾಟೆ ದೇಶದಾದ್ಯಂತ ಜೋರಾಗಿಯೇ ಸಾಗಿದೆ. ಬಿಜೆಪಿ ಮತ್ತೊಮ್ಮೆ ಮೋದಿ ಎಂಬ ಘೋಷವಾಕ್ಯ ಮೊಳಗಿಸುತ್ತಿದ್ದರೆ, ದೇಶದ ಅಭಿವೃದ್ಧಿಗೆ ರಾಹುಲ್ ಗಾಂಧಿಯೇ ಪ್ರಧಾನಿಯಾಗಬೇಕೆಂಬ ಆಶಯವನ್ನು ಕಾಂಗ್ರೆಸ್ ವ್ಯಕ್ತಪಡಿಸುತ್ತಿದೆ.
ರಾಷ್ಟ್ರೀಯ ಪಕ್ಷಗಳನ್ನು ಆಚೆಗಿಟ್ಟು ನಾವೇ ಪ್ರಧಾನಿಯಾಗಬೇಕೆಂಬ ಹಠಕ್ಕೆ ಬಿಎಸ್ಪಿಯ ಮಾಯಾವತಿ ಮತ್ತು ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿ ಬಿದ್ದಿದ್ದಾರೆ. ಇವರೆಲ್ಲರ ನಡುವೆ ಯಾವುದೇ ಪಕ್ಷಕ್ಕೂ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ತಮಗೂ ಪ್ರಧಾನಿಯಾಗುವ ಯೋಗ ಬರಬಹುದೆಂಬ ನಿರೀಕ್ಷೆಯಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಇದ್ದಾರೆ.
ಮುಸ್ಲಿಮರೇ ದಯವಿಟ್ಟು ಕಾಂಗ್ರೆಸ್ಸಿಗೆ ಮತಹಾಕಬೇಡಿ: ಮಾಯಾವತಿ
ಇವರೆಲ್ಲರ ಮಧ್ಯೆ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯನ್ನು ಹೊರತುಪಡಿಸಿದರೆ ಪ್ರಧಾನಿ ಹುದ್ದೆಯತ್ತ ಹೆಚ್ಚಿನ ಆಸಕ್ತಿ ತೋರುತ್ತಿರುವುದು ಮತ್ತು ಅದಕ್ಕಾಗಿ ಬೇಕಾದ ತಂತ್ರಗಳನ್ನು ಮಾಡುತ್ತಿರುವ ಏಕೈಕ ನಾಯಕಿ ಎಂದರೆ ಅದು ಬಿಎಸ್ಪಿಯ ಮಾಯಾವತಿ ಎಂದರೆ ತಪ್ಪಾಗಲಾರದು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಉತ್ತರ ಪ್ರದೇಶದಲ್ಲಿ ಈಗಾಗಲೇ ಎಸ್ಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಮಾಯಾವತಿ ಅವರು ಕಾಂಗ್ರೆಸ್ನೊಂದಿಗೆ ಕೈಜೋಡಿಸಿದರೆ ಪ್ರಧಾನಿಯಾಗುವ ಬಯಕೆ ಈಡೇರುವುದಿಲ್ಲ ಎಂದರಿತು ದೂರ ಉಳಿದಿದ್ದಾರೆ. ಅಲ್ಲದೇ ಈಗ ತಮ್ಮ ಗೆಲುವಿಗಾಗಿ ಹೊಸದಾದ ತಂತ್ರಗಳನ್ನು ಮಾಡಲು ಮುಂದಾಗಿದ್ದಾರೆ. ಅದೇನೆಂದು ತಿಳಿಯಲು ಮುಂದೆ ಓದಿ...
ರಾಹುಲ್ ಗಾಂಧಿಯನ್ನೇಕೆ ಪ್ರಧಾನಿ ಮಾಡಬೇಕು?
ಕಳೆದ ವರ್ಷವಷ್ಟೆ ಪ್ರಧಾನಿ ಮೋದಿ ಅವರ ನಾಗಾಲೋಟಕ್ಕೆ ಬ್ರೇಕ್ ಹಾಕುವ ಸಲುವಾಗಿ ಕಾಂಗ್ರೆಸ್ನೊಂದಿಗೆ ಇತರೆ ಪ್ರತಿಪಕ್ಷಗಳು ಸೇರಿ ಮಹಾಘಟಬಂಧನ್ ಸ್ಥಾಪನೆಯ ಬಗ್ಗೆ ಆಸಕ್ತಿ ತೋರಿದ್ದವು. ಎಲ್ಲರ ಉದ್ದೇಶ ಮೋದಿಯನ್ನು ಹೊರಗಿಡುವುದು ಆ ಮೂಲಕ ಬಿಜೆಪಿಯ ಶಕ್ತಿಯನ್ನು ತಗ್ಗಿಸುವುದಾಗಿತ್ತು. ಅವತ್ತಿನ ಮಟ್ಟಿಗೆ ಅದು ಸರಿ ಎನಿಸಿದ್ದರಿಂದ ಎಲ್ಲ ಪ್ರತಿಪಕ್ಷಗಳ ನಾಯಕರು ಒಪ್ಪಿಕೊಂಡಿದ್ದರು. ಜತೆಗೆ ಕರ್ನಾಟಕದಲ್ಲಿ ದೋಸ್ತಿ ಸರ್ಕಾರ ಆಡಳಿತಕ್ಕೆ ಬಂದಾಗ ದೇವೇಗೌಡರ ನೇತೃತ್ವದಲ್ಲಿ ಬಿಜೆಪಿ ವಿರುದ್ಧ ಎಲ್ಲ ನಾಯಕರು ತಾವು ಒಂದಾಗಿದ್ದೇವೆ ಎಂಬ ಸಂದೇಶವನ್ನು ಇಡೀ ದೇಶಕ್ಕೆ ರವಾನಿಸಿದ್ದರು. ಆದರೆ ಅಷ್ಟರಲ್ಲಾಗಲೇ ಕಾಂಗ್ರೆಸ್ ನಾಯಕರು ಮುಂದಿನ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಎಂಬುದಾಗಿ ಘೋಷಿಸಿ ಬಿಟ್ಟಿದ್ದರು. ಇದು ತಿಳಿಯುತ್ತಿದ್ದಂತೆಯೇ ತಾವು ಗೆದ್ದು ರಾಹುಲ್ ಗಾಂಧಿಯನ್ನೇಕೆ ಪ್ರಧಾನಿ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದ ಇತರೆ ಪಕ್ಷಗಳ ನಾಯಕರು ಹಿಂದೇಟು ಹಾಕಲು ಆರಂಭಿಸಿದರು.
ಅದರ ಲಾಭ ಕಾಂಗ್ರೆಸ್ಗೆ ಹೋಗುತ್ತದೆ
ಈ ವೇಳೆ ಮಾಯಾವತಿ ಅವರು ಕಾಂಗ್ರೆಸ್ಗೆ ಬೆಂಬಲ ನೀಡುವುದರಿಂದ ತಮ್ಮ ಬಯಕೆ ಈಡೇರಲ್ಲ ಎಂದರಿತು ಕಾಂಗ್ರೆಸ್ನಿಂದ ದೂರವಿದ್ದು, ತಮ್ಮ ಹೋರಾಟ ಮುಂದುವರೆಸಲು ಮುಂದಾದರು ಇದರಲ್ಲಿ ಒಂದಷ್ಟು ಸ್ವಾರ್ಥವೂ ಇತ್ತು. ಬಿಎಸ್ಪಿ ಬೀಳುವ ಮತಗಳ ಪೈಕಿ ಹೆಚ್ಚಿನವು ಹಿಂದುಳಿದ ಮತ್ತು ದಲಿತ, ಅಲ್ಪಸಂಖ್ಯಾತ ಸಮುದಾಯದ್ದಾಗಿದ್ದು, ಈ ಮತಗಳು ಕೂಡ ಕಾಂಗ್ರೆಸ್ ಮೇಲಿನ ಅಸಮಾಧಾನದಿಂದ ಬರುವ ಮತಗಳಾಗಿದ್ದು, ನಾವೇನಾದರೂ ಕಾಂಗ್ರೆಸ್ಗೆ ಬೆಂಬಲ ನೀಡಿದರೆ ಅದರ ಲಾಭ ಕಾಂಗ್ರೆಸ್ಗೆ ಹೋಗುತ್ತದೆ ಎಂಬುದು ಅವರಿಗೆ ಗೊತ್ತಾಗಿತ್ತು. ಹೀಗಾಗಿ ಕಾಂಗ್ರೆಸ್ನಿಂದ ಅಂತರ ಕಾಪಾಡಿಕೊಂಡು ಹೋರಾಟ ಮಾಡುವ ತೀರ್ಮಾನಕ್ಕೆ ಬಂದರಲ್ಲದೆ, ನಿರೀಕ್ಷೆಗಿಂತ ಹೆಚ್ಚಿನ ಸ್ಥಾನ ಪಡೆದುಕೊಂಡರೆ ಇತರರ ಬೆಂಬಲದೊಂದಿಗೆ ಪ್ರಧಾನಿಯಾಗುವ ಕನಸು ಅವರಲ್ಲಿ ಮೊಳಕೆಯೊಡಲಾರಂಭಿಸಿತು.
ಟಿಕೆಟ್ ಗಾಗಿ ನೋಟು, ಇದು ಮಾಯಾವತಿ ಸಿದ್ಧಾಂತ: ಮನೇಕಾ ಗಾಂಧಿ
ಬಿಎಸ್ಪಿ ಪಕ್ಷದ ಸಂಘಟನೆಯತ್ತ ಗಮನಹರಿಸಿ
ಕರ್ನಾಟಕದಲ್ಲಿ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡ ಪರಿಣಾಮ ಕೊಳ್ಳೇಗಾಲ ಕ್ಷೇತ್ರದಿಂದ ಎನ್.ಮಹೇಶ್ ಬಿಎಸ್ಪಿಯಿಂದ ಗೆಲುವು ಕಾಣುವಂತಾಯಿತು. ಹೀಗಾಗಿ ಮೈತ್ರಿ ಸರ್ಕಾರದಲ್ಲಿ ಅವರಿಗೆ ಸಚಿವ ಸ್ಥಾನ ದೊರೆಯುವಂತಾಗಿತ್ತು. ಆದರೆ ಅಷ್ಟರಲ್ಲಾಗಲೇ ಮಾಯಾವತಿ ಅವರು ಪ್ರಧಾನಿ ಕುರ್ಚಿಯತ್ತ ಕಣ್ಣಿಟ್ಟಿದ್ದರು. ಹೀಗಾಗಿ ಅವರಿಗೆ ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ನಡೆಸಿ ಹೆಚ್ಚಿನ ಸ್ಥಾನ ಗೆಲ್ಲುವ ಬಯಕೆಗಳು ಹುಟ್ಟಿದ್ದವು. ಹೀಗಾಗಿಯೇ ಎನ್.ಮಹೇಶ್ ಅವರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಎಸ್ಪಿ ಪಕ್ಷದ ಸಂಘಟನೆಯತ್ತ ಗಮನಹರಿಸಿ ಎಂದು ಸೂಚನೆ ನೀಡಿಬಿಟ್ಟರು. ಅದರಂತೆ ರಾಜೀನಾಮೆ ನೀಡಿದ ಮಹೇಶ್ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಇವತ್ತು ರಾಜ್ಯದಿಂದ 28 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ನಾಯಕಿ ಮಾಯಾವತಿ ಅವರ ಕೈಹಿಡಿಯುವ ಪ್ರಯತ್ನ ಮಾಡಲಾಗಿದೆ.
ಬಿಎಸ್ಪಿ ಯಾವ ರೀತಿಯಲ್ಲಿ ಗೆಲುವು ಕಾಣುತ್ತದೆ?
ಬಿಎಸ್ಪಿಗೆ ರಾಜ್ಯದಲ್ಲಿ ಮಹೇಶ್ ಒಬ್ಬರೇ ಸ್ಟಾರ್ ಪ್ರಚಾರಕರಾಗಿದ್ದು, ಇದೀಗ ಎಲ್ಲ ಕ್ಷೇತ್ರಗಳಿಗೆ ಅವರೇ ತೆರಳಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ಅವರ ಶ್ರಮಕ್ಕೆ ಎಷ್ಟು ಫಲ ಸಿಗುತ್ತೋ ಗೊತ್ತಿಲ್ಲ. ಆದರೆ ರಾಜ್ಯದಾದ್ಯಂತ ತೆರಳಿ ಒಬ್ಬರೇ ಬಿಎಸ್ಪಿ ಪರ ಪ್ರಚಾರ ಮಾಡುತ್ತಿರುವುದು ಮಾತ್ರ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತಿದೆ. ಬಿಜೆಪಿ ಮತ್ತು ದೋಸ್ತಿಗಳ ಹೋರಾಟ ಜೋರಾಗಿಯೇ ಸಾಗುತ್ತಿರುವಾಗ ಅವರ ನಡುವೆ ಬಿಎಸ್ಪಿ ಯಾವ ರೀತಿಯಲ್ಲಿ ಹೋರಾಟ ಮಾಡಿ ಗೆಲುವು ಕಾಣುತ್ತದೆ ಎಂಬುದು ಕೂಡ ಕುತೂಹಲಕಾರಿಯಾಗಿದೆ. ಬಿಎಸ್ಪಿ ಮುಖಂಡ ಎನ್.ಮಹೇಶ್ ಕರ್ನಾಟಕದಿಂದ ಒಂದಷ್ಟು ಸ್ಥಾನವನ್ನು ಗೆಲ್ಲಿಸಿಕೊಡಬಹುದು ಹಾಗೂ ಅದು ತಾನು ಪ್ರಧಾನಿಯಾಗುವುದಕ್ಕೆ ಅನುಕೂಲವಾಗಬಹುದು ಎಂಬ ನಿರೀಕ್ಷೆಯಲ್ಲಿ ಮಾಯಾವತಿ ಅವರು ಕಾಯುತ್ತಿದ್ದು, ಮುಂದೆ ಏನಾಗುತ್ತದೆ ಎಂಬುದನ್ನು ನಾವು ಈಗ ಕಾಯುವಂತಾಗಿದೆ.
ಸಮೀಕ್ಷೆ: ಎಸ್ಪಿ-ಬಿಎಸ್ಪಿ ಮೈತ್ರಿಯಿಂದ ಉ.ಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ